Pages

Ads 468x60px

Saturday 5 October 2013

ವಿಷಕನ್ನಿಕೆ! ...... ಇವಳು ಅಗ್ನಿಶಿಖೆ!







ಮಳೆಗಾಲದ ಆರಂಭದ ದಿನಗಳು,   ಅಂಗಳದ ಮಲ್ಲಿಗೆ ಸಿಕ್ಕಸಿಕ್ಕಲ್ಲಿಗೆ ಪಯಣ ಬೆಳೆಸುವ ಅಂದಾಜಿನಲ್ಲಿದ್ದಳು.   ಒಂದು ಕತ್ತರಿಯಾಡಿಸೋಣವೆಂದು ಪುಟ್ಟ ಕತ್ತಿಯೊಂದಿಗೆ ತಯಾರಾಗುತ್ತಿದ್ದಂತೆ ತೋಟದಿಂದ ಹುಲ್ಲಿನ ಹೊರೆ ಹೊತ್ತು ಚೆನ್ನಪ್ಪ ಬಂದ.   " ನಾಳೆ ಈ ಮಲ್ಲಿಗೆ ಸುತ್ತಮುತ್ತ ಚಂದ ಮಾಡು ಆಯ್ತಾ "  ಅಂದೆ.
" ತೋಟದ ಹುಲ್ಲು ತೆಗೀಲೋ ....  ಈ ಮಲ್ಲಿಗೆ ಬುಡ ನೀವೇ ಚಂದ ಮಾಡಿ ಅಕ್ಕ "  ಅಂದ.
" ಆಯ್ತು,  ನೋಡಿಲ್ಲಿ,  ಈ ಹೊಸಾ ಬಳ್ಳಿ ಎಂಥದು ?"
" ಅಯ್,  ಅದೆಂತದೋ ಕಾಟ್ ಬಳ್ಳಿ..."  ಅನ್ನುತ್ತಾ ಕಿತ್ತೆಸೆದ.
" ಛೆ,  ನೋಡಬಹುದಾಗಿತ್ತು .... ತೆಗೆದೂ ಆಯ್ತಲ್ಲ..."  ಅವನಿಗೊಂದು ಚಹಾ ಕೊಟ್ಟು ಮನೆಗೆ ಕಳಿಸಬೇಕಲ್ಲ,   ಗೊಣಗುತ್ತಾ ಒಳಗೆ ಹೋಗಬೇಕಾಯಿತು.

ಕೋಮಲವಾದ ಉದ್ದನೆಯ ತಿಳಿ ಹಸಿರು ಬಣ್ಣದ ಎಲೆಗಳು,  ಕಾಣಲೂ ಆಕರ್ಷಕವಾಗಿತ್ತು.   ಅದಕ್ಕೊಂದು ಗೂಟ ಕೊಟ್ಟು ನಿಲ್ಲಿಸೋಣ ಅಂದ್ಕೊಂಡಿದ್ದ ಹಾಗೇ ಈ ಸುಕೋಮಲ ಲತೆಯನ್ನು ಕಿತ್ತೆಸೆದನಲ್ಲ ಎಂಬ ವ್ಯಥೆ ಬಹಳ ದಿನಗಳವರೆಗೆ ಬಾಧಿಸಿದ್ದು ಸುಳ್ಳಲ್ಲ.

ಆಷಾಢ ಕಳೆದು ಶ್ರಾವಣ ಬಂದಿತು.   ವಿಧವಿಧವಾದ ವನಸುಮಗಳು ಅರಳುವ ಸಮಯ.  ಮನೆಯ ಎದುರುಗಡೆ  ಗೇರುಮರಗಳ ತೋಪಿನಲ್ಲಿ ಅಡ್ಡಾಡುತ್ತಿರಬೇಕಾದರೆ ಪುನಃ ಇದೇ ಬಳ್ಳಿ ಎದುರಾಯಿತು.   ಆಕರ್ಷಕ ಹೂಗಳೂ ಅರಳಿದ್ದವು.   ಬಿರುಬಿಸಿಲಿಗೆ ಜ್ವಾಜಲ್ಯಮಾನವಾಗಿ ಹೊಳೆಯುತ್ತಿದ್ದ ಹೂಗಳು!   " ನೂರು ಕಣ್ಣು ಸಾಲದು ನಿನ್ನ ನೋಡಲು,  ನೂರಾರು ಮಾತು ಸಾಲದು ಈ ಅಂದ ಬಣ್ಣಿಸಲು ...."  ಚಲನಚಿತ್ರ ಗೀತೆ ಗುಣುಗುಣಿಸುತ್ತ  ಹೂವಿನ ಚೆಲುವನ್ನು ಕಣ್ತುಂಬ ತುಂಬಿಕೊಂಡರೂ ಈ ಹೂವು ಯಾವುದೆಂದು ಆಗ ತಿಳಿಯದೆ ಹೋಯಿತು.

                                        
                                                   <><><>       <><><>


ಅಂತರ್ಜಾಲ ಮಾಧ್ಯಮದ ಪ್ರವೇಶದೊಂದಿಗೆ ಓದುವಿಕೆಯ ವ್ಯಾಪ್ತಿಯೂ ಹಿಗ್ಗಿದೆ.   ತಾನಾಗಿಯೇ ಈ ಹೂ ತನ್ನ ಇರವನ್ನು ಅಂತರ್ಜಾಲದ ಪುಟಗಳಲ್ಲಿ ತೋರಿಸಿಕೊಟ್ಟಿತು.   ವಿವರವಿವರವಾಗಿ ಹೂ ವರ್ಣಪದರಗಳನ್ನು ಬಿಡಿಸುತ್ತ ತನ್ನ ವೈಖರಿಯೇನೆಂಬುದನ್ನು ಹೇಳಿತು.

ಆಯುರ್ವೇದದಲ್ಲಿ ಔಷಧೀಯ ಸಸ್ಯವಾಗಿ ಇದು ಪುರಾತನ ಕಾಲದಿಂದಲೇ ಗುರುತಿಸಿಕೊಂಡಿದೆ.   ಸಂಸ್ಕೃತದಲ್ಲಿ ಲಾಂಗಲೀ,  ತಾಮ್ರಚೂಡ ಎಂದೆನಿಸಿಕೊಂಡಿರುವ ಈ ಮೂಲಿಕಾ ಸಸ್ಯ ಕನ್ನಡದಲ್ಲಿ ಅಗ್ನಿಶಿಖೆ,  ಗೌರಿಹೂ,  ಕೋಳಿಜುಟ್ಟಿನ ಹೂ,  ಕೋಳಿಕುಟುಮ ಹೀಗೆ ಹಲವಾರು ಹೆಸರುಗಳು.   ರಕ್ತಸಿಕ್ತ ಹುಲಿಯುಗುರಿನಂತೆಯೂ ತೋರುವುದರಿಂದ ವ್ಯಾಘ್ರನಖ ಅಂತಲೂ ಹೇಳುತ್ತಾರೆ.   ಕೂಡಗರು ಈ ಹೂವಿಗೆ ಧಾರ್ಮಿಕ ಆಚರಣೆಗಳಲ್ಲಿ ಮಹತ್ವದ ಸ್ಥಾನ ನೀಡಿರುತ್ತಾರೆ.  ದೇವರಿಗೆ ಅತಿಪ್ರಿಯವಾದ ಹೂವಾಗಿರುವ ಅಗ್ನಿಶಿಖೆಯನ್ನು ಗೌರಿ-ಗಣೇಶನ ಹಬ್ಬದಂದು ಎಲ್ಲಿಂದಲಾದರೂ ಹುಡುಕಿ ತಂದು  ಅರ್ಪಿಸಿ,   ಗೌರಿ ಹೂ ಎಂದು ಗೌರವಿಸುವ ಸಂಪ್ರದಾಯ ನಮ್ಮ ಭಾರತೀಯರದ್ದು.    ತಾಮ್ರಚೂಡ ಎಂಬ ಸಂಸ್ಕೃತ ಶಬ್ದಕ್ಕೆ ಕೋಳಿಜುಟ್ಟು ಎಂದೇ ಅರ್ಥ.   ಭರತನಾಟ್ಯದಲ್ಲಿ ಒಂದು ಪ್ರಕಾರದ ಹಸ್ತಭಂಗಿಗೂ ತಾಮ್ರಚೂಡ ಎಂದೇ ಹೆಸರು.   ಹಿಂದಿಯಲ್ಲಿ ಕಾಲಿಹರಿ,  ತೆಲುಗಿನಲ್ಲಿ ಕೋಡಿ ಜುಟ್ಟು ಚೆಟ್ಟು,   ತಮಿಳಿನಲ್ಲಿ ಅಗ್ನಿಶಿಖಾ,  ಕಿಳಂಗು ಎಂದಾದರೆ ನಮ್ಮ ತುಳುಜನರು ಕೊರಗ ಪೂ ಅನ್ನುತ್ತಾರೆ.

ಸಸ್ಯಶಾಸ್ತ್ರೀಯ ವರ್ಗೀಕರಣದಲ್ಲಿ Gloriosa superba ಆಗಿರುವ ಈ ಮೂಲಿಕಾ ಸಸ್ಯ Colchicaceae ಕುಟುಂಬವಾಸಿ. ಇಂಗ್ಲೀಷ್ ಭಾಷೆಯಲ್ಲಿಯೂ ಸೌಂದರ್ಯದ ಖನಿಯಾಗಿರುವ ಅಗ್ನಿಶಿಖೆಯನ್ನು ಗ್ಲೋರಿ ಲಿಲ್ಲಿ,  ಕ್ರೀಪಿಂಗ್ ಲಿಲ್ಲಿ,  ಫ್ಲೇಮ್ ಲಿಲ್ಲಿ,  ಗ್ಲೋರಿಯೋಸಾ ಲಿಲ್ಲಿ ವರ್ಣಿಸಲಾಗಿದೆ.   ಮೂಲತಃ ಆಫ್ರಿಕಾ ಹಾಗೂ ಏಷ್ಯಾ ನೆಲೆಯಾಗಿರುವ ಈ ಸಸ್ಯ ತನ್ನ ಔಷಧೀಯ ಗುಣಗಳಿಂದಾಗಿ ವಿಶ್ವ ಪ್ರಸಿದ್ಧಿ ಪಡೆದಿದೆ.   ಬೆಲೆಬಾಳುವ ಬೇರುಗೆಡ್ಡೆ ಹಾಗೂ ಬೀಜಗಳಿಗೆ ಜಾಗತಿಕ ಮಾರುಕಟ್ಟೆಯಿದೆ.   ಹೂವರಳಿದ ನಂತರ ಈ ಲತೆ ನಾಶವಾಗುವುದಾದರೂ ಇದರ ಬೇರುಗೆಡ್ಡೆ ನೆಲದೊಳಗೆ ಭದ್ರವಾಗಿರುತ್ತದೆ.   ಬೇರುಗಡ್ಡೆಯ ಕಂದುಗಳು ಹಾಗೂ ಹೂವಿನ ಬೀಜಗಳು ಹೊಸ ಸಸ್ಯದ ಉತ್ಪತ್ತಿಗೆ ನೆಲೆಯಾಗಿವೆ.

ಅಗ್ನಿಶಿಖೆಯ ಬಗ್ಗೆ ಅಮೂಲ್ಯ ಮಾಹಿತಿಗಳನ್ನು ತಿಳಿಯಬೇಕಿದ್ದರೆ ಆಯುರ್ವೇದ ತಜ್ಞರನ್ನು ಸಂಪರ್ಕಿಸುವುದು ಉತ್ತಮ.  ಭಾನುಮಿತ್ರನ  ' ಭಾವಪ್ರಕಾಶ ' ಆಯುರ್ವೇದ ವಿಜ್ಞಾನ ಇದರ ವಸ್ತುವಿಷಯಗಳ ಕಣಜವಾಗಿದೆ.

ಈಗ ನಿಧಾನವಾಗಿ ಮನಸ್ಸಿಗೆ ಭಾಸವಾಗುತ್ತಿದೆ,   ವಿಷಜಂತುಗಳ ವಿಷವನ್ನೇ ಕರಗಿಸಬಲ್ಲ,  ವಿನಾಶದಂಚಿನಲ್ಲಿರುವ ಅಮೂಲ್ಯವಾದ ಈ ಔಷಧೀಯ ಸಸ್ಯವನ್ನು  ಅಂದು ಚೆನ್ನಪ್ಪ ಕಾಟ್ ಬಳ್ಳಿ ಎಂದು ಕಿತ್ತೆಸೆದದ್ದು ಸುಮ್ಮನೆ ಅಲ್ಲ,  ಗಿರಿಜನ ಬುಡಕಟ್ಟು ಜನಾಂಗದವನಾಗಿದ್ದ ಅವನಿಗೆ ತಿಳಿದಿತ್ತು.    ವಿಷಯುಕ್ತ ಸಸ್ಯ ಮನೆಯಂಗಳದಲ್ಲಿ ಬೇಡ ಎಂಬ ಭಾವದಿಂದಲೇ ಕಿತ್ತೆಸೆದ. 






ಅಗ್ನಿಶಿಖೆಯ ಎಲ್ಲಾ ಅಂಗಗಳೂ ತೀವ್ರ ವಿಷಯುಕ್ತ,  ಸರ್ಪದ ವಿಷವನ್ನು ಮನುಷ್ಯ ಶರೀರದಿಂದ ತೆಗೆಯಬಲ್ಲ ಪ್ರತಿವಿಷವಾಗಿ ಇದನ್ನು ಬಳಸಲು ಅನಾದಿಯಿಂದಲೇ ನಮ್ಮ ಆಯುರ್ವೇದ ವಿಜ್ಞಾನಿಗಳು ತಿಳಿದಿದ್ದಾರೆ.    ಚೇಳಿನ ಕಡಿತದ ನಂಜು ನಿವಾರಕವೂ ಹೌದು.

ಬಸುರಿ ಸ್ತ್ರೀಯರಿಗೆ ಸುಸೂತ್ರ ಪ್ರಸವ ಮಾಡಿಸಲು ಹೆರಿಗೆ ಕೋಣೆಯಲ್ಲಿ ಸೊಲಗಿತ್ತಿಯರು ಅಗ್ನಿಶಿಖೆಯ ಬೇರುಗೆಡ್ಡೆಯನ್ನು ಇಟ್ಟುಕೊಳ್ಳುತ್ತಿದ್ದರಂತೆ.   ಬೇಡವಾದ ಬಸಿರನ್ನು ತೆಗೆಸಲೂ ಇದನ್ನೇ ಉಪಯೋಗ,  ತನ್ಮೂಲಕ ಸಂತಾನ ನಿಯಂತ್ರಣ.    ಇದೆಲ್ಲ ಹಿಂದಿನ ಕಾಲದ ಮಾತಾಯಿತು.

ತೀವ್ರ ಸ್ವರೂಪದ ಸಂಧಿವಾತ ರೋಗದಲ್ಲಿ ಇದು ಪರಿಣಾಮಕಾರೀ ಚಿಕಿತ್ಸೆ ನೀಡಬಲ್ಲುದು.   ಚರ್ಮರೋಗಗಳು,  ಧೀರ್ಘಕಾಲದಿಂದ ಗುಣವಾಗದಿರುವ ಹುಣ್ಣು ( ಕುರು ) ನಿವಾರಕ.   ಸಂತಾನಹೀನತೆಗೂ ಔಷಧಿ,   ಪುರುಷತ್ವವೃದ್ಧಿ.

ಇಷ್ಟೆಲ್ಲ ಗುಣವಿಶೇಷಗಳನ್ನು ಅಗ್ನಿಶಿಖೆ ಹೊಂದಿರಲು ಇದರಲ್ಲಿರುವ ಕೋಲ್ಶಿಸಿನ್ ( colchicine ) ಎಂಬ ಆಲ್ಕಲಾಯಿಡ್ ಕಾರಣವಾಗಿದೆ.   ಕೋಲ್ಶಿಸಿನ್ ಔಷಧಿ ತಯಾರಿಗೆ ಬೇಕಾಗುವ ರಾಸಾಯನಿಕವಾಗಿರುತ್ತದೆ.   ಈ ರಾಸಾಯನಿಕವು ನೈಸರ್ಗಿಕ ರೂಪದಲ್ಲಿ ಲಭಿಸುವುದರಿಂದ ಇದರ ಗೆಡ್ಡೆ ಹಾಗೂ ಬೀಜಗಳಿಗೆ ಬಹು ಬೇಡಿಕೆ ಬಂದಿದೆ.  ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಳು ನಡೆಯುತ್ತಿವೆ.    ಆಧುನಿಕ ಜಗತ್ತಿನ ಮಾರಕ ರೋಗವಾಗಿರುವ ಕ್ಯಾನ್ಸರ್ ಚಿಕಿತ್ಸೆಯಲ್ಲೂ ಈ ಸಸ್ಯ ಭಾಗಿಯಾಗಿದೆ.   ದೇಶವಿದೇಶಗಳಲ್ಲಿ ಬಹು ಬೇಡಿಕೆ ಪಡೆದಿರುವ ಸಸ್ಯ ಸಂಪತ್ತು ಇದಾಗಿದೆ.


ಔಷಧೀಯ ಗಿಡಮೂಲಿಕೆಗಳ ಈ ಕಿರು ಹೊತ್ತಗೆಯ ಮುಖಪುಟದಲ್ಲೇ ಅಗ್ನಿಶಿಖೆಯಿದೆ.   1996ರಲ್ಲಿ ಪ್ರಕಟಿತವಾದ ಈ ಪುಸ್ತಕವನ್ನು ವೈದ್ಯರೇ ಆದ ಎ. ಆರ್. ಎಂ. ಸಾಹೇಬ್ ಬರೆದಿರುತ್ತಾರೆ.   ಎಂದೋ ಮಂಗಳೂರಿನ ಅತ್ರಿ ಬುಕ್ ಸೆಂಟರ್ ನಿಂದ ಖರೀದಿಸಿದ ಪುಸ್ತಕ.....






Posted via DraftCraft app

0 comments:

Post a Comment