Pages

Ads 468x60px

Saturday 30 November 2013

ಅಂಬಟೆ, ಸಿಹಿಯುಂಟೇ....







ನಮ್ಮತ್ತಿಗೆ ಬಂದಿದ್ರು,   ಊಟದ ಹೊತ್ತಿಗೇ ಬಂದಿಳಿದರು.   ನನ್ನ ಅಡುಗೆಯಲ್ಲಿ ವಿಶೇಷವೇನೂ ಇರಲಿಲ್ಲವಾಗಿ,   ಬೇಗನೆ ಹಿತ್ತಿಲಿಗೆ ಹೋಗಿ ಅಂಬಟೆಮರದ ಅಕ್ಕಪಕ್ಕ ಹುಡುಕಿ,  ಚೆನ್ನಾಗಿಯೇ ಇದ್ದ ನಾಲ್ಕು ಹಣ್ಣಾದ ಅಂಬಟೆಗಳನ್ನು ಹೆಕ್ಕಿ ತಂದು ದಿಢೀರನೆ ಅಂಬಟೆ ಗೊಜ್ಜು + ಸಾರು ತಯಾರಿಸಿಯೇ ಬಿಟ್ಟೆ.   ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ,  ಅಂಬಟೆಯ ಆತಿಥ್ಯದಿಂದ ಸುಪ್ರೀತರಾದ ನಮ್ಮತ್ತಿಗೆ   " ಅಂಬಟೆ ಉಪ್ಪಿನಕಾಯಿ ಹಾಕಿಲ್ಲವೇ "  ಕೇಳಿದ್ರು.

" ಇನ್ನೂ ಹಾಕಿಲ್ಲ,  ಇದು ಈಗ ಹಣ್ಣಾಯ್ತಲ್ಲ,  ಮೊದಲೇ ಹಾಕಬೇಕಿತ್ತು,  ಮರದಿಂದ ಕೊಯ್ದು ಕೊಡಲು ಯಾರಾದ್ರೂ ಬೇಕಲ್ಲ "  ಗೊಣಗಿದೆ.

" ಅಂಬಟೆಮರ ಹತ್ತಲು ಯಾರೂ ಒಪ್ಪುವುದಿಲ್ಲ,  ತುಂಬಾ ಮೆತ್ತಗಿನ ಮರ ಅದು "  ಅಂದರು ಅತ್ತಿಗೆ.  " ಹೌದೂ,  ತೋಟದಲ್ಲಿ ಇನ್ನೂ ಇದೆಯಲ್ಲ ಅಂಬಟೆಮರಗಳು..... ಅಲ್ಲಿ ಹೋಗಿ ನೋಡಿದ್ದೀಯಾ "  ತನಿಖೆ ಸುರು ಆಯ್ತು.

" ಇಲ್ಲಾಪ್ಪ,  ಅಲ್ಲಿ ಇಲ್ಲಿ ಹೋಗಿ ನಾನ್ಯಾಕೆ ನೋಡಲಿ,  ಮನೆ ಬಾಗಿಲಲ್ಲೇ ಇರೂವಾಗ "

" ಹಾಗಿದ್ರೆ ತೋಟದಲ್ಲಿ ಇದ್ಯಾ ಅಂತ ನಾನೇ ನೋಡ್ಕಂಡ್ಬರ್ತೇನೆ .... ದೋಟಿ,  ಕೊಕ್ಕೆ ಎಲ್ಲಿದೆ ? "  ಕೇಳುತ್ತಾ ಅತ್ತಿಗೆ ಉದ್ದನೆಯ ಕೋಲು ಸಂಪಾದಿಸಿ,  ಕೈಲೊಂದು ಪ್ಲಾಸ್ಟಿಕ್ ಚೀಲದೊಂದಿಗೆ ತೋಟಕ್ಕೆ ಹೋದರು.

ಬರುತ್ತಾ ಚೀಲ ತುಂಬಾ ಅಂಬಟೆಕಾಯಿಗಳು ಬಂದುವು.   " ಇದು ನಿಂಗೆ ಹೇಗೂ ಬೇಡ ತಾನೇ,  ನಾನೇ ಉಪ್ಪಿನಕಾಯಿ ಹಾಕಿಕೊಳ್ಳುತ್ತೇನೆ "  ಮಾರನೇದಿನ ಪುತ್ತೂರಿಗೆ ಹೋಗುವ ಏಳು ಗಂಟೆಯ ಬಸ್ಸಿನಲ್ಲಿ ಅಂಬಟೆಗಳೂ ಹೋದುವು.

ಇನ್ನೊಮ್ಮೆ ಭೇಟಿ ಆದಾಗ,   " ಅದೆಂಥ ಕರ್ಮದ ಅಂಬಟೆಕಾಯಿ.... ಎಲ್ಲ ಕೈಪ್ಪೆ ( ಕಹಿ ) ಆಯ್ತಲ್ಲ,   ಅಷ್ಟೂ ಸಾಸಿವೆ,  ಮೆಣಸು ಅರೆದು ಮಾಡಿದ ಉಪ್ಪಿನಕಾಯಿ ದಂಡ ಆಯ್ತು,   ತೆಂಗಿನಮರದ ಬುಡಕ್ಕೆ ಚೆಲ್ಲಿದ್ದು ಗೊತ್ತಾ "  ಅನ್ನೋದೇ ನಮ್ಮತ್ತಿಗೆ.

" ಮೆಂತ್ಯ ಹಾಕಿದ್ದು ಜಾಸ್ತಿ ಆಯ್ತೋ ಏನೋ "  ಅಂದೆ ಮೆಲ್ಲಗೆ.

" ಏನೂ ಅಲ್ಲ,  ಮಾಮೂಲಿಯಾಗಿ ಮಾಡಿದ್ದು,   ಆ ಅಂಬಟೆಯೇ ಕಹಿ,  ಬರೀ ಸಿಪ್ಪೆ ಗೊರಟು "

" ಹೌದೇ,  ಅಂಬಟೆಯಲ್ಲೂ ಕಹಿ ಜಾತಿ ಇದೆಯಾ ? " ಆವಾಗ ನನಗೂ ಗೊತ್ತಿರಲಿಲ್ಲ.

                                               
      <><><>   <><><>


‘Spondias pinnata’   (spondias mangifera)  ಎಂಬ ವೈಜ್ಞಾನಿಕ ಹೆಸರನ್ನು ಹೊಂದಿರುವ ಅಂಬಟೆ, ತಮಿಳಿನಲ್ಲಿ ಪುಳಿಚ್ಚ ಕ್ಕಾಯ್ ಅನಿಸಿಕೊಂಡಿದೆ ಹಾಗೂ Anacardiaceae ಕುಟುಂಬಕ್ಕೆ ಸೇರಿದೆ.   ಇದರಲ್ಲಿ ಸಿಹಿ ವರ್ಗವೂ ಇದೆ,  ಜನಸಾಮಾನ್ಯರ ಬಾಯಿಯಲ್ಲಿ ಕಸಿ ಅಂಬಟೆಯಾಗಿರುವ ಈ ಪ್ರಬೇಧ ವೈಜ್ಞಾನಿಕವಾಗಿ spondias dulcis’ ಆಗಿರುತ್ತದೆ.    ಹಿಂದೂ ಪಂಚಾಂಗ ರೀತ್ಯಾ 27 ನಕ್ಷತ್ರಗಳಿವೆಯಷ್ಟೆ,   ನಕ್ಷತ್ರ ಪ್ರಕರಣದಲ್ಲಿ ಒಂದೊಂದು ವೃಕ್ಷವನ್ನು ಒಂದೊಂದು ನಕ್ಷತ್ರದೊಂದಿಗೆ ಸಮೀಕರಿಸಿರುವುದನ್ನು ಕಾಣಬಹುದು.   ಇಂತಹ ವೃಕ್ಷಗಳ ಪಟ್ಟಿಯಲ್ಲಿ ಅಂಬಟೆಯೂ ಇದೆ.   ಸಿಹಿ ಅಂಬಟೆಯನ್ನು ಸಂಸ್ಕೃತದಲ್ಲಿ ಮಧುರಾಮ್ಲಕ, ಅಂಬಸ್ಟ,  ಆಮ್ರೋಥಕ  ಎಂದು ವರ್ಣಿಸಲಾಗಿದೆ,     ಅಲ್ಲಿಗೆ ಅಂಬಟೆ ಮರವೂ ಭಾರತ ಮೂಲದ ಸಸ್ಯವರ್ಗಗಳಲ್ಲೊಂದು ಎಂದಾಯಿತು.   ಆಂಗ್ಲ ಭಾಷೆಯಲ್ಲಿ Indian hog plum ಎಂದೇ ಇದಕ್ಕೆ ಹೆಸರು.

ಎಲೆ ಹಾಗೂ ಕಾಂಡದ ತೊಗಟೆ ಸುವಾಸನಾಭರಿತವಾಗಿದ್ದು ಇದರ ರಸಸಾರವು ಕನರು ( ಚೊಗರು ) ಗುಣ ಹೊಂದಿದೆ ಹಾಗೂ ತೊಗಟೆಯ ಕಷಾಯ ಅತಿಸಾರ ವ್ಯಾಧಿಯಲ್ಲಿ ಬಳಕೆಯಲ್ಲಿದೆ.  ಸ್ತ್ರೀಯರಲ್ಲಿ ಸಾಮಾನ್ಯವಾಗಿರುವ ಬಿಳಿಸೆರಗಿನ ದೋಷಕ್ಕೆ ಎಲೆಗಳ ಕಷಾಯ ಔಷಧಿ.  ಸಂಧಿವಾತದಿಂದ ಬಳಲುತ್ತಿರುವವರಿಗೆ ಎಳೆಯ ಅಂಬಟೆಕಾಯಿಗಳ ಸೇವನೆ ಗುಣಕಾರಿ ಹಾಗೂ ರಕ್ತಗುಣಾಭಿವೃದ್ಧಿಕಾರಕ.   ಆಯುರ್ವೇದದಲ್ಲಿ ಇದರ ಎಲೆ, ಬೇರು, ತೊಗಟೆಗಳನ್ನು ವ್ಯಾಧಿ ನಿವಾರಕವಾಗಿ ಇನ್ನಿತರ ನಾರುಬೇರುಗಳ ಸಂಯೋಜನೆಯೊಂದಿಗೆ ಬಳಸಲಾಗುತ್ತಿದೆ.

ಪ್ರತಿ 100ಗ್ರಾಂ ಖಾದ್ಯಯೋಗ್ಯವಾದ ಅಂಬಟೆಯ ತಿರುಳಿನಲ್ಲಿ ಪ್ರತಿಶತ 46.0 k ಕ್ಯಾಲೋರಿಗಳಷ್ಟು ಶಕ್ತಿ,   ಪ್ರೊಟೀನ್ .2 ಗ್ರಾಂ,  ಕೊಬ್ಬು .1 ಗ್ರಾಂ,   ಕಾರ್ಬೋಹೈಡ್ರೇಟ್ಸ್ 12.4 ಗ್ರಾಂ,  ಕ್ಯಾಲ್ಸಿಯಂ 56.0 ಮಿ.ಗ್ರಾಂ,   ಫಾಸ್ಫರಸ್ 67.0 ಮಿ.ಗ್ರಾಂ,   ಕಬ್ಬಿಣ .3 ಮಿ.ಗ್ರಾಂ,  ವಿಟಮಿನ್ ಸಿ  36.0 ಮಿ.ಗ್ರಾಂ ಹಾಗೂ ಅಲ್ಪ ಪ್ರಮಾಣದಲ್ಲಿ ಕೆರೋಟಿನ್,  ಥಯಾಮಿನ್,  ರಿಬೋಫ್ಲವಿನ್ ಗಳು ಅಡಕವಾಗಿವೆ.

ಶರತ್ಕಾಲದಲ್ಲಿ ಎಲೆಗಳನ್ನೆಲ್ಲ ಉದುರಿಸಿ ಬೋಳಾಗಿ ನಿಲ್ಲುವ ಈ ಮರ,  ವಸಂತ ಮಾಸ ಬಂದೊಡನೆ ಹೂಗೊಂಚಲುಗಳಿಂದ ತುಂಬಿ ಬಿಡುತ್ತದೆ.   ಹೂವರಳಿದ ಬೆನ್ನಿಗೇ ಎಲೆಗಳೂ ತಾನಾಗಿಯೇ ಮೂಡಿ ಹಚ್ಚಹಸಿರಿನಲ್ಲಿ ಕಂಗೊಳಿಸುವ ಹೊತ್ತಿಗೆ ಹೂಗಳು ಮಿಡಿಕಾಯಿಗಳಾಗಿರುತ್ತವೆ.   ಇನ್ನೂ ಗೊರಟು ಕಟ್ಟಿಲ್ಲದ ನೆಲ್ಲಿಕಾಯಿ ಗಾತ್ರದ ಮಿಡಿಗಳನ್ನು ಮಾವಿನಮಿಡಿಯ ತರಹ ಉಪ್ಪಿನಕಾಯಿ ಹಾಕಬಹುದು.

ಅಂಬಟೆ ಮಿಡಿ ಎಂದೊಡನೆ ಒಂದು ಹಳೆಯ ಸಂಗತಿ ನೆನಪಿಗೆ ಬಂದಿತು.   ಅದೇನಾಯ್ತೂಂದ್ರೆ ಮಾವಿನಮಿಡಿ ಉಪ್ಪಿನಕಾಯಿ ಹಾಕಿ ಆಗಿತ್ತು.   ಯಥಾಪ್ರಕಾರ ಅಂಬಟೆ ಹೂ ಬಿಟ್ಟಿತು,   ಎಲೆಗಳೂ ತುಂಬಿದ ಮರದ ಒಂದು ಗೆಲ್ಲು ಮಳೆಗಾಲದ ಆರಂಭದ ದಿನಗಳಲ್ಲಿ ಗಾಳಿಯ ಹೊಡೆತಕ್ಕೆ ಬಿತ್ತು.   ಆಗ ಜಾನುವಾರುಗಳೂ ಇದ್ದಿದ್ದರಿಂದ  " ಈ ಸೊಪ್ಪು ಕತ್ತರಿಸಿ ಹಟ್ಟಿಗೆ ಹಾಕು "  ಎಂದು ಕೆಲಸದಾಕೆ ಕಲ್ಯಾಣಿಗೆ ಹೇಳಿ ಬಿಟ್ಟು ಮನೆಯೊಳಗಿನ ಕೆಲಸಕಾರ್ಯಗಳಿಗೆ ಹೋದೆ.   ಅವಳೂ ಪರಮಾನಂದದಿಂದ ಸೊಪ್ಪು ಕತ್ತರಿಸಲಾರಂಭಿಸಿದಳು.   ಯಾಕೋ ನನ್ನ ಬಿಡುವಾದಾಗ ಬಂದು ನೊಡಿದ್ರೆ ಅಂಬಟೆ ಮಿಡಿಗಳನ್ನು ಸಂಗ್ರಹಿಸುವ ಕಾಯಕದಲ್ಲಿ ಅವಳು ನಿರತಳಾಗಿದ್ದಳು.   " ಹಟ್ಟಿಗೆ ಸೊಪ್ಪು ಹಾಕಿ ಆಯ್ತೇ "  ಕೇಳುತ್ತಾ ಬಂದಾಗ ಅವಳು   " ಈ ಅಂಬಟೆಕಾಯಿ ನಿಮಗೆ ಬೇಡ ಅಲ್ವೇ ಅಕ್ಕಾ,   ಮಾವಿನಮಿಡಿ ಹಾಕಾಗಿದೆ,   ಇದು ಕಂಡಾಬಟ್ಟೆ ಉಷ್ಣ... ನಾನು ಕೊಂಡ್ಹೋಗ್ಲಾ "  ಅಂದಳು.

" ಸ್ವಲ್ಪ ನಂಗೂ ಇರಲಿ,  ಈ ಮಿಡಿ ಹೇಗೇಂತ ನೋಡಿದ ಹಾಗೂ ಆಯ್ತು "  ಅಂತಂದು ಅವಳ ಮಿಡಿ ಸಂಗ್ರಹವನ್ನು ಅಡುಗೆಮನೆಗೆ ಸಾಗಿಸಿದೆ.   ಹೇಗೂ ಮಾವಿನ ಮಿಡಿಗೆ ಮಾಡಿದ್ದ ಮಸಾಲೆ ಮಿಕ್ಕಿದ್ದು ಇತ್ತು.  ಅದನ್ನೇ ಬೆರೆಸಿ ಅಂಬಟೆ ಉಪ್ಪಿನಕಾಯಿ ತಯಾರಾಯಿತು.   

ಗಾಜಿನ ಭರಣಿಯಲ್ಲಿ 100 ಅಂಬಟೆಮಿಡಿಗಳನ್ನು 3 ಕಪ್ ಹರಳುಪ್ಪು ಬೆರೆಸಿ ಇಟ್ಟು 2 -3 ದಿನ ಆಗುತ್ತಲೇ ಒಣ ಸೌಟಿನಲ್ಲಿ ಕೈಯಾಡಿಸಿ.
ವಾರದೊಳಗೆ ಈ ಮಿಡಿಯೂ ಮಾವಿನ ಮಿಡಿಯಂತೆ ಉಪ್ಪೆಳೆದು ಹಸಿರು ಬಣ್ಣದಿಂದ ಮಾಸಲು ವರ್ಣಕ್ಕೆ ತಿರುಗಿತೇ,  ಈ ಹಂತದಲ್ಲಿ ಮಸಾಲೆ ಅರೆದು ಹಾಕಿರಿ.

3 ಕಪ್ ಸಾಸಿವೆ ಹುಡಿ
1 ಕಪ್ ಮೆಣಸಿನ ಹುಡಿ
2 ಟೀ ಸ್ಪೂನ್ ಅರಸಿನ
ಇಂಗು ಸುವಾಸನೆಗೆ ತಕ್ಕಷ್ಟು
1 ಕಪ್ ಪುಡಿಯುಪ್ಪು

ಮಿಡಿಗಳನ್ನು ಉಪ್ಪಿನಿಂದ ತೆಗೆದು ಬಟ್ಟೆಯಲ್ಲಿ ಅಥವಾ ಬುಟ್ಟಿಯಲ್ಲಿ ಹರಡಿ ಇಡಿ.
ಭರಣಿಯ ಉಪ್ಪುನೀರನ್ನು ಜಾಲರಿಯಲ್ಲಿ ಸೋಸಿ ಇಟ್ಟುಕೊಳ್ಳಿ.   
ಸಾಸಿವೆ ಹುಡಿಯನ್ನು ಈ ಉಪ್ಪುನೀರಿನಲ್ಲಿ ಮಿಕ್ಸೀ ಉಪಯೋಗಿಸಿ ಅರೆಯಿರಿ.
ಜಾರ್ ಶುಭ್ರವಾಗಿಯೂ,  ತೇವರಹಿತವೂ ಆಗಿರಬೇಕು.  ನುಣ್ಣಗಾದ ಸಾಸಿವೆಗೆ ಮೆಣಸಿನ ಹುಡಿ,  ಅರಶಿನ ಸೇರಿಸಿ ಇನ್ನೊಮ್ಮೆ ಅರೆದಾಗ ಉಪ್ಪಿನಕಾಯಿ ಮಸಾಲೆ ಸಿದ್ಧ.

ಬಟ್ಟೆಯಲ್ಲಿ ಹರಡಿದ ಅಂಬಟೆಮಿಡಿಗಳನ್ನು ಪರಿಶೀಲಿಸಿ, ( ಕೆಟ್ಟು ಹೋದ ಮಿಡಿಗಳು ಬೇಡ,  ತುಂಬಾ ಮೆತ್ತಗಾಗಿದ್ದೂ ಬೇಡ ) ಭರಣಿಗೆ ಹಾಕಿ ಮೇಲಿನಿಂದ ಮಾಡಿಟ್ಟ ಮಸಾಲೆಯನ್ನು ಸೌಟಿನಲ್ಲಿ ಎರೆಯುತ್ತಾ ಬನ್ನಿ.  ಮಸಾಲೆ ಇಡ್ಲಿ ಹಿಟ್ಟಿನ ದಪ್ಪ ಇರಬೇಕು.  ಮರದ ಸೌಟಿನಲ್ಲಿ ಒತ್ತಿ ಒತ್ತಿ ತುಂಬಿಸಿ.  ಮೇಲೆ ಒಂದು ಸೌಟು ಪುಡಿಯುಪ್ಪು ಹರಡಿ,  ತೆಳ್ಳಗಿನ ಪ್ಲಾಸ್ಟಿಕ್ ಹಾಳೆ ಮುಚ್ಚಿ  ( ಪ್ಲಾಸ್ಟಿಕ್ ಇಲ್ಲದ ಕಾಲದಲ್ಲಿ ತೆಳ್ಳಗಿನ ಬಟ್ಟೆ ಮುಚ್ಚುವ ಪದ್ಧತಿ ಇತ್ತು ) ಭರಣಿಯ ಬಾಯಿ ಬಿಗಿದು ಇಟ್ಟುಕೊಳ್ಳಿ.   ಇದನ್ನು ಕೂಡಲೇ ಉಪಯೋಗಿಸಬಹುದು.  ಮಿಡಿಯನ್ನು ಎರಡು ಅಥವಾ ಮೂರು ತುಂಡು ಮಾಡಿಕೊಂಡರಾಯಿತು.   ಮಾವಿನ ಮಿಡಿಗೂ ಇದೇ ವಿಧಾನ.   ಆದರೆ ಇದನ್ನು ಮಾವಿನ ಮಿಡಿಯಂತೆ ಧೀರ್ಘಕಾಲ ಇಟ್ಟುಕೊಳ್ಳಲು ಬರುವುದಿಲ್ಲ,  ಹೆಚ್ಚೆಂದರೆ ಒಂದು ತಿಂಗಳಿಗೆ ಚೆನ್ನಾಗಿರುತ್ತದೆ.




ಬಲಿತ ಅಂಬಟೆ ನಾರು ಹಾಗೂ ಗೊರಟು ಕಟ್ಟಿರುತ್ತದೆ, ಇದನ್ನೂ ಉಪ್ಪಿನಕಾಯಿ ಹಾಕಲು ಸಾಧ್ಯವಿದೆ.   ಅಂಬಟೆಯ ಮಾಂಸಲ ಭಾಗವನ್ನು ನಾರಿರುವ ಗೊರಟಿನ ಅಂಶವೂ ಬರುವಂತೆ ಕತ್ತಿಯಲ್ಲಿ ಕತ್ತರಿಸಿ.   ಪುಡಿಯುಪ್ಪು ಬೆರೆಸಿ. ಹಿಂದೆ ಹೇಳಿದ ವಿಧಾನದಲ್ಲಿ ಮಸಾಲೆ ಹಾಕಿದರಾಯಿತು.

ಮಸಾಲೆ ಅರೆಯಲು ಉಪ್ಪು ನೀರು ಮಾಡುವ ವಿಧಾನ:
1 ಕಪ್ ಹರಳುಪ್ಪು
3 ಕಪ್ ನೀರು
ಚೆನ್ನಾಗಿ ಕುದಿಸಿ,  ತಣಿದ ನಂತರ ಉಪಯೋಗಿಸಿ.

ಅಂಬಟೆಯನ್ನು ಗುಂಡುಕಲ್ಲಿನಲ್ಲಿ ಜಜ್ಜಿಕೊಂಡು ಗೊರಟು ಬೇರ್ಪಡಿಸಬಹುದು.   ಉಪ್ಪು ಬೆರೆಸಿಟ್ಟು ಹಬೆಯಲ್ಲಿ ಕುದಿಸಿ,  ಹುರಿದ ಮಸಾಲೆ ಉಪ್ಪಿನಕಾಯಿ ಹುಡಿ ಹಾಕುವ ರೂಢಿಯೂ ಇದೆ.   ಮಾರ್ಕೆಟ್ ನಲ್ಲಿ ತರಹೇವಾರಿ ಹುಡಿಗಳು ಸಿಗುತ್ತವೆ,  ಬೇಕಿದ್ದರೆ ಸಾಸಿವೆ ಹುರಿದು ಹುಡಿ ಮಾಡಿ ಸೇರಿಸಿದರಾಯಿತು.

ಜೂನ್ ತಿಂಗಳಲ್ಲಿ ಆರಂಭವಾಗುವ ಅಂಬಟೆ ಬೆಳೆ,  ಡಿಸೆಂಬರ್ ಅಂತ್ಯದವರೆಗೆ ವಿಧ ವಿಧವಾದ ಹಂತಗಳಲ್ಲಿ ಲಭ್ಯ. ಅಡುಗೆಯಲ್ಲಿ ವೈವಿಧ್ಯವನ್ನು ತರಲು ಸಹಕಾರಿ.





ಅಂಬಟೆ ಚಟ್ನಿ: 
ಕತ್ತರಿಸಿದ ಅಂಬಟೆ ಚೂರುಗಳು
ಒಂದೆಲಗದ ಎಲೆಗಳು
ತೆಂಗಿನತುರಿ,  ಹಸಿಮೆಣಸು
ರುಚೆಗೆ ಉಪ್ಪು
ಎಲ್ಲವನ್ನೂ ಅರೆದು ಒಗ್ಗರಣೆ ಕೊಟ್ಟರಾಯಿತು.

ಅಂಬಟೆ ತೊಕ್ಕು:
1 ಕಪ್ ಅಂಬಟೆ ಚೂರುಗಳು
2 ಚಮಚ ಸಾಸಿವೆ,  4-5 ಒಣಮೆಣಸು,  ಇಂಗು ಸ್ವಲ್ಪ ಹುರಿಯಿರಿ,  ಹುಡಿ ಮಾಡಿ.
ಅಂಬಟೆ ಚೂರುಗಳನ್ನೂ ಅರೆದು ಇಡಿ.
ಬಾಣಲೆಯಲ್ಲಿ 2 ಚಮಚ ಎಣ್ಣೆ ಬಿಸಿಗಿಟ್ಟು,  ಅರೆದ ಅಂಬಟೆ,  ಮಸಾಲೆ ಹಾಗೂ 3 ಚಮಚ ಪುಡಿಯುಪ್ಪು ಹಾಕಿ ಸೌಟಿನಲ್ಲಿ ಮಿಶ್ರಗೊಳಿಸಿ,  ಎರಡು ನಿಮಿಷ ಬಿಟ್ಟು ಕೆಳಗಿಳಿಸಿ.  ಆರಿದ ನಂತರ ಜಾಡಿಯಲ್ಲಿ ತುಂಬಿಸಿಟ್ಟು ಉಪಯೋಗಿಸಿ.

ಹಣ್ಣಂಬಟೆಯ ಸಾರು:
ಬೇಕಿದ್ದಷ್ಟು ಹಣ್ಣಂಬಟೆಗಳು
ಬೆಲ್ಲ,  ಉಪ್ಪು ಹಾಗೂ ಒಗ್ಗರಣೆ ಸಾಮಗ್ರಿಗಳು
ಅಂಬಟೆಗಳನ್ನು ಚೆನ್ನಾಗಿ ತೊಳೆದು,  ತೊಟ್ಟು ಹಾಗೂ ತುದಿ ಕತ್ತರಿಸಿ.   
ಅವಶ್ಯಕತೆಯಿದ್ದಷ್ಟು ನೀರೆರೆದು,  ಉಪ್ಪು ಬೆಲ್ಲದೊಂದಿಗೆ ಕುದಿಸಿ.
ಇಂಗು ಹಾಗೂ ಬೇವಿನ ಒಗ್ಗರಣೆ ಕೊಡಿ


.

Posted via DraftCraft app


ಟಿಪ್ಪಣಿ: 30/11/2015 ರಂದು ಮುಂದುವರಿಸಿ ಬರೆದದ್ದು.


ಯಥಾಪ್ರಕಾರ ಅಂಬಟೆ ಬಲಿತು ಬೀಳಲು ಪ್ರಾರಂಭವಾಗಿದೆ.  ಚೆನ್ನಪ್ಪನೇನೋ ಕೊಯ್ದು ಕೊಡಲು ಸಿದ್ಧನಿದ್ದಾನೆ.  ನಾನು ಹೂಂಗುಟ್ಟಿಲ್ಲ ಅಷ್ಟೇ. ದಿನಾ ಬಿದ್ದು ಸಿಗುವಾಗ,  ಒಂದೇ ಬಾರಿ ಕೊಯ್ದು ಹಾಕಿದ್ದರಲ್ಲಿ ಲಾಭವೇನು?  ಅಡುಗೆಯ ಆನಂದವನ್ನು ಹೆಚ್ಚಿಸುವ ಅಂಬಟೆಯನ್ನು ಕಳೆದುಕೊಳ್ಳಲು ನಾನು ಸಿದ್ಧಳಿಲ್ಲ. 
ಅಂಗಳದಲ್ಲಿ ಬದನೆಯ ಸಾಲು,  ಹಿತ್ತಲಲ್ಲಿ ಹರಿವೆ ದಂಟು ಇರಲು, ಮರದಿಂದ ಅಂಬಟೆ ಉದುರುತ್ತಿರಲು,  ಏನು ಈ ದಿನದ ಕೊದ್ದೆಲು ಎಂಬ ಚಿಂತೆಯಿಲ್ಲದಿರಲು.... ಬಂದಿದೆ ನೋಡಿ ಅಂಬಟೆ ಕೊದ್ದೆಲ್

" ಹೌದಾ, ಅಂಬಟೆ ಕೊದ್ದೆಲ್ ಹೇಗೆ ಮಾಡಿದ್ದೂ ?"
ಬದನೇಕಾಯಿಯನ್ನು ಸಮಗಾತ್ರದಲ್ಲಿ ಕತ್ತರಿಸಿ ನೀರಿನಲ್ಲಿ ಹಾಕಿಡುವುದು.
ಹರಿವೇ ದಂಟನ್ನು ಕತ್ತರಿಸಿ,  ಸೊಪ್ಪು ಚೆನ್ನಾಗಿದ್ದರೆ ಮಾತ್ರ ಉಪಯೋಗಿಸಿ.
2-3 ಅಂಬಟೆಗಳನ್ನು ಚೆನ್ನಾಗಿ ತೊಳೆದು ಚೂರಿಯಲ್ಲಿ ಗೀರು ಹಾಕಿಡುವುದು,  ಸಾಧ್ಯವಿದ್ದರೆ ತುಂಡು ಮಾಡಬಹುದು.

ಒಂದು ಹಿಡಿ ತೊಗರಿಬೇಳೆ ಬೇಯಿಸುವುದು.
ತರಕಾರಿಗಳಿಗೆ ಉಪ್ಪು ಕೂಡಿ ಬೇಯಿಸುವುದು.

ಒಂದು ಕಡಿ ಅಥವಾ ಇದ್ದ ಹಾಗೆ, ತೆಂಗಿನತುರಿ.
4-6 ಒಣಮೆಣಸು,  ಖಾರ ಬೇಕಿದ್ದರೆ ಜಾಸ್ತಿ ಹಾಕಿಕೊಳ್ಳುವುದು.
2 ದೊಡ್ಡ ಚಮಚ ಕೊತ್ತಂಬ್ರಿ
1 ಚಮಚ ಉದ್ದಿನಬೇಳೆ
ತಲಾ ಒಂದು ಚಿಕ್ಕ ಚಮಚ ಜೀರಿಗೆ, ಮೆಂತೆ
ಕಡ್ಲೆಕಾಳಿನಷ್ಟು ಇಂಗು
ಮಸಾಲಾ ಸಾಮಗ್ರಿಗಳನ್ನು ಎಣ್ಣೆಪಸೆಯಲ್ಲಿ ಹುರಿಯುವುದು,  ಒಂದೆಸಳು ಕರಿಬೇವು ಬೀಳಲಿ.

ಆಯ್ತೇ,  ಈಗ ಕಾಯಿತುರಿಯೊಂದಿಗೆ ಅರೆಯಿರಿ,  ಅರೆಯುವಾಗ ಅಗತ್ಯವೆನಿಸಿದರೆ ಹುಣಸೇಹುಳಿ ಹಾಕಬಹುದು,   ಬೆಂದಾಗ ಅಂಬಟೆಯೂ ಹುಳಿಯಾಗುತ್ತದೆ,  ಹಾಗಾಗಿ ಈ ಹೊತ್ತು ಹುಣಸೇಹುಳಿ ಬೇಡ.

 ಬೆಂದ ಬೇಳೆ, ತರಕಾರಿಗಳಿಗೆ ತೆಂಗಿನಕಾಯಿ ಅರಪ್ಪು ಕೂಡಿಸಿ,  ರುಚಿಗೆ ಉಪ್ಪು, ಬೆಲ್ಲದೊಂದಿಗೆ ಕುದಿಸುವುದು,  ಒಗ್ಗರಣೆ ಮರೆಯಲಿಕ್ಕುಂಟೇ....



Sunday 17 November 2013

ಗುಹಾ ಭವನವಿದೋ.... ಕಲ್ಲಿನ ಗುಹೆಯಿದೋ....




ನಮ್ಮ ನೆರೆಯಲ್ಲಿಯೇ ಇರುವ ತಲೆಂಗಳದ ಅತ್ತಿಗೆ ಮನೆಗೆ ಹೋಗಿದ್ದೆವು.   ನಾವೂ ಹೋಗುತ್ತಿರುತ್ತೇವೆ,  ಅವರೂ ಬರುತ್ತಿರುತ್ತಾರೆ,   ಇದರಲ್ಲೇನೂ ಹೊಸತಿಲ್ಲ ಬಿಡಿ.   ಮನೆಗೆ ಹೋಗಿದ್ವಲ್ಲ,   ಆಸರಿಗೆ ಕುಡಿದಾಯ್ತು,   ದೇವರಕೋಣೆಯೊಳಗೆ ಶ್ರಾದ್ಧಾದಿ ಕ್ರಿಯೆಗಳು ಆಗುತ್ತಾ ಇದ್ದಂತೆ,  ಸುಧರಿಕೆ ಮಾಡುವುದಿದೆಯೋ ಎಂದು ಒಮ್ಮೆ ಅವಲೋಕಿಸಿ,  ಮನೆಯ ಹೊರ ಅಂಗಳಕ್ಕೆ ಇಳಿದಾಯ್ತು.  
 
ಅಂಗಳದ ಕಾಟಂಗೋಟಿ ಹುಲ್ಲುಸಸ್ಯಗಳನ್ನೆಲ್ಲ ಕಿತ್ತು ಅಡಿಕೆ ಒಣಗಲು ಹರಡುವ ಅಂಗಳ ಸಿದ್ಧವಾಗಿದೆ.   ಒಂದು ಮೂಲೆಯಲ್ಲಿ ಹರಿವೇ ಕಳ,  ಬಣ್ಣಬಣ್ಣದ ಹರಿವೆಗಳಿಂದ ಕಂಗೊಳಿಸುತ್ತಿದೆ.   ಮನೆಯ ಒಂದು ಪಕ್ಕ ಮೇಲ್ನೋಟಕ್ಕೆ ಗೋಡೆಯಂತೆ ಕಾಣಿಸುವ ಪ್ರಾಕೃತಿಕ ಮುರಕಲ್ಲಿನ ದರೆ,   ವೀಳ್ಯದೆಲೆಯ ಬಳ್ಳಿ ಈ ಗೋಡೆಯೇರಿ ಆಕಾಶವೇರಲು ಸಿದ್ಧವಾಗಿದೆ.   ಅದರ ಪಕ್ಕದಲ್ಲೇ ನೆಟ್ಟು ನಾಲ್ಕು ದಿನವಾಗಿರಬಹುದಾದ ಬಸಳೇ ಬಳ್ಳಿ,   ಅದರಾಚೆಗೆ ತೊಂಡೆ ಬಳ್ಳಿ ಮೇಲೆ ಹೋಗಿ ಹಬ್ಬಿದೆ.   ಓಹ್,  ಇಲ್ಲೊಂದು ಕಲ್ಲಿನ ಗೂಡು ಇದೆ.... ಮೊದಲೇ ಇದೆ,  ನಾನೇನೂ ಹೊಸತಾಗಿ ಕಂಡಿದ್ದಲ್ಲ.   ಆದರೆ  ಕಂಡದ್ದು ಕ್ಯಾಮರಾ ಕಣ್ಣು .....






ಇದೇನು ಆದಿಮಾನವನ ಗುಹೆಯೇ,   ಅರೇಬಿಯನ್ ನೈಟ್ಸ್ ಕಥೆಯ ಆಲೀಬಾಬಾ ನಲ್ವತ್ತು ಕಳ್ಳರ  ಗುಹೆಯೇ ಎಂದು ಹುಬ್ಬೇರಿಸಬೇಕಾಗಿಲ್ಲ.   ನಮ್ಮ ಪೂರ್ವಿಕರು ನಿರ್ಮಿಸಿಕೊಂಡಂತಹ ಒಂದು ದಾಸ್ತಾನು ಉಗ್ರಾಣ ಎಂದೇ ಹೇಳಬಹುದು.   ಮನೆಯ ಹೊರಾಂಗಣದಲ್ಲೇ ಇಡಬೇಕಾಗಿರುವ ನಿತ್ಯೂಪಯೋಗಿ ವಸ್ತುಗಳಿರುತ್ತವೆ.  ಉಪ್ಪು ಅವುಗಳಲ್ಲಿ ಒಂದು.   ಆ ಕಾಲದಲ್ಲಿ ಅಯೋಡೈಸ್ಡ್ ಉಪ್ಪು,  ಟೇಬಲ್ ಸಾಲ್ಟ್ ಇತ್ಯಾದಿ ವರ್ಗೀಕರಣ ಇರಲಿಲ್ಲ ಕಣ್ರೀ,  ಏಕಮೇವ ಕಲ್ಲುಪ್ಪು ಅಥವಾ ಹರಳುಪ್ಪು,  ಇದ್ಯಾವುದೂ ಬೇಡ ಬಿಡಿ,  ಗಾಂಧೀತಾತನ ಉಪ್ಪು ಅಂದ್ರೆ ಎಲ್ಲರಿಗೂ ಅರ್ಥವಾದೀತು.  ದಿನನಿತ್ಯ ಶಾಪಿಂಗ್ ಮಾಡುವ  ಕಾಲ ಅದಲ್ಲ.   ಎಲ್ಲಿಗೇ ಹೋಗಬೇಕಾಗಿದ್ದರೂ ಕಾಲುನಡಿಗೆಯ ಪಯಣ,  ತಲೆಹೊರೆಯ ಸಾಗಾಟ.    ಎತ್ತಿನಗಾಡಿ ಇದ್ದಂತಹ ಮನೆಗಳೂ ಇದ್ದವು,  ಅಂತಹ ಮನೆಯೊಡೆಯ ಬಹು ಧನಿಕನೆಂದೇ ಲೆಕ್ಕ.  ಒಮ್ಮೆ ತಂದ ಮಾಲು ಕನಿಷ್ಠ ಆರು ತಿಂಗಳಾದರೂ ಇಟ್ಟುಕೊಳ್ಳುವ ವ್ಯವಸ್ಥೆ ಇರಬೇಕು.   ಮಳೆಗಾಲದಲ್ಲಿ ತಿರುಗಾಟ ಹೇಗೂ ಸಾಧ್ಯವಾಗುವುದಿಲ್ಲ.

ಉಪ್ಪು ಮನೆಯ ಅಡುಗೆಕಾರ್ಯಗಳಿಗೆ ಮಾತ್ರವಲ್ಲ,  ಜಾನುವಾರುಗಳ ಕಲಗಚ್ಚು ಸಿದ್ಧಪಡಿಸಲೂ ಬೇಕಾಗುವಂತಹುದು.   ನೆಂಟರು ಹೀಗೆ ಬಂದು ಹಾಗೆ ಹೋಗೋ ಕಾಲವಲ್ಲ,  ಬಂದೋರು ಕಾಲ್ನಡೆಯಲ್ಲೇ ಬಂದಿರುತ್ತಾರೆ,   ಮರು ಪ್ರಯಾಣ ಮಾಡಬೇಕಾದರೂ ಒಂದೆರಡು ತಿಂಗಳು ಇದ್ದೇ ಹೋಗುವವರು.   ಬಂಧುಬಳಗದ,  ತೋಟ, ಗದ್ದೆಯ ಕಾರ್ಮಿಕ ವರ್ಗದವರಿಗೂ ಊಟೋಪಚಾರದ ವ್ಯವಸ್ಥೆ,   ಕೆಲಸದಾಳುಗಳು ನೀರುಮಜ್ಜಿಗೆ ಕುಡಿಯಬೇಕಾದರೂ ಉಪ್ಪು,   ತೆಂಗಿನಮರಗಳಿಗೂ ವರ್ಷಕ್ಕೂಮ್ಮೆ ಉಪ್ಪು ಹಾಕುವದಿರುತ್ತದೆ.   ದೊಡ್ಡ ಪ್ರಮಾಣದ ಉಪ್ಪಿನ ದಾಸ್ತಾನು ಇಡಲು ಅಷ್ಟೇ ಗಾತ್ರದ ಮಣ್ಣಿನ ಪೀಪಾಯಿಗಳೂ,  ಭರಣಿಗಳೂ ಇರುತ್ತವೆ.   ಮಳೆಗಾಲದ ಅಡುಗೆಗೆಂದೇ ಉಪ್ಪಿನಲ್ಲಿ ಹಾಕಿಟ್ಟ ಹಲಸಿನ ಸೊಳೆ,  ನಮ್ಮ ತುಳುವರ ಉಪ್ಪಡ್ ಪಚ್ಚಿಲ್,   ಉಪ್ಪಿನಲ್ಲಿ ಹಾಕಿಟ್ಟ ಕಾಟ್ ಮಾವಿನಕಾಯಿ,  ನೀರ್ ಕುಕ್ಕು  ಇಂಥವುಗಳನ್ನು ಮಣ್ಣಿನ ಮಂಡಗೆಯಲ್ಲಿ ಹಾಕಿಡುವ ಪದ್ಧತಿ.   ಈ ದಾಸ್ತಾನು ಸಾಮಗ್ರಿಗಳಿಗೆ ಒಂದು ಪ್ರತ್ಯೇಕ ಜಾಗ ಇರಲೇಬೇಕು.    ಈ ಗುಹಾಭವನದೊಳಗೆ ಗಾಳಿ, ಬಿಸಿಲು ಹೋಗುವಂತಿಲ್ಲ,  ದಾಸ್ತಾನು ಸಾಮಗ್ರಿಗಳು ಹಾಳಾಗುವ ಪ್ರಮೇಯವೇ ಇಲ್ಲ.   ಮಣ್ಣಿನ ಪೀಪಾಯಿಗಳನ್ನು ದಕ್ಷಿಣ ಕನ್ನಡಿಗರ ಆಡುನುಡಿಯಲ್ಲಿ  ಮಣ್ಣಿನ ಮಂಡಗೆ ಎಂದೇ ಹೇಳುವ ವಾಡಿಕೆ.   ಉಪ್ಪಿನ ಸೊಳೆ ಹಾಕಿಟ್ಟಲ್ಲಿ ಅದು ಸೊಳೆ ಮಂಡಗೆ ಆಯಿತು.   ಇಂತಹ ಉಪ್ಪು ಸೊಳೆ ಮಂಡಗೆ,  ನೀರು ಮಾವಿನಕಾಯಿ ಮಂಡಗೆಗಳು ಈ ಕಲ್ಲಿನ ಗುಹೆಯೊಳಗೆ ಭದ್ರ.

ಇಷ್ಟೆಲ್ಲಾ ವಿವರಣೆ ಕೊಡ್ತಾ ಇದೀನಲ್ಲ,   ಅಂದ ಹಾಗೆ ಈ ಕಲ್ಲಿನ ಗುಹೆ ಇರುವುದು ಕಾಸರಗೋಡಿನ ಬಾಯಾರು ಗ್ರಾಮದಲ್ಲಿರುವ ತಲೆಂಗಳ ರಾಮಕೃಷ್ಣ ಭಟ್ಟರ ಮನೆಯಲ್ಲಿ.   ರಾಮಕೃಷ್ಣ ಭಟ್ಟರ ಪೂರ್ವಿಕರೇ ಇದರ ನಿರ್ಮಾತೃಗಳು.   ಅಂದಿನ ಹಿರಿಯರ ವಾಸ್ತು ತಾಂತ್ರಿಕತೆಗೆ ಇದೊಂದು ಸ್ಮಾರಕದಂತಿದೆ.   ಈಗ ಈ ಮನೆಯಲ್ಲಿ ರಾಮಕೃಷ್ಣ ಭಟ್ಟರ ಪುತ್ರ ಅನಂತಕೃಷ್ಣ ತನ್ನ ಪುಟ್ಟ ಸಂಸಾರದೊಂದಿಗೆ ವಾಸವಾಗಿದ್ದಾನೆ.

Posted via DraftCraft app

Wednesday 13 November 2013

ಮಗುವಿನ ಮನಸು






ಮುದ್ದು ಮುದ್ದು ಬಾಲೆ
ಹಲ್ಲು ಬಂತೇ ತೋರೆಲೆ |

ಅಆಇಈ.....
ಕನ್ನಡದ ಅಕ್ಷರಮಾಲೆ
ಅಪ್ಪ ಅಮ್ಮ ಅಜ್ಜ ಅಜ್ಜಿ...
ಮೊದಲ ಶಾಲೆ |

ನೀ ಹೇಗೆ ನಕ್ಕರೂ ಚೆನ್ನ
ಮಗುವೇ ನೀ ಅಪ್ಪಟ ಚಿನ್ನ
ಇರುವೆ ನೀ ಬಹು ದೂರ
ಬಂದಿಹೆ ಇಲ್ಲಿ ಬಲು ಹತ್ತಿರ |


ಫೋಟೋ ಕೃಪೆ:  ಉಮಾ ಅರವಿಂದ್

Posted via DraftCraft app

Saturday 2 November 2013

ತರಕಾರಿ ತನ್ನಿ, ಕ್ಯಾರೆಟ್ ತಿನ್ನಿ....





" ತರಕಾರಿ ತನ್ನಿ "

ಚೀಲ ತುಂಬಾ ಕ್ಯಾರೆಟ್ ಬಂದಿತು.

" ಇಷ್ಟು ಕ್ಯಾರೆಟ್ ಏನ್ಮಾಡ್ಲೀ...  ಬೇರೇನೂ ಸಿಗ್ಲಿಲ್ವೇ ?"

" ಅಲ್ಲಿ ಇದ್ದಿದ್ದು ಇದೊಂದೇ,  ಬೇರೆಲ್ಲಾ ಒಣಗಿದ ಹಾಗಿತ್ತು,  ತಂದಿದ್ದನ್ನು ಏನಾದ್ರೂ ಮಾಡು "

" ಸರಿ ಹೋಯ್ತು,    ನಾಳೆ ಮುಂಜಾನೆಗೊಂದು ದೋಸೆ ಇದ್ರಿಂದಾನೇ ಮಾಡೋಣ,   ಅದಕ್ಕೇನಂತೆ.."

2 ಕಪ್ ಅಕ್ಕಿ
ಅರ್ಧ ಕಪ್ ಉದ್ದು
2 ಚಮಚ ಮೆಂತೆ
2 ಕಪ್ ಕ್ಯಾರೆಟ್ ತುರಿ

ನೆನೆ ಹಾಕಿದ ಬೇಳೆಗಳನ್ನು ಮೊದಲು ನುಣ್ಣಗೆ ಅರೆದು ತೆಗೆಯಿರಿ.
ಅಕ್ಕಿಯನ್ನೂ ಅರೆದು,  ಕ್ಯಾರೆಟ್ ತುರಿ ಸೇರಿಸಿ ಪುನಃ ಅರೆದು ಹಿಟ್ಟುಗಳನ್ನು ಒಟ್ಟಿಗೆ ಕಲಸಿ,  ರುಚಿಗೆ ಉಪ್ಪು ಹಾಕಿ ಮುಚ್ಚಿ ಇಡಿ.
ಎಂಟು ಗಂಟೆಗಳ ಕಾಲ ಹುದುಗು ಬಂದ ಮೇಲೆ ದೋಸೆ ಎರೆಯಿರಿ,  ತೆಂಗಿನಕಾಯಿ ಚಟ್ನಿ ಇರಲಿ.





ಬೇಳೆಕಾಳುಗಳನ್ನು ಹಾಕದೆ ಹೀಗೆ ದೋಸೆ ಮಾಡೋಣ.

2 ಕಪ್ ಅಕ್ಕಿ
2 ಕಪ್ ಕ್ಯಾರೆಟ್ ತುರಿ,  ರುಚಿಗೆ ಉಪ್ಪು
ನುಣ್ಣಗೆ ಅರೆದು ನೀರುದೋಸೆ ಎರೆಯಿರಿ.
ಬೇಕಿದ್ದರೆ ಕೊತ್ತಂಬ್ರಿ ಸೊಪ್ಪು,  ಈರುಳ್ಳಿ,  ಹಸಿಮೆಣಸು,  ಶುಂಠಿ,  ಕಾಯಿತುರಿ ಹಾಕಿಕೊಳ್ಳಿ,  ಚೆನ್ನಾಗಿರುತ್ತದೆ.

ಹೆಚ್ಚಾಗಿ ತಯಾರಿಸುವ ತೆಳ್ಳವು ಹೀಗೂ ಮಾಡಿ,  ಬಣ್ಣ ಬಣ್ಣವಾಗಿ ಮಕ್ಕಳ ಮನ ಗೆಲ್ಲುವುದರಲ್ಲಿ ಸಂಶಯವಿಲ್ಲ.   ಅಕ್ಕಿ ಹಿಟ್ಟಿಗೆ ಒಂದು ಕಪ್ ಕ್ಯಾರೆಟ್ ತುರಿ,  ಕೊತ್ತಂಬ್ರಿ ಸೊಪ್ಪು ಕತ್ತರಿಸಿ ಹಾಕಿದರೆ ಸಾಕು.   ಬೆಲ್ಲ ಬೆರೆಸಿದ ಕಾಯಿತುರಿಯೊಂದಿಗೆ ಸವಿಯಿರಿ.





ಕ್ಯಾರೆಟ್ ಪಾಯಸ

ಕ್ಯಾರೆಟ್ ತುರಿ 1 ಕಪ್
ಅಕ್ಕಿ ಹುಡಿ 2 ಚಮಚ
ಸಕ್ಕರೆ 1 ಕಪ್
ಏಲಕ್ಕಿ,  ದ್ರಾಕ್ಷಿ,  ಗೋಡಂಬಿ ಅವಶ್ಯಕತೆಗೆ ತಕ್ಕಷ್ಟು
 1 ತೆಂಗಿನಕಾಯಿ 

ಮೊದಲಿಗೆ ಕಾಯಿಹಾಲು ಮಾಡಿಕೊಳ್ಳಿ.   ದಪ್ಪ ಕಾಯಿಹಾಲು ಪ್ರತ್ಯೇಕ ತೆಗೆದಿರಿಸಿ.
ಇನ್ನೂ ಎರಡು ಬಾರಿ ನೀರು  ಕಾಯಿಹಾಲು ತೆಗೆಯಿರಿ.

ಒಂದನೇ ನೀರು ಕಾಯಿಹಾಲಿನಲ್ಲಿ ಕ್ಯಾರೆಟ್ ತುರಿ ಬೇಯಿಸಿ.
ಅಕ್ಕಿ ಹುಡಿಯನ್ನು ನೀರು ಕಾಯಿಹಾಲಿನಲ್ಲಿ ಕಲಸಿಕೊಂಡು ಬೆಂದ ಕ್ಯಾರೆಟ್ ಜೊತೆ ಪುನಃ ಕುದಿಸಿ.  ಅಕ್ಕಿಹಿಟ್ಟು ಕುದಿದು,  ಮಿಶ್ರಣ ದಪ್ಪವಾಯಿತೇ,  ಈಗ ಸಕ್ಕರೆ ಸುರಿಯಿರಿ.   ಸಕ್ಕರೆ ಕರಗಿದ ಹಂತದಲ್ಲಿ ಗೋಡಂಬಿ, ದ್ರಾಕ್ಷಿಗಳನ್ನು ತುಪ್ಪದಲ್ಲಿ ಹುರಿದು ಹಾಕಿ.
ಕೊನೆಯದಾಗಿ ದಪ್ಪ ಕಾಯಿಹಾಲು ಎರೆದು,  ಕುದಿದು ಮೇಲೆ ಬರುತ್ತಿದ್ದ ಹಾಗೆ ಏಲಕ್ಕಿ ಹುಡಿ ಉದುರಿಸಿ,  ಕೆಳಗಿಳಿಸಿ.   ಪಾಯಸ ಸಿದ್ಧ.




ಕ್ಯಾರೆಟ್ ಹಲ್ವಾ

ಕ್ಯಾರೆಟ್ ತುರಿ ಒಂದು ಬಟ್ಟಲು
ಸಕ್ಕರೆ ಒಂದು ಕಪ್ 
ಹಾಲು ಒಂದು ಕಪ್
ಗೋಡಂಬಿ,  ದ್ರಾಕ್ಷೀ,  ಏಲಕ್ಕಿ ಇತ್ಯಾದಿ 
ತುಪ್ಪ 4 ಚಮಚ

ಕ್ಯಾರೆಟ್ ತುರಿಯನ್ನು ಅವಶ್ಯವಿದ್ದಷ್ಟೇ ಹಾಲು ಎರೆದು ಮೆತ್ತಗೆ ಬೇಯಿಸಿಕೊಳ್ಳಿ.
ದಪ್ಪ ತಳದ ಬಾಣಲೆಗೆ ತುಪ್ಪ ಸವರಿ ಬೆಂದ ಕ್ಯಾರೆಟ್ ತುರಿಯನ್ನು ಹಾಕಿ,  ಒಲೆಯ ಮೇಲೆ ಇಡಿ.
ಸಕ್ಕರೆ ಹಾಕಿ,  ಸಕ್ಕರೆ ಕರಗಿ ಪಾಕ ಬರುವ ತನಕ ಮಂದಾಗ್ನಿಯಲ್ಲಿ ಸೌಟಿನಲ್ಲಿ ಕೈಯಾಡಿಸುತ್ತಿರಿ.
ದ್ರಾಕ್ಷಿ,  ಗೋಡಂಬಿಗಳನ್ನು ತುಪ್ಪದಲ್ಲಿ ಹುರಿದು ಹಾಕಿ,  ಒಂದೇ ಮುದ್ದೆಗೆ ಬಂದಾಗ ಏಲಕ್ಕಿಪುಡಿಯನ್ನೂ ಹಾಕಿ ಕೆಳಗಿಳಿಸಿ.
ತುಪ್ಪ ಸವರಿದ ತಟ್ಟೆಗೆ ವರ್ಗಾಯಿಸಿ,  ಬಿಸಿ ಬಿಸಿಯಾಗಿ ತಿನ್ನಿ.




ಕ್ಯಾರೆಟ್ ಹಲ್ವಾ,  ಇನ್ನೊಂದು ವಿಧಾನ:

ಮೇಲೆ ಉಪಯೋಗಿಸಿದ ವಸ್ತುಗಳೊಂದಿಗೆ ಒಂದು ಕಪ್ ಚಿರೋಟಿ ರವೆಯನ್ನೂ ಸೇರಿಸುವ ಅಗತ್ಯವಿದೆ.   ಒಂದು ಕಪ್ ಸಕ್ಕರೆಯೂ ಹೆಚ್ಚು ಬೇಕಾಗುತ್ತದೆ.
ಚಿರೋಟಿ ರವೆಯನ್ನು ಪರಿಮಳ ಬರುವಷ್ಟು ಹುರಿದು,  ಒಂದೂವರೆ ಕಪ್ ಕುದಿಯುವ ನೀರು ಎರೆದು ಮೆತ್ತಗೆ ಬೇಯಿಸಿ.   ಬೆಂದ ನಂತರ ಸಕ್ಕರೆ,  ಬೇಯಿಸಿಟ್ಟ ಕ್ಯಾರೆಟ್ ಇತ್ಯಾದಿಗಳನ್ನು ಸೇರಿಸಿ ಹಿಂದಿನ ವಿಧಾನದಲ್ಲಿ ತಿಳಿಸಿರುವಂತೆ ಮಾಡಿದರಾಯಿತು.



ಕ್ಯಾರೆಟ್ ಪಲ್ಯ

ಚಿಕ್ಕದಾಗಿ ಕತ್ತರಿಸಿದ ಕ್ಯಾರೆಟ್ 2 ಕಪ್
ಕಾಯಿ ತುರಿ ಸ್ವಲ್ಪ
ಚಿಟಿಕೆ ಅರಸಿನ
ರುಚಿಗೆ ಉಪ್ಪು
ಒಗ್ಗರಣೆ ಸಾಮಗ್ರಿಗಳು
2 ಚಮಚ ಎಣ್ಣೆ
ಒಂದೆಸಳು ಕರಿಬೇವು

ಬಾಣಲೆಯಲ್ಲಿ ಒಗ್ಗರಣೆಗಿಟ್ಟು,  ಸಾಸಿವೆ ಸಿಡಿದಾಗ ಬೇವಿನೆಲೆ ಹಾಕಿ,  ಚಿಟಿಕೆ ಅರಸಿನವೂ ಬೀಳಲಿ.  ಕ್ಯಾರೆಟ್ ತುಂಡುಗಳನ್ನು ಹಾಕಿ.   ಉಪ್ಪಿನೊಂದಿಗೆ ನೀರು ಚಿಮುಕಿಸಿ ಮಂದಾಗ್ನಿಯಲ್ಲಿ ಮುಚ್ಚಿ ಬೇಯಿಸಿ.  ಬೆಂದ ನಂತರ ಕಾಯಿ ತುರಿ ಸೇರಿಸಿ.  ಇನ್ನೊಮ್ಮೆ ಸೌಟಾಡಿಸಿ ಕೆಳಗಿಳಿಸಿ.  ಬಹು ಬೇಗನೆ ಮಾಡಿಕೊಳ್ಳಬಹುದಾದ ಈ ಪಲ್ಯ ಸರಳ  ವಿಧಾನದಲ್ಲಿದೆ.  

 


ತಾಜಾ ಕ್ಯಾರೆಟ್ ಹಸಿಯಾಗಿಯೇ ಸೇವಿಸುವುದು ಬಹಳ ಉತ್ತಮ.   ಸಕ್ಕರೆಯ ಮೂಲವಾಗಿರುವ ಕ್ಯಾರೆಟ್ ಸೇವನೆಯಿಂದ ದೇಹಕ್ಕೆ ಅಧಿಕ ಕ್ಯಾಲೊರಿ ಲಭ್ಯ.   ಕ್ಯಾರೆಟ್ ಪೋಷಕಾಂಶಗಳು ಈ ರೀತಿಯಾಗಿವೆ.   88% ನೀರು,  7% ಸಕ್ಕರೆ,   1% ಪ್ರೊಟೀನ್,  1% ನಾರು,  0.2% ಕೊಬ್ಬು ಇರುತ್ತವೆ.  ಕೊಬ್ಬು ಬಹಳ ಕಡಿಮೆ ಇರುವ ತರಕಾರಿ,  ನಾರು, ವಿಟಮಿನ್ ಎ, ಸಿ, ಕೆ, ಬಿ6, ಪೊಟ್ಯಾಷಿಯಂ,  ಮೆಗ್ನೇಶಿಯಂ,  ಥಯಾಮಿನ್,  ನಿಯಾಸಿನ್ ಗಳಿಂದ ಕೂಡಿರುವ ಈ ಕ್ಯಾರೆಟ್ ಸೇವನೆಯಿಂದ ಉರಿಯೂತದಿಂದ ರಕ್ಷಣೆ,  ರಕ್ತನಾಳಗಳ ಹಿಗ್ಗುವಿಕೆಗೆ ಸಹಕಾರಿಯಾಗಿ ಹೃದಯಸಂಬಂಧೀ ಖಾಯಿಲೆಗಳ ಅಪಾಯವನ್ನು ತಡೆಗಟ್ಟುತ್ತದೆ.    ಇತ್ತೀಚೆಗೆ ನಡೆದ ಅಧ್ಯಯನದ ವರದಿಯಂತೆ ನಿಯಮಿತವಾದ ಕ್ಯಾರೆಟ್ ಸೇವನೆ ಕೊಲೆಸ್ಟರಾಲ್ ನಿಯಂತ್ರಕವೂ ಆಗಿದೆ.   ಆದುದರಿಂದಲೇ ತರಕಾರಿ ತನ್ನಿ,  ಕ್ಯಾರೆಟ್ ತಿನ್ನಿ,  ಆರೋಗ್ಯವೆನ್ನಿ.   ಅಲ್ಲವೇ ?


ಟಿಪ್ಪಣಿ: ಸದಭಿರುಚಿಯ ಮಾಸಪತ್ರಿಕೆ ಉತ್ಥಾನದಲ್ಲಿ ಪ್ರಕಟಿತ.  ದಿನಾಂಕ 30. ಮಾರ್ಚ್ 2015



Posted via DraftCraft app