Pages

Ads 468x60px

Thursday 22 May 2014

ಕ್ಯಾಲೆಂಡರ್ ಕನ್ಯೆ







ಒಂದು ಹಂತದ ಪದವಿ ವಿದ್ಯಾಭ್ಯಾಸ ಕಾಸರಗೋಡಿನ ಸರಕಾರೀ ಕಾಲೇಜಿನಲ್ಲಿ ಮುಗಿಯಿತು.   ಅದೇ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆಯಬಹುದಾಗಿತ್ತು.   ಅಂತಹ ಗೊತ್ತುಗುರಿಯೇನೂ ಇಟ್ಟುಕೊಂಡಿರದ ನಾನು ರೆಕ್ಕೆ ಬಿಚ್ಚಿದ ಹಕ್ಕಿಯಂತಾಗಿದ್ದೆ.   ದಿನವಿಡೀ ಚಿತ್ರ ಬಿಡಿಸುತ್ತಾ ಇದ್ದಾಗಲೂ ನನ್ನಮ್ಮ ಒಂದಿಷ್ಟೂ ರೇಗಲಿಲ್ಲ.   " ಬಾ,  ಅಡುಗೆ ಕೆಲ್ಸ ಕಲೀ...."  ಇಂತಹ ಯಾವುದೇ ಮಾತುಗಳನ್ನು ನಾನು ಕೇಳಿಯೇ ಇಲ್ಲ.   ಆದರೆ ಚಿತ್ರಕಲಾ ಶಾಲೆಗೆ,  ಮಂಗಳೂರಿನಲ್ಲಿ ಇತ್ತು,   " ಸೇರ್ತೇನೆ "  ಅಂದಾಗ ಅಪ್ಪ ವಿರೋಧಿಸಿದರು.  " ಇಷ್ಟು ಚೆನ್ನಾಗಿ ನಿನ್ನಷ್ಟಕೇ ಮಾಡ್ತಾ ಇದೀಯಲ್ಲ,  ಅದೇ ಸಾಕು,  ಅಲ್ಲಿ ಹೋಗಿ ಕಲಿಯುವಂಥದು ಏನಿದೆ ?  ಈಗ ಮಾಡ್ತಿರೋದನ್ನೇ ಮನೆಯಲ್ಲೇ ಮಾಡ್ತಾ ಇರು ....ನಿನ್ನ ಕಾಲ ಮೇಲೆ ನಿಲ್ಲುವಂತಹ ಕೋರ್ಸ್ ಬೇರೆ ಯಾವ್ದಾದ್ರೂ ಕಲಿತರಾದೀತು "  ಅಂದರು.    ಆದರೂ ಪಟ್ಟು ಬಿಡದೆ ಮಂಗಳೂರಿನ ಆರ್ಟ್ ಸ್ಕೂಲ್ ಗೆ ಹೋದೆ.   ಒಂದೇ ದಿನ ಹೋಗಿದ್ದು.   ಗೆರೆ ಎಳೆಯುವ,  ವೃತ್ತ ಬಿಡಿಸುವ ಆರಂಭದ ಪಾಠಗಳು ಹಿಡಿಸದೇ ಹೋಯಿತು.   ಅಂತೂ ಅಪ್ಪನೇ ಗೆದ್ದರು.

ನನ್ನ ತಮ್ಮ ವೆಂಕಟೇಶ್ ಬೆಂಗಳೂರಿನಲ್ಲಿ ತನ್ನ ಕಾಲ ಮೇಲೆ ನಿಲ್ಲಲು ಯಾವುದೋ ಒಂದು ಕೋರ್ಸ್ ಗೆ ಸೇರಿದ.   ಹಾಗೆ ಹೋದವನು ನನಗಾಗಿ ಹೊಸ ಮಾದರಿಯ ಡ್ರಾಯಿಂಗ್ ಶೀಟುಗಳನ್ನು ತಂದು ಕೊಟ್ಟ.  " ಅಕ್ಕ,  ನಿನ್ನ ಪೆಯಿಂಟಿಂಗ್ ಯಾವತ್ತಿಗೂ ಉಳಿಯಬೇಕಾದ್ರೆ ಈ ಹ್ಯಾಂಡ್ ಮೇಡ್ ಪೇಪರ್ ಆಗ್ಬೇಕು,  ಇದ್ರಲ್ಲೇ ಮಾಡು,  ಮುಗಿದ ಹಾಗೇ ತಂದ್ಕೊಡ್ತೇನೆ "  ಅಂದ.   ಅದುವರೆಗೂ ನಾನು ಚಿತ್ರ ಬಿಡಿಸ್ತಾ ಇದ್ದಿದ್ದು ಸಾಮಾನ್ಯ ದಪ್ಪ ಡ್ರಾಯಿಂಗ್ ಕಾಗದದಲ್ಲಿ.  

ಒಬ್ಬ ಕ್ಯಾಲೆಂಡರ್ ಕನ್ಯೆ ಕಣ್ಣಿಗೆ ಬಿದ್ದಳು.   ಇವಳದೇ ಪ್ರತಿಬಿಂಬ ಬಿಡಿಸೋಣವೆಂದು ಕ್ಯಾಲೆಂಡರ್ ಗಾತ್ರದಷ್ಟು ದೊಡ್ಡದಾಗಿ ಹ್ಯಾಂಡ್ ಮೇಡ್ ಪೇಪರ್ ಕತ್ತರಿಸಿ.....

ಚಿತ್ರ ಮೂಡಿ ಬಂದಿತು.   ಹ್ಯಾಂಡ್ ಮೇಡ್ ಪೇಪರು ಹಾಳಾಗುವಂಥದ್ದಲ್ಲ,   ಹಾಗೇನೇ ಸುತ್ತಿ ಇಟ್ಟೆ,  ಫ್ರೇಮ್ ಹಾಕಿಸಲಿಲ್ಲ,  ಈಗಾಗಲೇ ಮನೆಯ ಗೋಡೆ ತುಂಬಾ ಚಿತ್ರಗಳು ನೇತಾಡ್ತಿವೆ,  ಇದಂತೂ ಸಿಕ್ಕಾಪಟ್ಟೆ ದೊಡ್ಡ ಸೈಜಿನದು.   ಅದೂ ಅಲ್ಲದೆ ಮರದ ಚೌಕಟ್ಟು ಹಾಕಿಸಬೇಕಾದರೆ ಕಾಸರಗೋಡಿಗೆ ಹೋಗಬೇಕಾಗಿತ್ತು.   ಅದೇನಪ್ಪಾಂದ್ರೆ ನನ್ನ ತಂದೆ ವೈದ್ಯರ ಸಲಹೆಯಂತೆ ಕಾಸರಗೋಡಿನಲ್ಲಿ ವಕಾಲತ್ ಮಾಡುವುದನ್ನು ಬಿಟ್ಟು ನೀರ್ಚಾಲಿನ ಹಳ್ಳಿ ಮನೆಗೆ ಬಂದಿದ್ದರು.   ನಾವೆಲ್ಲರೂ ಹಳ್ಳಿಗೆ ವಲಸೆ ಬಂದ ಹಾಗೆ ಆಗಿತ್ತೂ ಅನ್ನಿ.   ಈ ಚಿತ್ರ ಹಾಗೇ ಯಾರೂ ಕೇಳುವವರಿಲ್ಲದೆ ಮುದುರಿ ಕೊಂಡು ನನ್ನ ಸಂಗ್ರಹದಲ್ಲಿ ಇದ್ದಿತು.

ಮದುವೆಯಾಯಿತು,  ಅಪ್ಪನ ಮನೆಗೂ ಗಂಡನ ಮನೆಗೂ ಹೆಚ್ಚು ದೂರವಿಲ್ಲ.   ಹಾಗಾಗಿ ಎರಡೂ ಮನೆಗಳಲ್ಲಿ ಓಡಿಯಾಡುತ್ತಾ ಇದ್ದಂತಹ ಆ ಕಾಲದಲ್ಲಿ ತರತರನ ಹವ್ಯಾಸಗಳು ಮೂಲೆಗುಂಪಾದವು.   ಓದುವ ಹವ್ಯಾಸವೊಂದೇ ಉಳಿಯಿತು.   ಹಳ್ಳಿಯ ಬದುಕಿನ ವಿಸ್ತೃತ ಅನುಭವಗಳ ಸಾರವೇ ನನ್ನದಾಯಿತು.   ಗದ್ದೆ ಬೇಸಾಯದ ತಿಳುವಳಿಕೆ,   ಹಸುಸಾಕಣೆ,  ನಿರ್ವಹಣೆ ಎಲ್ಲವೂ ಒಂದೊಂದು ರಸಬುತ್ತಿ.   ಒಂದು ಹಂತದಲ್ಲಿ ನಮ್ಮದೂ ಒಂದು ನೂತನ ಗೃಹವೂ ಆಯಿತು.  ಆಗ ನೆನಪಾಯಿತು,  ನನ್ನ ಚಿತ್ರಸಂಪುಟಗಳು,   ಅಪ್ಪನ ಮನೆಯ ಗೋಡೆಯಲ್ಲಿ ನೇತಾಡುತ್ತಿದ್ದ ಹಳೆಯ ಕಲೆಗಳು,  ಒಂದೊಂದಾಗಿ ಹಿರಣ್ಯಕ್ಕೆ ಬಂದವು.   " ಎಲ್ಲ ತಗೊಂಡ್ ಹೋಗ್ಬೇಡ,  ಒಂದೆರಡಾದ್ರೂ ಇಲ್ಲೂ ಇರ್ಲೀ..." ಅಂದರು ನನ್ನಮ್ಮ.

ನನ್ನ ಕ್ಯಾಲೆಂಡರ್ ಕನ್ಯೆಯನ್ನು ಹೊಸ ಮನೆಯ ಮುಂಚಾವಡಿಯಲ್ಲಿ ನೇತಾಡಿಸಬೇಕೆಂದಿದ್ದೆ.   ಆದರೆ ಈ ಕುಗ್ರಾಮದಲ್ಲಿ ಮರದ ಚೌಕಟ್ಟು ಹಾಕಿಸಲು ಸಾಧ್ಯವಾಗದೇ ಹೋಯಿತು.   ಮನೆ ಯಜಮಾಂತಿಯಾಗಿ ಕಾರ್ಯ ನಿರ್ವಹಿಸುತ್ತಿರುವಾಗ ಹಿಂದಿನಂತೆ ಪೇಟೆ ತಿರುಗಲು ಹೋಗಲುಂಟೇ ?   ಕ್ಯಾಲೆಂಡರ್ ಕನ್ಯೆ  ಹಾಯಾಗಿ ಪೆಟ್ಟಿಗೆಯೊಳಗೆ ಮಲಗಿರಬೇಕಾಯಿತು.

ಅದೊಂದು ದಿನ ಏನಾಯ್ತೂಂದ್ರೆ ನಮ್ಮ ಚೆನ್ನಪ್ಪನ ಕತ್ತಿಯ ಹಿಡಿ ಮುರಿಯಿತು.  ಅದರ ರಿಪೇರಿಗೆ ಬೇಕಾದ ರೂಪಾಯಿಯೊಂದಿಗೆ ಚೆನ್ನಪ್ಪ ಆಚಾರಿಯ ಬಳಿ ಹೋದ,  ಹೊಸ ಹಿಡಿ ಹಾಕಿಸಿ ಬಂದ, ಜೊತೆಗೆ ಹೊಸ ಸುದ್ದಿಯನ್ನೂ ತಂದ.   ಆಚಾರಿಯನ್ನು ಹೊಗಳುತ್ತಾ  " ಪಟಗಳಿಗೆ ಫ್ರೇಮ್ ಹಾಕ್ತಾನೆ..." ಅಂದಿದ್ದೇ ತಡ ಕ್ಯಾಲೆಂಡರ್ ಕನ್ಯೆ ಹೊರಗಿಣುಕಿದಳು.   ಸಂಜೆಯ ಚಹಾ ಕುಡಿದು ಹೊರಟ ಚೆನ್ನಪ್ಪನ ಜೊತೆ ಕ್ಯಾಲೆಂಡರ್ ಕನ್ಯೆ ನಡೆದಳು ಆಚಾರಿಯ ಬಳಿಗೆ.   ಮರದ ಚೌಕಟ್ಟಿನಿಂದ ಶೋಭಿತೆಯಾಗಿ ಮರಳಿ ಬಂದಳು.   ಚೆನ್ನಪ್ಪನೇ ನಾನು ಹೇಳಿದ ಜಾಗದಲ್ಲಿ ಎರಡು ಆಣಿ ಹೊಡೆದು ಅವಳನ್ನು ನೇತಾಡಿಸಿದ.   ನನಗಂತೂ ಹಿಗ್ಗು ಹೇಳತೀರದು,  ಎಷ್ಟಾದರೂ ಹೆತ್ತವರಿಗೆ ಹೆಗ್ಗಣ ಮುದ್ದಲ್ಲವೇ... ಇದೂನೂ ಅದೇ ಥರ ಅಂದ್ಕೊಳ್ಳಿ....

ಅಂತರ್ಜಾಲದ ತಾಂತ್ರಿಕ ಯುಗ ಬಂದ ಈ ಹೊತ್ತಿನಲ್ಲಿ ಹಳೆಯ ಯಾವುದೇ ಫೋಟೋ,  ಚಿತ್ರ ಅಥವಾ ಇನ್ಯಾವುದೇ ಡಾಕ್ಯುಮೆಂಟ್ಸ್ ಇರಲಿ,  ನೆನಪುಗಳೇ ಆಗಿರಲಿ.... ಇವುಗಳಿಗೆ ಅಳಿವಿಲ್ಲ,  ಅಂತಹ ಸುಧಾರಿತ ವ್ಯವಸ್ಥೆ ಇಲ್ಲಿದೆ.   ಕಲಿತು ಮುಂದುವರಿಯುವ ಜಾಣ್ಮೆ ನಮ್ಮದಾಗಬೇಕಾಗಿದೆ.



Posted via DraftCraft app

ಟಿಪ್ಪಣಿ:  24/12/2015 ರಂದು ಸೇರ್ಪಡೆಯಾಗಿದ್ದು.


Saturday 10 May 2014

ಚಕ್ಕುಲಿ, ಹೇಗೆ ಸುತ್ತಲಿ......







ಪ್ರೈಮರಿ ಶಾಲೆಯಲ್ಲಿದ್ದ ಮಗಳು ವಾರದ ರಜಾದಿನಗಳಂದು ತಿಂಡಿಗಳ ಅಪೇಕ್ಷೆ ಮುಂದಿಡುವವಳು,  " ಮಕ್ಕಳಿಗೆ ತಿನ್ನಲು ಮನೆಯಲ್ಲೇ ಮಾಡಿದ್ದು ಒಳ್ಳೆಯದು,  ಯಾವಾಗಲೂ ಬೇಕರಿ ತಿಂಡಿ ಒಳ್ಳೇದಲ್ಲ "  ಇದು ಗೌರತ್ತೆಯ ಆರೋಗ್ಯ ಫಾರ್ಮುಲಾ,  ವೆರೈಟಿ ತಿಂಡಿಗಳನ್ನು ತಿನ್ನುವ ಅಪೇಕ್ಷೆ ಅವರದ್ದೂ ಆಗಿತ್ತು ಅನ್ನಿ.   ಹಾಗಾಗಿ ರಜೆಯ ಮುಂಚಿತವಾಗಿ ಐಡಿಯಾ ಮಾಡಿಟ್ಟು ಕರಿದ ತಿಂಡಿಗಳನ್ನು ಡಬ್ಬದಲ್ಲಿ ತುಂಬಿಡುವ ಹವ್ಯಾಸ ರೂಢಿಯಾಗಿದೆ,   ಚಕ್ಕುಲಿ,   ಕೋಡುಬಳೆ,  ನಿಪ್ಪಟ್ಟು,  ಮದ್ದೂರು ವಡೆ,  ತೇಂಙೊಳಲ್,  ಕಾರಕಡ್ಡಿ,  ತುಕ್ಕುಡಿ.....

ಚಕ್ಕುಲಿ ತಯಾರಿಗೆ ಸಾಂಪ್ರದಾಯಿಕವಾಗಿ ಬೇಕಾಗಿರುವುದು ಉದ್ದು ಹಾಗೂ ಅಕ್ಕಿ.  ಒಂದು ಕಪ್ ಉದ್ದು ಹಾಗೂ ಮೂರು ಕಪ್ ಅಕ್ಕಿ.   ಉದ್ದು ಹುರಿದು ನುಣುಪಾದ ಹುಡಿಯಾಗಿರಬೇಕು,  ಅಕ್ಕಿಯೂ ಅಷ್ಟೇ ನುಣ್ಣಗೆ ಹುಡಿಯಾಗಿರಬೇಕು.   ಅಕ್ಕಿಯನ್ನು ಹುರಿದುಕೊಂಡಲ್ಲಿ ಚಕ್ಕುಲಿ ಹೆಚ್ಚು ಗರಿಗರಿಯಾಗಿರುತ್ತದೆ.   ರುಚಿಗೆ ಉಪ್ಪು,  ಖಾರ ಹಾಗೂ ಜೀರಿಗೆ,  ಎಳ್ಳು,  ಬೇಕಿದ್ದರೆ ಬೆಣ್ಣೆ ತುಸು ಹಾಕಿ ಒಂದು ಕಪ್ ನೀರಿನಲ್ಲಿ ಗಟ್ಟಿಯಾಗಿ ಚಪಾತಿ ಹಿಟ್ಟಿನಂತೆ ಕಲಸಿಟ್ಟು ಚಕ್ಕುಲಿ ಒರಲಿನಲ್ಲಿ ಒತ್ತಿ ಎಣ್ಣೆಯಲ್ಲಿ ಕರಿದು ತೆಗೆದರಾಯಿತು.    ಕೆಲವು ಚಕ್ಕಲಿ ಒರಲುಗಳಲ್ಲಿ ಎಳ್ಳು, ಜೀರಿಗೆಗಳು ತೂತಿಗೆ ಅಡ್ಡವಾಗಿ ನಿಂತು ಸರಾಗವಾಗಿ ಚಕ್ಕುಲಿಯ ಎಳೆ ಬಾರದಂತೆ ತಡೆಯೂಡ್ಡುತ್ತವೆ,  ಅಂಥಲ್ಲಿ ಸಾರಿನ ಹುಡಿ,  ಖಾರಾಪುಡಿ ಹಾಕಿಕೊಳ್ಳಿ.   ಅಕ್ಕಿ ಹಾಗೂ ಉದ್ದಿನ ಹುಡಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ.

  ಕಲಸಿದ ಹಿಟ್ಟು ಹೇಗಿರಬೇಕು? 
 ಅಂಗೈಯಲ್ಲಿ ನೆಲ್ಲಿಗಾತ್ರದಷ್ಟು ಹಿಟ್ಟನ್ನು ಬತ್ತಿಯಂತೆ ಹೊಸೆಯಿರಿ.   ಉದ್ದವಾಗಿ ಬಳ್ಳಿಯಂತೆ ಇಳಿಯುವ ಹಿಟ್ಟು ತುಂಡಾಗದಿದ್ದಲ್ಲಿ ಸರಿಯಾಗಿದೆ ಎಂದೇ ತಿಳಿಯಿರಿ.   ಚಕ್ಕುಲಿ ಒರಲಿನೊಳಗೆ ಹಿಡಿಸುವ ಗಾತ್ರದ ಉಂಡೆ ಮಾಡಿ ಪಾಲಿಥೀನ್ ಹಾಳೆ ಮೇಲೆ ಜಿಡ್ಡು ಸವರಿ ಒತ್ತಿ ಇಟ್ಟುಕೊಳ್ಳಿ. 

ಎಣ್ಣೆ ಬಿಸಿಯಾಗಿದೆಯಾ,  ತಿಳಿಯುವುದು ಹೇಗೆ?
ಚಿಕ್ಕ ಕಡ್ಳೇ ಗಾತ್ರದ ಹಿಟ್ಟನ್ನು ಎಣ್ಣೆಗೆ ಹಾಕಿ ನೋಡಿ,  ಮೇಲೆ ತೇಲಿ ಬಂತೇ,  ಎಣ್ಣೆ ಕಾದಿದೆ.  ಬಾಣಲೆ ದಪ್ಪವಾಗಿರಬೇಕು,  ಅರ್ಧಕ್ಕಿಂತ ಹೆಚ್ಚು ಎಣ್ಣೆ ಎರೆಯಬಾರದು,  ಉರಿ ಕೂಡಾ ಸಮಪ್ರಮಾಣದಲ್ಲಿರಬೇಕು.   ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಮಾಡುವಾಗ ಸಾಕಷ್ಟು ಮುಂಜಾಗ್ರತೆ ಅವಶ್ಯ.

ಕಾದ ಎಣ್ಣೆಗೆ ಒಂದೊಂದಾಗಿ ಇಳಿಸಿ.
ಎಣ್ಣೆಯಲ್ಲಿ ಹಿಡಿಸುವಷ್ಟು ಹಾಕಿ ಬಿಡಿ.
ಅರ್ಧ ಬೆಂದಾಗ ಮಗುಚಿ ಹಾಕಿ.
ಹೊಂಬಣ್ಣ ಬಂದಾಗ ಕಣ್ಣುಸಟ್ಟುಗದಲ್ಲಿ ತೆಗೆದು ತೂತಿನ ಪಾತ್ರೆಗೆ ಹಾಕಿ.
ಚೆನ್ನಾಗಿ ಆರಿದ ಮೇಲೆ ಡಬ್ಬಾದಲ್ಲಿ ತುಂಬಿಸಿ.
ಮಕ್ಕಳಿಗೆ ಕೊಟ್ಟು ನೀವೂ ತಿನ್ನಿ.





ಮೊದಲ ಬಾರಿ ಚಕ್ಕುಲಿ ಮಾಡಲು ಹೊರಟವರಾಗಿದ್ದರೆ ಹೀಗೆ ಧಿಡೀರ್ ಚಕ್ಕುಲಿ ಪ್ರಯತ್ನಿಸಿ.   

ಧಿಡೀರ್ ಚಕ್ಕುಲಿ 
ಒಂದು ಲೋಟ ಅಕ್ಕಿ ಹಿಟ್ಟು.   ಮುಂಜಾನೆಯ ತಿಂಡಿ ತೆಳ್ಳವು ಆಗಿದ್ದರೆ,  ಉಳಿದ ಹಿಟ್ಟನ್ನು ಉಪಯೋಗಿಸಬಹುದು.    ಹಿಟ್ಟಿನ ನೀರಿನಂಶ ಬಸಿದು ತೆಗೆದರಾಯಿತು.
ಒಂದು ಹಿಡಿ ಅವಲಕ್ಕಿಯನ್ನು ಹುರಿದು ಹುಡಿ ಮಾಡಿ,  ಅಕ್ಕಿಹಿಟ್ಟಿನೊಂದಿಗೆ ಸೇರಿಸಿ.
ಉಪ್ಪು,  ಅಭಿರುಚಿಗೆ ತಕ್ಕಂತೆ ಮಸಾಲೆ ಹುಡಿ ಹಾಕಿ ಕೊಳ್ಳಿ.
ಚಕ್ಕುಲಿ ಒರಲಿನಲ್ಲಿ ಒತ್ತಲು ಬರುವಂತೆ ಗಟ್ಟಿಯಾಗಿ ಕಲಸಿ ಅರ್ಧ ಗಂಟೆ ಮಚ್ಚಿ ಇಡಿ.
ತೆಂಗಿನೆಣ್ಣೆಯಲ್ಲಿ ಕರಿದು ತೆಗೆಯಿರಿ.
ಕೋಡುಬಳೆ ಬೇಕಾದರೂ ಮಾಡಿ.  ಅಡ್ಡಿಯಿಲ್ಲ!



ಗೋಧಿ ಹಿಟ್ಟಿನ ಚಕ್ಕುಲಿ
2 ಕಪ್ ಗೋಧಿ ಹಿಟ್ಟು
ಗೋಧಿ ಹಿಟ್ಟನ್ನು ಒಣ ತಪಲೆಯೊಳಗಿಟ್ಟು ಉಗಿಯಲ್ಲಿ ಇಪ್ಪತ್ತು ನಿಮಿಷ ಬೇಯಿಸಿ,  ನೀರಾವಿ ಹಿಟ್ಟಿಗೆ ಬೀಳದಂತೆ ಜಾಗ್ರತೆ ವಹಿಸಿ.
ಹೀಗೂ ಮಾಡಬಹುದು,  ಮೈಕ್ರೋವೇವ್ ಒವನ್ ಒಳಗಿಟ್ಟು ತೆಗೆಯಿರಿ,  3-4 ನಿಮಿಷ ಸಾಕು.
ಆರಿದ ನಂತರ ಹುಡಿಯನ್ನು ಬಿಡಿಸಿಕೊಳ್ಳಿ,   ಎರಡು ಕಪ್ ಹುಡಿಗೆ ಒಂದು ಕಪ್ ನೀರು ಸಾಕು,  ಅಗತ್ಯದ ವಸ್ತುಗಳನ್ನು ಸೇರಿಸಿ,  ಮುದ್ದೆ ಕಟ್ಟಿ ಚಕ್ಕುಲಿ ಸುತ್ತಿ,  ಎಣ್ಣೆಯಲ್ಲಿ ಕರಿಯಿರಿ.   
ಇದೇ ಕ್ರಮದಲ್ಲಿ ಮೈದಾ ಹಿಟ್ಟಿನಿಂದಲೂ ಚಕ್ಕುಲಿ ತಯಾರಿಸಲು ಸಾಧ್ಯವಿದೆ.





ಕಡ್ಲೇ ಹಿಟ್ಟಿನ ಚಕ್ಕುಲಿ
ಒಂದು ಕಪ್ ಕಡ್ಲೇ ಹಿಟ್ಟು
3  ಕಪ್ ಅಕ್ಕಿ ಹಿಟ್ಟು
ಕಡ್ಲೇ ಹಿಟ್ಟನ್ನು ಹುರಿಯುವ ಅವಶ್ಯಕತೆ ಇಲ್ಲ,  ಹಾಗೇನೇ ಕಲಸಿಕೊಂಡರಾಯಿತು.
ಅಗತ್ಯವಿರುವ ಸಾಮಗ್ರಿಗಳನ್ನು ಕೂಡಿಸಿ ಚಕ್ಕುಲಿ ಮಾಡಿಕೊಳ್ಳಿ.  ಇದೂ ಬೇಗನೆ ಮಾಡಿಕೊಳ್ಳುವಂಥದ್ದು.

ಹೆಸರು ಬೇಳೆ ಚಕ್ಕುಲಿ
ಒಂದು ಕಪ್ಪು ಹೆಸರು ಬೇಳೆ
3 ಕಪ್ ಅಕ್ಕಿ ಹುಡಿ
ಇಲ್ಲಿ ಹೆಸರು ಬೇಳೆಯನ್ನು ಬೇಳೆ ಮುಳುಗುವಷ್ಟು 3 ಕಪ್ ನೀರೆರೆದು ಮೆತ್ತಗೆ ಬೇಯಿಸಿ.  ಆರಿದ ನಂತರ ನುಣ್ಣಗೆ ಅರೆಯಿರಿ.  ಹಿಟ್ಟು ಕಲಸುವಾಗ ಬೇರೆ ನೀರು ಸೇರಿಸುವ ಅಗತ್ಯವಿಲ್ಲ.   ಮಿಕ್ಕೆಲ್ಲ ವಿಧಾನ ಇತರ ಚಕ್ಕುಲಿಗಳಂತೆ.

ಹುರಿಗಡಲೆ ಚಕ್ಕುಲಿ
ಒಂದು ಕಪ್ ಹುರಿಗಡಲೆ
3 ಕಪ್ ಅಕ್ಕಿಹುಡಿ
ಇಲ್ಲಿ ಹುರಿಗಡಲೆಯನ್ನು ಹುರಿಯಬೇಕಾಗಿಲ್ಲ,   ನುಣ್ಣಗೆ ಹುಡಿ ಮಾಡಿಕೊಂಡರಾಯಿತು.   





ಬಟಾಟೆ ಚಕ್ಕುಲಿ
2 ಹದ ಗಾತ್ರದ ಬಟಾಟೆ
2 ಕಪ್ ಅಕ್ಕಿಹುಡಿ
ಕಾಲು ಕಪ್ ಹುರಿಗಡಲೆ
ಲಿಂಬೆ ಗಾತ್ರದ ಬೆಣ್ಣೆ
ಬಟಾಟೆ ಮೆತ್ತಗೆ ಬೇಯಿಸಿ.  ಬೆಂದ ಬಟಾಟೆಯನ್ನು ತಣ್ಣೀರಿನಲ್ಲಿ ಹಾಕಿಡಿ,  ಸಿಪ್ಪೆ ತೆಗೆಯಲು ಸುಲಭ.  ಮಿಕ್ಸಿಯಲ್ಲಿ ನೀರು ಹಾಕದೆ ಅರೆದು ತೆಗೆಯಿರಿ.
ಹುರಿಗಡಲೆಯನ್ನು ನುಣ್ಣಗೆ ಹುಡಿ ಮಾಡಿ.
ಅರೆದ ಬಟಾಟೆಗೆ ಉಪ್ಪು,  ಮಸಾಲೆಹುಡಿ,  ಅಕ್ಕಿ ಹುಡಿ,  ಹುರಿಗಡಲೆ ಹುಡಿ,  ಬೆಣ್ಣೆ ಸೇರಿಸಿ,  ಚಪಾತಿ ಮುದ್ದೆಯಂತೆ ಕಲಸಿಕೊಳ್ಳಿ,   ನೀರು ಹಾಕುವ ಅಗತ್ಯ ಬಾರದು.

ಚಕ್ಕುಲಿ ಒರಲು ಇಲ್ಲವೇ,  ಕೋಡುಬಳೆ ಹೊಸೆಯಿರಿ,  ವಡೆ ತಟ್ಟಿಕೊಳ್ಳಿ,  ಪುಟ್ಟ ನೆಲ್ಲಿ ಗಾತ್ರದ ಉಂಡೆಗಳನ್ನು ಮಾಡಿಟ್ಟುಕೊಂಡು ಕರಿಯಿರಿ,  ಉಂಡ್ಳಕಾಳು ಅನ್ನಿ.   ಚಕ್ಕುಲಿಯ ಹಲವು ವಿಧಾನಗಳನ್ನು ತಿಳಿಯುವುದರೊಂದಿಗೆ ಚಕ್ಕುಲಿ ಸುತ್ತುವ ಮೂಲಸೂತ್ರವೂ ತಿಳಿದಂತಾಯಿತು.   ಹೊಸ ಹೊಸ ಕರಿದ ತಿಂಡಿಗಳ ಶೋಧನೆ ಮಾಡಲು ಚಕ್ಕುಲಿ ಸುತ್ತೋಣ.

ಚಕ್ಕುಲಿ ತಯಾರಿ ಒಂದು ಉತ್ತಮ ಗೃಹೊದ್ಯಮವೂ ಹೌದು.   ಇದನ್ನೇ ಜೀವನೋಪಾಯದ ದಾರಿಯಾಗಿ ಆರಿಸಿಕೊಂಡವರು ನಮ್ಮ ನಡುವೆ ಸಾಕಷ್ಟು ಮಂದಿಯಿದ್ದಾರೆ.   




ಇಷ್ಟೆಲ್ಲಾ ಚಕ್ಕುಲಿ ವೈವಿಧ್ಯಗಳನ್ನು ಬರೆದು,  ಫೋಟೋ ತೆಗೆದು ಬ್ಲಾಗ್ ಒಳಗೆ ಅಚ್ಚುಕಟ್ಟಾಗಿ ಸೇರಿಸುತ್ತಾ ಇದ್ದಾಗ  ನನ್ನ ಮಾವ,  ಮಕ್ಕಳ ಅಜ್ಜನ ನೆನಪು ಬಂದೇ ಬಿಟ್ಟಿತು.   ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವುದರ ಜೊತೆಗೆ ಆಳುಕಾಳುಗಳ ಉಸ್ತುವಾರಿಯನ್ನೂ ನಿಭಾಯಿಸುತ್ತಿದ್ದ ನನಗೆ ಮಕ್ಕಳಿಗಾಗಿ ತಿಂಡಿತಿನಿಸುಗಳನ್ನು ಮಾಡಿಕೊಡಲು ವ್ಯವಧಾನವೂ ಸಿಗುತ್ತಿರಲಿಲ್ಲ.   ಆ ಹೊತ್ತಿಗೆ ಮಾವನೇ ಮಕ್ಕಳ ಅಪೇಕ್ಷೆಯನ್ನು ಪೇಟೆಯಿಂದ ಕರುಕುರು ತಿಂಡಿಗಳನ್ನು ತಂದು ಕೊಟ್ಟು ಪೂರೈಸುತ್ತಿದ್ದರು.  

  ಮೊದಲ ಬಾರಿ ಚಕ್ಕುಲಿ ತಯಾರಿಸಿದಾಗ ವಯೂಸಹಜವಾಗಿ ಹಲ್ಲುಗಳು ದುರ್ಬಲವಾಗಿದ್ದ ಮಾವ  " ನಾನು ಹೇಗೆ ತಿನ್ನಲೀ " ಅಂದರು.   ಅಜ್ಜನಿಗೆ ತಿನ್ನಲಾಗದ ಚಕ್ಕುಲಿಯನ್ನು ನಾನು ಹೇಗೆ ತಿನ್ನಲಿ ಎಂಬ ವೈಖರಿ ಮಗನೂ ಪ್ರದರ್ಶಿಸಿದ.     ಮೊಸರಿನಲ್ಲಿ ಹಾಕಿಟ್ಟು ಸಂಜೆಯ ಕಾಫಿಯೊಂದಿಗೆ ಚಕ್ಕುಲಿ ಬಂದಿತು.   ಅಜ್ಜ ಮೊಮ್ಮಗ ಬಹುತ್ ಖುಷ್ ಹೋ ಗಯೇ...

Posted via DraftCraft app

Saturday 3 May 2014

ಎಲೆ ಎಲೆ ಮಾವಿನಹಣ್ಣೇ








ಮಾವಿನಹಣ್ಣೇ ಬಂದೆಯ
ಸಿಹಿ ಸಿಹಿ ಹಣ್ಣೇ ಎಂದೆಯ
ಗೊಜ್ಜೂ ಸಾರೂ ತಿಂದೆಯ
ಸಾಸಮೆ ಮಾಡೂ ಎಂದೆಯ
ರಸಾಯನ ಇರಲೀ ಅಂದೆಯ 
ಮಾಂಬಳ ಎರೆಯಲು ಬಂದೆಯ |

ಭರಣೀ ತೊಳೆದು ಇಟ್ಟೆಯ
ಉಪ್ಪೂ ಬೆರೆಸಿ ಇಟ್ಟಿಯ
ಬಗೆ ಬಗೆ ವ್ಯಂಜನ ತರ್ತೀಯ
ಹಣ್ಣೂ ಉಪ್ಪಾಡೂ ಆಗ್ತಿಯ
ಹಾಗೇ ಗುಳುಂ ತಿಂದೀಯ
ಹ್ಞಾಂ ಗೊರಟೂ ತೆಗೆದಿಟ್ಟೀಯ |

ಕಲ್ಯಾಣಿ ತೋಟದಿಂದ ಬಂದಳು.    ದೂರದ ಪಳ್ಳಿಯಿಂದ ಬಾಂಙ್ ಕೇಳುತ್ತಲೇ ಅವಳ ಮದ್ಯಾಹ್ನದ ಕೆಲಸ ಮುಗಿಯಿತು.   ಇವತ್ತು ಬರುವಾಗಲೇ ಮುಖವರಳಿದೆ.   ನನ್ನನ್ನು ಕಂಡೊಡನೆ  " ಇನ್ನು ಗಂಜಿಯೂಟಕ್ಕೆ ಕೊದ್ದೆಲ್ ಬೇಡಾ ಅಕ್ಕ "
ನನಗೂ ಅವಳ ಮಹದಾನಂದದ ಕಾರಣ ತಿಳಿಯಿತು,  ಅವಳ ಕೈಯಲ್ಲಿದ್ದ ಅಡಿಕೆ ಹಾಳೆಯ ಚೀಲದೊಳಗಿನಿಂದ ಕಾಟ್ಟು ಮಾವಿನಹಣ್ಣುಗಳು ಇಣುಕುತ್ತಿದ್ದುವು.  

" ಹೌದೂ,  ಗಂಜಿಯೂಟಕ್ಕೆ ಮಾವಿನಹಣ್ಣಿನ ಉಪ್ಪು ಮೆಣಸು ಮಾಡಿದರಾಯ್ತಲ್ಲ , ಇದು ಯಾವ ಮರದ ಹಣ್ಣು ?" 
" ಇದು ಚಟ್ಟೆ ಮಾವಿನಹಣ್ಣು... ಇನ್ನೊಂದ್ ನಾಲ್ಕು ದಿನ ಕಳೀಲಿ,  ಗೋಣಿ ಗೋಣಿ ಹಣ್ಣು ಸಿಕ್ಕೀತು " ಅಂದಳು.
ಈ ಮಾವಿನ ಗೊರಟು ಚಪ್ಪಟೆಯಾಗಿರುವುದರಿಂದ ಇದು ನಮ್ಮ ಬಾಯಲ್ಲಿ ಚಟ್ಟೆ ಮಾವಿನಹಣ್ಣು ಅಗ್ಹೋಗಿದೆ.

ಮಿಡಿ ಉಪ್ಪಿನಕಾಯಿ ಹಾಕಿದ ಬೆನ್ನಿಗೇ ಮಾವಿನ ಹಣ್ಣುಗಳ ಕಾಲ ಬಂತೆಂದೇ ಲೆಕ್ಕ.   ಒಂದೊಂದು ಮರದ ಹಣ್ಣೂ ಒಂದೊಂದು ರುಚಿ,  ಪರಿಮಳ.   ಮರದ ಬುಡದಲ್ಲಿ ಬಿದ್ದ ಹಣ್ಣುಗಳನ್ನು ಹೆಕ್ಕಿ ತರುವುದಷ್ಟೇ ಅಲ್ಲ,  ಬಗೆಬಗೆಯ ರುಚಿಕರ ಖಾದ್ಯಗಳನ್ನು ತಯಾರಿಸುವುದೇ ಗ್ರಾಮೀಣ ಗೃಹಿಣಿಯರ ಉದ್ಯೋಗ.   ಆಪ್ತೇಷ್ಟರಿಗೆ,  ಮಿತ್ರವರ್ಗದವರಿಗೆ ಹಣ್ಣುಗಳನ್ನು ಹಂಚುವುದೂ ಇದ್ದೇ ಇರುತ್ತದೆ.   ಅದರ ಜೊತೆಜೊತೆಗೆ ಹೆಚ್ಚುವರಿ ಹಣ್ಣುಗಳನ್ನು ಮುಂದಿನ ಮಳೆಗಾಲದ ಉಪಯೋಗಕ್ಕಾಗಿ ಮಾಂಬಳ ಎರೆಯುವಂತಹ ಜವಾಬ್ದಾರಿಯೂ ಇರುತ್ತದೆ.

" ಮಾಂಬಳ ಅಂದ್ರೇನು ?  ಹೇಗೆ ಮಾಡ್ತೀರಾ ?"

ತಟ್ಟೆಯ ಮೇಲೆ ತೆಳ್ಳಗಿನ ಹತ್ತಿಯ ಬಟ್ಟೆ ಹರಡಿಟ್ಟು ಪ್ರತಿದಿನವೂ ಮಾವಿನ ಹಣ್ಣಿನ ರಸವನ್ನು ಎರೆಯುತ್ತಾ,  ನೀರು ಸ್ವಲ್ಪವೂ ಸೇರಿಸಬಾರದು,  ತುಸು ಉಪ್ಪು ಹಾಕಿಕೊಳ್ಳಬಹುದು. ಬಿಸಿಲಿನಲ್ಲಿ ಒಣಗಿಸುತ್ತಾ ದಪ್ಪ ಪದರವಾದೊಡನೆ ತುಂಡು ಮಾಡಿಟ್ಟು ಹಿಂಬದಿಯನ್ನೂ ಚೆನ್ನಾಗಿ ಒಣಗಿಸಿ ತೆಗೆದಿರಿಸಿ ಡಬ್ಬದಲ್ಲಿ ತುಂಬಿಸಿಟ್ಟುಕೊಂಡರಾಯಿತು.   ಇದು ಮಾಂಬಳ.  ಮಳೆಗಾಲದಲ್ಲಿ ಮಾವಿನ ಗೊಜ್ಜು ಪುನಃ ಮಾಡಬಹುದು,  ಹಾಗೇನೇ ಚಾಕ್ಲೇಟ್ ತಿಂದಂತೆ ತಿಂದರೂ ಆದೀತು.   ನಗರವಾಸಿಗಳಿಗೂ ಮಾರ್ಕೆಟ್ ಧಾರಣೆ ಕಡಿಮೆ ಇದ್ದಾಗ ಮಾವಿನಹಣ್ಣುಗಳನ್ನು ಕೊಂಡು ತಂದು ಮಾಂಬಳ ಎರೆಯಬಹುದು.   ಗೃಹಕೃತ್ಯ,  ಆಫೀಸ್ ಕೆಲಸ ಎಂದು ನಿಭಾಯಿಸಲು ಕಷ್ಟ ಎನಿಸಿದರೆ ಮೈಕ್ರೋವೇವ್ ಅವೆನ್ ಇದೆಯಲ್ಲ,  ಅದರಲ್ಲಿಟ್ಟು ಒಣಗಿಸಿ. 

ಮಾವಿನಮರದ ಬುಡದಲ್ಲಿ ಗೋಣಿ ತುಂಬ ದೊರೆಯುವ ಮಾವಿನಹಣ್ಣುಗಳನ್ನು ಮಾಂಬಳ ಎರೆಯಲು ತಟ್ಟೆ ಸಾಲದು,  ದೊಡ್ಡ ಚಾಪೆಯನ್ನು ಬಳಸಬೇಕಾಗುತ್ತದೆ.  ಹಾಗೂ ಈ ಗೃಹೋದ್ಯಮಕ್ಕೆ ಮನೆಯ ಹಿರಿಕಿರಿಯರೂ ಸಹಕರಿಸಿದರೆ ಮಾತ್ರ ಮಾಡಿಕೊಳ್ಳಬಹುದು.   ಈ ಮಾಂಬಳಕ್ಕೂ ಉತ್ತಮ ಮಾರುಕಟ್ಟೆ ಧಾರಣೆಯೂ ಇದೆ,  ವಿದೇಶಗಳಿಗೂ ರಪ್ತು ಆಗುವಂಥ ವಸ್ತು.

ನೀರು ಮಾವಿನಕಾಯಿ:
ಮಾವಿನಕಾಯಿ ಗೊರಟು ಕಟ್ಟಿದ ನಂತರ ಉಪ್ಪು ಬೆರಸಿ ಭರಣಿಯಲ್ಲಿ ಅಥವಾ ಮಣ್ಣಿನ ಮಂಡಗೆಯಲ್ಲಿ ತುಂಬಿಸಿ,  ಮೇಲಿನಿಂದ ಕುದಿಸಿದ ನೀರು ಎರೆದು,   ಆರಿದ ನಂತರ ಭರಣಿಯ ಬಾಯಿ ಬಿಗಿದು ಕಟ್ಟಬೇಕು.  ಉಪ್ಪು ಕಡಿಮೆಯಾಗಬಾರದು,  ಕೆಟ್ಟುಹೋದೀತು. ಉಪ್ಪು ಹೆಚ್ಚಾದ್ರೆ ಏನು ಗತಿ ಎಂಬ ಚಿಂತೆ ಬೇಡ,   ಅಡುಗೆಗೆ ಬಳಸುವ ಮೊದಲು ನೀರಿನಲ್ಲಿ ಹಾಕಿಟ್ಟಿರಿ,  ಉಪ್ಪು ಬಿಡುತ್ತದೆ.   ಮನೆ ತುಂಬ ಜನ ಇರುವಲ್ಲಿ,  ಆಳುಕಾಳುಗಳೂ ದಿನನಿತ್ಯ ಇರುವ ಸಂದರ್ಭದಲ್ಲಿ,  ತರಕಾರಿ ಏನೂ ಸಿಗದೇ ಇರುವ ಆಷಾಢ ಮಾಸದಲ್ಲಿ,  ಇದು ಮಳೆಗಾಲದ ಅಡುಗೆ ಉಪಯೋಗಕ್ಕಿರುವಂಥಾದ್ದು.  ಇದೆಲ್ಲ ಹಿಂದಿನ ಕಾಲದ ಕಥೆ.   ಈಗಲೂ ಆಸಕ್ತರು ಅವಶ್ಯವಿದ್ದಷ್ಟು ನೀರು ಮಾವಿನಕಾಯಿ ( ನೀರ್ ಕುಕ್ಕು )  ಹಾಕಿಟ್ಟುಕೊಳ್ಳುತ್ತಾರೆ.   ಭರಣಿಯೇನೂ ಬೇಡ,   ಗಾಳಿ ಒಳ ಹೋಗದಂತೆ ಮುಚ್ಚಳವಿರುವ ದೊಡ್ಡ ಪ್ಲಾಸ್ಟಿಕ್ ಜಾಡಿ ಇದ್ದರೆ ಸಾಕು.    

ಫಲಭರಿತ ವೃಕ್ಷದ ಅಡಿಯಿಂದ ಹಣ್ಣುಗಳನ್ನು ಹೆಕ್ಕುತ್ತಿರಬೇಕಾದರೆ,  ಅಡವಿಯಲಿ ಹುಟ್ಟಿ ಬೆಳೆವಂತಹ ವೃಕ್ಷಗಳಿಗೆ ಕಟ್ಟೆಯನು ಕಟ್ಟಿ ನೀರೆರೆದವರು ಯಾರೋ ಎಂದ ನಮ್ಮ ಹರಿದಾಸರ ವಾಣಿ ಈ ವನ್ಯವೃಕ್ಷವನ್ನು ಅನ್ವಯಿಸಿ ಹಾಡಿದ್ದಾಗಿರಬಹುದೇನೋ ಎಂದೂ ಅನ್ನಿಸಿಬಿಟ್ಟಿತು.  ಜಾಗತಿಕ ಮಟ್ಟದಲ್ಲಿ ಇದರಷ್ಟು ತುಂಬಾ ಫಲ ನೀಡುವ ಮರ ಬೇರೂಂದಿಲ್ಲ.   ಇದರ ಮೂಲನೆಲೆ ಭಾರತವೇ ಆಗಿರುವುದರಿಂದ ಸಸ್ಯಶಾಸ್ತ್ರಜ್ಞರು Mangifera indica ಎಂದು ನಾಮಕರಣ ಮಾಡಿರುತ್ತಾರೆ.   ವನ್ಯವೃಕ್ಷವಾದ ಈ ಮರದ ಹಣ್ಣನ್ನು ಕಾಟ್ಟು ಮಾವು ಎಂದೇ ನಮ್ಮ ದಕ್ಷ್ಣಿಣ ಕನ್ನಡಿಗರು ಹೇಳುವ ವಾಡಿಕೆ. ಬೃಹತ್ ವೃಕ್ಷವಾಗಿ ನೂರು ಅಡಿ ಮೀರಿ ಬೆಳೆಯುವ ಕಾಟ್ಟು ಮಾವಿನ ಮರದ ಕಾಂಡವೂ 12-14 ಅಡಿ ಸುತ್ತಳತೆ ಹೊಂದಿರುತ್ತದೆ,   20 ಆಡಿ ಸುತ್ತಳತೆ ಇರುವುದೂ ಇದೆ.   ಕಾಳಿದಾಸನ ಕಾವ್ಯದಲ್ಲಿಯೂ ಮಾವಿನ ವರ್ಣನೆ ಇದೆ,  ಮಾವು ನಮ್ಮ ದೇಶದ ರಾಷ್ಟೀಯ ಫಲ ಕೂಡಾ ಹೌದು.

ಒಂದು ಮರದ ಹಣ್ಣಿನ ರುಚಿ,  ಪರಿಮಳ,  ಗಾತ್ರ ಮತ್ತೊಂದು ಮರಕ್ಕೆ ಇಲ್ಲವೇ ಇಲ್ಲ.   ಕೆಲವು ಕಸಿ ಹಣ್ಣಿನಂತೆ ಗುಳಭರಿತವಾಗಿ,  ಗಾತ್ರದಲ್ಲಿ ದೊಡ್ಡ ಹಣ್ಣುಗಳಾಗಿರುತ್ತವೆ.  ಇನ್ನೂ ಹಲವು ಕೇವಲ ಸಿಪ್ಪೆ ಗೊರಟು ಅನ್ನಿಸಿಕೊಳ್ಳುತ್ತವೆ,  ಆದರೂ ತನ್ನ ವಿಶಿಷ್ಟ ಸುವಾಸನೆಯಿಂದ ಗ್ರಾಹಕರನ್ನು ಬರಮಾಡಿಕೊಳ್ಳುತ್ತವೆ.  ಈ ಕಾಟ್ಟು ಮಾವುಗಳ ಗುಣಧರ್ಮಗಳನ್ನು ಬರೆಯುತ್ತಾ ಹೋದರೆ ದೊಡ್ಡ ಪ್ರಬಂಧವೇ ಆದೀತು. 

 ಅಜ್ಜನ ಮನೆಯಲ್ಲಿ ಇದ್ದ ಒಂದು ಮಾವಿನ ಮರ,   ಕಸಿಮಾವಿನಂತೆ ದೊಡ್ಡದು,  ಅದನ್ನು ಕರ್ಪೂರ ಮಾವಿನ ಹಣ್ಣು ಎಂದು ಹೆಸರಿಟ್ಟು ಕೊಂಡಿದ್ದರು.  ನಾವು ಮಕ್ಕಳೆಲ್ಲ ಹೆಕ್ಕಿ ತಂದ ಹಣ್ಣುಗಳಲ್ಲಿ ಕರ್ಪೂರ ಹಣ್ಣನ್ನು ಮಾತ್ರ ಒಳಗಿಟ್ಟು ನಮ್ಮಜ್ಜಿ ಉಳಿದ ಕಾಟಂಗೋಟಿ ಹಣ್ಣುಗಳನ್ನು ಮಾಂಬಳ ತಯಾರಿಗೆ ಹೊರಗಿಡುತ್ತಿದ್ದರು.   ಅಪ್ಪನ ಮನೆಯಲ್ಲೂ ಇಂತಹುದೇ ಒಂದು ಮರ,  ಇದಕ್ಕೂ ಒಂದು ಹೆಸರಿದೆ,  ಒಳ್ಳೇ ಹಣ್ಣಿನ ಮರ.   ಗಾಳಿ ಬೀಸಿದಾಗ ಬೀಳುವ ಒಳ್ಳೇ ಹಣ್ಣನ್ನು ಹೆಕ್ಕಿಕೊಳ್ಳಲು ಹಿರಿಕಿರಿಯರ ದಂಡೇ ಓಡಿ ಬರ್ತಾ ಇತ್ತು.   ನಮ್ಮ ಹಿರಣ್ಯದಲ್ಲೂ ಇಂತಹದ್ದೇ ಇನ್ನೊಂದು ಮರವಿದೆ.   ಅದು ನೀರಿನ ಸುರಂಗದ ಪಕ್ಕ ಇದೆ,  ಇದಕ್ಕೂ ಸುರಂಗದ ಕಸಿ ಮಾವು ಎಂದು ಹೆಸರಿಸಿಕೊಂಡಿದ್ದೇವೆ.   ಈ ಮೂರು ಹಣ್ಣುಗಳೂ ರುಚಿ, ಪರಿಮಳಗಳಲ್ಲಿ ವಿಭಿನ್ನವಾಗಿವೆ.   ಇಂತಹ ಮಾವಿನಲ್ಲಿ ವೈವಿಧ್ಯ ನಮ್ಮ ಪರಂಪರೆಯಿಂದ ಬಂದಿದೆ.   ನಮ್ಮ ಪಶ್ಚಿಮಘಟ್ಟ ಅರಣ್ಯವಲಯದೊಳಗೆ ಅದೆಷ್ಟೋ ಮಾವಿನಮರಗಳು ಇದ್ದಿರಬಹುದು.   ಕಾಡು ಕಡಿದು ನಾಡು ಬೆಳೆಸುವ ಆತುರದಲ್ಲಿ ಅದೆಷ್ಟು ವೃಕ್ಷತಳಿಗಳು ನಾಶವಾಗಿವೆ ?  ಗೊತ್ತಿಲ್ಲ.   ವೃಕ್ಷಬೀಜ ನ್ಯಾಯದ ಹಾಗೆ ಒಮ್ಮೆ ಅಳಿದ ತಳಿಗೆ ಮರುಹುಟ್ಟು ಕೊಡಲಾಗದು.

ಇದೆಲ್ಲ ಇರಲಿ,  ಮಾವಿನ ಹಣ್ಣಿನ ರಸರುಚಿಗಳ ಪಟ್ಟಿಯೇ ದೊಡ್ಡದಿದೆ.   ಕಾಲೇಜ್ ವ್ಯಾಸಂಗ ಮಾಡುತ್ತಿರುವ ನನ್ನ ಮಗಳೂ ಮೊನ್ನೆ ತಾನೂ ಸ್ನೇಹಿತೆಯರೂ ಕೂಡಿ ತಯಾರಿಸಿದ ಮಾವಿನ ಸಾರು..... ನನಗೆ ಮೆಸೆಂಜರ್ ಮೂಲಕ ಫೋಟೋ ಕಳುಹಿಸಿದಳು.    ಕುದಿಸಿ ಒಗ್ಗರಣೆ ಕೊಟ್ಟಿದ್ದು ಸಾರು.   ಕುದಿಸದೇ ಒಗ್ಗರಣೆ ಕೊಟ್ರೆ ಗೊಜ್ಜು.   ಸಾಸಿವೆ,  ಹಸಿಮೆಣಸು ಕಾಯಿತುರಿ ಅರೆದು ಸೇರಿಸಿ,  ನಮ್ಮ ಕಡೆ ಸಾಸಮೆ ಆಯ್ತು,  ಅಚ್ಚಗನ್ನಡದಲ್ಲಿ ಬೇಕಿದ್ರೆ ಮಾವಿನ ಸಾಸಿವೆ ಅನ್ನಿ,   ಏನೇ ಮಾಡುವುದಿದ್ದರೂ ರಾಶಿ ರಾಶಿ ಬೆಲ್ಲ ದಾಸ್ತಾನು ಇಟ್ಟುಕೊಳ್ಳಿ.

ಬೇಸಿಗೆಯ ಕಾಲದಲ್ಲೇ ಆಗಮಿಸುವ ಈ ಮಾವಿನ ಹಣ್ಣಿನ ಶರಬತ್ ಬಿಸಿಲಿನ ತಾಪವನ್ನು ಶರೀರದಿಂದ ಓಡಿಸುವ ಶಕ್ತಿ ಹೊಂದಿದೆ ಹಾಗೂ ಪಚನಾಂಗಗಳ ಕಾರ್ಯಕ್ಷಮತೆಯೂ ವೃದ್ಧಿಸುವುದು,  ಮಜ್ಜಿಗೆ ಎರೆದು ಕುಡಿದು ಲಸ್ಸೀ ಅನ್ನಿ,  ಹಾಲು ಎರೆದು ಕುಡಿದು ಮಿಲ್ಕ್ ಶೇಕ್ ಅನ್ನಿ,  ಒಟ್ಟಿನಲ್ಲಿ ಕುಡಿಯಿರಿ.   ಬಾಯಿರುಚಿಯನ್ನೂ ಹೆಚ್ಚಿಸುವ ಈ ಹಣ್ಣು ಅಡುಗೆಮನೆಗೆ ಬಂತೆಂದರೆ ಅನ್ನದ ತಪಲೆ ಖಾಲಿಯಾಯ್ತೇಕೆ ಎಂದು ಬಾಯ್ಬಿಡದಿರಿ.

ಊಟದ ರುಚಿ ಹೆಚ್ಚಿಸುವ ಮಾವಿನ ಖಾದ್ಯಗಳನ್ನು ಬರೆಯ ಹೊರಟರೆ ಒಂದು ಗ್ರಂಥವೇ ಸಿದ್ಧವಾದೀತು.   
ಮಾವಿನ ಕಾಯಿ ಪಚ್ಚಡಿ:
ಅವಶ್ಯವಿದ್ಷಷ್ಟು ತೆಂಗಿನ ತುರಿ 
ಮಾವಿನಕಾಯಿ ಹೋಳುಗಳು, ಸಿಪ್ಪೆ ತೆಗೆದು ತುರಿದರೆ ಉತ್ತಮ.
ಹುರಿದ ಕಡ್ಲೇಬೇಳೆ
ಒಣಮೆಣಸು ಅಥವಾ ಹಸಿಮೆಣಸು
ರುಚಿಗೆ ಉಪ್ಪು
ಕರಿಬೇವು ಹಾಗೂ ಒಗ್ಗರಣೆ ಸಾಮಗ್ರಿ
ಎಲ್ಲವನ್ನೂ ನೀರು ಹಾಕದೆ ಅರೆದು ಒಗ್ಗರಣೆ ಕೂಡಿ.   ಈ ಥರದ ಪಚ್ಚಡಿಗೆ ನೆಕ್ಕರೆ ಮಾವಿನಕಾಯಿ ಚೆನ್ನಾಗಿರುತ್ತದೆ. ನೆಕ್ಕರೆ ಮಾವಿನಕಾಯಿಗೆ ಹೊಳೆಮಾವು ಅಂತಲೂ ಹೆಸರಿದೆ.   ಸುವಾಸನಾಭರಿತವಾದ ಈ ಪಚ್ಚಡಿ ಒಂದಿದ್ದರೆ ಸಾಕು,  ಉಪ್ಪಿನಕಾಯಿ ಬೇಕಾಗುವುದೇ ಇಲ್ಲ.  

ಶಿರಾ/ಕೇಸರಿಬಾತ್ ಎಂಬ ಸಿಹಿ ಭಕ್ಷ್ಯ ಎಲ್ಲರಿಗೂ ತಿಂದು ಗೊತ್ತು.  ಮಾವಿನಹಣ್ಣಿನ ಕೇಸರಿಬಾತ್ ಅತಿ ವೇಗವಾಗಿ ಈ ಸಮಯದಲ್ಲಿ ಮಾಡಬಹುದು,   ಸಂಜೆಗೊಂದು ತಿನಿಸು ದೊರೆಯಿತು ಅನ್ನಿ.

ಚಿರೋಟಿ ರವೆ ಒಂದು ಕಪ್
ಮಾವಿನಹಣ್ಣಿನ ರಸ 2 ಕಪ್
ಸಕ್ಕರೆ ಒಂದು ಕಪ್
ಚಿಟಿಕೆ ಉಪ್ಪು
ತುಪ್ಪ 4 ಚಮಚ

ಚಿರೋಟಿ ರವೆಯನ್ನು ತುಪ್ಪದಲ್ಲಿ ಪರಿಮಳ ಬರುವಷ್ಟು ಹುರಿಯಬೇಕು.   ದಪ್ಪ ತಳದ ಬಾಣಲೆ ಅವಶ್ಯ.
ಹುರಿದಾಯಿತೇ,  ಮಾವಿನ ರಸ ಎರೆದು ಬೇಯಿಸಿ.
ಬೆಂದಿತೇ,  ಸಕ್ಕರೆ ಸುರುವಿರಿ,  ಚಿಟಿಕೆ ಉಪ್ಪು ಬೀಳಲಿ.
2 ಚಮಚ ತುಪ್ಪ ಎರೆದು ಸಕ್ಕರೆ ಕರಗಿ ರವೆಯೊಂದಿಗೆ ಕೂಡಿಕೊಳ್ಳುವ ತನಕ ಸೌಟಾಡಿಸಿ.
ದ್ರಾಕ್ಷಿ,  ಗೋಡಂಬಿ ಬೇಕಿದ್ದರೆ ಹಾಕಬಹುದು.





ಮಾವಿನ ಹಣ್ಣಿನ ರಸಂ
10-12 ಮಾವಿನ ಹಣ್ಣುಗಳು,   ಸುಲಿದು ಸಿಪ್ಪೆಯಿಂದಲೂ ರಸ ತೆಗೆಯಿರಿ.
ಸಿಹಿ ಬೇಕಿದ್ದಷ್ಟು ಬೆಲ್ಲ
ರುಚಿಗೆ ತಕ್ಕಷ್ಟು ಉಪ್ಪು
ಮಸಾಲೆ ಸಾಹಿತ್ಯ:
2 ಚಮಚ ಕಡ್ಲೇಬೇಳೆ
2 ಚಮಚ ಕೊತ್ತಂಬರಿ
2 ಚಮಚ ಎಳ್ಳು
1 ಚಮಚ ಜೀರಿಗೆ
ಇಂಗು,  2-3 ಒಣಮೆಣಸು
ತುಸು ಎಣ್ಣೆಯಲ್ಲಿ ಘಮ್ ಎಂಬಂತೆ ಹುರಿದುಕೊಳ್ಳಿ,   ನುಣ್ಣಗೆ ಹುಡಿ ಮಾಡಿಟ್ಕೊಳ್ಳಿ.
ಮಾವಿನ ಹಣ್ಣುಗಳನ್ನು  ಸಿಪ್ಪೆಯ ರಸ ಸಹಿತವಾಗಿ ಬೆಲ್ಲ, ಉಪ್ಪು ಸೇರಿಸಿ ಕುದಿಸಿ.
ಒಂದು ಕುದಿ ಬಂದರೆ ಸಾಕು,  ಮಾಡಿಟ್ಟ ಮಸಾಲೆ ಹುಡಿ ಹಾಕಿ,  ಸೌಟಿನಲ್ಲಿ ತಿರುವಿ ಅವಶ್ಯವಿದ್ದರೆ ನೀರು ಎರೆಯಿರಿ.
ಕರಿಬೇವಿನ ಒಗ್ಗರಣೆ ಕೊಡಿ,  ಈ ರಸಂ ಒಂದೆರಡು ದಿನ ಇಟ್ಟುಕೊಳ್ಳಬಹುದು.
ಮಸಾಲೆ ಅರೆಯುವಾಗ ತೆಂಗಿನ ತುರಿಯೊಂದಿಗೆ ಅರೆದಿರೋ,  ಇದು ಮಾವಿನ ಮೆಣಸ್ಕಾಯಿ ಅನ್ನಿಸಿಕೊಳ್ಳುತ್ತದೆ.   ಒಂಥರಾ ಬದಲಾವಣೆಗಾಗಿ ಕಾಯಿ ತುರಿ ಹಾಕದೇ ರಸಂ ಎಂದು ಹೆಸರು ಕೊಟ್ಟಿದ್ದೇನೆ.




ಒಮ್ಮೆ ಏನಾಯ್ತೂಂದ್ರೆ ಚಿಕ್ಕಮ್ಮ ಮುಂಬೈಯಿಂದ ಊರಿಗೆ ಬಂದರು.   ಅವರಿಗೆ ನಮ್ಮ ಮದುವೆಗೆ ಬರಲು ಸಾಧ್ಯವಾಗಿರಲಿಲ್ಲ,  ಹೊಸ ಮದುಮಕ್ಕಳನ್ನು ಆಶೀರ್ವದಿಸಲು ನಮ್ಮ ಮನೆಗೇ ಬಂದರು.    ಆಗ ಕಾಟ್ಟು ಮಾವಿನಹಣ್ಣುಗಳ ಕಾಲ.   ನಾನೂ ನನಗೆ ತಿಳಿದಂತೆ ಮಾವಿನಹಣ್ಣುಗಳ ಷಡ್ರಸೋಪಚಾರದಿಂದ ಸತ್ಕರಿಸಿದೆ.   ಹಣ್ಣುಗಳ ಸಾಸಿವೆಗೆ ತೆಂಗಿನಕಾಯಿ ಅರೆದೆ,   ಮಾವಿನಹಣ್ಣುಗಳ ರಸಾಯನಕ್ಕಾಗಿ ತೆಂಗಿನಕಾಯಿ ಹಾಲು ತೆಗೆದೆ. ಅಡುಗೆಯೇನೂ ತಿಳಿದಿರದಿದ್ದ ನನ್ನ ನಳಪಾಕದಿಂದ ಸುಪ್ರೀತರಾದ ಚಿಕ್ಕಮ್ಮ ಮಾವಿನಹಣ್ಣಿನ ಹೊಸರುಚಿಯೊಂದನ್ನು ಹೇಳಿಕೊಟ್ಟರು.

" ನಮ್ಮ ಮುಂಬೈಯಲ್ಲಿ ಹೀಗೆ ಹಣ್ಣಿನ ರಸ ತೆಗೆದು,  ಸಕ್ಕರೆ ಹಾಕಿ ಹಾಲು ಎರೆದ್ರೆ ಆಗ್ಹೋಯ್ತು ಆಮ್ರಸ್ "
" ಹೌದಾ,   ಅದನ್ನು ಸಂಜೆ ಮಾಡುವ ಹಾಗಿದ್ರೆ "
" ಇಲ್ಲಿನ ಹಾಗೆ ತೆಂಗಿನಕಾಯಿ ಹಾಕಿ ಅಲ್ಲಿ ಮಾಡಲಿಕ್ಕಾಗುವುದಿಲ್ಲ,  ಅಷ್ಟು ರೇಟ್ ತೆಂಗಿನಕಾಯಿಗೆ ಗೊತ್ತಾ "
" ಓ,  ಹಾಗೋ,  ನಮ್ಮ ಕೊದಿಲ್ ಮೇಲಾರ ಮಾಡುವುದು ಕಷ್ಟವೇ ...."
" ಅದೆಲ್ಲ ಮಾಡುವ ಹಾಗೇ ಇಲ್ಲ. ಏನಿದ್ರೂ ತೊಗರಿಬೇಳೆ ಬೇಯಿಸಿ,  ತರಕಾರಿ ಹಾಕಿ ಒಂದಿಷ್ಟು ಸಾಂಬಾರ್ ಹುಡಿ ಹಾಕೂದು ಮತ್ತೇನಿಲ್ಲ "

     <><><><><><>

  ಬಾಳೆಲೆ ಮೇಲೆ  " ವಿವಾಹ ಭೋಜನವಿದು.... ವಿಚಿತ್ರ ಭಕ್ಷ್ಯಗಳಿವು....."  ಎಂಬಂತೆ ವಿಧವಿಧವಾದ ವ್ಯಂಜನಗಳು ಬಂದವು.   ಭೋಜನವನ್ನು ಉಣ್ಣಲಿಕ್ಕಾಗಿ ನೆಲದ ಪಂಕ್ತಿಯಲ್ಲಿ ಕುಳಿತಿದ್ದೆ,  ಆಗಲೂ ಮಾವಿನಹಣ್ಣುಗಳ ಕಾಲ,   ಮಾವಿನ ಸಾಸಮೆ ಬಂದಿತು.   ಬಡಿಸುವವರು ಎಲ್ಲರ ಬಾಳೆಲೆಗೂ ಮಾವಿನಹಣ್ಣು ಸಿಗುವಂತೆ ಹಾಕುತ್ತಾ ಹೋದರು.   ನನ್ನ ಪಕ್ಕದಲ್ಲಿ ಕುಳಿತಿದ್ದ ತಂಗಿ ಗಾಯತ್ರಿ ಅಂದಳು  " ಎದುರು ಕಡೆ ಕೂತಿದಾರಲ್ಲ ಆ ಹುಡ್ಗೀರು,  ಮಾವಿನಹಣ್ಣನ್ನು ಪಕ್ಕಕ್ಕೆ ತಳ್ಳಿದ್ದು ನೋಡಕ್ಕಾ "

" ಹೌದಲ್ಲ,  ಅವರಿಗೆ ಹಣ್ಣು ತಿನ್ನ ಬೇಡ ಅಂತ ಹೇಳಿದವರು ಯಾರು ?"  ನನಗೋ ಅಚ್ಚರಿ.

" ಈಗೆಲ್ಲ ಹಾಗೇ,  ಗೊರಟು ಚೀಪಲಿಕ್ಕೆ ಗೊತ್ತಿಲ್ಲ,   ಅವರ ಪ್ರೆಸ್ಟೀಜ್ ಹಾಳಾಗ್ತದೆ..." 

ಇಷ್ಟು ದೊಡ್ಡ ಸಮಾರಂಭದಲ್ಲಿ ಮಾವಿನ ಸಾಸಿವೆಗೆ ಏನಿಲ್ಲಾಂದ್ರೂ ಒಂದ್ ಸಾವಿರ ಹಣ್ಣು ಸಂಗ್ರಹ ಮಾಡಬೇಕಾಗುತ್ತದೆ,   ನೆಂಟರಿಷ್ಟರು,  ಆಪ್ತರೇ ಸಂಗ್ರಹಿಸಿ ತಂದಿರುತ್ತಾರೆ.   ಅದಕ್ಕೆ ಕಿಲೋಗಟ್ಟಲೆ ಬೆಲ್ಲ ಸುರಿದು,  ತೆಂಗಿನಕಾಯಿ ಎಷ್ಟು ಹಾಕಿರ್ತಾರೋ,   ಪಾಕಭಟರ ಶ್ರಮ,  ಇದನ್ನೆಲ್ಲ ನೆನೆದೇ   " ಅಯ್ಯೋ ದೇವ್ರೇ ,  ಹೀಗೂ ಉಂಟೇ... " ಎಂಬ ಉದ್ಗಾರ ನನ್ನಿಂದ ಬಂದಿತು.

ಬರೆಯುತ್ತಾ ಇದ್ದ ಹಾಗೆ ಮಳೆ ಬರುವ ಲಕ್ಷಣ ಕಾಣಿಸ್ತಾ ಇದೆ.   ಟೆರೇಸ್ ಮೇಲೆ ಒಣಗಲಿಟ್ಟ ಮಾಂಬಳ ಮಳೆ ಹನಿ ಬೀಳುವ ಮೊದಲೇ ಒಳಗಿಡಬೇಕು.   ಮತ್ತೊಂದು ವಿಷಯ,  ಮಳೆ ಬಂದ ಮೇಲೆ ಈ ಕಾಟ್ಟು ಮಾವಿನಹಣ್ಣುಗಳ ಮೇಲೆ ಮಮಕಾರ ಕಡಿಮೆಯಾಗುವ ಸಮಯ ಬಂತೆಂದೇ ತಿಳಿಯಿರಿ.  ಅದೇನಪ್ಪಾ ಅಂದ್ರೆ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಬೀಸಿ ಬರುವ ಗಾಳಿಗೆ ಈ ದೈತ್ಯಗಾತ್ರದ ಮರಗಳ ಹಣ್ಣುಗಳು ಉದುರಿಯೇ ಹೋಗುತ್ತವೆ.   ತರಗೆಲೆ ಮೇಲೆ ಚದುರಿ ಬಿದ್ದ ಹಣ್ಣುಗಳು ಹುಳ ಹುಪ್ಪಟಿಗಳಿಗೆ ಆಹಾರವಾಗಿ ಕೊಳೆತುಹೋಗುವ ಕಾಲ.   ಮಳೆ ನಿಂತ ಮೇಲೆ ಮರದಡಿಗೆ ಬಂದವರಿಗೆ ಈ ದಾರುಣ ದೃಶ್ಯ ವೀಕ್ಷಣೆಗೆ ಲಭ್ಯ.



ಎಂದಿನಂತೆ   " ರಜಾ ಇದೆ "  ಅನ್ನುತ್ತಾ ಮಗಳು ಮನೆಗೆ ಬಂದಳು.   ಅವಳಂತೂ ತಾಜಾ ಹಣ್ಣನ್ನು ಮಾತ್ರ ತಿನ್ನುವವಳು.   ಈ ಬಾರಿ ಮಾಂಬಳ ಅವಳ ಕಣ್ಣಿಗೆ ಬಿದ್ದಿತು.   " ಮನೆಯಲ್ಲಿ ತಿನ್ನೋರು ಯಾರೂ ಇಲ್ಲ ನೋಡು,  ಹೆಕ್ಕಿ ತಂದ ಹಣ್ಣನ್ನು ಮಾಂಬಳ ಮಾಡದೇ ಬಿಸಾಡೋದಿಕ್ಕಾಗುತ್ತಾ... ಬೇಕಿದ್ದರೆ ತಿನ್ನು "  ಅಂದೆ.

" ಒಂದು ತುಂಡು ಕೊಡು ತಿಂತೇನೆ "

" ಪೀಸ್ ಮಾಡ್ಬೇಕಿದ್ರೆ ಪೀಸಕತ್ತಿ ತಾ "

ಚಾಕು ಬಂದಿತು,  ತಟ್ಟೆಯಲ್ಲಿ ಬಟ್ಟೆಯ ಮೇಲೆ ಒಣಗಿದ್ದ ಮಾಂಬಳವನ್ನು ಕತ್ತಿಯ ತುದಿಯಿಂದ ಗೆರೆ ಹಾಕಿ ಎಬ್ಬಿಸಿ ತುಂಡುಗಳಾಯಿತು.   ಅವಳೋ ಒಂದು ಚಿಕ್ಕ ತುಂಡು ತಿಂದಳು.   " ಹುಳಿ ಹುಳಿ..." ಅಂದಳು.

" ಮಾಂಬಳ ತಿನ್ನುವ ಸಮಯ ಈಗ ಅಲ್ಲ,    ಮಾವಿನಹಣ್ಣು ಮುಗಿಯಬೇಕು,   ಮಳೆಗಾಲ ಪ್ರಾರಂಭ ಆಗಬೇಕು..."  ಅವಳ ಅಪ್ಪ ವಿವರಣೆ ಕೊಟ್ಟರು.




ಕಾಟ್ಟು ಮಾವಿನಹಣ್ಣುಗಳ ಕಾಲ ಮುಗಿಯುತ್ತ ಬಂದಿರಲು,   ಮಗಳೂ ಮನೆಯಲ್ಲಿದ್ದಾಳಲ್ಲ,  ಒಂದು ರಸಾಯನ ಮಾಡಿಯೇ ಬಿಡೋಣ.
ರಸಾಯನಕ್ಕೆ ಮಾವಿನಹಣ್ಣಿನ ಸಿಪ್ಪೆ ತೆಳ್ಳಗೆ ತೆಗೆದು ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಮಾಡಿ ಇಟ್ಟುಕೊಳ್ಳಿ.   ಸಿಪ್ಪೆ ತೆಗೆದ ಹಣ್ಣಿನಿಂದ ಚೂರಿಯಲ್ಲಿ ಗೀರು ಹಾಕಿ ಪುಟ್ಟ ಪುಟ್ಟ ಹೋಳು ಮಾಡುವುದೂ ಒಂದು ಕಲೆಗಾರಿಕೆ.   ನುರಿತವರನ್ನು ಕೇಳಿ,  ನೋಡಿ ಕಲಿಯಿರಿ.  ಕೇವಲ ಸಿಪ್ಪೆಗೊರಟಿನ ಹಣ್ಣು ಆಗದು,  ದೊಡ್ಡ ಗಾತ್ರದ ಹಣ್ಣುಗಳು ಯೋಗ್ಯ.  ಗೋಮಾವು ಎಂದು ಕರೆಯಲ್ಪಡುವ ಹಣ್ಣೂ ಆದೀತು.  ಹಣ್ಣುಗಳು ಸಿಹಿಯಾಗಿಯೂ ಇರಬೇಕು.
ತೆಂಗಿನಕಾಯಿ ಹಾಲು ತೆಗೆಯಿರಿ.
ಸಿಹಿಗೆ ಸಕ್ಕರೆ.
ತುಸು ಎಳ್ಳು,  ಹುರಿದು ಜಜ್ಜಿಕೊಳ್ಳಿ.
ಎಲ್ಲವನ್ನೂ  ತಪಲೆಗೆ ಸುರಿದು ಸೌಟಾಡಿಸಿ.  
ಪುಟ್ಟ ತಟ್ಟೆಗೆರೆದು ಊಟದ ಕೊನೆಯಲ್ಲಿ ಕುಡಿಯಿರಿ.



Posted via DraftCraft app

ಟಿಪ್ಪಣಿ:   ಈ ಬರಹ ದಿನಾಂಕ 15,  ಜೂನ್,  2014ರಂದು ಮುಂದುವರಿದದ್ದು...


ಮಾವಿನ ಹಣ್ಣುಗಳ ಕಾಲ ಮುಗಿಯಿತೇ,  ಛೆ,ಛೆ... ಇದೆ ಮುಗಿದಿಲ್ಲ.   ಹತ್ತು ಹಲವಾರು ಮಾಮರಗಳಿರುವಲ್ಲಿ ಹಲಕೆಲವು ಮರಗಳಲ್ಲಿ ಮಳೆ ಬಂದ ಮೇಲೆ ಹಣ್ಣು ಬೀಳಲು ಆರಂಭ.   ಮಳೆ ಬಂದ ನಂತರ ಹುಳಿ ಹಣ್ಣು ಸಿಹಿಯಾಗುವುದೂ ಇದೆ.   ಆದರೆ ಹಸಿ ಹಣ್ಣುಗಳನ್ನು ತಿನ್ನಲು ಧೈರ್ಯ ಬರುವುದಿಲ್ಲ,   ಏನಾದರೂ ರೋಗರುಜಿನಗಳಿಗೆ ದಾರಿ ಮಾಡಿಕೊಟ್ಟಂತಾದೀತೆಂಬ ಭಯ.   ಇದಕ್ಕೂ ನಮ್ಮ ಹಿರಿಯರು ಸೂತ್ರವೊಂದನ್ನು ಮಾಡಿಟ್ಕೊಂಡಿದ್ದಾರೆ,   ' ಬೇಯಿಸಿ ತಿಂದರೆ ಭಯವಿಲ್ಲ '   ಈ ನಿಯಮ ಪ್ರಕಾರ ನಮ್ಮ ಅಡುಗೆ ಮುಂದುವರಿಸೋಣ.

ಮಾವಿನಹಣ್ಣಿನ ಬೋಳು ಹುಳಿ:

.ಚೆನ್ನಾಗಿರುವ ಮಾವಿನಹಣ್ಣುಗಳನ್ನು ಆಯ್ದು,  ತೊಳೆದು,  ತೊಟ್ಟು ತೆಗೆದು ಕತ್ತಿಯಲ್ಲಿ ಗೀರು ಹಾಕಿ ನೋಡಿಕೊಳ್ಳಿ,  ಒಳಗೆ ಹುಳುಹುಪ್ಪಟಿಗಳಿರಬಾರದಲ್ಲ!   ಹಣ್ಣುಗಳು ಮುಳುಗುವಷ್ಟು ನೀರೆರೆದು,  ಉಪ್ಪು ಹಾಕಿ ಬೇಯಿಸಿ.   ಹಸಿಮೆಣಸು ಹಾಕಬಹುದು,   ಮೆಣಸಿನ ಹುಡಿಯೂ ಆದೀತು,  ಒಗ್ಗರಣೆಯ ಮೆಣಸು ಸಾಕು.  ಬೆಲ್ಲ ಹಾಕೂದೇನೂ ಬೇಡ.   ಮಳೆ ಬಂದ ಮೇಲೆ ಮಾಂಬಳ ಎರೆಯುವಂತಿಲ್ಲ,  ಹಸಿ ಹಣ್ಣು ತಿನ್ನುವಂತಿಲ್ಲ.   ಗಂಜಿಯೂಟಕ್ಕೆ ಈ ಬೋಳು ಹುಳಿ ಸೊಗಸಾಗಿರುತ್ತದೆ.




ಮಾವಿನಹಣ್ಣಿನ ಕೊದಿಲ್:
ಒಂದು ಚಿಕ್ಕ ಹಣ್ಣು ಸೌತೆಕಾಯಿ
ಮೂರು ಮಾವಿನಹಣ್ಣು
ತರಕಾರಿ ಹಾಗೂ ಮಾವಿನಹಣ್ಣುಗಳನ್ನು ಉಪ್ಪು ಹಾಕಿ ಬೇಯಿಸಿ.

ಒಂದು ಕಡಿ ತೆಂಗಿನತುರಿ
4 ಒಣಮೆಣಸು
2 ಚಮಚ ಕೊತ್ತಂಬರಿ
1 ಚಮಚ ಉದ್ದಿನಬೇಳೆ
ಜೀರಿಗೆ, ಮೆಂತೆ,  ಇಂಗು ಸ್ವಲ್ಪ

ಎಣ್ಣೆಪಸೆಯಲ್ಲಿ ಹುರಿಯಿರಿ,  ತೆಂಗಿನತುರಿಯೊಂದಿಗೆ ಅರೆಯಿರಿ.  ಬೆಂದ ತರಕಾರಿಗೆ ಕೂಡಿಸಿ,  ಅವಶ್ಯವಿದ್ದಂತೆ ನೀರು,  ಬೇಕಿದ್ದರೆ ಬೆಲ್ಲ ಹಾಕಬಹುದು,  ಕುದಿಸಿ ಬೇವಿನೆಸಳಿನ ಒಗ್ಗರಣೆ ಇರಲಿ.   ಈ ಕೊದಿಲ್ ಅಥವಾ ಕೊದ್ದೆಲ್ ಗೆ ತೊಗರಿಬೇಳೆ ಹಾಕಬೇಕಾಗಿಲ್ಲ.   ಉಪ್ಪಿನಲ್ಲಿ ಹಾಕಿಟ್ಟ ಮಾವಿನಕಾಯಿಗಳನ್ನೂ ಇಂತಹ ಅಡುಗೆಯಲ್ಲಿ ಬಳಸಬಹುದಾಗಿದೆ.