Pages

Ads 468x60px

Thursday 24 October 2013

" ಆದದ್ದೆಲ್ಲಾ ಒಳಿತೇ ಆಯಿತು..."




" ಮಧು ಬರ್ತಿದಾನಂತೆ "

" ಯಾಕಂತೆ, ಮೊನ್ನೆ ಬಂದು ಹೋಗಿದ್ದಲ್ಲವೇ, ಈಗೆಂತ ಅರ್ಜೆಂಟು ?"

" ಅದೇ ಕೆಮ್ಮು, ಶೀತ, ತಲೆನೋವು ಅಂತಿದ್ನಲ್ಲ ನಿನ್ನೆ, ನೀನು ಕೇಳಿಲ್ವಾ "

" ಸರಿ ಹೋಯ್ತು, ಒಂದು ಕಫ್ ಸಿರಪ್ ಬಾಟಲ್ ತಂದಿಟ್ಕೊಳ್ಳಲು ಹೇಳ್ಬೇಕಾಗಿತ್ತು "

ಆ ಹೊತ್ತಿಗೆ Viber apps ಫೋನ್ ಮೊಳಗಿತು. " ನಾನು ಹೊರಟಾಯ್ತು, ಬಸ್ ಹತ್ತಿ ಆಯ್ತು... ಮಲಗೂದಿಕ್ಕೆ ರೆಡೀ ಮಾಡಿಡು. ಕಹಿಬೇವಿನಸೊಪ್ಪು ಹಾಸಿಗೆ ಮೇಲೆ ಹಾಕಿಟ್ಟಿರು "

" ಓ, ನಿನ್ನ ಫ್ರೆಂಡ್ ಗೆ ಬಂದಿದ್ದು ನಿಂಗೂ ಬಂತಾ, ಏನ್ ಕರ್ಮ, ಎಲ್ಲಾ ವ್ಯಾಕ್ಸೀನ್, ಡ್ರಾಪ್ಸ್ ಚಿಕ್ಕೋನಿದ್ದಾಗ ಕೊಡ್ಸಿದ್ದು ವ್ಯರ್ಥ ಆದಂಗಾಯ್ತು..... ಬರುವಾಗ ಬೇಕಾಗಿರುವ ಔಷಧಿಗಳನ್ನೂ ಹಿಡ್ಕೊಂಡೇ ಬಾ "

" ಅದೆಲ್ಲ ಇದೇ, ನೀನು ಕಹಿಬೇವಿನಸೊಪ್ಪು ರೆಡೀ ಮಾಡಿಡು "

" ಇಲ್ಲಿರೋ ಕಹಿಬೇವಿನ ಮರ ಸತ್ಹೋಗಿದೆ, ನೀನು ಬೆಂಗ್ಳೂರಿಂದ ಬರ್ತಾ ಇದೀಯಲ್ಲ, ಅದನ್ನೂ ಹಿಡ್ಕೋ "

" ನಂಗೆ ಜ್ವರ ಬರ್ತಾ ಇದೆ.... ಎಲ್ಲೀಂತ ಹುಡುಕಲೀ, ಅದೆಲ್ಲ ನೀನೇ ನೋಡ್ಕೋ "

ನಮ್ಮವರ ಬಳಿ ಕಹಿಬೇವಿನ ವಿಚಾರ ತೆಗೆದ ಕೂಡಲೇ " ಅದ್ಯಾಕೆ ಅಷ್ಟು ಚಿಂತೆ ಮಾಡ್ತೀಯ, ತೋಟದಲ್ಲಿ ಬೇಕಾದಷ್ಟು ಬೇವಿನಸೊಪ್ಪು ಇದೆಯಲ್ಲ "

" ಇಲ್ಲಿರೂದು ಕರಿಬೇವು, ಈಗ ಬೇಕಾಗಿರೂದು ಕಹಿಬೇವು "

" ಅದೆಲ್ಲ ನಂಗೊತ್ತಿಲ್ಲ " ಅಂತಂದು ಇವರು ಅಲ್ಲಿಂದೆದ್ದು ಹೋದರು.

ರಾತ್ರಿಯಾಗ್ಬೇಕಾದ್ರೇ ಮಗ ಮನೆಗೆ ಬಂದ. ಇವರೇ ಪುತ್ತೂರುವರೆಗೆ ಬೈಕು ಓಡಿಸಿ ಕರಕೊಂಡು ಬಂದರು.

" ಈಗ ಊಟ ಮಾಡಿ ಮಲಗೂದು, ಕಹಿಬೇವು ಎಲ್ಲಿದೆ ?"

" ನಾಳೆ ತರಿಸುವಾ, ಈಗ ನೀನು ತಂದಿರೋ ಕ್ರೀಮು ಹಚ್ಚೋಣ " ಅವನಿಗೆ ಪ್ರಿಯವಾದ ಕುಚ್ಚುಲಕ್ಕಿ ಗಂಜಿಯೂಟ ದೊರೆಯಿತು.

ಮಾರನೇ ದಿನ ಖಾದರ್ ಬಂದ, " ಕಹಿಬೇವಿನ ಸೊಪ್ಪು ಓಽಽಽಽ ಅಲ್ಲಿದೆ, ನಾನೇ ತಂದ್ಕೊಡ್ತೇನೆ ಅಕ್ಕಾ " ಅಂದ.

ಇನ್ನೂ ಹಲವಾರು ಕಡೆ ಫೋನಾಯಿಸಿದಾಗ ನಮ್ಮ ಉಷಕ್ಕನ ಮನೆಯಲ್ಲಿದೆ ಎಂದು ಖಾತ್ರಿ ಪಡಿಸಿಕೊಂಡಾಯ್ತು, ಬೈಕು ಅಲ್ಲಿಗೆ ಓಡಿತು. ಉಷಕ್ಕ ಮಾಡಬೇಕಾದ ಪಥ್ಯಗಳನ್ನೆಲ್ಲ ಹೇಳಿಕೊಟ್ಟು, ವಾರಕ್ಕಾಗುವಷ್ಟು ಕಹಿಬೇವಿನೆಲೆಗಳೊಂದಿಗೆ ನಮ್ಮವರು ಅರ್ಧ ಘಂಟೆಯೊಳಗೆ ಮನೆ ತಲಪಿದರು.

ಚಿಕನ್ ಪಾಕ್ಸ್ ಆದಾಗ ಏನೇನು ಪಥ್ಯ ಮಾಡಬೇಕು ?
ಉದ್ದು ಹಾಕಿದ ತಿಂಡಿ ಬೇಡ.
ಎಣ್ಣೆಯಲ್ಲಿ ಕರಿದದ್ದು ವರ್ಜ್ಯ.
ಅನ್ನದೊಂದಿಗೆ ಬೋಳುಹುಳಿ, ಬದನೆಯಂತಹ ನಂಜು ತರಕಾರಿ ಬೇಡ, ಪುನರ್ಪುಳಿ ಸಾರು ಬಹಳ ಒಳ್ಳೆಯದು. ಒಗ್ಗರಣೆ ಹಾಕುವಂತಿಲ್ಲ.
ಪಚ್ಚೆಹಸ್ರು ತಂಪು, ಮೊಳಕೆ ಬರಿಸಿ, ಬೇಯಿಸಿ ತಿನ್ನಬಹುದು.
ಕಹಿಬೇವಿನ ಕಷಾಯ ಚೆನ್ನಾಗಿ ಆರಿದ ನಂತರ ಕುಡಿಯತಕ್ಕದ್ದು.
ಎಳನೀರು ದಿನವೂ ಕುಡಿಯಬೇಕು.
ಕಹಿಬೇವಿನೊಂದಿಗೆ ಪಲ್ಲಿಸೊಪ್ಪು, ಹಸಿಅರಸಿನ ಅರೆದು ಮೈಗೆ ಲೇಪಿಸಬೇಕು, ಅರ್ಧಘಂಟೆ ಬಿಟ್ಟು ಸ್ನಾನ, ಸಾಬೂನು ಹಾಕಲೇಬಾರದು.
ಮಲಗುವಾಗ ಹಾಸಿಗೆ ಮೇಲೆ ಕಹಿಬೇವಿನೆಲೆಗಳನ್ನು ಹರಡಿ ಮಲಗತಕ್ಕದ್ದು.

ಪಲ್ಲಿ ಸೊಪ್ಪು ಅಂದ್ರೆ ಗೊತ್ತಿತ್ತು, ನಾವೂ ಚಿಕ್ಕವರಿದ್ದಾಗ ಈ ಔಷಧೀ ಪ್ರಯೋಗಕ್ಕೆ ಒಳಗಾದವರೇ ಅಲ್ಲವೇ, ಆದರೆ ಎಲ್ಲೀಂತ ಹುಡುಕಲೀ ಎಂಬ ಸಮಸ್ಯೆ ಎದುರಾಯಿತು. ಪಲ್ಲಿ ಸೊಪ್ಪು ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಇರುತ್ತದೆ. ಗಿಡದ ಪರಿಚಯ ಇದ್ದರಾಯಿತು.
ನಮ್ಮವರಂತೂ ನನ್ಗೊತ್ತಿಲ್ಲ ಅಂದ್ಬಿಟ್ಟು ಟೀವಿ ರಾಜಕಾರಣದಲ್ಲಿ ಮಗ್ನರಾದರು. ನೋಡಿಯೇ ಬಿಡೋಣ ಅಂದ್ಕೊಂಡು ಕತ್ತಿಯೊಂದಿಗೆ ತಪಾಸಣೆ ಪ್ರಾರಂಭಿಸಿದೆ. ಯಾವುದೋ ಒಂದು ಉರುಟುರುಟು ಎಲೆಗಳ ಗಿಡ ಕಣ್ಣಿಗೆ ಬಿತ್ತು. " ಇದೇ ಆಗಿರಬಹುದು " ಅಂದುಕೊಳ್ಳುತ್ತ ಕೈಯಲ್ಲಿ ಹಿಡಿಸುವಷ್ಟು ಕತ್ತರಿಸಿ ತಂದೆ.

" ಈ ಸೊಪ್ಪು ಹೌದೇ "

" ನಂಗೇನು ಗೊತ್ತು? ಫೇಸ್ ಬುಕ್ ಗೆ ಒಂದು ಫೋಟೋ ಹಾಕಿ ಕೇಳು, ಹೇಳ್ತಾರೆ "

ಫೋಟೋ ತೆಗೆದು, ಗಿಡ ಗುರುತಿಸಿ ಅಂತ ಕಾಯ್ತಾ ಕೂತ್ಕೊಳ್ಳುವ ಹೊತ್ತು ಇದಲ್ಲ. ನೇರವಾಗಿ ಖಾದರ್ ತಾಯಿಗೆ ಫೊನ್ ಹೋಯಿತು. ಅವರೂ ನಾನೇ ಬರ್ತೇನೆ ಅಂದ್ಬಿಟ್ಟು ಐದೇ ನಿಮಿಷದಲ್ಲಿ ಪಲ್ಲಿ ಸೊಪ್ಪಿನ ಗೆಲ್ಲು ಹಿಡಿದೇ ಬಂದರು. ತೋಟದಿಂದ ತಂದ ಸೊಪ್ಪನ್ನು ಆಚೆ ಎಸೆದೆ.

" ಇದು ಪಲ್ಲಿಸೊಪ್ಪು, ನಮ್ಮ ಮನೆ ಬಾಗಿಲಲ್ಲೇ ಇದೆ ಈ ಗಿಡ " ಅಂದರು ಖಾದರ್ ತಾಯಿ ಮರಿಯಮ್ಮ.

" ಇದನ್ನು ಅರೆದು ರಸ ಕುಡಿಯಲೂ ಕೊಡಿ, ಒಳಗೆ ಕೂಡಾ ಬೊಕ್ಕೆ ಬಿದ್ದಿರ್ತದೆ. ಹಸೀ ಅರಸಿನ ಉಂಟಾ?"

" ಅಲ್ಲೊಂದು ಗಿಡ ಇದೇ, ಅದನ್ನು ಮಣ್ಣಿನಿಂದ ಮೇಲೆ ತೆಗೀ ಬೇಕಲ್ಲ "

" ಹಂಗಿದ್ರೆ ಅರಸಿನ ನಾನೇ ತಂದು ಕೊಡ್ತೇನೆ "

ಮಾರನೆ ದಿನ ವರ್ತನೆ ಹಾಲಿನೊಂದಿಗೆ ಮರಿಯಮ್ಮ ಇನ್ನಷ್ಟು ಪಲ್ಲಿಸೊಪ್ಪು ಹಾಗೂ ಹಸೀ ಅರಸಿನ ಕಳಿಸಿದ್ರು.

ಅಂತೂ ಎಲ್ಲ ಸಾಮಗ್ರಿಗಳು ಲಭ್ಯವಾದವು. ಇನ್ನೇನಿದ್ದರೂ ದಿನಕ್ಕೆರಡು ಬಾರಿ ಅರೆದು, ಮೈಗೆ ಲೇಪಿಸಿ, ಇದೇ ರಸವನ್ನು ಗುಳ್ಕ್ ಎಂದು ಕುಡಿಯಲು ಮಗ ಸನ್ನದ್ಧನಾದ. ಬಚ್ಚಲುಮನೆಯಲ್ಲಿ ಬೆನ್ನಿಗೆ ಲೇಪಿಸುತ್ತಿದ್ದಂತೆ " ಆಹಾ, ಏನು ತಂಪೂ ..." ಅನ್ನಲಾರಂಭಿಸಿದವನಿಗೆ " ಹಂಗಿದ್ರೆ ತಲೆಗೂ ಹಾಕ್ತೇನೆ, ತಲೆಯಲ್ಲಿ ಎಷ್ಟು ಬೊಕ್ಕೆ ಬಿದ್ದಿದೇಂತ ಯಾರಿಗೆ ಕಾಣ್ಸುತ್ತೆ..." ಅನ್ನುತ್ತಾ ತಲೆಗೂ ಅರೆದ ಸೊಪ್ಪಿನ ಮುದ್ದೆ ಎರೆದೆ.

" ಅಮ್ಮ, ತಲೆಗೆ ನಾನೇ ಹಾಕಿಕೊಳ್ಳುತ್ತೇನೆ "

" ಸರಿ ಹಾಗಿದ್ರೆ, ಚೆನ್ನಾಗಿ ಹಾಕಿಕೋ, ಅರ್ಧ ಘಂಟೆ ಬಿಟ್ಟು ಸ್ನಾನ ಮಾಡು. ಬಿಸಿ ನೀರು ಬೇಡ, ಸಾಬೂನು ಹಾಕಲೇ ಬೇಡ "

ಹೀಗೆ ಸ್ನಾನ ಮಾಡುವ ಕ್ರಿಯೆ ನಿರಂತರ 7 - 8 ದಿನ ನಡೆಯಿತು. ಮೊದಲ ದಿನ ತಲೆಗೆ ಸೊಪ್ಪಿನ ರಸ ಹಾಕಿದ್ದರಲ್ಲಿ " ತಲೆವೇದನೆ ಹೋಯ್ತಮ್ಮಾ " ಅಂದ. " ಹೌದ! ಅಷ್ಟು ಪವರ್ ಇದೆಯಾ ಈ ಪಲ್ಲಿಸೊಪ್ಪಿಗೆ..." ನಂಗೂ ಆಶ್ಚರ್ಯ. ಸಾಮಾನ್ಯವಾಗಿ ಚಿಕ್ಕಮಕ್ಕಳಿಗೆ ಬರುವ ಚಿಕನ್ ಪಾಕ್ಸ್ ನ ವೇದನೆ, ಸಂಕಟಗಳನ್ನು ಪುಟಾಣಿಗಳು ಹೇಳಲು ತಿಳಿದಿರುವುದಿಲ್ಲ. ಅಳು ಹಾಗೂ ಮೊಂಡುತನ ಮಾತ್ರ ಪ್ರದರ್ಶಿಸಬಲ್ಲವರಾಗಿರುತ್ತಾರೆ. ಯವಕನಾದ ಮಗ ಕಹಿಬೇವು ಹಾಗೂ ಪಲ್ಲಿಸೊಪ್ಪುಗಳ ಕಾರ್ಯಕ್ಷಮತೆಯನ್ನು ಅರ್ಥೈಸಿಕೊಂಡು ವ್ಯವಹರಿಸಿದ, ಹಾಗೂ ವಾರದೊಳಗೆ ರೋಗಮುಕ್ತನಾಗಿ ಬೆಂಗಳೂರಿಗೆ ಹೋದ.

ಇಲ್ಲಿ ಬರೆಯಬೇಕಾಗಿರುವ ಮತ್ತೊಂದು ವಿಚಾರವಿದೆ. ತಲೆಕೂದಲು ಉದುರುವ ಸಮಸ್ಯೆಯನ್ನು ಈ ಹಿಂದೆ ನನ್ನ ಬಳಿ ಹೇಳಿಕೊಂಡಿದ್ದವನು ಈಗ ಆ ಸಮಸ್ಯೆಯಿಂದಲೂ ಮುಕ್ತಿ ಪಡೆದಿದ್ದಾನೆ. ವಾರವಿಡೀ ಹರ್ಬಲ್ ಶಾಂಪೂ ಥರ ಮಿಂದಿದ್ದೂ ಕಾರಣವಿರಬಹುದು. ಈ ಮಾತು ಅವನಿಂದಲೇ ಬಂತು, " ಚಿಕನ್ ಪಾಕ್ಸ್ ಬಂದಿದ್ದು ಒಳ್ಳೇದೇ ಆಯಿತು "

ಪಲ್ಲಿ ಸೊಪ್ಪು Breynia vitis, Indian snowberry, Mountain Coffee Bush

ಮಲಯಾಳಂ Kattuniruri, Chuvannaniruri, Pavalapulla, Pavilapoola
ತಮಿಳು Sithuruvum, Manipullaanthi, Seppulaa



Posted via DraftCraft app

Monday 14 October 2013

" ಒಂದು ಚಹಾ ಕುಡಿಯೋಣ ಬನ್ನಿ...."




" ಅಮ್ಮ,  ನಾಳೆ ಬರ್ತಾ ಇದೇನೆ,  ನಿಂಗೇನು ತರ್ಲಿ "

"ಏನೂ ಆದೀತು,  ಏನಾದ್ರೂ ತಾ "

ಇದು ಅಮ್ಮ ಮಗನ Skype ಸಂಭಾಷಣೆ.

ಬೆಳ್ಳಂಬೆಳಗ್ಗೆ ಏಳು ಗಂಟೆಯಾಗ್ಬೇಕಿದ್ರೆ ಬೆಂಗಳೂರಿನಿಂದ ಮಗನ ಆಗಮನವಾಯಿತು.   ಅವನಿಗಿಷ್ಟವಾದ ಅವಲಕ್ಕಿ ಸಜ್ಜಿಗೆ ಮಾಡ್ತಾ ಇರಬೇಕಾದ್ರೇ ಬಂದ್ಬಿಟ್ಟ.

" ಈಗ ಸುಸ್ತಾಗಿದೆ,  ತಿಂಡಿ ಹತ್ತು ಗಂಟೆಗೆ ಸಾಕು "  ಅಂದವನೇ ರೂಮಿಗೆ ಹೋದ.

ಮದ್ಯಾಹ್ನದ ಊಟವಾಗುತ್ತಲೇ  " ಅಮ್ಮ,  ನಿಂಗೆ ಅಂತಾನೇ ತಂದಿದ್ದು ನೋಡಿಲ್ಲಿ,  ಇದು ಹರ್ಬಲ್ ಟೀ ಗೊತ್ತಾಯ್ತಾ,  ಹಾಲು ಹಾಕೂದೇನೂ ಬೇಡ "

"ಹಾಲಿಲ್ಲದೆ ಟೀ ಕುಡಿಯೂದು ಹೇಗೇ ?"

" ಕುಡ್ದು ನೋಡು,  ಆವಾಗ ಗೊತ್ತಾಗುತ್ತೆ,   ಇದು ಲೈಮ್ ಟೀ,  ಸಕ್ರೆ ಹಾಕ್ಬೇಕು.   ಇದು ನೋಡು,  ಗ್ರೀನ್ ಟೀ,   ಇದಕ್ಕೆ ಸಕ್ರೆ ಬೇಡ "  ಅನ್ನುತ್ತಿದ್ದಂತೆ ಪುಟ್ಟ ಪುಟ್ಟ ಚಹಾ ಪೊಟ್ಟಣಗಳು ನನ್ನೆದುರು ಗಿರಗಿರನೆ ಬಿದ್ದವು.
 
ಮಾರನೇ ದಿನ ಅವನಿಗಾಗಿ ಪ್ಯಾಕ್ ಮಾಡಿಟ್ಟ ತುಪ್ಪ,  ಸೌತೆ ಉಪ್ಪಿನಕಾಯಿ,  ಕರಿಬೇವಿನ ಚಟ್ನಿಹುಡಿ ಬ್ಯಾಗಿಗೇರಿಸಿ ಹೊರಟೂ ಬಿಟ್ಟ.

ಬೆಂಗಳೂರು ತಲಪಿದ ಮೇಲೆ ಎಂದಿನಂತೆ ನೆಟ್ ಸಂಭಾಷಣೆ ಮುಂದುವರಿಯದಿರುತ್ತದೆಯೇ,    " ಟೀ ಮಾಡಿ ಕುಡಿದ್ಯಾ "

" ಹೂಂ,  ಕುಡಿದಾಯ್ತು,  ಸಕ್ರೆ ಹಾಕದೇ ಹಾಗೇ ಕುಡಿದ್ವಿ,   ಒಂಥರಾ ಲಿಂಬೆ ಪರಿಮಳ ಬರ್ತಿತ್ತು ನೋಡು "

" ಲೈಮ್ ಟೀಗೆ  ಸಕ್ರೆ ಹಾಕದೇ ಕುಡಿದ್ಯಾ,  ನನ್ ಕರ್ಮ,  ಅಪ್ಪಾನೂ ಕುಡಿದ್ರಾ ...  ಎಷ್ಟು ಸರ್ತಿ ಹೇಳೂದು,  " ಲೈಮ್ ಟೀಗೆ ಸಕ್ರೆ ಹಾಕೂ,  ಗ್ರೀನ್ ಟೀಗೆ ಬೇಡಾಂತ... ಹಾಲು ಹಾಕ್ಬೇಡ ಆಯ್ತಾ "

" ಹ್ಞಾಂ,  ಸರಿ.   ನಾಳೆ ಹಾಗೆ ಮಾಡಿದ್ರಾಯ್ತು "

ಅಂತೂ ಲೈಮ್ ಟೀ ಪ್ಯಾಕೆಟ್ಟುಗಳು ಮುಗಿದಾಗ ಜ್ಞಾನೋದಯವಾಯಿತು.   ಲಿಂಬೆ ಸುವಾಸನೆ ಬರಲು ಈ ಚಹಾಪುಡಿಗೆ ಏನು ಹಾಕಿರ್ತಾರೋ ಗೊತ್ತಿಲ್ಲ,  ಪ್ರಯೋಗ ನಡೆಯಿತು,   ಒಂದಿನ ತುಳಸಿ,  ಮಾರನೇ ದಿನ ಸಾಂಬ್ರಾಣಿ,  ಮನೆಯಂಗಳದಲ್ಲೇ ಸುಗಂಧಭರಿತ ಸಸ್ಯಗಳು ಇರಬೇಕಾದರೆ.....  ಆಹ! ಅದ್ಭುತ ರುಚಿಯ ಚಹಾ. 

ಚಹಾ ಮಾಮೂಲು ಹುಡಿಯಲ್ಲಿ ಕುದಿಸಿ ಇಟ್ಟಾಯ್ತೇ,  ಸಕ್ಕರೆ ಹಾಕಿ ಲಿಂಬೆರಸ ಎರೆದು ಕುಡಿದು ನೋಡಿ.   ಬಿಸಿ ಬಿಸಿಯಾಗಿಯೂ ಚೆನ್ನ,   ತಣ್ಣಗಾದರೂ ಚೆನ್ನ.   ಹಾಲು ಬೇಡ.

ಕೆಮ್ಮು, ಶೀತ ಕಾಡುವಾಗ ಶುಂಠಿ,  ಕಾಳುಮೆಣಸಿನ ಚಹಾ ಕುಡಿಯುವ ವಾಡಿಕೆ ಇದೆ.  ಜೀರಿಗೆ ಹಾಕಿದ್ರೆ ಜೀರಾ ಟೀ ಆಯ್ತು.   ಯಾಲಕ್ಕಿ ಹಾಕಿದ ಚಹಾ ರುಚಿ ಕುಡಿದವರಿಗೆ ಗೊತ್ತು.    ಈ ಚಹಾಗಳಿಗೆ ಹಾಲು, ಸಕ್ಕರೆ ಬೆರೆಸಿಯೇ ಕುಡಿದರೆ ಚೆನ್ನಾಗಿರುತ್ತದೆ.   ಯಾವುದೇ ಚಹಾ ಮಾಡುವುದಿದ್ದರೂ ಚಹಾಪುಡಿ ಹಾಕ್ಬಿಟ್ಟು ಗಳಗಳನೆ ಕುದಿಸಬಾರದು.  ಅದರಲ್ಲಿರುವ ಆಂಟಿಓಕ್ಸಿಡೆಂಟ್ ಗುಣಗಳು ನಾಶವಾಗುವುದಲ್ಲದೆ ಕೆಟ್ಟ ವಾಸನೆಯ ಚಹಾ ನಿರರ್ಥಕ ಪೇಯವಾದೀತು.

ವರ್ಷಗಳ ಹಿಂದೆ ವೆನಿಲ್ಲಾ ಬೆಳೆ ನಮ್ಮ ಊರಿನ ಅಡಿಕೆ ತೋಟಗಳಲ್ಲಿ ಸಾಮಾನ್ಯವಾಗಿತ್ತು.   ಈಗ ಯಾರೂ ಅದನ್ನು ಕೇಳೋರಿಲ್ಲ.   ನನ್ನ ಬಳಿಯೂ ಯಾರೋ ಉಚಿತವಾಗಿ ಕೊಟ್ಟಿದ್ದ ವೆನಿಲ್ಲಾ ಕೋಡುಗಳು ಸಾಕಷ್ಟಿವೆ.   ನಾಳೆ ವೆನಿಲ್ಲಾ ಚಹಾ ಕುಡಿಯೋಣ ಬನ್ನಿ...


.

Posted via DraftCraft app

Saturday 5 October 2013

ವಿಷಕನ್ನಿಕೆ! ...... ಇವಳು ಅಗ್ನಿಶಿಖೆ!







ಮಳೆಗಾಲದ ಆರಂಭದ ದಿನಗಳು,   ಅಂಗಳದ ಮಲ್ಲಿಗೆ ಸಿಕ್ಕಸಿಕ್ಕಲ್ಲಿಗೆ ಪಯಣ ಬೆಳೆಸುವ ಅಂದಾಜಿನಲ್ಲಿದ್ದಳು.   ಒಂದು ಕತ್ತರಿಯಾಡಿಸೋಣವೆಂದು ಪುಟ್ಟ ಕತ್ತಿಯೊಂದಿಗೆ ತಯಾರಾಗುತ್ತಿದ್ದಂತೆ ತೋಟದಿಂದ ಹುಲ್ಲಿನ ಹೊರೆ ಹೊತ್ತು ಚೆನ್ನಪ್ಪ ಬಂದ.   " ನಾಳೆ ಈ ಮಲ್ಲಿಗೆ ಸುತ್ತಮುತ್ತ ಚಂದ ಮಾಡು ಆಯ್ತಾ "  ಅಂದೆ.
" ತೋಟದ ಹುಲ್ಲು ತೆಗೀಲೋ ....  ಈ ಮಲ್ಲಿಗೆ ಬುಡ ನೀವೇ ಚಂದ ಮಾಡಿ ಅಕ್ಕ "  ಅಂದ.
" ಆಯ್ತು,  ನೋಡಿಲ್ಲಿ,  ಈ ಹೊಸಾ ಬಳ್ಳಿ ಎಂಥದು ?"
" ಅಯ್,  ಅದೆಂತದೋ ಕಾಟ್ ಬಳ್ಳಿ..."  ಅನ್ನುತ್ತಾ ಕಿತ್ತೆಸೆದ.
" ಛೆ,  ನೋಡಬಹುದಾಗಿತ್ತು .... ತೆಗೆದೂ ಆಯ್ತಲ್ಲ..."  ಅವನಿಗೊಂದು ಚಹಾ ಕೊಟ್ಟು ಮನೆಗೆ ಕಳಿಸಬೇಕಲ್ಲ,   ಗೊಣಗುತ್ತಾ ಒಳಗೆ ಹೋಗಬೇಕಾಯಿತು.

ಕೋಮಲವಾದ ಉದ್ದನೆಯ ತಿಳಿ ಹಸಿರು ಬಣ್ಣದ ಎಲೆಗಳು,  ಕಾಣಲೂ ಆಕರ್ಷಕವಾಗಿತ್ತು.   ಅದಕ್ಕೊಂದು ಗೂಟ ಕೊಟ್ಟು ನಿಲ್ಲಿಸೋಣ ಅಂದ್ಕೊಂಡಿದ್ದ ಹಾಗೇ ಈ ಸುಕೋಮಲ ಲತೆಯನ್ನು ಕಿತ್ತೆಸೆದನಲ್ಲ ಎಂಬ ವ್ಯಥೆ ಬಹಳ ದಿನಗಳವರೆಗೆ ಬಾಧಿಸಿದ್ದು ಸುಳ್ಳಲ್ಲ.

ಆಷಾಢ ಕಳೆದು ಶ್ರಾವಣ ಬಂದಿತು.   ವಿಧವಿಧವಾದ ವನಸುಮಗಳು ಅರಳುವ ಸಮಯ.  ಮನೆಯ ಎದುರುಗಡೆ  ಗೇರುಮರಗಳ ತೋಪಿನಲ್ಲಿ ಅಡ್ಡಾಡುತ್ತಿರಬೇಕಾದರೆ ಪುನಃ ಇದೇ ಬಳ್ಳಿ ಎದುರಾಯಿತು.   ಆಕರ್ಷಕ ಹೂಗಳೂ ಅರಳಿದ್ದವು.   ಬಿರುಬಿಸಿಲಿಗೆ ಜ್ವಾಜಲ್ಯಮಾನವಾಗಿ ಹೊಳೆಯುತ್ತಿದ್ದ ಹೂಗಳು!   " ನೂರು ಕಣ್ಣು ಸಾಲದು ನಿನ್ನ ನೋಡಲು,  ನೂರಾರು ಮಾತು ಸಾಲದು ಈ ಅಂದ ಬಣ್ಣಿಸಲು ...."  ಚಲನಚಿತ್ರ ಗೀತೆ ಗುಣುಗುಣಿಸುತ್ತ  ಹೂವಿನ ಚೆಲುವನ್ನು ಕಣ್ತುಂಬ ತುಂಬಿಕೊಂಡರೂ ಈ ಹೂವು ಯಾವುದೆಂದು ಆಗ ತಿಳಿಯದೆ ಹೋಯಿತು.

                                        
                                                   <><><>       <><><>


ಅಂತರ್ಜಾಲ ಮಾಧ್ಯಮದ ಪ್ರವೇಶದೊಂದಿಗೆ ಓದುವಿಕೆಯ ವ್ಯಾಪ್ತಿಯೂ ಹಿಗ್ಗಿದೆ.   ತಾನಾಗಿಯೇ ಈ ಹೂ ತನ್ನ ಇರವನ್ನು ಅಂತರ್ಜಾಲದ ಪುಟಗಳಲ್ಲಿ ತೋರಿಸಿಕೊಟ್ಟಿತು.   ವಿವರವಿವರವಾಗಿ ಹೂ ವರ್ಣಪದರಗಳನ್ನು ಬಿಡಿಸುತ್ತ ತನ್ನ ವೈಖರಿಯೇನೆಂಬುದನ್ನು ಹೇಳಿತು.

ಆಯುರ್ವೇದದಲ್ಲಿ ಔಷಧೀಯ ಸಸ್ಯವಾಗಿ ಇದು ಪುರಾತನ ಕಾಲದಿಂದಲೇ ಗುರುತಿಸಿಕೊಂಡಿದೆ.   ಸಂಸ್ಕೃತದಲ್ಲಿ ಲಾಂಗಲೀ,  ತಾಮ್ರಚೂಡ ಎಂದೆನಿಸಿಕೊಂಡಿರುವ ಈ ಮೂಲಿಕಾ ಸಸ್ಯ ಕನ್ನಡದಲ್ಲಿ ಅಗ್ನಿಶಿಖೆ,  ಗೌರಿಹೂ,  ಕೋಳಿಜುಟ್ಟಿನ ಹೂ,  ಕೋಳಿಕುಟುಮ ಹೀಗೆ ಹಲವಾರು ಹೆಸರುಗಳು.   ರಕ್ತಸಿಕ್ತ ಹುಲಿಯುಗುರಿನಂತೆಯೂ ತೋರುವುದರಿಂದ ವ್ಯಾಘ್ರನಖ ಅಂತಲೂ ಹೇಳುತ್ತಾರೆ.   ಕೂಡಗರು ಈ ಹೂವಿಗೆ ಧಾರ್ಮಿಕ ಆಚರಣೆಗಳಲ್ಲಿ ಮಹತ್ವದ ಸ್ಥಾನ ನೀಡಿರುತ್ತಾರೆ.  ದೇವರಿಗೆ ಅತಿಪ್ರಿಯವಾದ ಹೂವಾಗಿರುವ ಅಗ್ನಿಶಿಖೆಯನ್ನು ಗೌರಿ-ಗಣೇಶನ ಹಬ್ಬದಂದು ಎಲ್ಲಿಂದಲಾದರೂ ಹುಡುಕಿ ತಂದು  ಅರ್ಪಿಸಿ,   ಗೌರಿ ಹೂ ಎಂದು ಗೌರವಿಸುವ ಸಂಪ್ರದಾಯ ನಮ್ಮ ಭಾರತೀಯರದ್ದು.    ತಾಮ್ರಚೂಡ ಎಂಬ ಸಂಸ್ಕೃತ ಶಬ್ದಕ್ಕೆ ಕೋಳಿಜುಟ್ಟು ಎಂದೇ ಅರ್ಥ.   ಭರತನಾಟ್ಯದಲ್ಲಿ ಒಂದು ಪ್ರಕಾರದ ಹಸ್ತಭಂಗಿಗೂ ತಾಮ್ರಚೂಡ ಎಂದೇ ಹೆಸರು.   ಹಿಂದಿಯಲ್ಲಿ ಕಾಲಿಹರಿ,  ತೆಲುಗಿನಲ್ಲಿ ಕೋಡಿ ಜುಟ್ಟು ಚೆಟ್ಟು,   ತಮಿಳಿನಲ್ಲಿ ಅಗ್ನಿಶಿಖಾ,  ಕಿಳಂಗು ಎಂದಾದರೆ ನಮ್ಮ ತುಳುಜನರು ಕೊರಗ ಪೂ ಅನ್ನುತ್ತಾರೆ.

ಸಸ್ಯಶಾಸ್ತ್ರೀಯ ವರ್ಗೀಕರಣದಲ್ಲಿ Gloriosa superba ಆಗಿರುವ ಈ ಮೂಲಿಕಾ ಸಸ್ಯ Colchicaceae ಕುಟುಂಬವಾಸಿ. ಇಂಗ್ಲೀಷ್ ಭಾಷೆಯಲ್ಲಿಯೂ ಸೌಂದರ್ಯದ ಖನಿಯಾಗಿರುವ ಅಗ್ನಿಶಿಖೆಯನ್ನು ಗ್ಲೋರಿ ಲಿಲ್ಲಿ,  ಕ್ರೀಪಿಂಗ್ ಲಿಲ್ಲಿ,  ಫ್ಲೇಮ್ ಲಿಲ್ಲಿ,  ಗ್ಲೋರಿಯೋಸಾ ಲಿಲ್ಲಿ ವರ್ಣಿಸಲಾಗಿದೆ.   ಮೂಲತಃ ಆಫ್ರಿಕಾ ಹಾಗೂ ಏಷ್ಯಾ ನೆಲೆಯಾಗಿರುವ ಈ ಸಸ್ಯ ತನ್ನ ಔಷಧೀಯ ಗುಣಗಳಿಂದಾಗಿ ವಿಶ್ವ ಪ್ರಸಿದ್ಧಿ ಪಡೆದಿದೆ.   ಬೆಲೆಬಾಳುವ ಬೇರುಗೆಡ್ಡೆ ಹಾಗೂ ಬೀಜಗಳಿಗೆ ಜಾಗತಿಕ ಮಾರುಕಟ್ಟೆಯಿದೆ.   ಹೂವರಳಿದ ನಂತರ ಈ ಲತೆ ನಾಶವಾಗುವುದಾದರೂ ಇದರ ಬೇರುಗೆಡ್ಡೆ ನೆಲದೊಳಗೆ ಭದ್ರವಾಗಿರುತ್ತದೆ.   ಬೇರುಗಡ್ಡೆಯ ಕಂದುಗಳು ಹಾಗೂ ಹೂವಿನ ಬೀಜಗಳು ಹೊಸ ಸಸ್ಯದ ಉತ್ಪತ್ತಿಗೆ ನೆಲೆಯಾಗಿವೆ.

ಅಗ್ನಿಶಿಖೆಯ ಬಗ್ಗೆ ಅಮೂಲ್ಯ ಮಾಹಿತಿಗಳನ್ನು ತಿಳಿಯಬೇಕಿದ್ದರೆ ಆಯುರ್ವೇದ ತಜ್ಞರನ್ನು ಸಂಪರ್ಕಿಸುವುದು ಉತ್ತಮ.  ಭಾನುಮಿತ್ರನ  ' ಭಾವಪ್ರಕಾಶ ' ಆಯುರ್ವೇದ ವಿಜ್ಞಾನ ಇದರ ವಸ್ತುವಿಷಯಗಳ ಕಣಜವಾಗಿದೆ.

ಈಗ ನಿಧಾನವಾಗಿ ಮನಸ್ಸಿಗೆ ಭಾಸವಾಗುತ್ತಿದೆ,   ವಿಷಜಂತುಗಳ ವಿಷವನ್ನೇ ಕರಗಿಸಬಲ್ಲ,  ವಿನಾಶದಂಚಿನಲ್ಲಿರುವ ಅಮೂಲ್ಯವಾದ ಈ ಔಷಧೀಯ ಸಸ್ಯವನ್ನು  ಅಂದು ಚೆನ್ನಪ್ಪ ಕಾಟ್ ಬಳ್ಳಿ ಎಂದು ಕಿತ್ತೆಸೆದದ್ದು ಸುಮ್ಮನೆ ಅಲ್ಲ,  ಗಿರಿಜನ ಬುಡಕಟ್ಟು ಜನಾಂಗದವನಾಗಿದ್ದ ಅವನಿಗೆ ತಿಳಿದಿತ್ತು.    ವಿಷಯುಕ್ತ ಸಸ್ಯ ಮನೆಯಂಗಳದಲ್ಲಿ ಬೇಡ ಎಂಬ ಭಾವದಿಂದಲೇ ಕಿತ್ತೆಸೆದ. 






ಅಗ್ನಿಶಿಖೆಯ ಎಲ್ಲಾ ಅಂಗಗಳೂ ತೀವ್ರ ವಿಷಯುಕ್ತ,  ಸರ್ಪದ ವಿಷವನ್ನು ಮನುಷ್ಯ ಶರೀರದಿಂದ ತೆಗೆಯಬಲ್ಲ ಪ್ರತಿವಿಷವಾಗಿ ಇದನ್ನು ಬಳಸಲು ಅನಾದಿಯಿಂದಲೇ ನಮ್ಮ ಆಯುರ್ವೇದ ವಿಜ್ಞಾನಿಗಳು ತಿಳಿದಿದ್ದಾರೆ.    ಚೇಳಿನ ಕಡಿತದ ನಂಜು ನಿವಾರಕವೂ ಹೌದು.

ಬಸುರಿ ಸ್ತ್ರೀಯರಿಗೆ ಸುಸೂತ್ರ ಪ್ರಸವ ಮಾಡಿಸಲು ಹೆರಿಗೆ ಕೋಣೆಯಲ್ಲಿ ಸೊಲಗಿತ್ತಿಯರು ಅಗ್ನಿಶಿಖೆಯ ಬೇರುಗೆಡ್ಡೆಯನ್ನು ಇಟ್ಟುಕೊಳ್ಳುತ್ತಿದ್ದರಂತೆ.   ಬೇಡವಾದ ಬಸಿರನ್ನು ತೆಗೆಸಲೂ ಇದನ್ನೇ ಉಪಯೋಗ,  ತನ್ಮೂಲಕ ಸಂತಾನ ನಿಯಂತ್ರಣ.    ಇದೆಲ್ಲ ಹಿಂದಿನ ಕಾಲದ ಮಾತಾಯಿತು.

ತೀವ್ರ ಸ್ವರೂಪದ ಸಂಧಿವಾತ ರೋಗದಲ್ಲಿ ಇದು ಪರಿಣಾಮಕಾರೀ ಚಿಕಿತ್ಸೆ ನೀಡಬಲ್ಲುದು.   ಚರ್ಮರೋಗಗಳು,  ಧೀರ್ಘಕಾಲದಿಂದ ಗುಣವಾಗದಿರುವ ಹುಣ್ಣು ( ಕುರು ) ನಿವಾರಕ.   ಸಂತಾನಹೀನತೆಗೂ ಔಷಧಿ,   ಪುರುಷತ್ವವೃದ್ಧಿ.

ಇಷ್ಟೆಲ್ಲ ಗುಣವಿಶೇಷಗಳನ್ನು ಅಗ್ನಿಶಿಖೆ ಹೊಂದಿರಲು ಇದರಲ್ಲಿರುವ ಕೋಲ್ಶಿಸಿನ್ ( colchicine ) ಎಂಬ ಆಲ್ಕಲಾಯಿಡ್ ಕಾರಣವಾಗಿದೆ.   ಕೋಲ್ಶಿಸಿನ್ ಔಷಧಿ ತಯಾರಿಗೆ ಬೇಕಾಗುವ ರಾಸಾಯನಿಕವಾಗಿರುತ್ತದೆ.   ಈ ರಾಸಾಯನಿಕವು ನೈಸರ್ಗಿಕ ರೂಪದಲ್ಲಿ ಲಭಿಸುವುದರಿಂದ ಇದರ ಗೆಡ್ಡೆ ಹಾಗೂ ಬೀಜಗಳಿಗೆ ಬಹು ಬೇಡಿಕೆ ಬಂದಿದೆ.  ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಳು ನಡೆಯುತ್ತಿವೆ.    ಆಧುನಿಕ ಜಗತ್ತಿನ ಮಾರಕ ರೋಗವಾಗಿರುವ ಕ್ಯಾನ್ಸರ್ ಚಿಕಿತ್ಸೆಯಲ್ಲೂ ಈ ಸಸ್ಯ ಭಾಗಿಯಾಗಿದೆ.   ದೇಶವಿದೇಶಗಳಲ್ಲಿ ಬಹು ಬೇಡಿಕೆ ಪಡೆದಿರುವ ಸಸ್ಯ ಸಂಪತ್ತು ಇದಾಗಿದೆ.


ಔಷಧೀಯ ಗಿಡಮೂಲಿಕೆಗಳ ಈ ಕಿರು ಹೊತ್ತಗೆಯ ಮುಖಪುಟದಲ್ಲೇ ಅಗ್ನಿಶಿಖೆಯಿದೆ.   1996ರಲ್ಲಿ ಪ್ರಕಟಿತವಾದ ಈ ಪುಸ್ತಕವನ್ನು ವೈದ್ಯರೇ ಆದ ಎ. ಆರ್. ಎಂ. ಸಾಹೇಬ್ ಬರೆದಿರುತ್ತಾರೆ.   ಎಂದೋ ಮಂಗಳೂರಿನ ಅತ್ರಿ ಬುಕ್ ಸೆಂಟರ್ ನಿಂದ ಖರೀದಿಸಿದ ಪುಸ್ತಕ.....






Posted via DraftCraft app