Pages

Ads 468x60px

Friday 21 July 2017

ಸೊಳೆ ಮೇಲಾರ






                




ಭೋಜನಕೂಟದ ಕೊನೆಯ ವ್ಯಂಜನವಾದ ಮಜ್ಜಿಗೆಹುಳಿ ಬಂದಿತು.   ಮಜ್ಜಿಗೆಹುಳಿಗೆ ತರಕಾರಿಯಾಗಿ ಸುವರ್ಣಗೆಡ್ಡೆ ಯಾ ಮುಂಡಿಗೆಡ್ಡೆಯನ್ನು ಬಳಸುವ ವಾಡಿಕೆ,   ಯಾವುದೋ ಗೆಡ್ಡೆ ತರಕಾರಿಯಿರಬೇಕು ಅಂದ್ಕೊಂಡು ಬಾಯಿಗಿಟ್ಟಾಗ ಬಟಾಟೆಯೇನೋ ಅನ್ನಿಸಿತು.   " ಇದೇನು ಬಟಾಟೆ ಮೇಲಾರವೇ? "

" ಅಲ್ಲ,  ಸೊಳೇದು... "

 ಹಲಸಿನಸೊಳೆಯಿಂದ ಮಜ್ಜಿಗೆಹುಳಿಯ ಕಲ್ಪನೆ ಕೂಡಾ ಮಾಡಿರಲಿಲ್ಲ ಕಣ್ರೀ...   ಇದೂ ಒಂದು ಹೊಸರುಚಿಯೇ ಸರಿ,   ಹಲಸುಪ್ರಿಯರಿಗೆ ಇಷ್ಟವಾಗುವಂತಾದ್ದು.


ಹಲಸು ಪಲ್ಯ,  ಹಲಸಿನಹಣ್ಣಿನ ಪಾಯಸಗಳು ಭೋಜನಕೂಟಗಳಲ್ಲಿ ವಾಡಿಕೆಯ ಸವಿರುಚಿಗಳು.   ಮಜ್ಜಿಗೆಹುಳಿಯನ್ನೂ ಮಾಡಿ ಬಡಿಸಿದವರನ್ನು ನಾನು ಕಂಡಿದ್ದಿಲ್ಲ.   ತೋಟದಲ್ಲಿ ಕೇಳುವವರಿಲ್ಲದೆ ವ್ಯರ್ಥವಾಗಿ ಬಿದ್ದು ಹೋಗಬೇಕಾಗಿದ್ದ ಹಲಸನ್ನು ಸದುಪಯೋಗ ಪಡಿಸಿದ್ದನ್ನು ಮೆಚ್ಚಲೇಬೇಕು.


ಮನೆಗೆ ಹಿಂದುರಿಗಿದ ನಂತರ ನಾನೂ ಸೊಳೆ ಮೇಲಾರ ಮಾಡುವ ನಿರ್ಧಾರ ಮಾಡಿ ಆಯ್ತು.   ಆದರೆ ನಮ್ಮ ತೋಟದ ಹಲಸಿನಕಾಯಿಗಳು ಧಾರಾಕಾರ ವರ್ಷಧಾರೆಗೆ ಬಿದ್ದು ಕೊಳೆತು ಮುಗಿದಿವೆ,  ಹಿಂದಿನ ವರ್ಷದ ಉಪ್ಪುಸೊಳೆಯೇ ಇರುವಾಗ ಚಿಂತೆ ಯಾಕಾದರೂ ಮಾಡಬೇಕು ಅಲ್ಲವೇ?   ಉಪ್ಪುಸೊಳೆಯಿಂದಲೇ ಮಜ್ಜಿಗೆಹುಳಿ ಮಾಡೋಣ.


ಹೇಗೆ?

2 ಹಿಡಿ ಹಲಸಿನ ಸೊಳೆಗಳು.   ಉಪ್ಪು ಬಿಡಿಸಲು ನೀರಿನಲ್ಲಿ ಹಾಕಿಡುವುದು.

ನಂತರ ಸಮಗಾತ್ರದ ಹೋಳು ಮಾಡಿ ಇಡುವುದು.

ಅರ್ಧ ಕಡಿ ತೆಂಗಿನತುರಿಯನ್ನು ಒಂದು ಲೋಟ ಸಿಹಿ ಮಜ್ಜಿಗೆ ಎರೆದು ಸಾಧ್ಯವಾದಷ್ಟು ನುಣ್ಣಗೆ ಅರೆಯುವುದು.

ಬೇಕಿದ್ದರೆ ಒಂದು ಹಸಿಮೆಣಸು ಅರೆಯುವಾಗ ಹಾಕಬಹುದು.


ಕುಕ್ಕರಿನಲ್ಲಿ ಸೊಳೆಗಳನ್ನು ಬೇಯಿಸಿ,  ತೆಂಗಿನಕಾಯಿ ಅರಪ್ಪು ಕೂಡಿಸಿ,  ಬೇಕಿದ್ದರೆ ಚಿಕ್ಕ ತುಂಡು ಬೆಲ್ಲ ಕೂಡಿಸಿ ಕುದಿಸುವುದು.   ತೆಂಗಿನಕಾಯಿ ಹಾಗೂ ಮಜ್ಜಿಗೆಯ ಈ ಪದಾರ್ಥ ಕುದಿಯುವಾಗ ಹಾಲು ಉಕ್ಕಿ ಬಂದಂತೆ ಮೇಲೆದ್ದು ಬಂದರೆ ಮಜ್ಜಿಗೆಹುಳಿ ಸರಿಯಾಗಿದೆ ಎಂದು ತಿಳಿಯಿರಿ.   ಕರಿಬೇವಿನ ಒಗ್ಗರಣೆ ಕಡ್ಡಾಯ,   ರುಚಿಗೆ ಉಪ್ಪು ಹಾಕುವ ಅಗತ್ಯ ಇಲ್ಲ.   



Wednesday 12 July 2017

ಅಂಬಟೆಯ ಸವಿರುಚಿ




                                  



 ಅತ್ತೇ,  ಮುಂದಿನ ಆದಿತ್ಯವಾರ,  ನೆನಪಿದೆ ತಾನೇ... "  ಸುಬ್ರಹ್ಮಣ್ಯದಿಂದ ವೆಂಕಟೇಶ್ ಕರೆ ಬಂದಿತು.


ಸೋದರಳಿಯ  " ಬನ್ನೀ... "  ಅನ್ನುತ್ತಿರುವಾಗ ಹೊರಡದಿದ್ದರೆ ಹೇಗೆ?   ಭಾನುವಾರ ಮುಂಜಾನೆ ಹಲಸಿನಹಣ್ಣಿನ ಕೊಟ್ಟಿಗೆ ತಿಂದು ಸುಬ್ರಹ್ಮಣ್ಯಕ್ಕೆ ಹೊರಟೆವು.   ಈಗ ರಸ್ತೆ ಚೆನ್ನಾಗಿದೆಯಾದರೂ ಮುಳಿಗದ್ದೆಯಿಂದ ಸುಬ್ರಹ್ಮಣ್ಯಕ್ಕೆ ಸರಿಸುಮಾರು ಮೂರು ಗಂಟೆಯ ಪ್ರಯಾಣ.


ಜೊತೆಗೆ ಬಂದಿದ್ದ ಉಷಕ್ಕನ ಫ್ಯಾಮಿಲಿ ದೇವಸ್ಥಾನಕ್ಕೆ ಹೋಗ್ಬಿಟ್ಟೇ ಮನೆಗೆ ಹೋಗೋಣ ಅಂದರು.   ದೇಗುಲದರ್ಶನ ಮಾಡಿಕೊಂಡು ಮನೆ ತಲಪುವಾಗ ಗಂಟೆ ಹನ್ನೆರಡಾಗಿತ್ತು.


ನೆಂಟರಿಷ್ಟರು ಆಗಲೇ ಜಮಾಯಿಸಿದ್ದರು.   ಚಹಾ ಸ್ವೀಕರಿಸಿ,  ಗುರುತು ಪರಿಚಯದವರೊಡನೆ ಮಾತನಾಡಿ,   ವಾರಪತ್ರಿಕೆಯೊಂದರ ಪುಟ ಬಿಡಿಸಿ,  ಮನೆಯ ಸುತ್ತಮುತ್ತಲಿನ ಹೂಗಿಡಗಳ ಅಲಂಕರಣವನ್ನು ನೋಡುತ್ತ,  ರಂಬುಟಾನ್ ಹಣ್ಣಿನ ಮರದ ಹಣ್ಣುಗಳೇನಾದುವು ಎಂದು ವಿಚಾರಿಸಿದಾಗ,  "ಎಲ್ಲವೂ ಮಂಗಗಳ ಪಾಲಾಯ್ತು. " ಎಂದಳು ಮನೆಯೊಡತಿ ಸ್ವಪ್ನ.


ಊಟದ ವೇಳೆ,  ಭೋಜನಕೂಟವೆಂದರೆ ಕೇಳಬೇಕೇ,  ಬಾಳೆಲೆಯ ಮೇಲೆ ಖಾದ್ಯಗಳು ಬಂದಿಳಿದುವು.   ದಿನವೂ ನಾನೇ ಮಾಡಿದಂತಹ ಅಡುಗೆಯನ್ನು ತಿಂದು ಜಡ್ಡುಗಟ್ಟಿದಂತಹ ನಾಲಿಗೆಗೆ ಇಂತಹ ಭೋಜನಕೂಟಗಳು ಬಾಯಿ ಚಪಲವನ್ನೂ ಎದ್ದೇಳಿಸುವಂತಹವುಗಳು,  ಹೊಸರುಚಿಗಳನ್ನು ಸವಿಯುವ ಹಾಗೂ ಕಲಿಯುವ ಸೌಭಾಗ್ಯ.


" ಮೆಣಸ್ಕಾಯೀ... "  ಅನ್ನುತ್ತ ಪ್ರಸಾದ್ ಬಂದ,  ಕಣ್ಣು ಹಾಯಿಸಿದಾಗಲೇ ತಿಳಿಯಿತು,  ಅಂಬಟೆ ಮೆಣಸ್ಕಾಯಿ.  ಈಗ ಅಂಬಟೆಯ ಕಾಲ.


ನಿನ್ನೆ ತಾನೇ ಚೆನ್ನಪ್ಪ ಅಂದಿದ್ದ,   " ಅಕ್ಕ,  ಪೇಟೆಯ ಅಂಬಟೆ ಮಿಡಿ ಕೇಜೀಗೆ ಎಂಭತ್ತು ರುಪಾಯಿ... "

" ಹೌದ,  ನಾವೂ ಸ್ವಲ್ಪ ಅಂಬಟೆ ಮಿಡಿ ಕೊಯ್ದು ಉಪ್ಪಿನಲ್ಲಿ ಹಾಕಿಟ್ಟುಕೊಳ್ಳೋಣ. "


ಮೆಣಸ್ಕಾಯಿ ಉಣ್ಣುತ್ತ ಇದೇ ಮಾದರಿಯ ಮೆಣಸ್ಕಾಯಿ ಮನೆಗೆ ಹೋಗ್ಬಿಟ್ಟು ಮಾಡಬೇಕು ಎಂದೂ ಅಂದ್ಕೊಂಡಿದ್ದಾಯ್ತು.   ಅದೇ ವೇಳೆಗೆ ವೆಂಕಟೇಶ್ ಬಂದ,  " ನೋಡೂ,  ಈ ಅಂಬಟೆಯ ಮೆಣಸ್ಕಾಯಿ ಫಸ್ಟಾಗಿದೆ,  ಒಂದು ಫೋಟೋ ತೆಗೆದಿಟ್ಟಿರು...  ನಾನು ಬ್ಲಾಗಿನಲ್ಲಿ ಹಾಕ್ತೇನೆ. "


" ಸರಿ ಅತ್ತೇ,  ವಾಟ್ಸಾಪಿನಲ್ಲಿ ಕಳಿಸ್ತೇನೆ. "  ವೆಂಕಟೇಶನ ಐಫೋನ್ ಕೆಮರಾ ಅಡುಗೆಶಾಲೆಗೆ ಹೋಯಿತು.

ಊಟದ ತರುವಾಯ,  " ಅತ್ತೇ,  ಮೆಣಸ್ಕಾಯಿ  ಮಾಡುವ ವಿಧಾನ ಕೇಳಿದ್ರಾ... "

" ಅದನ್ನೇ ಕೇಳಬೇಕೀಗ,  ನಾವು ಎಷ್ಟೇ ಚೆನ್ನಾಗಿ ಮಸಾಲೆ ಹುರಿದ್ರೂ ಈ ಪಾಕ ಬರೂದಿಲ್ಲ. "


ಅಡುಗೆ ಗಣಪಣ್ಣ ಖುಷ್ ಖುಷಿಯಿಂದ ಹೇಳಿದ್ದು ಹೀಗೆ,


" ಉದ್ದಿನಬೇಳೆ ಜಾಸ್ತಿ ಹಾಕ್ಬೇಕು...  ತೆಂಗಿನಕಾಯಿ ತುಂಬ ಹಾಕಬಾರದು...  ಕೊತ್ತಂಬರಿ ಬೇಡ... ಜೀರಿಗೆ ಇರಲಿ...  ಎಳ್ಳು ಜಾಸ್ತಿ ಹಾಕಿ...  ಉಪ್ಪು ಹುಳಿ ಬೆಲ್ಲ ಸ್ಟ್ರಾಂಗ್ ಆಗಿರಬೇಕು... "  ಹೇಳುತ್ತ ಗಣಪಣ್ಣ ನನಗಾಗಿ ಜಾಡಿ ತುಂಬ ಮೆಣಸ್ಕಾಯಿ ತುಂಬಿಸಿಯೂ ಕೊಟ್ಟ!


" ಇಷ್ಟೂ ಮೆಣಸ್ಕಾಯಿ ಯಾಕೆ?  ಮನೆಯಲ್ಲಿ ನಾವಿಬ್ಬರೇ ಇರೂದಲ್ವ... "

" ಇರಲಿ,  ವಾರವಾದರೂ ಹಾಳಾಗುವುದಿಲ್ಲ. "


ಈಗ ಮಾಡೋಣ.


ಹತ್ತು ಹನ್ನೆರಡು ಅಂಬಟೆಗಳನ್ನು ಬೇಯಿಸಿ,  ಉಪ್ಪು ಹಾಗೂ ಬೆಲ್ಲ ಹಾಕಿರಿ.   ಬೆಲ್ಲವೂ ಕರಗಿ ಬೆಂದಂತಹ ಅಂಬಟೆಯೊಳಗೆ ಬೆಲ್ಲದ ಸಿಹಿ ಮಿಳಿತವಾಗಬೇಕು ಹಾಗೂ ಅಂಬಟೆಯ ಹುಳಿ ಬೆಲ್ಲದೊಂದಿಗೆ ಸೇರಬೇಕು.


ಮಸಾಲೆ ಏನೇನು?


7 - 8  ಒಣಮೆಣಸಿನಕಾಯಿಗಳು 

3 ಚಮಚ ಉದ್ದಿನಬೇಳೆ

ಒಂದು ಚಮಚ ಜೀರಿಗೆ

5 ಚಮಚ ಎಳ್ಳು 

ಹುರಿಯಿರಿ,  ಕೊನೆಯಲ್ಲಿ ಒಂದು ಹಿಡಿ ಕಾಯಿತುರಿ ಹಾಕಿ ಬಾಡಿಸಿಕೊಳ್ಳಿ.

ಅರೆಯಿರಿ,  ಗಂಧದಂತೆ ನಯವಾಗಿ ಬಂದಷ್ಟೂ ಚೆನ್ನ.

ಅರೆದ ಮಿಶ್ರಣವನ್ನು ಅಂಬಟೆಯ ರಸಪಾಕಕ್ಕೆ ಕೂಡಿಸಿ,  ಕುದಿಸಿರಿ.

ಸಾಂಪ್ರದಾಯಿಕ ಖಾದ್ಯವಾದ ಮೆಣಸ್ಕಾಯಿಗೆ ಕೊತ್ತಂಬರಿ ಸೊಪ್ಪಿನ ಅಲಂಕರಣವೇನೂ ಬೇಕಿಲ್ಲ,   ಕರಿಬೇವಿನ ಒಗ್ಗರಣೆ ನೀಡುವಲ್ಲಿಗೆ ಮೆಣಸ್ಕಾಯಿ ಆಯಿತೆಂದು ತಿಳಿಯಿರಿ.


ಅಂಬಟೆಯ ಪುಳಿಯೋಗರೆ


ಕುದಿಸಿ ಜಾಡಿಯಲ್ಲಿ ತುಂಬಿಸಿಟ್ಟಿದ್ದ ಅಂಬಟೆಯ ಮೆಣಸ್ಕಾಯಿ ದಿನ ಮೂರಾದರೂ ಮುಗಿಯದಿದ್ದಾಗ ಚಿಂತೆಗಿಟ್ಟುಕೊಂಡಿತು.  ಇಂದು ಸಂಜೆ ಹೊತ್ತಿಗೆ ಚಹಾ ಜೊತೆ ಅಂಬಟೆಯ ಪುಳಿಯೋಗರೆ ಮಾಡೋಣ.


ಹೇಗೆ?


ಮಧ್ಯಾಹ್ನದೂಟಕ್ಕೆ ಮಾಡಿದಂತಹ ಅನ್ನ 2 ಸೌಟು

ಹತ್ತಾರು ನೆಲಕಡಲೆ ಬೀಜಗಳು

2 ಕರಿಬೇವಿನೆಸಳು

ಅಡುಗೆಯ ಎಣ್ಣೆ ಯಾ ತುಪ್ಪ 2 ಚಮಚ ಹಾಗೂ ಒಗ್ಗರಣೆ ಸಾಹಿತ್ಯ


ಬಾಣಲೆಯಲ್ಲಿ ಎಣ್ಣೆ ಇಟ್ಟು ನೆಲಕಡಲೆ ಹುರಿಯಿರಿ ಹಾಗೂ ಇನ್ನಿತರ ಒಗ್ಗರಣೆ ಸಾಮಗ್ರಿಗಳನ್ನು ಹಾಕಿ ಸಾಸಿವೆ ಸಿಡಿದಾಗ ಕರಿಬೇವು ಬೀಳಲಿ.   ತೆಗೆದಿಟ್ಟ ಅನ್ನ ಹಾಗೂ ಅಂಬಟೆಯ ಮೆಣಸ್ಕಾಯಿ ರಸ ಎರೆದು ಚೆನ್ನಾಗಿ ಮಿಶ್ರಗೊಳಿಸಿ,   ಒಂದರೆಗಳಿಗೆ ಮುಚ್ಚಿ ಇಟ್ಟು ಸ್ಟವ್ ನಂದಿಸಿ.


ಸಂಜೆಯ ಚಹಾದೊಂದಿಗೆ ಪುಳಿಯೋಗರೆ ತಟ್ಟೆಗೆ ಹಾಕಿಕೊಂಡು ತಿನ್ನಿರಿ.   ಮೂಲತಃ ಪುಳಿಯೋಗರೆ ಹಾಗೂ ಮೆಣಸ್ಕಾಯಿ ಮಸಾಲೆಗಳು ಒಂದೇ ಆಗಿರುವುದರಿಂದ ಅಂಬಟೆಯ ಈ ರಸಪಾಕವನ್ನು ಜಾಡಿಯಲ್ಲಿ ತುಂಬಿಸಿಟ್ಟು ಹದಿನೈದು ದಿನ ಉಪಯೋಗಿಸುವುದಕ್ಕೂ ಅಡ್ಡಿಯಿಲ್ಲ ಎಂದೂ ತಿಳಿದಿರಲಿ.

 


 

Saturday 1 July 2017

ಉಪ್ಪುಸೊಳೆ ಪಲ್ಯ


                                      


ಈಗ ಹಲಸಿನಕಾಯಿಗಳ ಕಾಲ, ಮಳೆಗಾಲದ ಅಡುಗೆಗಾಗಿ ಉಪ್ಪಿನಲ್ಲಿ ಹಲಸಿನ ಸೊಳೆಗಳನ್ನು ಶೇಖರಿಸಿ ಇಡುವ ಸಮಯ, ಹೊಸ ಉಪ್ಪುಸೊಳೆ ಹಾಕಿಡುವ ಹೊತ್ತಿಗೆ ಹಳೆಯ ಸಂಗ್ರಹ ಮುಗಿದಿರಬೇಕಾಗಿತ್ತು, ದೊಡ್ಡ ಪ್ಲಾಸ್ಟಿಕ್ ಜಾಡಿಯಲ್ಲಿ ಇಟ್ಕೊಂಡಿದ್ದು ಹಾಗೇ ಇದೆ. ಜಾಡಿಯ ಮುಚ್ಚಳ ತೆರೆದು ನೋಡಿದಾಗ ಆಗ ತಾನೇ ಹಾಕಿದಂತಿದ್ದ ಹಲಸಿನ ಸೊಳೆಗಳು, ಜೊತೆಗಿರಲಿ ಅಂತಿದ್ದ ಅಂಬಟೆ ಮಿಡಿಗಳೂ...

" ನೋಡ್ರೀ, ಈ ಅಂಬಟೆ ಮಿಡಿ ಕೂಡಾ ಎಷ್ಟು ಚೆನ್ನಾಗಿದೆ! "

" ಹೌದಲ್ಲವೇ... " ಅನ್ನುತ್ತ ನಮ್ಮವರೂ ಒಂದು ಅಂಬಟೆ ಮಿಡಿಯನ್ನು ಚೂರಿಯಲ್ಲಿ ಕತ್ತರಿಸಿ ತಿಂದರು. " ಹ್ಞೂ, ಉಪ್ಪು ಅಂದ್ರೆ ಅಷ್ಟು ಪವರ್ ಫುಲ್, ನೆಲ್ಲಿಕಾಯಿಯನ್ನೂ ಹೀಗೆ ಉಪ್ಪಿನಲ್ಲಿ ಇಟ್ಟರೆ ಆದೀತೇನೋ... "

" ಆದೀತು... "

"ಒಂದು ವೇಳೆ ಉಪ್ಪು ಹಾಕಿದ್ದು ಜಾಸ್ತಿ ಆದ್ರೂ ನೀರಿನಲ್ಲಿ ತೊಳೆದರಾಯ್ತಲ್ಲ. "

ಇಷ್ಟು ಚೆನ್ನಾಗಿರುವುದನ್ನು ಬಿಸಾಡುವುದೇ, ದಿನಕ್ಕೊಂದು ಅಡುಗೆ ಮಾಡಿ ಮುಗಿಸೋಣ. ಉಪ್ಪುಸೊಳೆಯ ಪಲ್ಯ ಹಾಗೂ ಟೊಮ್ಯಾಟೋ ಸಾರು ಎಂದು ಮೆನು ಸಿದ್ಧವಾಯಿತು.

ಪಲ್ಯಕ್ಕೆ ಅಗತ್ಯವಿರುವ ಸೊಳೆಗಳು, ಮೂರು ಹಿಡಿ ಆಗುವಷ್ಟು ಸಾಕು. ನೀರಿನಲ್ಲಿ ತೊಳೆಯುವುದು ಹಾಗೂ ನೀರು ಹಾಕಿ ಇಟ್ಟಿರಾದರೆ ಅಧಿಕವಾದ ಉಪ್ಪು ಬಿಟ್ಟೀತು.

ಸೊಳೆಗಳನ್ನು ಒಂದೇ ಗಾತ್ರದಲ್ಲಿ ಸಿಗಿದು ಇಡುವುದು.

ದಪ್ಪ ದಪ್ಪ ಸೊಳೆಗಳನ್ನು ಬೇಯಿಸಲು ಕುಕರ್ ಸೂಕ್ತ. ಪ್ರೆಶರ್ ಪ್ಯಾನ್ ನಲ್ಲಿ ಒಗ್ಗರಣೆ ಸಾಹಿತ್ಯಗಳನ್ನು ತುಂಬಿಸಿ - ನಾಲ್ಕು ಚಮಚ ತೆಂಗಿನೆಣ್ಣೆ, ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕಡ್ಲೆಬೇಳೆ, ಒಣಮೆಣಸು ಹಾಗೂ ಕರಿಬೇವು.

ಸಾಸಿವೆ ಸಿಡಿದಾಗ ಕರಿಬೇವು ಹಾಕುವುದು. ಚಿಟಿಕೆ ಅರಸಿಣ ಬೀಳಲಿ.

ನೀರಿನಿಂದ ಬಸಿದ ಸೊಳೆಗಳನ್ನು ಹಾಕಿ, ಬೇಯಲು ಅಗತ್ಯದ ಒಂದು ಲೋಟ ನೀರು ಎರೆಯಿರಿ. ರುಚಿಗೆ ಉಪ್ಪು ಹಾಕುವ ಅಗತ್ಯವೇ ಇಲ್ಲ. ಕುಕರ್ ಒಂದು ವಿಸಿಲ್ ಹಾಕಿದಾಗ ಆಯ್ತು ಅನ್ನಿರಿ.

ತೆಂಗಿನ ತುರಿಯಿಂದ ಅಲಂಕರಿಸುವುದು.

ತೆಂಗಿನ ತುರಿಯ ಮಸಾಲೆ ಅರೆದೂ ಹಾಕಬಹುದಾಗಿದೆ, ತೆಂಗಿನ ತುರಿ ಹಾಗೂ ತುಸು ಜೀರಿಗೆಯನ್ನು ನೀರು ಹಾಕದೆ ಅರೆದು ಬೆಂದ ಪಲ್ಯಕ್ಕೆ ಕೂಡಿದರಾಯಿತು. ಮಸಾಲೆಗಳನ್ನು ಹೊಂದಿಸಿ ರುಚಿಯಲ್ಲಿ ವೈವಿಧ್ಯತೆ ತರುವುದು ನಿಮ್ಮ ಆಯ್ಕೆ.

" ಹೇಗೇ? "

ಒಗ್ಗರಿಸುವಾಗ ಶುಂಠಿ ಬೆಳ್ಳುಳ್ಳಿಯ ಪೇಸ್ಟು ಹಾಗೂ ನೀರುಳ್ಳಿ, ಗರಂ ಮಸಾಲಾ ಹುಡಿ... ಹೀಗೆ ರುಚಿಯಲ್ಲಿ ಸಂದರ್ಭಾನುಸಾರ ಬದಲಾವಣೆ ತಂದರಾಯಿತು.