Pages

Ads 468x60px

Sunday 25 October 2015

ಲಿಂಬೇ ಚಹಾ







ಗಜಲಿಂಬೆಯ ಹಣ್ಣುಗಳ ಗೊಂಚಲು ಗಿಡದಲ್ಲಿ ತೊನೆದಾಡುತ್ತಿರುವಾಗ,  ಸಂಜೆಯ ಹೊತ್ತು ಯಾರೇ ಬರುವವರಿದ್ದರೂ ಶರಬತ್ತು ಮಾಡಿಟ್ಟು ರೂಢಿ ಆಗ್ಹೋಗಿದೆ.   ಕಾಫಿ, ಟೀ ಅಂತೆಲ್ಲ ಮಾಡೋದೇನಿದ್ರೂ ಮುಂಜಾನೆ ಹೊತ್ತು.

ಅದರಲ್ಲೂ ಈಗ ನಮ್ಮ ಮನೆ ಹುಡುಗ ಪ್ರಕಾಶ್,  ಬೆಂಗಳೂರಿನಲ್ಲಿ ಮನೆ ಖರೀದಿಸಿದ್ದಾನೆ.  ಗೃಹಪ್ರವೇಶ ಆಗ್ಬೇಡವೇ,  ನಾವೆಲ್ಲ ಹೋಗ್ಬೇಡವೇ,  ಆಮಂತ್ರಣದೊಂದಿಗೆ ಸಂಜೆ ಮನೆ ಕಡೆ ಬಂದ.  ಬರುವಾಗ ಸಕುಟುಂಬ ಸಹಿತವಾಗಿ ಎಲ್ಲರೂ ಬಂದ್ರು.   ಬರ್ತಾನೇಂತ ಗೊತ್ತಿದ್ದುದರಿಂದ ಲಿಂಬೇ ಪಾನಕ ಮಾಡಿದ್ದೂ ಆಗಿತ್ತು.

" ಅರೆ!  ಪಾನಕ ಮಾಡೋ ವಿಧಾನ ಸ್ವಲ್ಪ ಹೇಳ್ರೀ "

10 - 12 ಲೋಟ ಪಾನಕ ಆಗಬೇಕಿದೆ.
4 ಲಿಂಬೆ ಹಣ್ಣು.
ಒಂದು ಪಾವು ಸಕ್ಕರೆ.
ಪಾವು ಅಳತೆ ತಿಳಿಯದವರು 2 ದೊಡ್ಡ ಸೌಟು ಸಕ್ಕರೆ ಅಂತ ಬರೆದುಕೊಳ್ಳಿ.
3 ಲೋಟ ನೀರು ಕುದಿಯಲಿ.
ಕುದಿದ ನೀರಿಗೆ ಸಕ್ಕರೆ ಬೀಳಲಿ,  ಕರಗುತ್ತಾ ಇರಲಿ.
ಉಳಿದ 9 ಲೋಟ ನೀರನ್ನೂ ಬಿಸಿ ಮಾಡ್ತಾ ಇದ್ದ ಹಾಗೆ ಲಿಂಬೆ ಹಣ್ಣುಗಳನ್ನು ಕತ್ತರಿಸಿ ರಸ ತಗೆದು,  ಬೀಜಗಳಿದ್ದರೆ ಆರಿಸಿ ತೆಗೆಯಿರಿ.
ಲಿಂಬೆಯ ಸಿಪ್ಪೆಗಳನ್ನೂ ನೀರಿಗೆ ಹಾಕಿ  ಹಿಂಡಿ ತೆಗೆಯಬಹುದಾಗಿದೆ,  ಸಿಪ್ಪೆ ಒಂದು ಅತ್ಯುತ್ತಮ ಆ್ಯಂಟಿ ಓಕ್ಸಿಡೆಂಟ್.
ಸಿದ್ಧವಾದ ಸಕ್ಕರೆಯ ದ್ರಾವಣಕ್ಕೆ ಲಿಂಬೆರಸ, ಬಿಸಿನೀರು ಎರೆಯಿರಿ.
ಬಿಸಿ ಬಿಸಿ ಶರಬತ್ತು ತಯಾರಕರು ಮೊದಲಾಗಿ ಕುಡಿದು  " ವಾಹ್ ವಾಹ್ "  ಅನ್ನಿರಿ.

ಬಂದವರೆಲ್ಲ ಅಚ್ಚುಕಟ್ಟಾಗಿ ಶರಬತ್ತು ಕುಡಿದು ಹೋದರು.  ಆದರೂ ಒಂದು ಲೋಟ ಶರಬತ್ತು ಉಳಿಯಿತು,  ನಾನೇ ಕುಡಿಯಬಹುದಾಗಿತ್ತು,  ಆದ್ರೇನ್ಮಾಡ್ಲೀ,  ಈಗಾಗಲೇ 2 ಲೋಟ ಕುಡಿದಿದ್ದಾಗಿದೆ,  ನಾಳೆಗೆ ಇಟ್ಕೊಳ್ಳೋಣ.

ಆ ನಾಳೆ ಬಂದಿತು.  ಚಹಾ ಸಮಯ,  ಗಂಟೆ ಹತ್ತಾಯಿತು.
ಅರ್ಧ ಲೋಟ ನೀರು ಕುದಿಯಿತು, ಚಹಾಪುಡಿ ನೀರಿಗೆ ಬಿದ್ದಿತು.
ತಣ್ಣನೆಯ ಶರಬತ್ತು ಬೆಚ್ಚಗಾಯಿತು,  ಕುದಿಸದಿರಿ.
ಬಿಸಿಬಿಸಿಯಾದ ಚಹಾ ದ್ರಾವಣ ಲಿಂಬೇ ಪಾನಕಕ್ಕೆ ಇಳಿಯಿತು.
" ವಾರೆವ್ಹಾ,  ಲೆಮೆನ್ ಟೀ ಅಂದ್ರೆ ಇದು "  ನಮ್ಮೆಜಮಾನ್ರು ಈ ಚಹಾ ಕುಡಿದು ನೂರಕ್ಕೆ ನೂರು ಮಾರ್ಕು ಕೊಟ್ಟಿದ್ದು ಸುಳ್ಳಲ್ಲ !  

ಅಂದ ಹಾಗೆ ಕುದಿಯುವ ನೀರಿನಲ್ಲಿ ಶರಬತ್ತು ಮಾಡಲು ಸೂಚಿಸಿದ್ದು ನನ್ಮಗ ಮಧು,  ಅವನೂ ಬೆಂಗಳೂರಿನಲ್ಲಿದಾನೇ,  " ತಣ್ಣಗಿನ ನೀರು ಇಲ್ಲಿ ಕುಡಿಯೋ ಹಾಗಿಲ್ಲ,  ನಾವು ಹಾಟ್ ಜ್ಯೂಸ್ ಕುಡಿಯೋದು " ಅಂದಿದ್ದ.



Saturday 17 October 2015

ಕಣ್ಣೆದುರಲ್ಲಿ ಕಾಷ್ಠ ಕಲೆ







ವೆಂಕಟೇಶಂದು ದೂರವಾಣಿ ಕರೆ,  " ಅಕ್ಕಾ, ಅಪ್ಪಂದು ತಿಥಿ ಇದೇ ತಿಂಗಳು 25ನೇ ತಾರೀಕು...."
" ಹ್ಞೂ "  ಅಂದ್ಬಿಟ್ಟು ತಾರೀಕು ನೆನಪಿಗಾಗಿ ಕ್ಯಾಲೆಂಡರ್  ಪುಟದಲ್ಲಿ ಗುರುತು ಮಾಡಿಟ್ಟೂ ಆಯಿತು.  ಈಗ ಮರೆತು ಹೋಗದಂತಿರಲು ಆ್ಯಪ್ಸ್ ಬಂದಿವೆ,  ನನ್ನ ಐಪಾಡ್ ಕೂಡಾ reminder apps ಅನ್ನು ಹೊಂದಿದೆ.   ಅದೂ ವಾರ, ದಿನ, ಗಂಟೆ ಎಲ್ಲವನ್ನೂ ತುಂಬಿಸಿ ಕೊಟ್ರೆ ಆ ಹೊತ್ತಿಗೆ ಅಲರಾಂ ಕೊಟ್ಬಿಡುತ್ತೆ,  ಈಗೇನಿದ್ರೂ ತಂತ್ರಗಳ ಕಾಲ ಅಲ್ವೇ, ಇರಲಿ.

ದಿನ ಮುಂಚಿತವಾಗಿ ಮಗಳೂ ಬೆಂಗಳೂರಿನಿಂದ ಬಂದಿದ್ದಳು.   ಒಳ್ಳೆಯದೇ ಆಯಿತು,  ಅಜ್ಜನ ತಿಥಿಯ ಹೋಳಿಗೆ ಮೊಮ್ಮಗಳು ತಿನ್ನದಿದ್ದರಾದೀತೇ,  ಬೆಳಗಿನ ಜಾವ ಟಿಫಿನ್ ಮುಗಿಸಿ ನಮ್ಮ ವಾಹನ ಹೊರಟಿತು.

ಶ್ರಾದ್ಧದ ಔಪಚಾರಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳುತ್ತಿದ್ದಂತೆ ಐ ಫೋನ್ ಕೆಮರಾವೂ ಅಲ್ಪಸ್ವಲ್ಪ ಕೆಲಸ ಮಾಡದೇ ಬಿಡಲಿಲ್ಲ.   ಹಳೆಯಮನೆಯನ್ನು ಹಾಗೇ ಉಳಿಸಿಕೊಂಡು ಅದಕ್ಕೆ ತಾಗಿದಂತೆ ಮನೆಯನ್ನು ಹೊಸ ಮಾದರಿಯಲ್ಲಿ ವಿಸ್ತರಿಸಿದ್ದರು ನಮ್ಮಪ್ಪ.  ಆಧುನಿಕ ವಿನ್ಯಾಸದ ಕಾಂಕ್ರೀಟ್ ಕಟ್ಟಡಗಳೇ ಎಲ್ಲೆಡೆ ತುಂಬಿ ಹೋಗಿರುವಾಗ ಹಳೇ ಕಟ್ಟಡಗಳ ಕುಸುರಿ ಕೆಲಸ ಈಗ ಎಲ್ಲೂ ಕಾಣ ಸಿಗದು.




ನಮ್ಮ ಮಧು,  ಎರಡು ವರ್ಷಗಳ ಹಿಂದೆ ಕುವೆಂಪು ಅವರ ಕುಪ್ಪಳ್ಳಿ ನಿವಾಸವನ್ನು ನೋಡಿಕೊಂಡು ಬಂದಿದ್ದ.  " ಹಾಗಿದೆ,  ಹೀಗಿದೆ... " ಮುಗಿಯದ ವರ್ಣನೆ ಕೇಳಿ ನಾನು ಸುಸ್ತು.  ಕಣ್ಣೆದುರಲ್ಲಿ ಕಾಷ್ಠ ಕಲೆಯನ್ನು ನೋಡುತ್ತಲೇ ಬೆಳೆದವರು ನಾವು,  ಅವನಿಗದೆಲ್ಲಿಂದ ಅರ್ಥವಾಗಬೇಕು ?

ತರವಾಡು ಮನೆಗಳ ಸೊಗಸೇ ಬೇರೆ,  ದೇವರಮನೆಯ ಬಾಗಿಲು,   ದ್ವಾರದ ವಿನ್ಯಾಸ,  ಕಿಟಿಕಿಗಳನ್ನು ನಮ್ಮ ಕಡೆ  ' ಗಿಳಿಬಾಗಿಲು ' ಅನ್ನೋ ರೂಢಿ,  ಗಿಳಿಬಾಗಿಲು ಎಂಬ ಶಬ್ದ ಹೇಗೆ ಅಥವಾ ಯಾಕೆ ಬಳಕೆಗೆ ಬಂದಿತೆಂದು ಕಿಟಿಕಿಯ ವಿನ್ಯಾಸ  ನೋಡಿದ್ರೇನೇ ತಿಳಿದೀತು.   ಹೊರಚಾವಡಿಯ ಮರದ ಮುಚ್ಚಿಗೆ,  ಅದಕ್ಕೂ ಆಧಾರಸ್ತಂಭ ಸಂಪೂರ್ಣವಾಗಿ ಮರದ ಕೆತ್ತನೆ ಕೆಲಸ.




ಬರೆಯುತ್ತಾ ಇದ್ದ ಹಾಗೆ ಇಂತಹ  ಆಧಾರಸ್ತಂಭಗಳಿಗೆ ನಮ್ಮ ಕಡೆ ಒಂದು ಹೆಸರಿದೆ ಎಂದು ನೆನಪಾಯಿತು.   ಆ ಮನೆಯಲ್ಲೇ ವಾಸವಾಗಿರುವ ತಮ್ಮನ ಬಳಿಯೇ ಕೇಳಬೇಕಾಯಿತು.  " ಅಕ್ಕ,  ನಾವು ಹೇಳೂದು ಬಾಜಾರ ಕಂಬ " ಅಂತಂದ,   " ಇನ್ನು ಕನ್ನಡದಲ್ಲಿ ಹೇಗೆ ಹೇಳುವುದೋ ಗೊತ್ತಿಲ್ಲ "

ಅಂತೂ ಮರೆತು ಹೋದದ್ದು ತಿಳಿದ ಹಾಗೂ ಆಯಿತು.  ಕುಂಬ್ಳೆಯಲ್ಲಿ ಸಿವಿಲ್ ಇಂಜಿನಿಯರ್ ತಂಗಿ ಇರುವಾಗ ಸೂಕ್ತ ಕನ್ನಡ ಪದ ತಿಳಿಯಲು ಕಷ್ಟವೇನೂ ಆಗದು ಎಂಬ ಅನಿಸಿಕೆ ನನ್ನದಾಗಿತ್ತು.
" ಅದೂ ಇಂಗ್ಲೀಷಿನಲ್ಲಿ column ಅಂತಾರೆ,  ಕನ್ನಡದಲ್ಲಿ ಹೇಗೋ ಗೊತ್ತಿಲ್ಲ.... " ಅಂದಳು ಗಾಯತ್ರಿ.
" ಹೌದಾ, ಬೇಕಾದಷ್ಟು online ಡಿಕ್ಷನರಿಗಳು ಸಿಗ್ತವೆ,  ಆ್ಯಪ್ ಕೂಡಾ ಇರುವಾಗ, ನಿನ್ನ ಇಂಗ್ಲೀಷ್ ಶಬ್ದಕ್ಕೆ ಕನ್ನಡ ಅರ್ಥ ಸಿಗಬಹುದು "
ಹುಡುಕಾಟ ನಡೆಸಿದಾಗ  ' ಕುಂದ ' ಪದ ಪದಾರ್ಥ ಸಿಕ್ಕಿಯೇ ಬಿಟ್ಟಿತು!
"ಸಿಕ್ತಾ... "
" ಹ್ಞೂ,  ಕುಂದ ಅನ್ನುತ್ತಾರೆ ನಮ್ಮ ಕನ್ನಡ ಭಾಷೇಲಿ "
" ಅಡಿಕೆ ಮರದ ಕುಂದ ಹಾಕೂದು ... "  ಅವಳಿಗೆ ನಗು.










Friday 9 October 2015

ಸೃಷ್ಟಿಯ ನೋಟ












ಬರೆಯಲಿಕ್ಕೂ ಆ್ಯಪ್ಸ್,  ಬರೆದಿದ್ದನ್ನು ಸಂಗ್ರಹಿಸಲು ನೋಟ್ ಪ್ಯಾಡ್ ಆ್ಯಪ್ಸ್.  ಬರೆಯಲು ಶಬ್ದಗಳ ಕೊರತೆಯೇ,  ಅದಕ್ಕೂ ಆ್ಯಪ್ಸ್ ಬಂದಿವೆ.   ಫೊಟೋ ತೆಗೆಯಲು ಆ್ಯಪ್ಸ್,  ಫೊಟೋ ಚೆನ್ನಾಗಿ ಬಂದಿಲ್ವೇ,  ಇನ್ನಷ್ಟು ಕುಸುರಿ ಕೆಲಸಗಳಿಗೆ ಹಲವಾರು ಆ್ಯಪ್ಸ್.  ಈಗ ನಾಲ್ಕಾರು ವರ್ಷಗಳಿಂದ ಇಂತಹ ಆ್ಯಪ್ಸ್ ಒಡನಾಟ,  ಇದೂ ಒಂಥರಾ ಮಕ್ಕಳಾಟ.  ಆ್ಯಪ್ಸ್ ಗಳ ಮೂಲಕವೇ ಬ್ಲಾಗ್ ಬರಹಗಳಲ್ಲಿ ಸೃಜನಶೀಲತೆ ಬಂದಿತು.   ಅದು ಕನ್ನಡ ಭಾಷಾಶಾಸ್ತ್ರವೂ ಆಗಿರಬಹುದು,  ಡಿಕ್ಷನರಿ ಬೇಕೇ, ಆ್ಯಪ್ ಇದೆ.  ತಂತ್ರಜ್ಞಾನಗಳು ಮುಂದುವರಿದ ಹಾಗೆಲ್ಲ ನಾವೂ ದಾಪುಗಾಲಲ್ಲಿ ಮುಂದಕ್ಕೆ ಓಡುತ್ತಿದ್ದರೇನೇ ಅಂತರ್ಜಾಲ ಪ್ರಪಂಚದಲ್ಲಿ ನಮ್ಮದೇ ಛಾಪು ಮೂಡಿಸಲು ಸಾಧ್ಯ.  ಇಂತಹ ಲಕ್ಷಾಂತರ ಆ್ಯಪ್ಸ್,   ಆ್ಯಪ್ ಸ್ಟೋರ್ ನಲ್ಲಿ ಉಚಿತವಾಗಿ ಲಭ್ಯ.

Saturday 3 October 2015

ಬೀಟ್ರೂಟ್ ಬೆಸುಗೆ




ಈ ಬಾರಿ ಮಳೆಗಾಲ ಬಹು ಬೇಗನೇ ಬಂದಿದೆ.   ಉಪ್ಪಿನಕಾಯಿ ಹಾಕುವುದಕ್ಕಿಲ್ಲ,  ಹಪ್ಪಳ ಒಣಗಿಸುವುದಕ್ಕೂ ಇಲ್ಲ,  ಧೋ... ಎಂದು ಸಂಜೆಯಾದೊಡನೆ ಸುರಿಯುವ ಮಳೆ,  ಜೊತೆಗೆ ಸುಳಿಗಾಳಿಯ ಅಟ್ಟಹಾಸ.   ಗಾಳಿಯ ರಭಸಕ್ಕೆ ಮಾವಿನಕಾಯಿಗಳೂ ಹಣ್ಣಾಗುವ ಮೊದಲೇ ಬಿದ್ದಿದ್ದೂ ಆಯಿತು.  ನನ್ಮಗಳು  " ಉಪ್ಪಿನ್ಕಾಯಿ ಹಾಕಮ್ಮಾ..." ಎಂದು ಹೊತ್ತು ತಂದಿದ್ದೂ ಆಯಿತು.

" ಉಪ್ಪಿನಕಾೖ ಹಾಕೂದಾ,  ಆಗ್ಲೀ..."  ಮಾವಿನಕಾೖ ಬಂತಲ್ಲ, ಅದಕ್ಕೇನೂ ಗಡಿಬಿಡಿಯಿಲ್ಲ.   ಮಾಮೂಲಿ ಅಡುಗೆ ಆಗಲೇಬೇಕಲ್ಲ.   ನಿನ್ನೆ ಬಸಳೇ ಬೆಂದಿ,  ಮೊನ್ನೆ ಕಾಟ್ ಹರಿವೆಯ ಮಜ್ಜಿಗೆಹುಳಿ,  ಸೊಪ್ಪುಗಳದ್ದೇ ದರ್ಬಾರು  ಅಡುಗೆಮನೆಯಲ್ಲಿ.    ಇವತ್ಯಾವ ಸೊಪ್ಪೂ ಅಂತ ಅಂಗಳದಲ್ಲಿ  ಅಡ್ಡಾಡುತ್ತಿದ್ದಾಗ ನನ್ನ ಬಣ್ಣದ ಹರಿವೆ ಮೈದುಂಬಿ ನಿಂತಿತ್ತು,  ಅದರದ್ದೇ ಸಾಮ್ರಾಜ್ಯ,  ಲಾನ್ ಅಂತ ಮಾಡ್ತಾರಲ್ಲ,  ಅದೇ ಥರ,  ವಿಸ್ತಾರವಾಗಿ ಹರಡಿಕೊಂಡಿತ್ತು.

ಸೊಪ್ಪುಗಳು ಆರೋಗ್ಯಕ್ಕೆ ಒಳ್ಳೆಯದು ಅಂತಂದುಕೊಳ್ಳುತ್ತಾ ಕೈಯಲ್ಲಿ ಹಿಡಿಸುವಷ್ಟು ಸೊಪ್ಪುಗಳನ್ನು ಚಿವುಟಿ ಅಡುಗೆಮನೆಗೆ ತಂದಿದ್ದಾಯ್ತು.  ಇದನ್ನು ಏನು ಮಾಡಲಿ ಎಂದು ಚಿಂತಿಸುತ್ತಿದ್ದ ಹಾಗೇ ಮೂಲೆಗೆ ಒತ್ತರಿಸಲ್ಪಟ್ಟ ಬೀಟ್ರೂಟು ಕಣ್ಣಿಗೆ ಬಿತ್ತು.   ತೆಂಗಿನಕಡಿಯೂ ದೊಡ್ಡದಿತ್ತು,  ಸರಿಹೋಯ್ತು,  ಮಜ್ಜಿಗೆಹುಳಿ ಮಾಡಿ ನೋಡೋಣ, ಸೊಪ್ಪು ಹಾಗೂ ಬೀಟ್ರೂಟ್ ಬೆಸುಗೆ! 

ಕತ್ತರಿಸಿದ ಸೊಪ್ಪಿನ ಚೂರುಗಳು ಒಂದು ಸೇರು ಇದ್ರೂನೂ ಬೆಂದಾಗ ಒಂದು ಹಿಡಿಯಷ್ಟಾಗುವುದು ಗೊತ್ತಲ್ಲ,  ಮಜ್ಜಿಗೆಹುಳಿಯೋ,  ಸೊಪ್ಪಿನ ತಂಬುಳಿಯೋ ಎದು ಪರಿಹಾಸ ಮಾಡುವಂತಿರಬಾರದು,  ಬೀಟ್ರೂಟ್ ಇದ್ದದ್ದು ಒಳ್ಳೆಯದಾಯಿತು.

ಸೊಪ್ಪು ನೀಟಾಗಿ ಕತ್ತರಿಸಲ್ಪಟ್ಟಿತು.
ಬೀಟ್ರೂಟು ಹೆಚ್ಚಿಲ್ಲ,  ಒಂದ್ಹತ್ತು ಹೋಳುಗಳು ತಯಾರಾದವು,  ಹೋಳು ದೊಡ್ಡದಿರಲಿ.
ತೆಂಗಿನಕಾಯಿಯೂ ಒಂದ್ಲೋಟ ಸಿಹಿ ಮಜ್ಜಿಗೆ ಕೂಡಿ ಅರೆಯಲ್ಪಟ್ಟಿತು.  ಖಾರಪ್ರಿಯರು ಹಸಿಮೆಣಸು ಯಾ ಗಾಂಧಾರಿಮೆಣಸು ಅರೆಯುವಾಗ ಹಾಕಿಕೊಳ್ಳುವುದು.
ಬೀಟ್ರೂಟು ಹೋಳುಗಳು,  ಸೊಪ್ಪುಗಳು ರುಚಿಗೆ ತಕ್ಕಂತೆ ಉಪ್ಪು ಕೂಡಿ ಬೇಯಲ್ಪಟ್ಟುವು,  ತೆಂಗಿನಕಾಯಿ ಅರಪ್ಪು ಕೂಡಿಕೊಂಡಿತು.  ಕುದಿಯಲ್ಪಟ್ಟು ಒಗ್ಗರಣೆಯೂ ಬಿದ್ದಿತು.

ಇದೀಗ ಏನಾಯಿತು ?
ನನ್ನ ಕಾಟಂಗೋಟಿ ಸೂಪ್ಪು, ಕೆಂಪು ದಂಟಿನ ಹರಿವೆಯ ಮಜ್ಜಿಗೆಹುಳಿಯೋಪಾದಿಯಲ್ಲಿ ಶೋಭಾಯಮಾನವಾಯಿತು!
ರುಚಿಗೆ ಉಪ್ಪು ಮರೆಯದಿರಿ.
ಹುಳಿ ಮಜ್ಜಿಗೆಯಲ್ಲೇ ಇದೆ.
ಸಿಹಿ  ಬೀಟ್ರೂಟಿನಲ್ಲಿದೆ.
ಇನ್ನೂ ಖಾರವಾಗಬೇಕಿದ್ದರೆ ಒಗ್ಗರಣೆ ಮೆಣಸು ಜಾಸ್ತಿ ಹಾಕ್ರೀ... ಮಳೆಗಾಲದ ವ್ಯಂಜನಗಳು ಘರಂ ಆಗಿದ್ರೇ ಊಟ ಸೊಗಸು.

ಮಳೆಗಾಲದ ವೈಭವವೇ ಹಾಗೆ,  ನಮ್ಮ ಹಿಂದಿನವರು ಗುಡ್ಡಗಾಡುಗಳಲ್ಲಿ,  ಹೊಲಗದ್ದೆಗಳ ಬದುವಿನಲ್ಲಿ ಬೆಳೆಯುತ್ತಿದ್ದ ಗಿಡಗಂಟಿಗಳ ಚಿಗುರೆಲೆಗಳನ್ನು ತಂದು ಬೇಯಿಸಿ,  ಹೊಲಕುಡಿ ತಂಬುಳಿ ತಿನ್ನದಿದ್ದವರಲ್ಲ.   ನಾವು ಈಗ ಆಧುನಿಕರಾಗಿದ್ದೇವೆ,  ಹೊಲಗದ್ದೆಗಳನ್ನೂ ಕಾಣೆವು,  ಗುಡ್ಡಗಾಡುಗಳಲ್ಲಿ ಅಲೆದಾಟಕ್ಕೂ ವ್ಯವಧಾನವಿಲ್ಲದವರಾಗಿದ್ದೇವೆ.

 ಬಣ್ಣದ ಹರಿವೆ ಎಂದು ನನ್ನ ಕೈಲಿ ಕರೆಸಿಕೊಂಡಿರುವ ಈ ಸಸ್ಯವನ್ನು ಕುಂಡದಲ್ಲಿ ನೆಟ್ಟು ಬೆಳೆಸಬಹುದು.   ಇದರ ಬಗ್ಗೆ ಈ ಮೊದಲೂ ಬರೆದಿದ್ದೇನೆ.   ಹೆಸರು ತಿಳಿದಿರದಿದ್ದ ಈ ಸಸ್ಯದ ಬಗ್ಗೆ ಫೇಸ್ ಬುಕ್ ಮಾಧ್ಯಮ ಸ್ನೇಹಿತರು ಇಂತಹುದೇ ಸಸ್ಯ ಎಂದು ಹೆಸರಿಸಿಯೂ ಇದ್ದಾರೆ.   ಸಸ್ಯ ಸಂಕುಲದಲ್ಲಿ Amaranthaceae ಕುಟುಂಬ ಬಲುದೊಡ್ಡದು.  ಹರಿವೆ ಪ್ರವರ್ಗಕ್ಕೆ ಸೇರಿದ ಈ ಮಾದರಿಯ ಸಸ್ಯಗಳನ್ನು wild spinach ಎಂದು ಗುರುತಿಸಬಹುದಾಗಿದೆ.  ನೈಸರ್ಗಿಕವಾಗಿ ಲಭ್ಯವಿರುವ ಸಸ್ಯ,  ಯಾವುದೇ ಮಾರಕ ಕೀಟನಾಶಕವಾಗಲೀ,  ರಸಗೊಬ್ಬರವಾಗಲೀ ಇದಕ್ಕೆ ಅವಶ್ಯವಿಲ್ಲ.  ಮನೆಯ ಹಿತ್ತಲಲ್ಲಿ,  ಬಾಲ್ಕನಿಯಲ್ಲಿ ನೆಟ್ಟು ಸಲಹಲು ಏನೂ ಕಷ್ಟವಿಲ್ಲ.