Pages

Ads 468x60px

Saturday 20 June 2015

ಅಂಬಟೆ ಚಟ್ಣಿ







ಜೋರು ಮಳೆ ಶುರುವಾಗಿದೆ. ಮಳೆ ಬಿಟ್ಟಿರುವಾಗ ಚಪ್ಪರದಿಂದ ತೊಂಡೆಕಾೖ ಕೊಯ್ದು ಇಟ್ಕೊಳ್ಳೋಣ ಅಂತ ಮನೆಯೊಳಗಿಂದ ಹೊರ ಬಂದಿದ್ದಾಯಿತು, ಕೈಯಲ್ಲೊಂದು ಕತ್ತಿ ಇರಲೇಬೇಕು. ಮನೆಯಿಂದ ಹೊರಗಿಳಿದ ಕೂಡಲೇ ಸಿಗುವುದೇ ಅಡಿಕೆ ತೋಟ, ಒಂದು ಹಾಳೆ ಕಡಿದುಕೊಳ್ಳಬೇಡವೇ, ತೊಂಡೆಕಾೖಗಳನ್ನು ಕೊಯ್ದು ಹಾಕಲಿಕ್ಕೇ...

ಹಾಳೆ ಕಡಿದು, ತೊಂಡೆ ಬುಡಕ್ಕೆ ಬಂದು ಕಣ್ಣ ಹಾಯಿಸಿದಾಗ, ಮಳೆ ಬರುತ್ತಿರುವ ಕಾರಣ ಎರಡ್ಮೂರು ತೊಂಡೆ ಸಿಕ್ಕಿತು. " ಅರೆ! ಇದೇನಿದು, ತೊಂಡೆ ಚಪ್ಪರದ ಬುಡದಲ್ಲಿ ಬಿದ್ದಿದೆ ಅಂಬಟೆಕಾಯಿ!

ಹೌದು, ಅಂಬಟೆ ಮರವೂ ಇಲ್ಲೇ ಇದೆ, ಗಾಳಿ ಬೀಸುವಾಗ ಬಿದ್ದಿರಬೇಕು. ಅಂಬಟೆ ಅಡಿಕೆ ಹಾಳೆಯೊಳಗೆ ಸೇರಿತು. ಮುಂದುವರಿದಾಗ.. ಓಹ್, ಅಂಬಟೆಯ ಪುಟ್ಟ ಗೆಲ್ಲು ಮುರಿದು ಬಿದ್ದಿದೇ, ಅದರಲ್ಲೂ ಅಂಬಟೆಕಾಯಿಗಳು, ಎಲ್ಲವೂ ಎಳೆ ಮಿಡಿಗಾಯಿ. ಸಂಗ್ರಹ ಸಾಕಷ್ಟಾಯಿತು, ನಾಳೆ ಚಟ್ಣಿ ಮಾಡೋಣ.

" ಅರೆ, ಚಟ್ಣಿಯಾ, ಉಪ್ಪಿನ್ಕಾಯಿ ಹಾಕ್ರೀ..."

ಅದನ್ನೂ ಹೇಳ್ಬೇಕೂಂತ ಇದ್ದೆ, ಉಪ್ಪಿನಕಾಯಿ ಹಾಕಿ ಆಗಿದೆಯಲ್ಲ, ಹೋದ ವಾರ ಚೆನ್ನಪ್ಪ ಒಂದು ಬುಟ್ಟಿ ಕೊಯ್ದು ಕೊಟ್ಟಿದ್ದ. ಮಗಳು ತಿನ್ನುತ್ತಾ ಇದ್ದಾಳೆ, ಸಾಲದೂಂತ ಬೆಂಗಳೂರಿಗೂ ಒಯ್ದಿದಾಳೇ, ಅಣ್ಣನಿಗೂ ಚಿಕ್ಕಮ್ಮಂಗೂ ಅಂತ ಎರಡೆರಡು ಜಾಡೀ...

" ಆಯ್ತೂ, ಚಟ್ಣಿ ಹೇಗೆ ಮಾಡಿದ್ರೀ...?"

ಒಂದು ಕಡಿ ತೆಂಗಿನ ತುರಿ.
ನಾಲ್ಕಾರು ಗಾಂಧಾರಿ ಮೆಣಸು.
ಮೂರು ಅಂಬಟೆ.
ರುಚಿಗೆ ಉಪ್ಪು.

ಅಂಬಟೆಗಳನ್ನು ಚಿಕ್ಕದಾಗಿ ಕತ್ತರಿಸಿ, ಉಳಿದ ಸಾಮಗ್ರಿಗಳನ್ನು ಕೂಡಿ ಅರೆಯಿರಿ. ನೀರು ಹಾಕದಿರಿ, ಒಗ್ಗರಣೆ ಮರೆಯದಿರಿ.

" ಹೌದೂ, ಗಾಂಧಾರಿ ಮೆಣಸು ಯಾಕೆ ಹಾಕ್ತೀರಾ... ಖಾರ ಅಲ್ವೇ?"

ನಾನೂ ಮೊನ್ನೆ ಯಾಕೋ ಟೀವಿ ನ್ಯೂಸ್ ಕೇಳ್ತಾ ಕೂತಿದ್ದೇರೀ.. ಬಂತು ಭಯಾನಕ ಸುದ್ದಿ, ದುಬೈಗೆ ರಫ್ತು ಮಾಡಲಾದ ಹಸಿಮೆಣಸು, ಮಿತಿಮೀರಿದ ಕೀಟನಾಶಕದಿಂದ ಕೂಡಿದೆಯೆಂದು, ತಪಾಸಣೆಯಿಂದ ತಿಳಿದು ಬಂದು, ವಾಪಸು ಕಳಿಸಲಾಗಿದೆಯೆಂದು... ಆಗಲೇ ನಿಶ್ಚಯ ಮಾಡಿದ್ದು ನಮ್ಮ ತೋಟದ ಗಾಂಧಾರಿ ಅತ್ಯುತ್ತಮವೆಂದು.

ನೈಸರ್ಗಿಕವಾಗಿ ಹೇರಳ ಬೆಳೆ ನೀಡುವ ಗಾಂಧಾರಿ ಮೆಣಸು ಆರೋಗ್ಯ ರಕ್ಷಕವೆಂದೂ ನಾವು ತಿಳಿದಿದ್ದೇವೆ. ರಕ್ತದೊತ್ತಡ ನಿಯಂತ್ರಣಕ್ಕೂ ದಿನಕ್ಕೊಂದು ಗಾಂಧಾರಿಯನ್ನು ಜಗಿದು ತಿನ್ನುವವರೂ ಇದ್ದಾರೆ. ಕೇರಳದ ತರಕಾರಿ ಮಾರ್ಕೆಟುಗಳಲ್ಲಿ ಗಾಂಧಾರಿ ಮೆಣಸು ಸಿಗುತ್ತದೆ, ಅಂಗಳದಲ್ಲಿ ಜಾಗ ಇಲ್ಲದಿದ್ದರೂ ಮಣ್ಣಿನ ಚಟ್ಟಿಗಳಲ್ಲಿ ನೆಟ್ಟು ಸಲಹುವುದರಲ್ಲಿ ಕೇರಳೀಯರು ಮುಂದಿದ್ದಾರೆ.


Thursday 18 June 2015

ಬೋಳು ಹುಳಿ





" ತರಕಾರೀ ಏನೂ ಇಲ್ವಲ್ಲ "

" ಈಗ ಹೇಳಿದ್ರೆ ನನ್ನಿಂದಾಗದು,  ಸಂಜೆ ಲಿಸ್ಟ್ ಕೊಡು "

" ಹಾಗಾದ್ರೆ ಬೋಳು ಸಾರು ಮಾಡಿದ್ರೆ ಸಾಕಾ..."

" ಅಲ್ಲಿ ಹಿಂದೆ ಇದೆಯಲ್ಲ  ಕರಿಕೆಸವು,  ಅದರ ಕಾಲು ಹಾಕಿ ಬೆಂದಿ ಮಾಡು "
ನಮ್ಮೆಜಮಾನ್ರು ಹೇಳಿದ್ರೂಂತ ನಾನೇನೂ ಕರಿಕೆಸವಿನ ದಂಟಿನ ಪದಾರ್ಧ ಮಾಡುವ ಉಸಾಬರಿಗೇ ಹೋಗಿರಲಿಲ್ಲ.

ಮಳೆಗಾಲದಲ್ಲಿ ಮಾಡುವಂಥಹ ಈ ಬೋಳುಹುಳಿಯನ್ನು ಇಂದು ಮಾಡುವಂತಾಯಿತು.   ಇದ್ದಕ್ಕಿದ್ದಂತೆ ಮಳೆಗಾಲದ ವಾತಾವರಣ ಸೃಷ್ಟಿಯಾಗಿತ್ತು.   ಜೋರು ಮಳೆ ಬೇರೆ,  ಅಂಗಳದ ಅಡಿಕೆಯೆಲ್ಲ ಒದ್ದೆ ಒದ್ದೆ.   ಈದಿನ ತರಕಾರಿ ಇಲ್ಲ ಎಂದು ಹೇಳುವ ಗೋಜಿಗೇ ಹೋಗದೆ ಕೆಸುವಿನ ದಂಟು ಕತ್ತರಿಸಿ ತಂದೆ,  ಎರಡು ದಂಟು ಸಾಕು.
ಕರಿಕೆಸು ತುರಿಸದು.   ದಂಟಿನ ನಾರು ಬಿಡಿಸಿ,  ಕತ್ತರಿಸಿ ಇಟ್ಟಾಯಿತು.  ಬೀಂಬುಳಿ ಇರುವ ಸಮಯದಲ್ಲಿ ನನ್ನ ಅಡುಗೆಗೆ ಹುಣಿಸೆ ಹುಳಿ ಹಾಕಲಿಕ್ಕಿಲ್ಲ.  2-3 ಬೀಂಬುಳಿ ಕತ್ತರಿಸಿದ್ದಾಯಿತು.  ಖಾರದ ಬಾಬ್ತು ಎರಡು ಹಸಿಮೆಣಸು ಸಿಗಿದಿದ್ದಾಯಿತು.   ರುಚಿಕರವಾಗಲು ಉಪ್ಪು ಬೆಲ್ಲ ಕೂಡಿಸಿದ್ದೂ ಆಯಿತು.  ಕುಕ್ಕರಿನಲ್ಲಿ ಒಂದು ಶೀಟಿ ಹೊಡೆಸಿದ್ದೂ ಆಯಿತು.

ಹ್ಞಾ,  ಮರೆತಿದ್ದೆ,   ಒಂದು ಹಿಡಿ ತೊಗರೀಬೇಳೆಯೂ ಇರಲಿ,  ಶರೀರದ ತ್ರಾಣಕ್ಕೆ ಒಳ್ಳೆಯದು.   ಉಪ್ಪು,  ಹುಳಿ ಕೂಡಿಸಿದ ತರಕಾರಿಯೊಂದಿಗೆ ತೊಗರಿಬೇಳೆ ಬೇಯುವುದಿಲ್ಲ,  ಬೇಳೆ ಪ್ರತ್ಯೇಕವಾಗಿ ಬೇಯಿಸಿಕೊಳ್ಳಿ.  ಮರೆತೇಹೋಗಿತ್ತು, ಹಲಸಿನಬೇಳೆ ಗಂಟು ಕಟ್ಟಿ ಇಟ್ಕೊಂಡಿದ್ದು ಇತ್ತು.   ಅದನ್ನೇ ಬೇಳೆ ಜಜ್ಜಿ ಹಾಕಬಹುದಾಗಿತ್ತು.   ಹೋಗಲಿ, ಇನ್ನೊಮ್ಮೆ ನೆನಪಾದ್ರೆ ಮಾಡಿದ್ರಾಯ್ತು.   ನೆನಪಿರಲಿ, ಊಟದೊಂದಿಗೆ ಬೇರೆ ಕೂಟು ಕರಿ್ರ ಇದ್ದಲ್ಲಿ ಈ ವಿಧವಾದ ಬೋಳುಹುಳಿಗೆ ತೊಗರಿಬೇಳೆಯನ್ನೂ ಹಾಕಲಿಕ್ಕಿಲ್ಲ.

ಈಗ ಬೆಂದ ಬೇಳೆ,  ಬೆಂದ ಕೆಸುವಿನ ದಂಟುಗಳನ್ನು ತಪಲೆಗೆ ಹಾಕಿಕೊಳ್ಳಿ.  ಸಾಕಷ್ಟು ನೀರು ಕೂಡಿಸಿ,  ಇನ್ನಷ್ಟು ಉಪ್ಪು,  ಹುಳಿ, ಬೆಲ್ಲ ಬೆರೆಸಿ ಚೆನ್ನಾಗಿ ಕುದಿಸಿ.  ಕೊನೆಯದಾಗಿ ಬೆಳ್ಳುಳ್ಳಿ ಹಾಗೂ ಕರಿಬೇವು ಒಗ್ಗರಣೆ ಕಡ್ಡಾಯ.

Xanthosoma sagittifolium ಎಂಬ ವೈಜ್ಞಾನಿಕ ನಾಮಧೇಯವನ್ನು ಈ ಕರಿ ಕೆಸು ಹೊಂದಿದೆ.  ಫಲವತ್ತಾದ ಮಣ್ಣು ದೊರೆತಲ್ಲಿ ಬೃಹದಾಕಾರದ ಎಲೆಗಳಿಂದ ಕಂಗೊಳಿಸುವ ಇದರ ಗೆಡ್ಡೆ  ಕೂಡಾ ಖಾದ್ಯಯೋಗ್ಯವಾಗಿರುತ್ತದೆ.  ಮುಂಡಿಗೆಡ್ಡೆಯಂತೇ ಬೃಹತ್ತಾಗಿ ಬೆಳೆದ ಕರಿಕೆಸು ಹಿಂದೆ ನಮ್ಮ ಅಡಿಕೆ ತೋಟದೊಳಗೆ ಸಾಮಾನ್ಯವಾಗಿ ಕಾಣ ಸಿಗುತ್ತಿತ್ತು. ಈಗ ಕಾಣಸಿಗದು.  ಹಸಿರು ದಂಟಿನ ಕೆಸು ತುಸು ತುರಿಕೆಯಿದೆ,  ತುರಿಕೆಯಿದ್ದರೂ ಅಡುಗೆ ಮಾಡಲಿಕ್ಕೂ ಬರುತ್ತದೆ, ಚೆನ್ನಾಗಿ ಬೇಯಿಸಿ ಹುಳಿ ತುಸು ಜಾಸ್ತಿ ಹಾಕಿದರಾಯಿತು.   ಒಂದು ಕಾಲದಲ್ಲಿ ನಾನೂ ಪತ್ರೊಡೆ ಮಾಡ ಹೊರಟು,  ತಿನ್ನಲು ಹೊರಟಾಗ ತುರಿಕೆಯ ಅನುಭವ ದೊರೆಯಿತು.  ದೊಡ್ಡ ಅಟ್ಟಿನಳಗೆಯಲ್ಲಿ  ಮನೆಮಂದಿಗೂ, ಕೆಲಸದಾಳುಗಳಿಗೂ ತಿನ್ನಬಹುದಾಗಿದ್ದ ಪತ್ರೊಡೆ ,  ಕಲ್ಯಾಣಿ ಹೊತ್ತೊಯ್ದಳು ತನ್ನ ಮನೆಗೆ.  ಮಾರನೇದಿನ ಅವಳನ್ನು ವಿಚಾರಿಸದಿರುತ್ತೇನಾ,  " ಏನಿಲ್ಲ ಅಕ್ಕ,  ನನ್ನ ಸೊಸೆ ಇನ್ನೂ ಹೆಚ್ಚು ಹೂತ್ತು ಬೇಯಿಸಿದ್ದು ಬಿಟ್ರೆ ಬೇರೇನೂ ಮಾಡಲಿಲ್ಲ,  ನೀವು ಹಾಕಿದ ಮಸಾಲೆ ಅಚ್ಚುಕಟ್ಟಾಗಿತ್ತು.  ನಾವೆಲ್ಲ ಹೊಟ್ಟೆ ತುಂಬಾ ತಿಂದೆವು "  ಅಂದಳು ಕಲ್ಯಾಣಿ.

ಕರಿಕೆಸವು,  ಕರಿಕೆಸುವು,  ಕರಿಕೆಸು ಇತ್ಯಾದಿ ನಾಮಗಳಿಂದ ಕಂಗೊಳಿಸುವ ಈ ಸಸ್ಯವನ್ನು ಸಾಮಾನ್ಯವಾಗಿ ಮನೆಹಿತ್ತಲಲ್ಲಿ ನೆಟ್ಟು ಉಪಯೋಗಿಸುವ ಪದ್ಧತಿ,  ಮಾರುಕಟ್ಟೆಯಲ್ಲಿ ಸಿಗಬಹುದಾದರೂ ತಾಜಾತನ ಇರದು.   ಖನಿಜಾಂಶಗಳಿಂದ ಸಮೃದ್ಧವಾಗಿರುವ ಕರಿಕೆಸುವಿನಲ್ಲಿ ಜಾತಿಗಳು ಬಹಳಷ್ಟಿವೆ.   ತುರಿಕೆ ಇದ್ದರೂ, ಇಲ್ಲದಿದ್ದರೂ ಹುಳಿ ಹಾಕಿಯೇ ಅಡುಗೆಯಲ್ಲಿ ಬಳಸಬೇಕು.  ವಿಶೇಷ ಆರೈಕೆಯನ್ನೇನೂ ಇದು ಬಯಸದು.  ತಾಜಾ ತರಕಾರಿಯಾಗಿ ಉಪಯೋಗಿಸಬೇಕಿದ್ದರೆ ಮನೆಯ ಹಿಂದೆ ಅಥವಾ ಜಾಗ ಇದ್ದಲ್ಲಿ ನೆಟ್ಟುಕೊಳ್ಳುವುದು ಉತ್ತಮ.  ಕೆಸುವಿನ ಗೆಡ್ಡೆ ಕೂಡಾ ರುಚಿಕರ ಆಹಾರ ಪದಾರ್ಥವಾಗಿದೆ.   ಬಟಾಟೆಯಂತೆ ಬೇಯಿಸಿ,  ಸಿಪ್ಪೆ ತೆಗೆದು,  ಹುಳಿ ಸಾಕಷ್ಟು ಹಾಕಿ ಬೇಕಾದ ರೀತಿಯಲ್ಲಿ ಅಡುಗೆ ಮಾಡಬಹುದಾಗಿದೆ.



ಟಿಪ್ಪಣಿ:  ಉತ್ಥಾನ ಮಾಸಪತ್ರಿಕೆಯ 2015 ರ ಜೂನ್ ತಿಂಗಳ ಸಂಚಿಕೆಯಲ್ಲಿ ಪ್ರಕಟಿತ.

Saturday 6 June 2015

ಅಬ್ಬಾ, ಏನು ಬಿಸಿಲು!




ಅಡುಗೆಮನೆಗೆ ಹೋಗುವುದಕ್ಕಿಲ್ಲ,  ಬೆವರಧಾರೆ.   ಮಳೆ ಬಂದು ತಂಪಾಯ್ತು ಅಂತಿದ್ರೆ ಈಗ  ರಣ ರಣ ಬಿಸಿಲು.   ಅಡುಗೆಮನೆಯೊಳಗೆ ಗಾಳಿ ಬೀಸೋರು ಬೇಕಲ್ಲ.

ಈ ಸೆಕೆಗೆ ಒಂದು ಸಾರೂ ಅನ್ನ ಇದ್ರೆ ಸಾಕೂ ಅಂತೀರಾ,  ಕುಡಿಯಲು ಧಾರಾಳ ಮಜ್ಜಿಗೆನೀರು ಇದ್ದರಾಯಿತು.   ಉಪ್ಪಿನಕಾೖ ಇದೇ,  ಆದರೂ ನಿತ್ರಾಣ ಆಗದಂತೆ ಒಂದು ಪಲ್ಯ ಇರಲಿ.  ಕಟ್ ಸಾರು ಹಾಗೂ ಬೆಂಡೆಕಾಯಿ ಪಲ್ಯ ಮಾಡೋಣ.   ಅತಿವೇಗವಾಗಿ ಏನೂ ಪ್ರಯಾಸವಿಲ್ಲದೆ ಮಾಡಬಹುದಾದ್ದು ಬೆಂಡೆಕಾಯಿ ಪಲ್ಯ,  ಕಟ್ ಸಾರು ಕೂಡಾ ಹಾಗೇನೇ,  ಚಿಟಿಕೆ ಹೊಡೆಯುವಷ್ಟರಲ್ಲಿ ಮಾಡಿಟ್ಬಿಡೋಣ.  ಮಾವಿನಹಣ್ಣು ಇದ್ರೂನೂ ಜಾಸ್ತಿ ತಿನ್ನೋ ಹಾಗಿಲ್ಲ,  ಅದೂ ಕಂಡಾಬಟ್ಟೆ ಉಷ್ಣ,  ತಿಳೀತಲ್ಲ.

  ಕಟ್ ಸಾರು ಮಾಡೋದು ಹೇಗೇ?
 ಟೊಮ್ಯಾಟೋ,  ಹಸಿಮೆಣಸು,  ಕೊತ್ತಂಬ್ರಿ ಸೊಪ್ಪುಗಳನ್ನು ಬೇಕಾದ ಹಾಗೆ ಕತ್ತರಿಸಿ.  ಕೊತ್ತಂಬ್ರಿ ಸೊಪ್ಪು ಇಲ್ವೇ,  ಬೇಡ ಬಿಡಿ.  ಹಸಿಮೆಣಸು ಕೂಡಾ ಅಷ್ಟೇ,  ಚಿಕ್ಕಮಕ್ಕಳ ಬಾಯಿಗೆ ಸಿಕ್ಬಿಟ್ರೆ ಕಷ್ಟ, ಅಳು ಶುರುವಾಗುತ್ತೆ, ಹಾಗಾಗಿ ಹಸಿಮೆಣಸೂ ಹೋಗ್ಲಿ...  ಟೊಮ್ಯಾಟೋ ಇಲ್ಲದಿದ್ದರೂ ನಡೆಯುತ್ತೇ ಅಂತೀರಾ.. ಅದೂ ಹೌದು,  ಈಗ ತಾಜಾ ಹುಣಸೇಹಣ್ಣು ಇರುವಾಗ  ಸಾರು ಸಿದ್ಧಪಡಿಸಲೆಷ್ಟು ಹೊತ್ತು?
ಹ್ಞು, ಸಾರಿನ ಹುಡಿ ಇದೇ ತಾನೇ,  ಮನೆಯಲ್ಲೇ ಮಾಡಿದ್ದು ಉತ್ತಮ,  ಪೇಟೆಯಲ್ಲಿ ಬೇರೆ ಬೇರೆ ಬ್ರಾಂಡ್ ಗಳ ಸಾರಿನ ಹುಡಿ ಲಭಿಸುವುದಾದರೂ ಎಲ್ಲಾದಕ್ಕೂ ಒಂದೇ ಸುವಾಸನೆ.  ಪ್ರತಿದಿನವೂ ಅಂಗಡಿಯಿಂದ ತಂದ ಮಸಾಲಾ ಪ್ಯಾಕೆಟ್ಟುಗಳನ್ನು ಸುರುವಿ ಚಿತ್ರವಿಚಿತ್ರವಾದ ಭೋಜನ ತಯಾರಿಯಲ್ಲಿ ಏನೂ ಸ್ವಾರಸ್ಯವಿಲ್ಲ.  ಬಾಯಿರುಚಿಗೂ ವೈವಿಧ್ಯ ಬೇಕಲ್ಲ!

.




ಏನ್ಮಾಡೋದೂಂತೀರಾ,  ಒಂದು ಚಮಚ ತೊಗರಿಬೇಳೆ, 2 ಒಣಮೆಣಸಿನಕಾಯಿಗಳು,  ಇಂಗು,  ಒಂದೆಸಳು ಕರಿಬೇವು ಹುರಿಯಿರಿ.  ಘಂ ಸುವಾಸನೆ ಬರಲಿ.
2 ಚಮಚ ತೆಂಗಿನಕಾಯಿ ತುರಿ ಇರಲಿ.
ಹುರಿದ ಸಾಮಗ್ರಿಗಳನ್ನು ತೆಂಗಿನಕಾಯಿ ತುರಿಯೊಂದಿಗೆ ನೀರು ಹಾಕದೆ ಅರೆಯಿರಿ.
ಈ ಮಸಾಲೆಯನ್ನು ಬೇಯಿಸಿದ ಟೊಮ್ಯಾಟೋ ಜೊತೆ ಕೂಡಿಸಿ,  ಟೊಮ್ಯಾಟೋ ಇಲ್ಲದವರು ಹುಣಸೇಹಣ್ಣಿನ ರಸ ಗಿವುಚಿ ಇಟ್ಕಂಡಿದ್ದೀರಲ್ಲ, 
ಸಾರಿನ ಹುಡಿ,  ನಿಮ್ಮ ಖಾರದ ಆಯ್ಕೆಗನುಸಾರ ಹಾಕಿರಿ,  ನೀರು ಕೂಡಿಸಿ ಸಾಕಷ್ಟು ತೆಳ್ಳಗಾಗಿಸಿದ್ರಾ,  ರುಚಿಕರವಾದ ಸಾರು ದೊರೆಯಬೇಕಾದರೆ ಉಪ್ಪು ಮರೆಯದಿರಿ,  ಬೆಲ್ಲ ನಿಮ್ಮ ಆಯ್ಕೆಗೆ ಬಿಟ್ಟಿದ್ದು.  ಇದನ್ನೇ ಕೈ ರುಚಿ ಅಂತಾನೂ ಹೇಳಬಹುದು.   ಕುದಿಸಬೇಕು,  ತುಪ್ಪದ ಒಗ್ಗರಣೆ ಆಗಬೇಕು.   ಸಾರಿನಲ್ಲಿ ಉಣ್ಣುತ್ತಿದ್ದಾಗ ಅಮ್ಮ ಮಾಡುತ್ತಿದ್ದ ಕಟ್ ಸಾರು ಕಣ್ಣೆದುರು ಬಂದಿತು,  ಅಂದು ಅಮ್ಮ ಮಾಡಿಕೊಟ್ಟಿದ್ದನ್ನು ತಿನ್ನಲು ಮಾತ್ರ ತಿಳಿದಿದ್ದ ಕಾಲವಾಗಿತ್ತು.

ಪಲ್ಯ ಮಾಡೋಣ:
ಮಾರ್ಕೆಟ್ಟಿನಿಂದ ತಂದ ಬೆಂಡೆಗಳನ್ನು ಮೊದಲು ಚೆನ್ನಾಗಿ ತೊಳೆಯಿರಿ.  ತೊಟ್ಟು ತೆಗೆದು ತೆಳ್ಳಗೆ ಹಚ್ಚಿರಿ.  ಬೆಳೆದ ಬೆಂಡೆಗಳನ್ನು ಉಪಯೋಗಿಸದಿರಿ.
ಬೆಂಡೆಕಾೖಗಳನ್ನು ಕತ್ತರಿಸಿಟ್ಟು ತೊಳೆಯುವಂತಿಲ್ಲ.  ನೀರಿನಲ್ಲಿ ಮುಳುಗಿದ ಬೆಂಡೆ ಹೋಳುಗಳು ಲೋಳೆಯಂತಾಗಿ ಉಪಯೋಗಶೂನ್ಯವಾದೀತು.  
 ಬೆಂಡೆ ಹೋಳುಗಳನ್ನು ಚೆನ್ನಾಗಿ ಹುರಿಯುವುದರಿಂದ ಯಾ ಹುಳಿ ಹಾಕಿ ಬೇಯಿಸುವುದರಿಂದ ಲೋಳೆಯ ಸಮಸ್ಯೆಯನ್ನು ತಡೆಗಟ್ಟಬಹುದಾಗಿದೆ.
ಇಷ್ಟೆಲ್ಲ ಮೂಲಸೂತ್ರಗಳನ್ನು ತಿಳಿದಿದ್ದರೆ ಬೆಂಡೆಕಾೖ ಪಾಕಪ್ರವೀಣರಾಗಲು ಸಾಧ್ಯ.

ಪಲ್ಯಕ್ಕೆ ಹುಳಿ ಹಾಕಬೇಕಾಗಿಲ್ಲ,  ಹಾಗಾಗಿ ಬಾಣಲೆಗೆ ಒಂದೆರಡು ಚಮಚ ಎಣ್ಣೆ ಎರೆದು ಒಗ್ಗರಣೆ ಸಿದ್ಧತೆ ಆಗಲಿ.   ಸಾಸಿವೆ,  ಉದ್ದಿನಬೇಳೆ, ಒಣಮೆಣಸು ಹಾಕಿದ್ರಾ,  ಸಾಸಿವೆ ಸಿಡಿದಾಗ ಕರಿಬೇವು, ಚಿಟಿಕೆ ಅರಸಿಣ ಬೀಳಲಿ.  ಈಗ ಬೆಂಡೆ ಹೋಳುಗಳನ್ನು ಹಾಕಿ ಹುರಿಯಿರಿ.  ನಾನ್ ಸ್ಟಿಕ್ ತವಾ ಹಾಗೂ ಇಂಡಕ್ಷನ್ ಸ್ಟವ್ ಇದ್ದರಂತೂ ಬೆಂಡೆ ಪಲ್ಯ ಸಲೀಸು.  ಮೈಕ್ರೋವೇವ್ ಅವೆನ್ ಇದ್ದರೆ ಅದರೊಳಗಿಟ್ಟರಾಯಿತು.

ಹಾಂ,  ತೆಂಗಿನತುರಿ,  ರುಚಿಗೆ ತಕ್ಕ ಉಪ್ಪು ಕೂಡಿಸಿ,  ಸೌಟಾಡಿಸಿ,  ಬೆಂದ ನಂತರವಷ್ಟೇ ಇಳಿಸಿ .  ಗರಿಗರಿಯಾದ ಬೆಂಡೆ ಪಲ್ಯ ಸಿದ್ಧ.