Pages

Ads 468x60px

Thursday 21 September 2017

ಬೆರಟಿ ಹಲ್ವಾ



ನವರಾತ್ರಿ ಬಂದಿದೆ, ಹಬ್ಬದೂಟ ಎಂದು ಪಾಯಸ ಆಗಬೇಕಿದೆ. ಆಗಬೇಕು ಆದರೆ ಪಾಯಸವನ್ನು ಉಣ್ಣಲು ಮನೆಯೊಳಗೆ ಏಳೆಂಟು ಜನರ ಉಪಸ್ಥಿತಿ ಇರಬೇಕು, ಮಾಡಿದ್ದು ಮುಗಿದೀತು. ಸಕ್ಕರೆ ಬೆಲ್ಲ ಕಾಯಿಹಾಲು ಎರೆದು ವ್ಯರ್ಥ ಮಾಡಲೇಕೆ... ಹೀಗೆಲ್ಲ ಚಿಂತನಮಂಥನ ಆಗುತ್ತಿದ್ದಂತೆ ಹಲಸಿನಹಣ್ಣಿನ ಬೆರಟಿಯ ಜಾಡಿ ಕೆಳಗಿಳಿಯಿತು.
ಒಂದು ಒಣ ಸೌಟಿನಲ್ಲಿ ಮೂರು ಮುದ್ದೆ ಬೆರಟಿ ತೆಗೆದು ಪಾತ್ರೆಗೆ ಹಾಕಲಾಗಿ, “ ಬೆರಟಿ ಪಾಯಸವೇನೋ ಆದೀತು, ತಿಂದು ಮುಗಿದೀತೇ... “ ಚಿಂತೆಗಿಟ್ಟುಕೊಂಡಿತು.
ಬೆರಟಿಗೆ ತುಸು ನೀರೆರೆದು ಕೈಯಲ್ಲಿ ಹಿಸುಕಿ ದ್ರವರೂಪಕ್ಕೆ ತರುವ ಸಾಹಸ, ಹಲಸಿನಹಣ್ಣಿನ ನಾರು ಎಳೆ ಎಳೆಯಾಗಿ ಎದ್ದು ಬಂದಾಗ, ಅದನ್ನೂ ತಿಕ್ಕಿ ತಿಕ್ಕಿ ತೆಗೆದಾಯಿತು.
“ ನಾರು ಬಂದಿದ್ದು ಹೇಗೆ? “

“ ತುಳುವೆ ಹಲಸಿನ ಹಣ್ಣಿನಲ್ಲಿ ನಾರು ಜಾಸ್ತಿ, ಎಲ್ಲೋ ಈ ಬೆರಟಿ ತುಳುವ ಹಣ್ಣಿನದ್ದು. “

“ ನಾರು ತೆಗೆಯದಿದ್ದರೆ ಏನಾಗುತ್ತದೆ? “

“ ಪಾಯಸ ಕುಡಿಯುವಾಗ ಗಂಟಲಲ್ಲಿ ನೂಲಿನೆಳೆ ಅಥವಾ ಕಸ ಸಿಕ್ಕಂತೆ ಆದೀತು ಅಷ್ಟೇ. “
ಒಂದು ಅಚ್ಚು ಬೆಲ್ಲ ಹಾಕಿ, ಒಲೆಯ ಮೇಲಿಟ್ಟು ಸೌಟು ಆಡಿಸುತ್ತ ಇದ್ದಾಗ, “ ತುಪ್ಪ ಹಾಕಿದ್ರೆ ಹಲ್ವಾ ಆಯ್ತು ಅಲ್ವ... “ ಐಡಿಯಾ ಬಂದಿತು.
ಹೊರಚಾವಡಿಯಲ್ಲಿ ಇಂಟರ್ ನೆಟ್ ವ್ಯಾಸಂಗದಲ್ಲಿ ತೊಡಗಿರುವ ನಮ್ಮೆಜಮಾನ್ರ ಬಳಿ ಒಂದು ಮಾತು ಕೇಳದಿದ್ದರೆ ಹೇಗಾದೀತು?
“ ನೋಡ್ರೀ... ಬೆರಟಿ ಪಾಯಸ ಮಾಡಲೋ, ಹಲ್ವಾ ಆದೀತೊ? “

ನಮ್ಮವರು ಒಳ ಬಂದಾಗ ಬೆರಟಿಯೊಂದಿಗೆ ಬೆಲ್ಲ ಕರಗಿ ಮಿಳಿತವಾಗಿ ಹಲ್ವದ ಹದಕ್ಕೆ ಬಂದಿತ್ತು.

“ ಹಲ್ವವೇ ಚೆನ್ನ... “ ಉತ್ತರ ದೊರೆಯಿತು.

“ ಸರಿ ಹಾಗಿದ್ದರೆ. “ ಎರಡು ದೊಡ್ಡ ಚಮಚ ತುಪ್ಪ ಎರೆದು ಕಾಯಿಸುತ್ತ ಇದ್ದ ಹಾಗೆ ಗೋಡಂಬಿಯೂ ತುಪ್ಪದಲ್ಲಿ ಹುರಿಯಲ್ಪಟ್ಟು ಬಿದ್ದಿತು.

ಗೋಡಂಬಿ ಹುರಿದ ತುಪ್ಪದಲ್ಲಿ ಎರಡು ಚಮಚ ಗೋಧಿಹುಡಿಯನ್ನು ಘಮಘಮಿಸುವಂತೆ ಹುರಿದು ಹಾಕುವಲ್ಲಿಗೆ ಹಲ್ವದ ಸಾಂದ್ರತೆ ಇನ್ನಷ್ಟು ಗಾಢವಾಗಿ ಬೆರಟಿ ಹಲ್ವಾ, ನಮ್ಮ ನವರಾತ್ರಿಯ ಸಿಹಿತಿನಿಸು ಆಗಿಹೋಯಿತು.


          

Sunday 17 September 2017

ಕಾಲಿಫ್ಲವರ್ ಪತ್ರೊಡೆ




" ಅತ್ತೇ,  ರಾತ್ರಿಯೂಟಕ್ಕೆ ಪರೋಟಾ... "

" ಮಾಡ್ತೀಯಾ...  ಗೋಧಿಹಿಟ್ಟು ಇಲ್ಲಿದೆ,  ಬಟಾಟೆ ಅಲ್ಲಿದೆ... "  ಸಾಮಗ್ರಿಗಳನ್ನು ತೋರಿಸಿಕೊಟ್ಟು ನಾನು ಫೇಸ್ ಬುಕ್ಕು ಬಿಡಿಸಿದೆ.


ನನಗಂತೂ ಪರೋಟಾ ಬಗ್ಗೆ ಏನೂ ತಿಳಿಯದು,   ಮೈತ್ರಿಯ ಪರೋಟಾ ತಯಾರಿಯನ್ನೂ ಗಮನಿಸುತ್ತ ಇದ್ದಂತೆ ಬಿಸಿಬಿಸಿಯಾದ ಪರೋಟಾ ತಟ್ಟೆಗೆ ಬಂದು ಬಿತ್ತು,  ಪುದಿನಾ ಚಟ್ನಿಯೂ ಬಂದಿತು.   ಅದೂ ಅಂತಿಂಥ ಪುದಿನ ಅಲ್ಲ,   ಇಟಾಲಿಯನ್ ಮಿಂಟ್ ಎಂಬಂತಹ ಹೆಸರಿನ ಈ ಕುರುಚಲು ಗಿಡವನ್ನು ಮೈತ್ರಿಯೇ ನೆಟ್ಟು ಸಲಹಿ ಈಗ ಚಟ್ಣಿಯಾಗಿ ಬಂದಿದೆ.


" ಅತ್ತೇ,  ಈ ಕಾಲಿಫ್ಲವರ್ ಇಷ್ಟು ಉಳಿದಿದೆ,  ನಾಳೆಯ ಅಡುಗೆಗೆ ಸಾಕಾದೀತು. "  ಬಟಾಟೆಯ ಹೂರಣಕ್ಕೆ ತುರಿದ ಕಾಲಿಫ್ಲವರ್ ಕೂಡಾ ಬಿದ್ದಿತ್ತು.


ಬೇಗನೇ ಬೆಂಗಳೂರು ತಲಪಬೇಕಾಗಿದ್ದ ಒತ್ತಡದಿಂದ ಮುಂಜಾನೆ ನಾಲ್ಕಕ್ಕೇ ಎದ್ದು ಹೊರಟು ನಿಂತ ಮಕ್ಕಳು. 

  " ಕಾಲಿಫ್ಲವರ್ ಪತ್ರೊಡೆ ಮಾಡಿಟ್ಟಿದ್ದೇನೆ,   ಬೆಂಗಳೂರಿನಲ್ಲಿ ತಿನ್ನಿ... "


" ಬ್ಯಾಡಾ ಅಮ್ಮ,  ಕಾರಿನಲ್ಲಿ ಪತ್ರೊಡೆಗೆ ಜಾಗಾ ಇಲ್ಲ. "



                             



ಕಾಲಿಫ್ಲವರ್ ಪತ್ರೊಡೆಯಾ?  ಹೇಗೆ ಮಾಡಿದ್ದೂ? 


ಕೇಳಿಯೇ ಕೇಳ್ತೀರಾ,  ನಾನೂ ವಿವರವಾಗಿ ಹೇಳದಿದ್ದರೆ ಹೇಗೆ?


ಹಿತ್ತಲ ಕಡೆ ತೋಟಕ್ಕಿಳಿದಾಗ ಪುಟ್ಟಪುಟ್ಟ ಕೆಸುವಿನೆಲೆಗಳ ಸ್ವಾಗತ ದೊರೆಯಿತು.   ಮಳೆಗಾಲದ ಆರಂಭ ಆಗುತ್ತಾ ಇದೆ...  ಇನ್ನೂ ಹತ್ತು ದಿನ ಹೋದರೆ ಸಾಕಷ್ಟು ಎಲೆ ಕೀಳಬಹುದು.   ಈಗ ಹತ್ತಿಪ್ಪತ್ತು ಎಳಸು ಕೆಸುವಿನೆಲೆಗಳು ಸಿಕ್ಕವು.   ಬಾಳೆ ಎಲೆ ಮನೆಯೊಳಗೆ ಇದೆ,  ಕೊಯ್ಯಬೇಕಾಗಿಲ್ಲ.   ಆದರೆ ಇಷ್ಟು ಸ್ವಲ್ಪ ಎಲೆಗಳ ಪತ್ರೊಡೆ ಮಾಡಲೆಂತು ಎಂದು ಚಿಂತೆಗಿಟ್ಟುಕೊಂಡಿತು.


ಕೆಸುವಿನೆಲೆಗಳೊಂದಿಗೆ ಒಳ ಬಂದಾಗ ತರಕಾರಿ ಬುಟ್ಟಿಯಲ್ಲಿದ್ದ ಕಾಲಿಫ್ಲವರ್ ಮಿಸುಕಾಡಿತು.   ಹೌದಲ್ಲವೇ,  ಕಾಲಿಫ್ಲವರ್ ಹೇಗೂ ಸೊಪ್ಪು ತರಕಾರಿ,  ಕೆಸುವಿನೊಂದಿಗೆ ಹೊಂದಿಕೆಯಾದೀತು,   ಹುಳಿಯೂ ಜಾಸ್ತಿ ಬೇಕಾಗದು,  ನಾಲ್ಕು ಅಂಬಟೆಮಿಡಿ ಹಿಟ್ಟು ರುಬ್ಬುವಾಗ ಹಾಕಿದರೆ ಸಾಕು.   


ಮುಂದಿನ ಸಿದ್ಧತೆ  ಏನೇನು?


ಕಾಲಿಫ್ಲವರ್ ತುರಿಯುವುದು

ಕೆಸುವಿನೆಲೆ ಚಿಕ್ಕದಾಗಿ ಕತ್ತರಿಸುವುದು

2 ಪಾವು ಬೆಳ್ತಿಗೆ (ಇಡ್ಲಿ ಅಕ್ಕಿ ) ತೊಳೆದಿರಿಸುವುದು

ಒಂದು ಕಡಿ ತೆಂಗಿನಕಾಯಿ ತುರಿಯುವುದು


 ಸೊಸೆಗೆ ಖಾರ ಆಗದು,  ಹಿತ್ತಲ ಗಿಡದಿಂದ ನಾಲ್ಕು ಬಜ್ಜಿ ಮೆಣಸು ಕೊಯ್ದು ತರುವುದು

2 ಚಮಚ ಕೊತ್ತಂಬರಿ

ಒಂದು ಚಮಚ ಜೀರಿಗೆ

ಕಡ್ಲೇ ಕಾಳಿನಷ್ಟು ಇಂಗು

3 ಅಂಬಟೆಮಿಡಿಗಳು

ರುಚಿಗೆ ಉಪ್ಪು

ಸಿಹಿಗೆ ಬೆಲ್ಲ 


ಕಾಯಿತುರಿ ಹಾಗೂ ಮಸಾಲಾ ಸಾಮಗ್ರಿಗಳನ್ನು ಮೊದಲು ಅರೆಯಿರಿ,   ತೊಳೆದ ಅಕ್ಕಿಯನ್ನೂ ಹಾಕಿ ಇನ್ನೊಂದಾವರ್ತಿ ಅರೆದು,  ತರಿತರಿಯಾಗಿ ಅರೆದಿರಾ,  ಸಾಕು.


ಈ ಹಿಟ್ಟಿಗೆ ಕೆಸುವಿನೆಲೆ ಹಾಗೂ ತುರಿದ ಕಾಲಿಫ್ಲವರನ್ನೂ ಬೆರೆಸಿ,

ಬಾಡಿಸಿರುವ ಬಾಳೆ ಎಲೆಯೊಳಗಿಟ್ಟು,

ಅಚ್ಚುಕಟ್ಟಾಗಿ ಮಡಚಿ,

ಅಟ್ಟಿನಳಗೆ ( ಇಡ್ಲಿಪಾತ್ರೆ ) ಒಳಗಿಟ್ಟು,

ಉಗಿಯ ಶಾಖದಲ್ಲಿ ಅರ್ಧ ಗಂಟೆ ಬೆಂದಾಗ ಪತ್ರೊಡೆ ಆಗಿ ಹೋಯಿತು.


ಬಿಸಿಬಿಸಿಯಾದ ಪತ್ರೊಡೆ,  ಹಾಗೇನೇ ತುಪ್ಪ ಸವರಿ ತಿನ್ನಲು ರುಚಿ.







 


Wednesday 13 September 2017

ಮಸಾಲಾ ಅವಲಕ್ಕಿ




           



ತೆಂಗಿನಕಾಯಿ ತುರಿದದ್ದು ಹೆಚ್ಚಾಗಿದೆ,  ಈ ಮಿಕ್ಕಿದ ಕಾಯಿತುರಿಯನ್ನು ನಾಳೆಯ ಅವಲಕ್ಕಿ ಮಸಾಲೆಗಾಗಿ ಈಗಲೇ ಸಿದ್ಧಪಡಿಸಿಟ್ಟರೆ ಹೇಗೆ?


ಐಡಿಯಾ ಚೆನ್ನಾಗಿದೆ,  ಕೆಲವೊಮ್ಮೆ ಬೆಳಗ್ಗೆ ಏಳುತ್ತಲೂ ವಿದ್ಯುತ್ ಇರುವುದೂ ಇಲ್ಲ.   ನಾನ್ ಸ್ಟಿಕ್ ಬಾಣಲೆಯಲ್ಲಿ ಮೂರು ಒಣಮೆಣಸು,   ಎರಡು ಚಮಚ ಕೊತ್ತಂಬ್ರಿ,  ಒಂದು ಚಮಚ ಜೀರಿಗೆ ಹುರಿದು ತೆಂಗಿನ ತುರಿಯನ್ನು ಹಾಕಿ ಬಾಡಿಸಿದ್ದೂ ಆಯಿತು.


ಆರಿದ ನಂತರ ಮಿಕ್ಸಿಯಲ್ಲಿ ತಿರುಗಿಸಿ ಪುಡಿ ಮಾಡಿದ್ದೂ ಆಯ್ತು.  ಮಸಾಲೆ ಪುಡಿಯನ್ನು ಭದ್ರವಾಗಿ ತೆಗೆದಿರಿಸಿ,  ಹಿಂದಿನಂತೆ ಈಗ ತೆಂಗಿನಕಾಯಿ ಖರ್ಚು ಆಗುವುದೇ ಇಲ್ಲ,  ಎಷ್ಟೇ ಚಿಕ್ಕ ಕಾಯಿ ಸುಲಿದರೂ ಉಳಿಕೆಯಾಗುವ ಕಾಯಿತುರಿಗೆ ಇನ್ನು ಇದೇ ಮಾದರಿಯ ಗತಿಗಾಣಿಸಬೇಕೆಂದು ನಿರ್ಧಾರ ಮಾಡಿದ್ದೂ ಆಯಿತು.


ಮಸಾಲಾ ಅವಲಕ್ಕಿ ಮಾಡಿದ್ದು ಹೇಗೆ?


ನಮ್ಮ ಅಗತ್ಯಕ್ಕೆ ಬೇಕಾಗಿರುವುದು ಮೂರು ಯಾ ನಾಲ್ಕು ಹಿಡಿ ಅವಲಕ್ಕಿ.  ( ತೆಳ್ಳಗಿನ ಪೇಪರ್ ಅವಲಕ್ಕಿ )

ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಇಟ್ಟು,  

10 - 12 ನೆಲಕಡಲೆ ಬೀಜ, 

ಸಾಸಿವೆ,  ಒಂದು ಒಣಮೆಣಸನ್ನು ನಾಲ್ಕು ಚೂರು ಮಾಡಿ ಹಾಕಿ ಹುರಿದು,  

ಕೊನೆಗೆ ಕರಿಬೇವಿನೆಸಳು ಹಾಕಿ ಸ್ಟವ್ ನಂದಿಸಿ.


ಮಾಡಿಟ್ಟ ಮಸಾಲೆ ಹೊರ ಬಂತು.   ರುಚಿಗೆ ತಕ್ಕಷ್ಟು ಉಪ್ಪು,  ಸಿಹಿಗೆ ಸಕ್ಕರೆ ಕೂಡಿಕೊಂಡು ಒಗ್ಗರಣೆಯ ಬಾಣಲೆಗೆ ಎಲ್ಲವನ್ನೂ ಹಾಕಿ ಬೆರೆಸಿ,  ಅವಲಕ್ಕಿಯನ್ನೂ ಹಾಕಿ ಬೆರೆಸಿದಾಗ ಮಸಾಲಾ ಅವಲಕ್ಕಿ ಸಿದ್ಧ.   ಗರಿಗರಿಯಾದ ಈ ಅವಲಕ್ಕಿ ನಾಲ್ಕಾರು ದಿನ ಇಟ್ಟರೂ ಕೆಡದು.   ಸಂಜೆಯ ಚಹಾ ಸಮಯದಲ್ಲಿ ಸ್ನೇಹಿತರು ಬಂದರೇ,  ಚಹಾ - ಅವಲಕ್ಕಿಯ ಸತ್ಕಾರ ನೀಡಿ.   ಬೇಕರಿಯ ಹಾಳುಮೂಳು ತಿನಿಸುಗಳಿಗಿಂತ ಇದೇ ಉತ್ತಮ ಎಂದು ತಿಳಿಯಿರಿ.




Sunday 10 September 2017

ಬುಟ್ಟಿ ತುಂಬ ಬದನೆ








ಬುಟ್ಟಿ ತುಂಬ ಬದನೆ ಇದೆ.   ಬದನೆಯ ಖಾದ್ಯಗಳಲ್ಲಿ ಪಲ್ಯ ಹುಳಿ ಗೊಜ್ಜು ಬಜ್ಜಿ ಎಂದು ಪಟ್ಟಿ ಮಾಡಿದಷ್ಟೂ ಮುಗಿಯದು.   ಭೋಜನಕೂಟಗಳಲ್ಲಿ ಹುಳಿ ಎಂಬ ವ್ಯಂಜನವನ್ನು ಬಡಿಸುತ್ತಾರಲ್ಲ,  ಅದೂ ಬದನೆಕಾಯಿಗಳದ್ದು,  ಇದರ ತಯಾರಿ ಬಹು ಸುಲಭ ಹಾಗೂ ಸರಳ,  ಚಿಟಿಕೆ ಹೊಡೆಯುವಷ್ಟರಲ್ಲಿ ಮಾಡಿಟ್ಟು   " ಅಡುಗೆ ಆಯ್ತು "  ಅನ್ನಬಹುದು.


ಹೇಗೂ ಬೆಂಗಳೂರಿನಿಂದ ಮಕ್ಕಳು  " ಆ ಅಡುಗೆ ಹೇಗಮ್ಮ... ಈ ಅಡುಗೆ ಹೇಗಮ್ಮ? "  ಎಂದು ವಿಚಾರಿಸುತ್ತಿರುತ್ತಾರೆ,  ನಾನೂ ಹೇಳಿಕೊಡುವುದು ಇದ್ದೇ ಇದೆ.   ಮನೆಯಿಂದ ದೂರ ಇರುವ ಉದ್ಯೋಗಸ್ಥ ಮಕ್ಕಳಿಗೆ ಈ ಅಡುಗೆ ಉಪಯೋಗವಾದೀತು.


ತೊಗರಿಬೇಳೆ ಧಾರಣೆ ತುಂಬ ಇಳಿದಿದೆ.   ತೊಗರಿಬೇಳೆಯನ್ನು ಅರ್ಧ ಲೋಟ ಅಳೆದು ತೊಳೆಯಿರಿ,  ಕುಕ್ಕರಿನಲ್ಲಿ ಬೇಯಲಿ.


ಎರಡು ಬದನೆಗಳನ್ನು ತೊಟ್ಟು ತೆಗೆದು,  ದೊಡ್ಡ ಗಾತ್ರದ ಹೋಳುಗಳನ್ನು ಮಾಡಿ ನೀರಿನಲ್ಲಿ ಹಾಕಿರಿಸಿ.   ಬದನೆ ಬಲಿತದ್ದಾಗಿದ್ದರೆ ಬೀಜಗಳು ಎದ್ದು ಕಾಣಿಸುತ್ತವೆ,  ಒಗರು ಹಾಗೂ ಕಹಿ ಇದ್ದೀತು.  ಹಾಗಾಗಿ ನೀರಿನಲ್ಲಿ ತೇಲುತ್ತಿರುವ ಬದನೆ ಹೋಳುಗಳಿಗೆ ಒಂದು ಚಿಟಿಕೆ ಸುಣ್ಣ  ( ವೀಳ್ಯದೆಲೆ ತಿನ್ನಲು ಬಳಸುವ ಸುಣ್ಣ ) ಹಾಕಬೇಕು ಹಾಗೂ ಸೌಟಿನಲ್ಲಿ ಕಲಕಿದಾಗ ಬದನೆಕಾಯಿ ಬೇಯಿಸಲು ಯೋಗ್ಯತೆ ಪಡೆದಿದೆ.   ಪೇಟೆಯಿಂದ ತಂದ ಬದನೆ ಬಾಡಿದ್ದರೂ ಇದೇ ವಿಧಾನ ಅನುಸರಿಸಿ.


ಕುಕ್ಕರಿನಲ್ಲಿ ಬೆಂದಿರುವ ತೊಗರಿಬೇಳೆಗೆ ಬದನೆ ಹೋಳುಗಳ ನೀರು ಬಸಿದು ಹಾಕಿ,  ಎರಡು ಅಥವಾ ಮೂರು ಹಸಿಮೆಣಸು ಸಿಗಿದು ಹಾಕಿ ಬೇಯಿಸಿ.    " ಕುಕ್ಕರ್ ಇನ್ನೇನು ವಿಸಿಲ್ ಹಾಕಲಿದೆ... " ಅನ್ನುವಾಗ ಸ್ಟವ್ ನಂದಿಸಿ.


ಹ್ಞಾ,  ಬದನೆಗೆ ಬೇಯುವಾಗಲೇ ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು.  ಹುಣಸೆಹಣ್ಣೇ ಆಗಬೇಕೆಂದಿಲ್ಲ,  ಬದನೆ ಬೇಯಿಸುವಾಗಲೇ ಎರಡು ಕಾಯಿ ಟೊಮ್ಯಾಟೋ ಚಿಕ್ಕದಾಗಿ ಹೆಚ್ಚಿ ಹಾಕಬಹುದಾಗಿದೆ.   ಸಿಹಿ ಬೇಕಿದ್ದವರು ಬೆಲ್ಲ ಹಾಕಿರಿ.


ಚಿಟಿಕೆ ಅರಸಿಣ,  ಕಡ್ಲೆಗಾತ್ರದ ಇಂಗು,  ಕರಿಬೇವಿನೆಸಳು ಕೂಡಿದ ಒಗ್ಗರಣೆ ಹಾಕುವಲ್ಲಿಗೆ ಬದನೇ ಹುಳಿಯ ಸಿಂಗಾರ ಆಯಿತು.


Sunday 3 September 2017

ಉಪ್ಪುಸೊಳೆಯ ಸೋಂಟೆ

 
              






ಜಾಡಿಯಲ್ಲಿರುವ ಹಿಂದಿನ ವರ್ಷದ ಉಪ್ಪುಸೊಳೆಯನ್ನು ಪಲ್ಯ,  ಹುಳಿಬೆಂದಿ,  ಮೇಲಾರ ಇತ್ಯಾದಿಗಳನ್ನು ಮಾಡಿ ತಿಂದರೂ ಮುಗಿಯದಾಯಿತು.   ಅಷ್ಟಕ್ಕೂ ಜಾಡಿಯಲ್ಲಿ ತುಂಬಿಸಿದ ಸೊಳೆಗಳು ಕೇವಲ ಒಂದೇ ಹಲಸಿನಕಾಯಿಯದ್ದು!   ಉಂಡ್ಳಕಾಳು,  ಸೊಳೆರೊಟ್ಟಿಗಳನ್ನು ತಿನ್ನಲು ಮಕ್ಕಳ ಸೈನ್ಯ ಮನೆಯಲ್ಲಿದ್ದರಾಗುತ್ತಿತ್ತು.


ಸೋಂಟೆ ಮಾಡಿದರೆ ಹೇಗೆ?  ಈಗ ಜಿಟಿಜಿಟಿ ಮಳೆ ಬೇರೆ,  ಕುರುಕುರು ತಿನ್ನಲು ಸೋಂಟೆ ಉತ್ತಮ ಎಂದು ಅಭಿಪ್ರಾಯ ಮೂಡಿತು.   ಜಾಡಿಯಲ್ಲಿ ಬೆಚ್ಚಗೆ ಕೂತಿದ್ದ ಸೊಳೆಗಳು ಹೊರ ಬಂದಾಗ ತಣ್ಣಗೆ ನೀರಿನಲ್ಲಿ ಹಾಕಿಟ್ಟು ಜಾಡಿಯನ್ನು ತೊಳೆದಿರಿಸಲು ಚೆನ್ನಪ್ಪನ ಸುಪರ್ದಿಗೆ ಬಿಟ್ಟೂ ಆಯಿತು.


ನೀರಿನಿಂದ ಹೊರ ತೆಗೆದ ಸೊಳೆಗಳು ಉಪ್ಪು ಬಿಟ್ಕೊಂಡಿವೆ,   ಒಂದೇ ಗಾತ್ರದಲ್ಲಿ ಸಿಗಿದಿಡುವುದು.   ಶುದ್ಧವಾದ ಹತ್ತಿಯ ಬಟ್ಟೆ ಮೇಲೆ ಹರಡಿದರೆ ಉತ್ತಮ,  ಸೊಳೆಯ ನೀರಿನಂಶವನ್ನು ಬಟ್ಟೆ ಹೀರಿಕೊಂಡು ಕರಿಯುವ ಕೆಲಸ ಬೇಗನೆ ಆದೀತು.


ಬಾಣಲೆಯಲ್ಲಿ ಎಣ್ಣೆಯಿಟ್ಟು,  ಬಿಸಿಯೇರಿದಾಗ ಎಣ್ಣೆಯಲ್ಲಿ ಹಿಡಿಸುವಷ್ಟು ಸೊಳೆಗಳನ್ನು ಹಾಕಿ ಕರಿಯಿರಿ.   ಹೊಂಬಣ್ಣ ಬಂದಾಗ,  ಎಣ್ಣೆಯ ಸದ್ದು ನಿಂತಾಗ ತೆಗೆದು ರಂಧ್ರದ ತಟ್ಟೆಗೆ ಹಾಕಿ,  ಬಿಸಿಯಾರಿದ ನಂತರ ತಿನ್ನಿ,  ಹಾಗೂ ಡಬ್ಬದಲ್ಲಿ ತುಂಬಿಸಿಟ್ಟು ಆಗಾಗ ತಿನ್ನುತ್ತ ಮಳೆಗಾಲದ ಮಜಾ ಅನುಭವಿಸಿ.  ಹ್ಞಾ,  ರುಚಿಗೆ ಉಪ್ಪು ಹಾಕುವ ಕೆಲಸ ಇಲ್ಲಿಲ್ಲ,   ಬೇಕಿದ್ದರೆ ನಿಮ್ಮ ಆಯ್ಕೆಯ ಮಸಾಲಾ ಹುಡಿಗಳನ್ನು ಉದುರಿಸಿ.



ಅಂತೂ ಇಂತೂ ಉಪ್ಪುಸೊಳೆ ಖಾಲಿ ಮಾಡಿದ್ದಾಯ್ತು.   ಈ ವರ್ಷ ನಾಲ್ಕು ಹಲಸಿನಕಾಯಿಗಳ ಉಪ್ಪುಸೊಳೆ ಹಾಕಿರಿಸಲಾಗಿದೆ!