Pages

Ads 468x60px

Saturday 19 August 2017

ಹಲಸಿನ ಹಣ್ಣಿನ ಪಲ್ಯ







" ನಾಗಬನಕ್ಕೆ ಹೋಗುವ ದಾರಿಯಲ್ಲಿ ಒಂದು ಹಲಸಿನ ಮರ ಉಂಟಲ್ಲ... "

" ಯಾವುದೂ?  ಮೂರು ನಾಲಕ್ಕು ಮರ ಉಂಟಲ್ಲ. "

" ಅದೇ..  ಅದರಲ್ಲಿ ಒಂದೇ ಹಲಸಿನಕಾಯಿ... "

" ಓ, ಅದಾ.. ಬೆಳೆದಿದ್ದರೆ ತರುತ್ತೇನೆ. "


ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೂ ಕೈಗೆಟುಕುವಂತೆ ಬೆಳೆದಿದ್ದ ಹಲಸಿನಕಾಯಿಯನ್ನು ಚೆನ್ನಪ್ಪ ನಿರಾಯಾಸವಾಗಿ ತಂದಿಟ್ಟ.


" ಇದು ಆ ಹಲಸಿನ ಮರದ ಮೊದಲ ಫಲ. "

" ಹಾಗಿದ್ರೆ ತುಳುವನೋ ಬಕ್ಕೆಯೋ ಅಂತ ನೋಡ್ಬೇಕಲ್ಲ. " ನಮ್ಮವರ ಚಿಂತನೆ.

" ಕಾಯಿಸೊಳೆ ದೋಸೆ ಮಾಡೋಣಾ ಅಂತ ಕೊಯ್ಯಲು ಹೇಳಿದ್ದು ನಾನು... "

" ದೋಸೆಯೇನೂ ಬೇಡ,  ಮೊದಲು ಹಣ್ಣಾಗಲಿ,  ಆಗ ತಿಳೀತದೆ ಅದರ ಜಾತಿಗುಣ... "

ಅದೂ ಸರಿಯೇ ಎಂದು ನಾನು ಸುಮ್ಮನಾಗಬೇಕಾಯಿತು.


ದಿನವೆರಡು ಕಳೆದಾಗ,  ಹಲಸು ಸುವಾಸನೆ ಬೀರತೊಡಗಿದಾಗ,  ಚೆನ್ನಪ್ಪನೂ ಬಾರದಿದ್ದಾಗ,  ಮನೆ ಯಜಮಾನರೇ ಹಲಸನ್ನು ಬಿಡಿಸಿ ಸೊಳೆಗಳನ್ನು ಆಯ್ದು ಕೊಟ್ಟರು.   " ಇನ್ನೇನು ಬೇಕಿದ್ರೂ ಮಾಡಿಕೋ... ಇದು ಬಕ್ಕೆ ಹಲಸು,  ತುಳುವ ಅಲ್ಲ. "


ಫುಟ್ ಬಾಲ್ ಚೆಂಡಿನ ಗಾತ್ರದ ಹಲಸು,  ಒಂದು ಪುಟ್ಟ ತಪಲೆ ತುಂಬಿತು.   ಸೊಳೆಗಳಿಂದ ಬೇಳೆ ಬೇರ್ಪಡಿಸುವಾಗ ಎಲ್ಲಿಂದ ಈ ಪರಿಮಳ ಹೊಮ್ಮುವುದೆಂದೇ ತಿಳಿಯದ ಹಾಗೆ ಮಧುರ ಸುವಾಸನೆ...

ಎರಡು ಬಾರಿ ಎದ್ದು ಗ್ಯಾಸ್ ಒಲೆಯಲ್ಲಿಟ್ಟಿದ್ದ ಬೆರಟಿಯ ಪರಿಮಳವೇ ಯಾ ಈ ಹಲಸಿನಹಣ್ಣೇ ಎಂದೂ ಮೂಸಿ ನೋಡಿದರೂ ತಿಳಿಯದಾಯಿತು.   ಅಂತೂ ಇದು ಪರಿಮಳದ ಹಲಸು.   ಹೌದಲ್ಲವೇ,  ಅಪ್ಪನಮನೆಯಲ್ಲಿ ಸಂಪಿಗೆ ಬಕ್ಕೆ ಎಂಬ ಹೆಸರಿನ ಹಲಸು ಇದೇ...  ನನ್ನ ಅಪ್ಪ ಪ್ರತಿ ವರ್ಷವೂ ಸಂಪಿಗೆ ಬಕ್ಕೆ ಹಲಸನ್ನು ಪೊಸಡಿಗುಂಪೆಯ ದಾರಿಯಾಗಿ ಮಹೀಂದ್ರಾ ಜೀಪಿನಲ್ಲಿ ತಂದು ಕೊಡ್ತಿದ್ರು.   ಇದು ಅದರ ಬೀಜದಿಂದಲೇ ಹುಟ್ಟಿದ ಹೊಸ ಫಲ ಎಂದು ತೀರ್ಮಾನಿಸಿ ಊರಿನ ಮನೆಯಲ್ಲಿರುವ ತಮ್ಮನಿಗೂ,  ಕುಂಬ್ಳೆಯಲ್ಲಿರುವ ತಂಗಿಗೂ ತಿಳಿಸಿ ವಾಟ್ಸಪ್ ಮುಖೇನ ಹಲಸಿನ ಹಣ್ಣಿನ ಚಿತ್ರಗಳನ್ನು ಕಳಿಸಿ ಸಂಭ್ರಮ ಪಟ್ಟಿದ್ದೂ ಆಯಿತು.


" ಹಣ್ಣಿನ ಬಣ್ಣ ಕಾಣುವಾಗ ಅದೇ ಹಣ್ಣು ಅನ್ನಿಸ್ತದೆ..."  ಹಳದಿ ವರ್ಣದ ಈ ಹಣ್ಣನ್ನು ನಾವು ಅರಸಿನ ಬಕ್ಕೆ ಅಂತಲೂ,  ಕೆಲಸದಾಳುಗಳು ಮಂಜಾಲ್ ಬಕ್ಕೆ ಎಂದೂ ಹೇಳುವ ರೂಢಿ.


ಕುಂಬ್ಳೆಯಲ್ಲಿರುವ ತಂಗಿಗೂ ತಿಳಿಯಿತು.   " ಅಕ್ಕ,  ಹಲಸಿನಕಾಯಿ ದೊಡ್ಡದೋ ಸಣ್ಣದೋ... "

" ದೊಡ್ಡ ಚೆಂಡು ಇರುತ್ತದಲ್ಲ,  ಅಷ್ಟೇ... "

" ಸಿಹಿಯೊಟ್ಟಿಗೆ ಹುಳಿ ರುಚಿಯೂ ಉಂಟಾ? "

" ಹ್ಞಾ, ಹೌದು.   ಸೊಳೆ ಉಂಟಲ್ಲ,   ಈ ಮಳೆಗೆ ಸ್ವಲ್ಪವೂ ನೀರು ಕುಡಿದ ಹಾಗಿಲ್ಲ... ಡ್ರೈ ಸೊಳೆ. "

" ಹೌದಾ... ಹಂಗಿದ್ರೆ ಅದು ಗ್ಯಾರಂಟಿ ಅರಸಿನ ಬಕ್ಕೆ.   ಕೆಲಸದಾಳುಗಳು ಈ ಹಣ್ಣಿನ ಪಲ್ಯ ಮಾಡಿ ಸಂಜೆಯ ಚಹಾದೊಂದಿಗೆ ತಿನ್ತಿದ್ರು. "

" ಹಣ್ಣನ್ನೇ? "

" ಹೌದು,  ನೀನೂ ಪಲ್ಯ ಮಾಡು,  ಬೇಯಲಿಕ್ಕೆ ನೀರು ಹಾಕಲೇ ಬೇಡ... "

" ಸರಿ,  ತಿಳಿಯಿತು. "


ಈಗ ಪಲ್ಯ ಮಾಡೋಣ.


ಹಲಸಿನ ಹಣ್ಣಿನ ಸೊಳೆಗಳನ್ನು ಪಲ್ಯಕ್ಕಾಗಿ ಹಚ್ಚಿಟ್ಟುಕೊಳ್ಳುವುದು.

ಇದನ್ನು ಬೇಯಿಸಲು ಕುಕ್ಕರ್ ಬೇಡ,   ನೇರವಾಗಿ ಬಾಣಲೆಯಲ್ಲೇ ಮಾಡಬಹುದಾಗಿದೆ.

4 ಚಮಚ ತೆಂಗಿನೆಣ್ಣೆಯಲ್ಲಿ ಒಗ್ಗರಣೆ ಸಾಹಿತ್ಯಗಳನ್ನು ಉದುರಿಸಿ.

ಸಾಸಿವೆ ಸಿಡಿದಾಗ ಚಿಟಿಕೆ ಅರಸಿಣ,  ಒಂದು ಚಮಚ ಮೆಣಸಿನ ಹುಡಿ,  ರುಚಿಗೆ ಉಪ್ಪು ಹಾಗೂ ಹಲಸಿನ ಹಣ್ಣನ್ನು ಹಾಕಿ.   ಮಂದ ಉರಿಯಲ್ಲಿ ಆಗಾಗ ಕೈಯಾಡಿಸುತ್ತ ಮುಚ್ಚಿ ಬೇಯಿಸಿದಾಗ...


ನಿಮಿಷಗಳಲ್ಲಿ ಹಲಸಿನಹಣ್ಣು ಬೆಂದಿದೆ.  ಕಾಯಿತುರಿ ಹಾಕಿ ಚೆನ್ನಾಗಿ ಮಗುಚಿ,  ಮುಚ್ಚಿಟ್ಟು ಉರಿ ನಂದಿಸುವುದು.   ಊಟದೊಂದಿಗೂ ಚಹಾಕೂಟದೊಂದಿಗೂ ಈ ಪಲ್ಯ ಬಲು ಚೆನ್ನ.


ಹಲಸಿನ ಹಣ್ಣಿನ ಬೋಳುಹುಳಿ


ಸ್ವಲ್ಪವೇ ಹಣ್ಣು ಮಿಕ್ಕಿದ್ದಾಗ ಈ ಮಾದರಿಯ ಸಾರು ನನ್ನ ಅಡುಗೆಮನೆಯಲ್ಲಿ ಎದ್ದು ಬಂದಿತು.


ನಾಲ್ಕೈದು ಹಲಸಿನ ಹಣ್ಣಿನ ಸೊಳೆಗಳು,  ಹದ ಗಾತ್ರದಲ್ಲಿ ತುಂಡುಗಳಾಯಿತು.

ಒಂದು ಕ್ಯಾಪ್ಸಿಕಂ ಇತ್ತು,  ಅದನ್ನೂ ಹೋಳು ಮಾಡಿದ್ದಾಯಿತು,  ಹಲಸಿನ ಹಣ್ಣಿನ ಜೊತೆಗೂಡಿತು.

ಬೇಯಲು ನೀರು,  ರುಚಿಗೆ ಉಪ್ಪು ಕೂಡಿ ಬೆಂದಿತು.

ಕರಿಬೇವು, ಇಂಗು ಒಗ್ಗರಣೆಯೊಂದಿಗೆ ಬೋಳುಹುಳಿ ಆದೆನೆಂದಿತು.


ರುಚಿಕರವೂ ಸುವಾಸನಾಭರಿತವೂ ಆದ ಈ ಬೋಳುಹುಳಿಗೆ ಬೆಲ್ಲವೂ ಬೇಡ,  ಹುಣಸೆಹುಳಿಯೂ ಬೇಡ,  ಅಗತ್ಯವೇ ಇಲ್ಲ.





Wednesday 16 August 2017

ಬೇಳೆಚಕ್ಕೆ ಬೆಂದಿ







ನೀರುಳ್ಳಿ ಸಾರು,  ಹರಿವೆ ಪಲ್ಯ ಊಟದ ಟೇಬಲ್ ಮೇಲೆ ಇಟ್ಟು ನಮ್ಮವರ ಆಗಮನಕ್ಕಾಗಿ ಕಾಯುತ್ತಾ ಫೇಸ್ ಬುಕ್ ಓದು ಮುಂದುವರಿದಿತ್ತು.


ಊಟಕ್ಕೆ ಕುಳಿತವರೇ  " ಹಾಗಿದ್ರೆ ತೋಟದಲ್ಲಿ ಹಲಸಿನ ಗುಜ್ಜೆ ಉಂಟೂಂತ ಗೊತ್ತಿಲ್ವಾ.. "

" ಗುಜ್ಜೆ ಎಷ್ಟು ಬೇಕಾದರೂ ಇರಲಿ,  ತಂದು ಕೊಟ್ಟರಾಗುತ್ತಿತ್ತು.. "

" ಚೆನ್ನಪ್ಪ ಇರೂವಾಗ ಹೇಳೂದಲ್ವ.. "

" ಅವನು ಬಾರದೇ ದಿನ ಎರಡಾಯ್ತು,  ನಾಳೆ ಹೇಗೂ ಭಾನುವಾರ,  ಬಂದ ಹಾಗೇ..  ನೀವೇ ಕೊಯ್ದು ತನ್ನಿ. "


ಎರಡು ಹಲಸಿನ ಗುಜ್ಜೆಗಳು ಬಂದುವು.   ಎಳೆಯ ಕಾಯಿ ಆದರೂ ಘನ ಗಾತ್ರದ ಗುಜ್ಜೆಯನ್ನು ಎರಡು ಹೋಳು ಮಾಡಲು ಪೂರ್ವ ಸಿದ್ಧತೆಯೂ ಇರಬೇಕು.  ಮಯಣ ಒಸರುವ ಈ ಫಲಕ್ಕೆ ಇನ್ನಿತರ ತರಕಾರಿಗಳಂತೆ ಅಡುಗೆಮನೆಯೊಳಗೆ  ಬರಲವಕಾಶವಿಲ್ಲ.  ಇದರ ಕಾರ್ಯಕ್ಷೇತ್ರವೇನಿದ್ದರೂ ಮನೆಯ ಹಿತ್ತಲಿನ ಅಂಗಳ.  ನಿರುಪಯುಕ್ತ ಗೋಣಿತಾಟು ಇಲ್ಲವೇ ಪ್ಲಾಸ್ಟಿಕ್ ಚೀಲಗಳನ್ನು ನೆಲದಲ್ಲಿ ಹಾಕಿಕೊಂಡಲ್ಲಿ ಅಂಗಳದ ಕಸಕಡ್ಡಿಗಳನ್ನು ನಿವಾರಿಸಿಕೊಳ್ಳಲು ಸಾಧ್ಯ .   ಹರಿತವಾದ ಆಯುಧದಿಂದ ಹೋಳು ಆಯ್ತು.   ಒಂದು ಹೋಳು ಇಂದಿನ ಪಲ್ಯಕ್ಕಿರಲಿ,  ಇನ್ನೊಂದು ತುಂಡು ನಾಳೆಗೆ ಗುಜ್ಜೆ ಬೆಂದಿ ಆಗಲಿದೆ.


ಹೋಳಾದ ಗುಜ್ಜೆಯಿಂದ ಮಯಣ ಸುರಿಯುತ್ತಿದೆಯಲ್ಲ!   ಮಯಣವನ್ನು ಬಿದಿರಿನ ಪುಟ್ಟ ಕೋಲಿನಲ್ಲಿ ಒರೆಸಿ ತೆಗೆಯುವುದು,   ಹರಿಯುವ ನೀರಿನಲ್ಲಿ ತೊಳೆದೂ ಮಯಣ ತೆಗೆಯಬಹುದಾಗಿದೆ.  ನಾವು ಹಳ್ಳಿಯ ನಿವಾಸಿಗಳು ಹಲಸಿನ ಮಯಣವನ್ನೂ ಸಂಗ್ರಹಿಸಿ ಇಡುವ ರೂಢಿ ಇಟ್ಟುಕೊಂಡಿದ್ದೇವೆ.   ಹೇಗೇ?  


ಮಯಣವನ್ನು ಕೋಲಿನಲ್ಲಿ ಒರೆಸಿ ತೆಗೆದಾಯ್ತಲ್ಲ,  ಅದನ್ನು ಕಸದ ತೊಟ್ಟಿಗೆ ಬಿಸಾಡುವುದಲ್ಲ,  ' ಹಲಸಿನ ಕಾಯಿ ಕಾಳಗ ' ವೆಂದು ಮೆಟ್ಟುಕತ್ತಿ ಬುಡದಲ್ಲಿ ಕುಳ್ಳಿರುವಾಗ ಅದೇ ಕೋಲಿನಿಂದ ಮಯಣ ತೆಗೆದು ಮಯಣದ ಕೋಲನ್ನು ಜಾಗ್ರತೆಯಿಂದ ತೆಗೆದಿರಿಸುವುದು.   ಇದರ ಉಪಯೋಗ ಏನು?


ತೂತು ಬಿದ್ದ ಹಿತ್ತಾಳೆಯ ಕೊಡ ಇತ್ಯಾದಿ ದಿನಬಳಕೆಯ ಪಾತ್ರೆಪರಡಿಗಳ ತೂತನ್ನು ಈ ಮಯಣ ಸಮರ್ಥವಾಗಿ ಮುಚ್ಚಿ ಬಿಡುತ್ತದೆ.   ಮಯಣದ ಮುದ್ದೆಯನ್ನು ಕಟ್ಟಿಗೆಯ ಒಲೆಯ ಬಿಸಿ ತಾಗುವಂತೆ ಇಟ್ಟಾಗ ಮಯಣ ಕರಗಿ ಜಿನುಗಲು ಪ್ರಾರಂಭವಾದಾಗ ತೂತಿನ ಜಾಗಕ್ಕೆ ಲೇಪಿಸಿದರಾಯಿತು,  ಬಹಳ ಸುಲಭವಾದ ಈ ಕಾಯಕವನ್ನು ನನ್ನ ಕೆಲಸಗಿತ್ತಿ ಮಾಡಿ ಕೊಡುತ್ತಿದ್ದಳು.    ಆದರೆ ಒಲೆಯಲ್ಲಿ ಇಡುವ ತಪಲೆಗಳನ್ನು ಈ ಥರ ರಿಪೇರಿ ಮಾಡಿಯೂ ಪ್ರಯೋಜನವಿಲ್ಲ,  ಬಿಸಿ ತಾಕಿದಾಗ ಮಯಣ ಕರಗುವುದಿದೆಯಲ್ಲ!   ಇವೆಲ್ಲ ಹಳೆಯ ನೆನಪುಗಳು,  ಈಗಿನ ಕಾಲಕ್ಕೆ ಹೇಳಿದ್ದಲ್ಲ ಬಿಡಿ.


  ಗುಜ್ಜೆಯ ನಿರುಪಯುಕ್ತ ಭಾಗ ಅಂದ್ರೆ ಸಿಪ್ಪೆ,  ಮಯಣ ಒಸರುವ ಗೂಂಜುಗಳನ್ನು ಕತ್ತರಿಸಿ ಗೊಬ್ಬರದ ಗುಂಡಿಗೆ ಎಸೆಯಿರಿ.   ಉಳಿದ ತುಂಡುಗಳನ್ನು ತರಕಾರಿಯಂತೆ ಚಿಕ್ಕದಾಗಿ ಹಚ್ಚಿಕೊಳ್ಳಿ.  ಹ್ಞಾ,  ಕೈಗಳಿಗೆ ತೆಂಗಿನೆಣ್ಣೆ ಸವರಿಕೊಂಡಿದ್ದೀರಾ ತಾನೇ?  ನೀರು ತುಬಿದ ತಪಲೆಯೊಳಗೆ ತುಂಬಿಸಿ ಮನೆಯೊಳಗೆ ನಡೆಯಿರಿ.   ಇಷ್ಟೂ ವಿಧಿವಿಧಾನಗಳನ್ನು ನಾವು ಮನೆಯ ಹೊರಾಂಗಣದಲ್ಲಿ ಮಾಡಿರುತ್ತೇವೆ ಎಂದು ನೆನಪಿರಲಿ.


ಒಲೆಯಲ್ಲಿ ಗುಜ್ಜೆ ಬೇಯುವುದು ನಿಧಾನಗತಿಯಲ್ಲಿ,   ಪ್ರೆಶರ್ ಕುಕ್ಕರ್ ಯೋಗ್ಯ.   ರುಚಿಗೆ ಉಪ್ಪು ಹಾಗೂ ಬೇಯಲು ಅವಶ್ಯವಿರುವ ನೀರು ಕೂಡಿಕೊಂಡು ಬೇಯಲಿ.  ಬೇಯುವಾಗ ಎರಡು ಚಮಚ ತೆಂಗಿನೆಣ್ಣೆ ಎರೆದಿರಾದರೆ ಕುಕ್ಕರಿನ ಒಳಭಾಗಕ್ಕೆ ಮಯಣದ ಅಂಟು ಹಿಡಿಯುವುದಿಲ್ಲ.   ಎರಡು ಸೀಟಿ ಹಾಕಿದಾಗ ಒಲೆಯಿಂದ ಇಳಿಸಿ.


ಬೆಂದಿದೆ,  ಬಾಣಲೆಯಲ್ಲಿ ಒಗ್ಗರಣೆಗಿಡಿ.  ಏನೇನು?

ತೆಂಗಿನೆಣ್ಣೆ,  ಸಾಸಿವೆ,  ಉದ್ದಿನಬೇಳೆ,  ಒಣಮೆಣಸು,  ಚಿಟಿಕೆ ಅರಸಿಣ,  ಕರಿಬೇವಿನೆಸಳು.


 ಬೆಂದಿರುವ ಗುಜ್ಜೆಯ ನೀರು ಬಸಿದು ಸಾಸಿವೆ ಸಿಡಿದಾಗ ಹಾಕುವುದು,  ಖಾರ ಇಷ್ಟಪಡುವವರು ಮೆಣಸಿನ ಹುಡಿಯನ್ನು ಹಾಕಿಕೊಳ್ಳಿ.   ನೀರಿನಂಶವೆಲ್ಲ ಬತ್ತುವಷ್ಟು ಹೊತ್ತು ಒಲೆಯ ಮೇಲಿರಲಿ.  ಕಾಯಿತುರಿಯ ಅಲಂಕರಣವನ್ನು ಗುಜ್ಜೆ ಬಯಸದು,  ಕಾಯಿತುರಿ ಇದ್ದರೆ ಹಾಕಲಡ್ಡಿಯಿಲ್ಲ.   ಸಂಬಾರ ಮಸಾಲೆಗಳಿಂದ ಕೂಡಿದ ತೆಂಗಿನಕಾಯಿ ಅರಪ್ಪು ಮಾಡಿಕೊಂಡು ರುಚಿಯಲ್ಲಿ ವೈವಿಧ್ಯತೆಯನ್ನು ತರಲೂ ಇಲ್ಲಿ ಸಾಕಷ್ಟು ಅವಕಾಶಗಳಿವೆ.   ಊಟದೊಂದಿಗೂ ಸಂಜೆಯ ಚಹಾದೊಂದಿಗೂ ಸೇವಿಸಲು ಗುಜ್ಜೆ ಪಲ್ಯ ಯೋಗ್ಯವಾಗಿದೆ.  ನಾರುಯುಕ್ತವಾದ ಗುಜ್ಜೆಪಲ್ಯ ಎಲ್ಲ ವಯೋಮಾನದವರಿಗೂ ಸೂಕ್ತ ಆಹಾರ.   ಹಸಿವಿನ ಬಾಧೆ ಗೋಚರಿಸದು,  ಪ್ರಾಯಸ್ಥರಿಗೆ ಮಲಬದ್ಧತೆಯ ಸಮಸ್ಯೆಯೂ ಇಲ್ಲವಾಗುವುದು.


ಗುಜ್ಜೆ ಮುದ್ದೆಹುಳಿ


ಹೋಳು ಮಾಡಿದ್ದಾಯಿತು,   ಚಿಕ್ಕ ಗಾತ್ರವೇನೂ ಬೇಡ,  ದೊಡ್ಡ ಹೋಳುಗಳು ಚೆನ್ನಾಗಿರುತ್ತವೆ.  ಉಪ್ಪು ಸಹಿತವಾಗಿ ಕುಕ್ಕರಿನಲ್ಲಿ ಬೇಯಿಸುವುದು.   ಹಲಸಿನ ಗುಜ್ಜೆಯ ಪದಾರ್ಥವು ತೊಗರಿಬೇಳೆ ಯಾ ಇನ್ನಿತರ ಬೇಳೆಗಳನ್ನು ಮತ್ತು ಮಸಾಲಾ ಸಾಮಗ್ರಿಗಳನ್ನು ಬಯಸದು,  ಅದೇ ಇದರ ಹೆಗ್ಗಳಿಕೆ.


ಹಾಗಿದ್ದರೆ ತೆಂಗಿನಕಾಯಿ ಅರಪ್ಪು ಹೇಗೆ?

ಅರ್ಧ ಕಡಿ ತೆಂಗಿನತುರಿ

ನಾಲ್ಕಾರು ಒಣಮೆಣಸು,  ಹುರಿಯಿರಿ.

ನೆಲ್ಲಿಕಾಯಿ ಗಾತ್ರದ ಹುಣಸೇ ಹಣ್ಣು

ತೆಂಗಿನತುರಿಯೊಂದಿಗೆ ಹುರಿದ ಒಣಮೆಣಸಿನಕಾಯಿಗಳನ್ನು ಅರೆಯಿರಿ.  ರುಚಿಕಟ್ಟಾಗಲು ಬೇಕಾದ ಹುಳಿ ಇದೆಯಲ್ಲ,  ಅರೆಯುವಾಗಲೇ ಹುಣಸೇ ಹಣ್ಣನ್ನು ಹಾಕಿಕೊಳ್ಳಬಹುದಾಗಿದೆ.   ಅರೆಯುವಾಗ ಸ್ವಲ್ಪ ನೀರು ಕೂಡಿಕೊಳ್ಳುವುದು ಉತ್ತಮ.   ಅರಪ್ಪು ಸಿದ್ಧವಾಯಿತು.   ಬೆಂದಂತಹ ಗುಜ್ಜೆಯ ಹೋಳುಗಳಿಗೆ ತೆಂಗಿನ ಅರಪ್ಪನ್ನು ಕೂಡಿ,  ಕುದಿಸುವುದು.  ರುಚಿಕರವಾಗಲು ಬೆಲ್ಲ ಕೂಡಾ ಹಾಕಬಹುದು.  ಜಜ್ಜಿದ ಬೆಳ್ಳುಳ್ಳಿ,  ಕರಿಬೇವು ಕೂಡಿದ ಒಗ್ಗರಣೆ ಬಿದ್ದೊಡನೆ ಗುಜ್ಜೆ ಮುದ್ದೆಹುಳಿ ಎಂಬ ಪದಾರ್ಥವು ತಯಾರಾಗಿದೆ.


ಇಂದು ಬೇಳೆಚಕ್ಕೆಯ ಬೆಂದಿ

ನಿನ್ನೆ ಗುಜ್ಜೆಯ ಮುದ್ದೆಹುಳಿ

ಮೊನ್ನೆ ಗುಜ್ಜೆಯ ಪಲ್ಯ

ಅಂತೂ ಇಂತೂ ದಿನವೂ

ಹಲಸಿನ ಭೋಜನ!


" ಅದೇನ್ರೀ ಬೇಳೆಚಕ್ಕ ಅಂದ್ರೆ? "


ನಮ್ಮೂರ ಪರಿಭಾಷೆಯಲ್ಲಿ ಚಕ್ಕ ಅಂದ್ರೆ ಹಲಸು ಎಂದರ್ಥ.  ವಿದೇಶೀಯರ ಆಗಮನವಾಗಿದ್ದು ನಮ್ಮ ಕರಾವಳಿಯ ಸಮುದ್ರಮಾರ್ಗದಲ್ಲಿ ಎಂಬುದು ಗೊತ್ತು ತಾನೇ,  ಇಲ್ಲಿನ ಜನರ ಬಾಯಲ್ಲಿ ನಲಿದಾಡುತ್ತಿದ್ದ  ' ಚಕ್ಕ ' ಪದವು ಅವರ ನಾಲಗೆಯಲ್ಲಿ ಜ್ಯಾಕ್ ಎಂದಾಗಿದೆ,  ಈಗಂತೂ ಜ್ಯಾಕ್ ಫ್ರುಟ್ ಸಾರ್ವತ್ರಿಕ ಪದವಾಗಿ ಬಿಟ್ಟಿದೆ!


ಇರಲಿ,  ಹಲಸಿನ ಬೇಳೆಗಳು ಪುಟ್ಟದಾಗಿ ಮೂಡಿದಂತಹ ಗುಜ್ಜೆಯು ಬೇಳೆಚಕ್ಕೆ ಯಾ ಬೇಳೆಚಕ್ಕ ಎಂದು ಹೆಸರಿಸಿಕೊಂಡಿದೆ ಹಾಗೂ ಸಾಂಬಾರು, ಗಸಿ, ಹುಳಿ,  ಪಲ್ಯ ಅಥವಾ ಇನ್ಯಾವುದೇ ಮಾದರಿಯ ಅಡುಗೆಗೂ ಸೈ ಎನ್ನಿಸಿಕೊಂಡಿದೆ.


ತೋಟದಲ್ಲಿ ಹಲಸಿನಕಾಯಿಗಳು ಇರುವಾಗ  " ಇವತ್ತೇನು ಬೆಂದಿ ಮಾಡಲೀ.. " ಎಂದು ಪರದಾಡುವ ಪ್ರಶ್ನೆಯೇ ಇಲ್ಲ.   " ಹಲಸಿನಕಾಯಿ ಉಂಟಲ್ಲ. "  ಎಂಬ ಉತ್ತರದೊಂದಿಗೆ ಹಲಸಿನ ಗುಜ್ಜೆ ಬಂದೇ ಬರುತ್ತದೆ.   ಒಂದೇ ಒಂದು ಗುಜ್ಜೆ ನಾಲ್ಕು ದಿನಗಳ ಅಡುಗೆಗೆ ಸಾಕು,  ಇನ್ನಿತರ ತರಕಾರಿಗಳಂತೆ ಶೀತಲಪೆಟ್ಟಿಗೆ ಯಾ ಫ್ರಿಜ್ ಇದಕ್ಕೆ ಬೇಕಾಗುವುದಿಲ್ಲ.  ಈ ದಿನ ಬೇಳೆಚಕ್ಕೆಯಾದಂತಹ ಹಲಸು ಬಂದಿತು.  ಹೇಗೂ ಬೇಳೆ ಮೂಡಿರುವಂತಹುದು,  ತೊಗರಿಬೇಳೆ ಬೇಯಿಸಬೇಕಾದ ಪ್ರಶ್ನೆಯೇ ಇಲ್ಲ.  ಹಲಸನ್ನು ಹೋಳು ಮಾಡಿಕೊಳ್ಳುವ ಕೌಶಲ್ಯವೊಂದು ತಿಳಿದಿದ್ದರೆ ಸಾಕು,  ನಿಮ್ಮಂತಹ ಜಾಣರು ಇನ್ನೊಬ್ಬರಿಲ್ಲ ಎಂದೇ ತಿಳಿಯಿರಿ.


ಈಗ ನಾವು ಈ ಮೊದಲೇ ತಿಳಿಸಿದಂತೆ ತಪಲೆ ತುಂಬ ಹೋಳು ಮಾಡಿಟ್ಕೊಳ್ಳೋಣ.   ಬೇಳೆಚಕ್ಕೆ ಹಲಸು ಬೇಗನೆ ಬೇಯುವಂತಹುದು,  ಹೋಳು ಮುಳುಗುವಷ್ಟು  ನೀರೆರೆದು,  ಉಪ್ಪು ಕೂಡಿಸಿ,  ಒಂದೆರಡು ಚಮಚ ತೆಂಗಿನೆಣ್ಣೆ ಎರೆದು ಬೇಯಿಸಿ.   ಅತಿಯಾಗಿ ಖಾರ ಇಷ್ಟಪಡುವವರು ಬೇಕಿದ್ದ ಹಾಗೆ ಮೆಣಸಿನಹುಡಿ ಹಾಗೂ ಚಿಟಿಕೆ ಅರಸಿಣವನ್ನು ತರಕಾರಿ ಬೇಯುವಾಗಲೇ ಹಾಕಿಕೊಳ್ಳತಕ್ಕದ್ದು. 



ಒಂದು ಕಡಿ ತೆಂಗಿನಕಾಯಿ ತುರಿಯಿರಿ.   ಮಸಾಲೆ ಏನೇನು?


ನಾಲ್ಕಾರು ಒಣಮೆಣಸು

ಎರಡು ಚಮಚ ಕೊತ್ತಂಬ್ರಿ

ಅರ್ಧ ಚಮಚ ಜೀರಿಗೆ

ಕಡ್ಲೆ ಗಾತ್ರದ ಇಂಗು

ಒಂದೆಸಳು ಕರಿಬೇವು


ತುಸು ಎಣ್ಣೆಪಸೆಯಲ್ಲಿ ಮೇಲಿನ ಸಾಮಗ್ರಿಗಳನ್ನು ಹುರಿಯಿರಿ,   ತೆಂಗಿನತುರಿಯೊಂದಿಗೆ ಅರೆಯಿರಿ.   ಅರೆಯುವಾಗ ದೊಡ್ಡ ನೆಲ್ಲಿಕಾಯಿ ಗಾತ್ರದ ಹುಣಸೆಹುಳಿಯನ್ನೂ ಕೂಡಿ ಅರೆಯಿರಿ.  ತೆಂಗಿನಕಾಯಿ ಅರಪ್ಪು ಸಿದ್ಧವಾಗಿದೆ.  ಬೆಂದಿರುವ ತರಕಾರಿಗೆ ಅರಪ್ಪು ಕೂಡಿ,  ಅಗತ್ಯದ ನೀರು,  ರುಚಿಯ ಉಪ್ಪು,  ಸಿಹಿಯ ಬೆಲ್ಲ ( ಬೇಕಿದ್ದರೆ ಮಾತ್ರ ) ಕೂಡಿಸಿ ಕುದಿಸಿರಿ.  ತೆಂಗಿನೆಣ್ಣೆಯಲ್ಲಿ ಕರಿಬೇವಿನ ಒಗ್ಗರಣೆ ಕೊಡುವಲ್ಲಿಗೆ ಬೇಳೆಚಕ್ಕೆ ಬೆಂದಿ ಊಟಕ್ಕೆ ಬಡಿಸಲು ತಯಾರಾಗಿದೆ.







ಟಿಪ್ಪಣಿ:  ಉತ್ಥಾನ ಮಾಸಪತ್ರಿಕೆಯಲ್ಲಿ ಪ್ರಕಟಿತ ಬರಹ,  ಜೂನ್, 2017.  


Thursday 3 August 2017

ಪಪ್ಪಾಯ ಪಾಯಸ









" ಪಪ್ಪಾಯ ಹಣ್ಣಾದರೂ ಚೆನ್ನಪ್ಪ ಯಾಕೆ ಕೊಯ್ದು ಇಡಲಿಲ್ಲ... " ಒಂದು ಕೋಲಿನಿಂದ ಹಣ್ಣಿಗೆ ಕುಟ್ಟಿದಾಗ ಪಪ್ಪಾಯ ಕೆಳಗೆ ಬಿತ್ತು.   ನೆಲಕ್ಕೆ ಬಿದ್ದ ಹಣ್ಣು ಅಪ್ಪಚ್ಚಿ ಆಯ್ತು.   ವಿಪರೀತ ಹಣ್ಣಾಗಿದ್ದುದನ್ನು ನಾನು ಕೊಯ್ಯಲೇ ಬಾರದಿತ್ತು,  ಹಕ್ಕಿಪಕ್ಕಿಗಳಾದರೂ ತಿನ್ನುತ್ತಿದ್ದುವು....


ಬಿದ್ದು ಮೆತ್ತಗಾದ ಹಣ್ಣನ್ನು ಅತಿ ಜಾಗ್ರತೆಯಿಂದ ಎತ್ತಿ ಮನೆಯೊಳಗೆ ತರಲಾಯಿತು.   ಬಟ್ಟಲಲ್ಲಿ ಇಟ್ಟು ಚೂರಿ ಚಮಚ ಹಿಡಿದು ಅಪರೇಷನ್ ಕ್ರಿಯೆ ನಡೆಸಲಾಗಿ ಬಟ್ಟಲು ತುಂಬ ಹಣ್ಣಿನ ರಸಭರಿತ ತಿರುಳು ತುಂಬಿತು.


ಮನೆ ತುಂಬ ಮಕ್ಕಳಿದ್ದಿದ್ರೆ ತಣ್ಣಗೆ ಹಾಲು ಬೆರೆಸಿ,  " ಮಿಲ್ಕ್ ಶೇಕ್ ಕುಡಿಯಿರಿ. "  ಅನ್ನಬಹುದಾಗಿತ್ತು!


"ಈಗೇನ್ಮಾಡ್ತೀರಾ? "


ತುಪ್ಪ ಇದೆ,  ಸಕ್ಕರೆ ಇದೆ,  ಸಿಹಿಸಿಹಿ ಪಪ್ಪಾಯ ಹಣ್ಣಿಗೆ ಹೆಚ್ಚು ಸಕ್ಕರೆಯೇನೂ ಬೇಡ.   ಒಂದು ಸೌಟು ಸಕ್ಕರೆ ಹಾಗೂ 2 ಚಮಚ ತುಪ್ಪದೊಂದಿಗೆ ಗೊಟಾಯಿಸಲ್ಪಟ್ಟು ಪಪ್ಪಾಯ ಹಲ್ವಾ ಎಂದು ನಾಮಕರಣ ನೀಡಲಾಯಿತು.


ಈ ಪಪ್ಪಾಯ ಹಲ್ವಾ ನಮ್ಮ ಇಬ್ಬರ ಪಾಳಯದಲ್ಲಿ ಮುಗಿಯುವ ಲಕ್ಷಣ ಕಾಣಿಸಲಿಲ್ಲ.   ಈಗೇನೋ ಚೆನ್ನಾಗಿದೆ,  ಹೀಗೇ ನಾಲ್ಕಾರು ದಿನ ಕಳೆದರೆ ಹಾಳಾಗುವುದು ಖಚಿತ ಎಂದು ತೀರ್ಮಾನಕ್ಕೆ ಬರಲಾಗಿ...


" ಪಾಯಸ ಮಾಡಿದರೆ ಹೇಗೆ? "


ನಿತ್ಯಕಟ್ಟಳೆಯ ಅಡುಗೆಗಾಗಿ ತೆಂಗಿನಕಾಯಿ ತುರಿಯುತ್ತಿದ್ದಂತೆ ಸಾಂಬಾರು ಪಲ್ಯಗಳಿಗಾಗಿ ಕಾಯಿತುರಿ ತೆಗೆದಿಟ್ಟು ಉಳಿದ ಕಾಯಿತುರಿಯೆಲ್ಲವನ್ನೂ ಅರೆದು ದಪ್ಪ ಕಾಯಿಹಾಲು,  ನೀರು ಕಾಯಿಹಾಲುಗಳನ್ನು ಬೇರೆ ಬೇರೆಯಾಗಿ ತೆಗೆದಿರಿಸುವುದು.


3 ಚಮಚ ಅಕ್ಕಿಹಿಟ್ಟನ್ನು ನೀರುಕಾಯಿಹಾಲು ಎರೆದು ಕುದಿಸುವುದು,  ಹಿಟ್ಟು ಕುದಿಯುವಾಗ ದಪ್ಪವಾಗಿ ಬಂದಂತೆ 3 ಸೌಟು ಪಪ್ಪಾಯ ಹಲ್ವ ಹಾಕಿಕೊಳ್ಳಿ.

ಸಿಹಿಗೆ ಸಕ್ಕರೆಯ ಅಗತ್ಯ ನೋಡಿಕೊಂಡು ಒಂದು ಸೌಟು ಯಾ ಒಂದೂವರೆ ಸೌಟು ಸಕ್ಕರೆ ಹಾಕಬೇಕಾದೀತು.

ಪುನಃ ಕುದಿಸಿರಿ,  ತಳ ಹತ್ತದಂತೆ ಸೌಟಾಡಿಸುತ್ತಿರಬೇಕು.

ದಪ್ಪ ಕಾಯಿಹಾಲು ಎರೆದು ಒಂದು ಕುದಿ ಬಂದಾಗ ಇಳಿಸಿ.

ಏಲಕ್ಕಿಪುಡಿ,  ದ್ರಾಕ್ಷಿ,  ಗೋಡಂಬಿ ಹಾಕಿದಾಗ ಇನ್ನೂ ಸ್ವಾದಿಷ್ಟ ಪಾಯಸ ನಮ್ಮದಾಯಿತು.


ನಮ್ಮೆಜಮಾನ್ರಂತೂ ಈ ಪಾಯಸದೂಟಕ್ಕೆ ಮಾರು ಹೋದರು,   " ಬಪ್ಪಂಗಾಯೀದು ಅಂತ ತಿಳಿಯುವುದೇ ಇಲ್ಲ! " ಅಂದಿದ್ದಂತೂ ಹೌದು.


" ಹೌದೂ,  ನಮ್ಮ ಜನ ಈ ಬಪ್ಪಂಗಾಯಿ ಪಾಯಸವನ್ನು ಔತಣಕೂಟಗಳಲ್ಲಿ ಮಾಡಿದ್ದನ್ನು ನಾನು ಕಂಡಿಲ್ಲ...  ಯಾಕೆ ಮಾಡಬಾರದು? " ನಮ್ಮವರ ಘನಪ್ರಶ್ನೆ.


" ಮಡಿಹುಡಿಯೆಂದು ಹಾರಾಟ, ಹೋರಾಟಗಳಲ್ಲಿ ತೊಡಗುವ ನಮ್ಮ ಜನ ಬಪ್ಪಂಗಾಯಿ, ಬಸಳೆ,  ನೀರುಳ್ಳಿ ಬೆಳ್ಳುಳ್ಳಿ ಇವುಗಳನ್ನು ಬಳಸಿ ಭೂರಿಭೋಜನಕೂಟದ ನಳಪಾಕ ವ್ಯವಸ್ಥೆ ಮಾಡುವ ಹಾಗಿಲ್ಲ. "  ವಿವರಿಸಿ ಹೇಳಲಿಕ್ಕೆ ನನ್ನಿಂದಾಗದ ಮಾತು ಎಂದು ಸುಮ್ಮನಿರಬೇಕಾಯಿತು.


ರೈಸ್ ಫುಡ್ಡಿಂಗ್ ಮಾದರಿಯ ಈ ಪಾಯಸವು ಎಳೆಯ ಮಕ್ಕಳಿಗೂ,  ವೃದ್ಧರಿಗೂ ಹಿತವಾಗುವಂತದ್ದಾಗಿದೆ.  ದ್ರಾಕ್ಷಿ ಗೋಡಂಬಿಗಳನ್ನು ಯದ್ವಾತದ್ವಾ ಹಾಕದಿದ್ದರೇ ಉತ್ತಮ.  ಮಕ್ಕಳಿಗೆ ಪಪ್ಪಾಯ ಹಣ್ಣು ತಿನ್ನಿಸಬೇಕೆಂದು ಆರೋಗ್ಯ ತಜ್ಞರು ಹೇಳುತ್ತಲೇ ಇರುತ್ತಾರೆ,  ಮುದ್ದುಮಗುವಿಗೂ ಪಪ್ಪಾಯ ಪಾಯಸವನ್ನು ಚಮಚಾದಲ್ಲಿ ತಿನ್ನಿಸಬಹುದು.


ಸತ್ವಭರಿತ ಹಣ್ಣು ಎಂದರೆ ಪಪ್ಪಾಯ,  ಇದರಲ್ಲಿ ವಿಟಮಿನ್ ಸಿ ಹಾಗೂ ಎ ಅನ್ನಾಂಗಗಳೂ,  ಖನಿಜಾಂಶಗಳು ಅಧಿಕವಾಗಿವೆ.  ನಾರುಯುಕ್ತವೂ ಆಗಿರುವ ಬಪ್ಪಂಗಾಯಿ ಹಣ್ಣನ್ನು ಕಡೆಗಣಿಸದಿರಿ.