Pages

Ads 468x60px

Saturday 29 September 2012

ಸಾಂಬ್ರಾಣಿಯ ವರ್ಣಮಯ ರಸಾಯನ ಶಾಸ್ತ್ರವು !

ಅಡುಗೆ  ಕೆಲಸವೆಲ್ಲ  ಮುಗಿದಿತ್ತು .   ಊಟಕ್ಕೆ  ಇನ್ನೂ  ಬೇಕಾದಷ್ಟು  ಸಮಯವಿತ್ತು .   
" ಒಂದು  ದಿಢೀರ್  ಸಾರು ಮಾಡೋಣ  "   ಅನ್ನಿಸಿದ್ದೇ  ತಡ ,   ನಾಲ್ಕಾರು  ಪುನರ್ಪುಳಿ  ಹಣ್ಣಿನ  ಒಣ  ಸಿಪ್ಪೆಗಳು  ಡಬ್ಬದಿಂದ  ನೀರಿಗೆ  ಬಿದ್ದುವು .
ಹತ್ತಾರು  ಬೆಳ್ಳುಳ್ಳಿ  ಎಸಳುಗಳು  ಸಿಪ್ಪೆ  ಬಿಚ್ಚಿ  ತಯಾರಾಗಿ  ಒಗ್ಗರಣೆ  ಸಟ್ಟುಗ  ಏರಿದುವು .
ನೀರಿನಲ್ಲಿ  ಪುನರ್ಪುಳಿ  ಬಣ್ಣ  ಬಿಡುತ್ತ  ಕೆಂಪಾಯಿತು .   ಕುದಿ ಕುದಿದು  ಇನ್ನಷ್ಟು  ಕೆಂಪಾಯಿತು .
ಒಗ್ಗರಣೆ  ಸೌಟನ್ನು  ಉರಿಯಲ್ಲಿಟ್ಟು  ಬೆಳ್ಳುಳ್ಳಿ ' ಘಂ ' ಅನ್ನಿಸಿ ಸಾಸಿವೆ  ಚಟ ಚಟ  ಸದ್ದು  ಮಾಡುತ್ತಾ  ಸಾರಿನೊಳಗೆ  ಬಿದ್ದಾಯಿತು .
 " ಒಹ್ , ಬೆಲ್ಲ  ಹಾಕಿಲ್ಲ "  ಬೆಲ್ಲ  ಪುಡಿ ಪುಡಿಯಾಗಿ  ಸಾರಿನೊಳಗೆ  ಬಿದ್ದಿತು .
ಅಷ್ಟಾಗುವಾಗ  ತಲೆಯಲ್ಲೊಂದು  ಹೊಸ  ಯೋಚನೆ  ಬಂದಿತು .
" ಇದಕ್ಕೆ  ಸಾಂಬ್ರಾಣಿ  ಸೊಪ್ಪು  ಹಾಕಿದರೆ  ಹೇಗೆ  "
ಸರಿ ,   ಅಂಗಳಕ್ಕಿಳಿದು  ಒಂದ್ಹತ್ತು  ಎಲೆಗಳನ್ನು  ಚಿವುಟಿ  ತಂದು ,   ಸಣ್ಣಗೆ  ತುಂಡರಿಸಿ ,   ತುಪ್ಪದಲ್ಲಿ  ಬಾಡಿಸಿ ,   ಮಿಕ್ಸಿಯಲ್ಲಿ  ತಿರುಗಿಸಿ  ಪುನಃ  ಸಾರಿಗೆ  ಸೇರಿಸಿ  ಕುದಿಸಬೇಕಾಯಿತು .    
ಕುದಿಯುತ್ತಿದ್ದಂತೆ    " ಏನಾಗ್ಹೋಯ್ತು " ,  ಪುನರ್ಪುಳಿಯ   ಗಾಢ  ಬಣ್ಣವೆಲ್ಲ  ಮಾಯ  !  ಸಾರಿನ  ಮಾಸಲು  ವರ್ಣ  ನೋಡಿ    " ಛೆ ,  ಏನ್ಮಾಡ್ಬಿಟ್ಟೆ "   ಪರಿತಪಿಸುವ  ಸರದಿ .
" ನೋಡೋಣ "  ಒಂದು  ಸೌಟು  ಸಾರನ್ನು  ತೆಗೆದು  ಚಿಕ್ಕ  ತಟ್ಟೆಗೆ  ಎರೆದು  ಕುಡಿಯಬೇಕಾಯಿತು ,    " ಆಹ್,  ಏನು  ಸುವಾಸನೆ  !  ಅದೇನೇನೋ  ಅಡುಗೆ  ಮಾಡಿ  ತೋರಿಸ್ತಾರಲ್ಲ  ಟೀವಿ  ಅಡುಗೆ  ಕಾರ್ಯಕ್ರಮಗಳಲ್ಲಿ ,   ಇದೇ  ಚೆನ್ನಾಗಿದೆ ",  ಊಟದ  ಸಿದ್ಧತೆ   ನಡೆಯಿತು .


ದೊಡ್ಡಪತ್ರೆ  ಎಂದೂ  ಹೆಸರಿರುವ  ಈ  ಎಲೆಯನ್ನು  ಅಡುಗೆಯಲ್ಲಿ  ವೈವಿಧ್ಯಮಯವಾಗಿ  ಬಳಸಲು  ಮಹಿಳೆಯರು  ತಿಳಿದಿದ್ದಾರೆ .  ಬೋಂಡಾ ,  ಬಜ್ಜಿ , ಪಕೋಡಾ ,  ಇತ್ಯಾದಿ .  ದೋಸೆಯನ್ನೂ  ಮಾಡಬಹುದು .   ಎಲ್ಲವೂ  ಅವರವರ  ಪಾಕ ಪ್ರಾವೀಣ್ಯತೆಗೆ  ಬಿಟ್ಟಿದ್ದು .    ಗಾಢ  ಸುವಾಸನೆಯಿಂದಾಗಿ  ನಾನ್ ವೆಜ್  ಅಡುಗೆಯಲ್ಲೂ ಬಳಸುತ್ತಾರೆ .

ಶೀತ ,  ಕೆಮ್ಮು ,  ಜ್ವರಗಳಿಗೆ  ಉಪಶಮನಕಾರಿಯಾಗಿ  ಇದು  ಮನೆಮದ್ದಾಗಿ  ಉಪಯೋಗದಲ್ಲಿದೆ .   ಎಳೆಯ  ಹಾಲುಹಸುಳೆ  ಏನೇ  ತೊಂದರೆಯಾದರೂ  ಅಳುವಿನಲ್ಲಿ  ತೋರ್ಪಡಿಸುತ್ತದೆ .   ಅನುಭವಸ್ಥ  ಅಜ್ಜಿಯಂದಿರು  ಕೂಡಲೇ  ಮಗುವಿನ  ಸಮಸ್ಯೆಯನ್ನು  ಗುರ್ತಿಸಿ ,   ಹಿತ್ತಿಲಿನಿಂದ  ಸಾಂಬ್ರಾಣಿ  ಸೊಪ್ಪು  ತಂದು ,  ಒಲೆಯ  ಕೆಂಡದ  ಮೇಲಿಟ್ಟು  ಬಾಡಿಸಿ ,   ರಸ  ಹಿಂಡಿ  ಜೇನಿನೊಂದಿಗೆ  ಕುಡಿಸಿ ಬಿಡುತ್ತಾರೆ .  ಮಗುವಿಗೆ  ಹೊಟ್ಟೆ  ಕಟ್ಟಿದ್ದರೆ ,   ವಾಯು ತೊಂದರೆಯಾಗಿದ್ದರೆ ,  ಕಫ ತುಂಬಿ  ಬಾಧೆ  
 ಪಡುತ್ತಿದ್ದರೆ ,   ಸಾಂಬ್ರಾಣಿ ಜೇನಿನ  ರಸವನ್ನು  ಕುಡಿಸಿದಂತೆ  ಮಲವಿಸರ್ಜನೆಯಾಗಿ  ಮಗು  ನಿರಾತಂಕವಾಗಿ  ಆಟ  ಪ್ರಾರಂಭಿಸುವುದು .   ಹೀಗೆ  ಎರಡು  ದಿನಕ್ಕೊಮ್ಮೆ  ಈ ರಸ  ಕುಡಿಸುತ್ತಾ  ಬಂದಲ್ಲಿ  ಆರೋಗ್ಯದಲ್ಲಿ  ಯಾವ  ವ್ಯತ್ಯಯವೂ  ಆಗುವುದಿಲ್ಲ .    " ಮಗು  ಮೈ  ಹುಷಾರಿಲ್ಲ "  ಎಂದು  ವೈದ್ಯರಲ್ಲಿಗೆ  ಹೋಗಬೇಕಾಗುವುದೂ  ಇಲ್ಲ .     " ಒಲೆಯೆಲ್ಲಿದೆ ,   ಕೆಂಡವೆಲ್ಲಿದೆ ? "  ಅನ್ನದಿರಿ .   ಮೈಕ್ರೋವೇವ್  ಅವೆನ್  ಒಳಗಿಟ್ಟು  ತೆಗೆಯಿರಿ .



ಚಿಕ್ಕ ಮಕ್ಕಳಲ್ಲಿ  ಕಾಣಿಸಿಕೊಳ್ಳುವ  ನರಗಳ  ಸೆಡವು  ಅಥವಾ  ' ಬಾಲಗ್ರಹ '  ಇನ್ನೊಂದು  ಪೀಡೆ .   ಈ  ಸಮಸ್ಯೆಗೂ  ಪರಿಣಾಮಕಾರೀ  ಔಷಧಿಯಾಗಿ  ಸಾಂಬ್ರಾಣಿ  ನಮ್ಮ  ನಾಟೀ  ವೈದ್ಯ  ಪದ್ಧತಿಯಲ್ಲಿದೆ .

ಜೀರ್ಣ ಶಕ್ತಿ  ಚುರುಕಾಗುವುದು .   ಯಾವಾಗ  ತಿಂದ  ಆಹಾರ  ಸರಿಯಾಗಿ  ಪಚನವಾಗುವುದಿಲ್ಲವೋ  ಆಗಲೇ  ಶರೀರದ  ಅಂಗಾಂಗಗಳು ಮುಷ್ಕರ  ಹೂಡಲು  ಪ್ರಾರಂಭ  ಎಂದೇ  ತಿಳಿಯಿರಿ .   ಹೀಗಾಗದಂತಿರಲು  ನಿಯಮಿತವಾಗಿ  ಸಾಂಬ್ರಾಣಿಯ  ಬಳಕೆ  ಮಾಡುವುದು  ಸೂಕ್ತ .    ಗ್ರಾಮೀಣ  ಪ್ರದೇಶದ  ರೈತಾಪಿ  ಹೆಂಗಸರು  ಆಸ್ಪತ್ರೆಗೆ  ಹೋಗುವುದು  ತೀರಾ  ಕಡಿಮೆ .   ಇಂತಹ    ಔಷಧಯುಕ್ತ  ವನ್ಯಸಸ್ಯಗಳ  ಬಳಕೆಯಲ್ಲಿ  ಅವರು  ನಿಷ್ಣಾತರಾಗಿದ್ದಾರೆ ,  ತಮಗೆ  ತಿಳಿದಿರುವ  ಗುಟ್ಟುಗಳನ್ನು  ಅಷ್ಟು  ಸುಲಭವಾಗಿ  ಬಿಟ್ಟು  ಕೊಡುವವರೂ  ಅಲ್ಲ .   ಪಂಡಿತರಂತೆ  ವಿವರಿಸಿ  ಹೇಳಲೂ  ಅವರಿಗೆ  ತಿಳಿದಿರುವುದೂ  ಇಲ್ಲ .   ವಿವರಿಸಿ  ಹೇಳುತ್ತೇನೆ  ಕೇಳಿ ,   ನಮ್ಮ  ತೋಟದಲ್ಲಿ  ಅಶೋಕ  ವೃಕ್ಷಗಳು  ಬೇಕಾದಷ್ಟು  ಇವೆ .   ಊರಿನ  ನಾಟೀ ವೈದ್ಯರೊಬ್ಬರು  ವಾರಕ್ಕೊಮ್ಮೆ   ಬಂದು  ಆ  ಮರಗಳ  ತೊಗಟೆಯನ್ನು  ಕೆತ್ತಿ  ತೆಗೆದು  ಕೊಂಡೊಯ್ಯುತ್ತಿದ್ದರು .   " ಯಾಕೆ ,  ಯಾರಿಗೆ ?"  ಎಂದು ಪ್ರಶ್ನಿಸುವವರಿಲ್ಲ .   ಕೇಳಿದರೆ  ಅವರು  ಹೇಳುವವರೂ  ಅಲ್ಲ .   ಆ  ವೈದ್ಯರಿಗೆ  ಗೊತ್ತಿದ್ದ  ಆ  ನಾಟೀ ಮದ್ದು  ಅವರ  ತಲೆಮಾರಿಗೇ  ಮುಕ್ತಾಯವಾಗಿಬಿಟ್ಟಿದೆ .

ಕೇವಲ  ನೆಗಡಿ ,  ಕೆಮ್ಮುಗಳಿಗೆ  ಮಾತ್ರವಲ್ಲ ,   ಶರೀರದ  ಒಳಾಂಗಗಳಾದ  ಲಿವರ್ ,  ಕಿಡ್ನಿಗಳ  ತೊಂದರೆಗೂ  ಇದು  ಔಷಧಿಯಂತೆ .  ಪಿತ್ತಜನಕಾಂಗದಲ್ಲಿ  ಕಲ್ಲುಗಳು  ಸಾಮಾನ್ಯವಾಗಿ  ಮಹಿಳೆಯರಲ್ಲಿ  ಕಂಡು ಬರುವ ಖಾಯಿಲೆ .  ಅದಕ್ಕೂ  ಇದು ಔಷಧವಂತೆ .   ಆಸ್ಪತ್ರೆಗೆ  ಹೋಗಿ  ಆಪರೇಶನ್  ಮಾಡಿಸುವ   ಆಂಗಾಂಗಗಳನ್ನು  ಕತ್ತರಿಸುವ  ತಂತ್ರವೊಂದೇ  ನಮಗೆ  ತಿಳಿದಿದೆ .    ಆಸ್ಪತ್ರೆಗಳೂ  ಅಷ್ಟೇ ,  ಆಪರೇಷನ್  ಮಾಡಿ  ಬಡಪಾಯಿ  ರೋಗಿ  ಜೀವನ್ಮರಣದಲ್ಲಿ  ಹೋರಾಟ  ನಡೆಸುತ್ತಿದ್ದಾನೊ  ಎಂಬಂತೆ  ಕೃತಕ  ಯಂತ್ರೋಪಕರಣಗಳನ್ನು  ಜೋಡಿಸಿ ,  ಕೊನೆಗೊಮ್ಮೆ  " ಈ  ಕೇಸು  ಪ್ರಯೋಜನವಿಲ್ಲ "  ಎಂದು  ಕೈ  ಚೆಲ್ಲಿ  ಬಿಡುತ್ತಾರೆ .   ಆ  ಹೊತ್ತಿಗೆ  ಲಕ್ಷಗಟ್ಟಲೆ  ಸುಲಿಗೆಯಂತೂ  ಆಗಿರುತ್ತದೆ .



  ಹಿಂದಿನಿಂದಲೂ ಇದು ಜನಸಾಮಾನ್ಯರ ಔಷಧೀಯ ಸಸ್ಯವಾಗಿತ್ತು .   ಇದರ ಮರ್ಮಗಳನ್ನು ತಿಳಿದು ಉಪಯೋಗಿಸುವ ಪಂಡಿತೋತ್ತಮರು ನಮ್ಮ ನಡುವೆ ಬಹಳಷ್ಟಿಲ್ಲ .    ಪರಂಪರಾಗತ  ಔಷಧವಿಜ್ಞಾನದಲ್ಲಿ  ನಾವು  ನಂಬಿಕೆ ಕಳಕೊಳ್ಳಲು  ಇದೂ  ಒಂದು  ಕಾರಣವಿರಬಹುದೇನೋ..    ಸರಿಯಾದ   ಮಾನದಂಡವಿಲ್ಲದೆ   ಅದ್ಭುತ ವೈದ್ಯಕೀಯ  ಸಸ್ಯಗಳನ್ನು  ಬೇಕಾಬಿಟ್ಟಿ  ಉಪಯೋಗಿಸಿ,   ಕೊನೆಗೆ  ಈ  ' ಅಣಲೆಕಾಯಿ ಮದ್ದು ' ಗಳು  ನಿರರ್ಥಕ  ಎಂಬ  ತೀರ್ಮಾನಕ್ಕೆ  ಬರುವುದರಿಂದ  ನಮ್ಮ  ಪ್ರಾಚೀನ  ಔಷಧ ಶಾಸ್ತ್ರ  ಯಾರಿಗೂ  ಬೇಡವಾದ  ಜ್ಞಾನವಾಗಿ ಹೋದೀತು .

ಚೇಳು  ಕಡಿತ ,   ಚರ್ಮದ  ಅಲರ್ಜಿ ,   ಹುಣ್ಣುಗಳು ,  ಗಾಯಗಳು ,  ಜ್ವರ ,  ಅತಿಸಾರಗಳಲ್ಲಿ  ಪರಿಣಾಮಕಾರಿಯಾಗಿ  ಉಪಯೋಗ .   ಆಂಟಿ ಸೆಪ್ಟಿಕ್ ,  ಸೋಂಕು ನಿವಾರಕ .
ಏನೇ  ತಲೆನೋವು  ಬರಲಿ ,   " ಒಂದು  ಮಾತ್ರೆ  ತಿಂದರಾಯ್ತು "   ಅಂದ್ಕೊಂಡು  ವರ್ಷಪೂರ್ತಿ   ಪಾರಾಸಿಟಾಮಾಲ್  ಮಾತ್ರೆಗಳನ್ನು  ನುಂಗುತ್ತ  ದಿನ  ನೂಕುವವರಿದ್ದಾರೆ .   ಇದು  ಮಿತಿ  ಮೀರಿದಲ್ಲಿ  ಅಪಾಯ ಕಟ್ಟಿಟ್ಟ  ಬುತ್ತಿ .   ಈ  ಮದ್ದುಗಳ  ಸೇವನಾನಂತರ  ಶರೀರದ  ಪಚನಾಂಗಗಳು ಉಳಿದ ಶೇಷವನ್ನು  ಹೊರ ಹಾಕುತ್ತವೆಯೇ ,  ಖಂಡಿತ ಇಲ್ಲ .   ಲಿವರ್ ,  ಕಿಡ್ನಿ ,  ಗಾಲ್ ಬ್ಲಾಡರ್,  ಪ್ಯಾಂಕ್ರಿಯಾಸ್ ....ಎಲ್ಲವೂ  ಹಾನಿಗೊಳಗಾಗುತ್ತವೆ .   ನಿಯಮಿತವಾಗಿ  ಸಾಂಬ್ರಾಣಿಯ  ಬಳಕೆ  ಮಾಡುತ್ತಿದ್ದಲ್ಲಿ  ಇಂತಹ  ತೊಂದರೆಗಳನ್ನು  ತಡೆಯಬಹುದೆಂದು ಈಗಿನ  ವೈದ್ಯಕೀಯ  ಸಂಶೋಧನೆಗಳು  ಹೇಳುತ್ತವೆ .

ಆಡುನುಡಿಯಲ್ಲಿ  ' ಸಾಂಬ್ರಾಣಿ ' ಯಾಗಿರುವ  ಈ  ಸಸ್ಯ  ಶಿಷ್ಟ ಕನ್ನಡದಲ್ಲಿ ' ದೊಡ್ಡಪತ್ರೆ '  ಯಾಗಿದೆ.  
ಮಲಯಾಳಂ ನಲ್ಲಿ  പനിക്കൂർക്ക  ಎಂದೂ ,  ತಮಿಳು ಭಾಷೆಯಲ್ಲಿ  கற்பூரவள்ளி  ಎಂದೂ ಹೆಸರಿರಿಸಿದ್ದಾರೆ .    ಸಸ್ಯಶಾಸ್ತ್ರೀಯವಾಗಿ  ಇದು  Plectranthus amboinicus ,  ಹಾಗೂ  Lamiaceae  ಕುಟುಂಬಕ್ಕೆ  ಸೇರಿದೆ .    ಇದು ಒಂದು ಅಪ್ಪಟ  ಭಾರತೀಯ ಸಸ್ಯ .  

ಕೈದೋಟದಲ್ಲಿ  ಅಲಂಕಾರಿಕ  ಸಸ್ಯ .  ಕ್ರೋಟನ್ ಗಿಡಗಳಂತೆ  ಬೇರೆ ಬೇರೆ  ವರ್ಣಗಳಲ್ಲಿ  ಲಭ್ಯ .   ವಿಪರೀತ  ಬಿಸಿಲು  ಇದರ  ಸೌಂದರ್ಯವನ್ನು  ಮಂಕಾಗಿಸುತ್ತದೆ .  ಒಳಾಂಗಣದ  ಕುಂಡಗಳಲ್ಲಿಯೂ    ಬೆಳೆಸಬಹುದು .


Posted via DraftCraft app

ಐ - ಪ್ಯಾಡ್ ಕನ್ನಡ



ಐ - ಪ್ಯಾಡ್ ಕಂಪ್ಯೂಟರ್ ಮಾಧ್ಯಮದ ಅತಿ ಸರಳ ಸಾಧನ. ಒಮ್ಮೆ ಬಳಕೆಯ ವಿಧಾನ ತಿಳಿದರೆ ಸಾಕು, ಮುಂದಿನದನ್ನು ಅದೇ ಕಲಿಸುತ್ತದೆ. ನಮ್ಮ ಅಭಿರುಚಿಯ ಯವುದೇ ಕ್ಷೇತ್ರದಲ್ಲಿ ಕೈಯಾಡಿಸಲು ವಿಪುಲ ಅವಕಾಶಗಳಿವೆ, ಆಯ್ಕೆಗಳೂ ಬೇಕಾದಷ್ಟಿವೆ.
ಫೇಸ್ ಬುಕ್ ಮಾಧ್ಯಮವನ್ನು ಪ್ರವೇಶಿಸಿ ಸುಮಾರಾಗಿ ಒಂದು ವರ್ಷವಾಗುತ್ತಾ ಬಂದಿದೆ. ಕಂಪ್ಯೂಟರಿನ ಬಗ್ಗೆ ಪ್ರಾಥಮಿಕ ಶಿಕ್ಷಣವೂ ಇಲ್ಲದೆ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದೇನೆ.

ಐ - ಪ್ಯಾಡ್ ನಲ್ಲಿ ಲಭ್ಯವಿರುವ ಅಪ್ಲಿಕೇಶನ್ ಗಳಲ್ಲಿ ಕನ್ನಡ ಕೀ ಬೋರ್ಡ್ ( Kannada Key Board ) ಬಹು ಮುಖ್ಯವಾದದ್ದು. ಇದನ್ನು ಬಳಸುವ ಸಮಯದಲ್ಲಿ ಬರಹಗಾರರಿಗೆ ಅಂತರ್ಜಾಲ ಸಂಪರ್ಕ ಬೇಕಾಗಿ ಬರುವುದಿಲ್ಲ, ವಿದ್ಯುತ್ ಸಂಪರ್ಕವೂ ಬೇಡ. ಸಾಮಾನ್ಯ ಕೀಲಿಮಣೆಯಂತೆ ಉಪಯೋಗಿಸಿ ಬರೆದದ್ದನ್ನು ಕೋಪಿ, ಪೇಸ್ಟ್ ನೋಟ್ ಪ್ಯಾಡ್ ನಲ್ಲಿ ಮಾಡಿಟ್ಟುಕೊಳ್ಳಬಹುದಾಗಿದೆ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಈ ತಂತ್ರಾಶ ಲಭ್ಯವಿದೆ.

ಇದು ಇಂಗ್ಲಿಷ್ ಅಕ್ಷರಗಳಿಂದ ಬರೆಯಬಹುದಾದ ಕನ್ನಡವಲ್ಲ. ಇನ್ನಿತರ ಬರಹ ಸೌಲಭ್ಯಗಳಲ್ಲಿ ನಮ್ಮ ದ್ರಾವಿಡ ಭಾಷಾ ವರ್ಣಮಾಲೆಯ ಎಲ್ಲ ಅಕ್ಷರಗಳನ್ನು ಬರೆಯಲು ಸಾಧ್ಯವಿಲ್ಲ. ಇಂಗ್ಲಿಷ್ ನಲ್ಲಿ ಬರೆದು, ಬೇಕಾದ ಭಾಷೆಗೆ ಪರಿವರ್ತಿಸಬಲ್ಲ ಟ್ರಾನ್ಸ್ ಲಿಟರೇಶನ್ ಕ್ರಮ ಸಾಮಾನ್ಯವಾಗಿ ಬಳಕೆಯಲ್ಲಿದೆ. ನಮ್ಮ ಭಾಷಾ ಸಂಪತ್ತಿಗೆ ಪೂರಕವಾಗಿರುವ ವ್ಯಂಜನಾಕ್ಷರಗಳಾದ ಛ , ಝ , ಠ , ಞ , ಙ, ಱ, ಳ ಹಾಗೂ ಋ , ಌ , ಐ , ಔ ಸ್ವರಾಕ್ಷರಗಳು ಬರೆಯಲಾಗುವುದೇ ಇಲ್ಲ. ಅನಿವಾರ್ಯವಾಗಿ ಆ ಅಕ್ಷರಗಳನ್ನು ಕೈ ಬಿಟ್ಟು ಬರೆಯುವಂತಹ ಪರಿಸ್ಥಿತಿಯಿದೆ.

ಇಲ್ಲಿ ಬೇಕೆನಿಸಿದ ಪದಪುಂಜಗಳ ಬಳಕೆ ನಿರಾಯಾಸವಾಗಿ ಮಾಡುತ್ತಾ ಬರೆಯಬಹುದು. ತುಳು, ಕೊಂಕಣಿ, ಬ್ಯಾರೀ, ಕೊಡವ ಭಾಷೆಗಳನ್ನು ಕನ್ನಡದಲ್ಲಿ ನಿರಾತಂಕವಾಗಿ ಬರೆಯಬಹುದಾಗಿದೆ.





Posted via DraftCraft app



ಟಿಪ್ಪಣಿ: ದಿನಾಂಕ 20, ನವಂಬರ್, 2013ರಂದು ಮುಂದುವರಿಸಿ ಬರೆದದ್ದು.


ಅಂತರ್ಜಾಲ ಮಾಧ್ಯಮದಲ್ಲಿ ಕನ್ನಡವನ್ನೂ ಬರೆಯಲು ಸಾಧ್ಯವಿದೆ ಎಂದು ತಿಳಿದಾಗ ಗರಿಗೆದರಿದ ಉತ್ಸಾಹ ಬಂದಿತು. ಆದರೆ ಏನೇ ಬರೆಯಬೇಕಿದ್ದರೂ abcd...ಅಕ್ಷರಮಾಲೆಯೊಂದೇ ಗತಿ. ಆದರೂ ಚಿಂತಿಲ್ಲ ಅಂದ್ಕೊಂಡು ಫೇಸ್ ಬುಕ್ ನಲ್ಲಿ ಕಮೆಂಟುಗಳನ್ನು ಛಾಪಿಸುವುದರಲ್ಲಿ ಏನೋ ತೃಪ್ತಿ. ಒಮ್ಮೆ ಏನಾಯ್ತೂಂದ್ರೆ ಕೇವಲ ಮೂರೇ ವಾಕ್ಯಗಳಿದ್ದ ಅಡುಗೆ ವಿಧಾನ ಬರೆದೆ. ಶುಂಠಿ ಅಂತ ಬರೆಯಬೇಕಾಗಿದ್ದಲ್ಲಿ ಟ್ರಾನ್ಸ್ ಲಿಟರೇಶನ್ ಕನ್ನಡ ಶುಂಟಿ ಎಂದೇ ಬರೆಯಿತು. ಹೇಗೆ ಪ್ರಯತ್ನಿಸಿದರೂ ಶುಂಠಿ ಬರಲಿಲ್ಲ. ನಮ್ಮ ಕಾಸರಗೋಡಿನ ಪ್ರಸಿದ್ಧ ಕವಿಗಳೂ ಹಿರಿಯರೂ ಆದ ಕಯ್ಯಾರ ಕಿಞ್ಞಣ್ಣ ರೈಗಳ ಹೆಸರು ಬರೆಯಲು abcd...ಅಕ್ಷರಮಾಲೆ ಬಿಡಲಿಲ್ಲ. ಮುದುಡಿಯೇ ಹೋದ ಮನಸ್ಸು ಈಗ ಜಾಗೃತವಾಯಿತು. ಇನ್ನೂ ಹಲವು ಅಕ್ಷರಗಳನ್ನು, ಙ, ಝ, ಋ, ಖ ಇತ್ಯಾದಿಗಳೂ ಬರೆಯಲಾಗುವುದಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡು ನಮ್ಮೆಜಮಾನ್ರಿಗೆ ದೂರು ಸಲ್ಲಿಸಿ ಸುಮ್ಮನಾಗಬೇಕಾಯಿತು. ಅವರೂ ಅಂತರ್ಜಾಲದ Apps Store ತಡಕಾಡಿ ಇನ್ನೊಂದು ಹೊಸ ಕೀಲಿಮಣೆಯ apps ಅನ್ನು iPad ನಲ್ಲಿ ಸ್ಥಾಪಿಸಿ ಕೊಟ್ಟರು.

" ಇದನ್ನು ಪ್ರಯತ್ನಿಸಿ ನೋಡು " ಅಂದ್ಬಿಟ್ಟು ಸುಮ್ಮನಾದರು.

" ಪುನಃ ಅಆಇಈ ಕಲಿಯೂದೇ ಆಯ್ತಲ್ಲ ..." ಗೊಣಗಿದೆ.

" ನಿಂಗೆ ಬೇಕಿದ್ರೆ ಕಲೀ ಬೇಕು "

" ಆಯ್ತು, ಮತ್ತೆ ಕಲಿಯುವಾ, ಈಗ ಅಡುಗೆ ಮಾಡೂದಿದೆ "

ಆ ಕೂಡಲೇ ಅಕ್ಷರ ಬರೆಯುತ್ತಾ ಕುಳಿತಿರಲು ಬೇರೇನೂ ಉದ್ಯೋಗವಿಲ್ಲದಿದ್ದರಾಗುತಿತ್ತು. ಹೀಗೇ ಒಂದು ದಿನ ಕರೆಂಟು ಹೋಗಿತ್ತು. ಅಡುಗೆಮನೆಯ ಉಪಕರಣಗಳೆಲ್ಲ ನಿಶ್ಚಲವಾಗಿದ್ದಂತಹ ಹೊತ್ತಿನಲ್ಲಿ ಬಿಡುವು ದೊರೆಯಿತು. ವಿದ್ಯುತ್ ಹಾಗೂ ಅಂತರ್ಜಾಲದ ಸಂಪರ್ಕವಿಲ್ಲದೇ ಬರೆಯಬಹುದಾದ ಕನ್ನಡ ಕೀ ಬೋರ್ಡ್ ನೆನಪಾಗಿ, ಐ ಪ್ಯಾಡ್ ಮೇಲೆ ಬೆರಳು ಹರಿದಾಡಿಸಿ ಅಆಇಈ ಬರೆಯಲು ತೊಡಗಿದೆ. ಎಲ್ಲವೂ ಸುಲಲಿತ, ಸರಳ. ಈಗ ಬಳಕೆಯಲ್ಲಿ ಇಲ್ಲದ ಅಕ್ಷರಗಳೂ ಇದರಲ್ಲಿವೆ. ಌ - ಈ ಅಕ್ಷರದ ಪ್ರಯೋಗ ಹೇಗೆಂದು ಗೊತ್ತಿಲ್ಲ. ಕಾಲೇಜು ದಿನಗಳಲ್ಲಿ ರಾಘವಾಂಕನ ಹರಿಶ್ಚಂದ್ರ ಕಾವ್ಯ ನಮ್ಮ ಕನ್ನಡ ಪಠ್ಯಗಳಲ್ಲೊಂದಾಗಿತ್ತು. ಅದರಲ್ಲಿ ಹೀಗೊಂದು ಅಕ್ಷರವನ್ನು ಓದಿದ ನೆನಪು ಬರಲೇ ಇಲ್ಲ. ಇನ್ನು ಱ - ಇದು ಕೂಡಾ ಈಗ ನಮ್ಮ ಶಬ್ಧ ಭಂಡಾರಕ್ಕೆ ಬೇಡವಾಗಿದೆ. ಒತ್ತಕ್ಷರಗಳಲ್ಲಿ ಹೀಗೊಂದು ಪ್ರಯೋಗ ಇದೆ - ೄ ಇದನ್ನು ಎಲ್ಲಿ ಬಳಕೆ ಮಾಡುವುದೋ ತಿಳಿಯದು.

ಅಕ್ಷರಗಳನ್ನು ಜೋಡಿಸಿ ಬರೆಯುವುದು ಹೇಗೆ?
ಕ್ + ಕ = ಕ್ಕ. ಸ್+ಥ = ಸ್ಥ ಹೀಗೆ ಬರೆಯುವಾಗ ಎರಡು ಅಕ್ಷರಗಳ ನಡುವೆ ಖಾಲಿ ಸ್ಥಳ (space) ಬಿಡುವಂತಿಲ್ಲ.

ನಾನು ಉಪಯೋಗಿಸುವ ಕನ್ನಡ ಕೀಲಿಮಣೆ ಇದು. http://appshopper.com/utilities/kannada-keyboard ಇದು iPhone ಹಾಗೂ iPad ಉಪಯೋಗಿಗಳಿಗೆ ಮಾತ್ರ ಲಭ್ಯವಿದೆ. ಬಹುಶಃ ಕನ್ನಡಿಗರು ಕನ್ನಡದಲ್ಲಿ ಬರೆಯಲು ನಿರುತ್ಸಾಹಿಗಳಾಗಿರುವುದರಿಂದಲೋ ಏನೂ ಇದು ಈಗ ಉಚಿತವಾಗಿಲ್ಲ, install ಮಾಡಿಕೊಳ್ಳಲು ಒಂದು ಡಾಲರ್ ಶುಲ್ಕ ಕೊಡಬೇಕಾಗುತ್ತದೆ.

ಕನ್ನಡದ ಜನಪ್ರಿಯ ದಿನಪತ್ರಿಕೆಗಳು ಮಾತ್ರವಲ್ಲದೆ ಸುಧಾ, ಕರ್ಮವೀರ, ಸಖೀ ಮ್ಯಾಗಜೀನ್ ಗಳು apps ರೂಪದಲ್ಲಿ ಓದುಗರಿಗೆ ಉಚಿತವಾಗಿ ಲಭ್ಯವಿವೆ. ಕನ್ನಡದ ಶ್ರೇಷ್ಠ ಬರಹಗಾರರಾಗಿರುವ ಕೆ. ಟಿ. ಗಟ್ಟಿ ಆರಂಭದಿಂದಲೇ ಸುಧಾ ಪತ್ರಿಕೆಯಲ್ಲಿ ಧಾರಾವಾಹಿಗಳ ಮೂಲಕ ಚಿರಪರಿಚಿತರು. ಕೆ. ಟಿ. ಗಟ್ಟಿಯವರ ಇತ್ತೀಚೆಗಿನ " ಏಳು ಜನ್ಮದ ಕೋಟೆ " ಕಾದಂಬರಿಯನ್ನು ಸುಧಾ apps ಮೂಲಕ ಆರಂಭದಿಂದ ಕೊನೆತನಕ ಓದುವ ಭಾಗ್ಯ ದೊರೆಯಿತು.








Tuesday 18 September 2012

ರಾಗೀ ಹಲ್ವಾ




ಬಾಳೆಗೊನೆ ಹಣ್ಣಾಗಿ ಮಾಗಿದೆ. ಸಿಪ್ಪೆ ಕಪ್ಪಾಗುವ ಮೊದಲೇ ಮುಗಿಸಬೇಕಾಗಿದೆ. ಅದನ್ನೆಲ್ಲಾ ತಿಂದು ಮುಗಿಸುವಷ್ಟು ಮಂದಿ ಮನೆಯಲ್ಲಿ ಬೇಕಲ್ಲ,

" ಏನು ಮಾಡೋಣ "

" ಮಾಡೋದೇನು ಸಕ್ಕರೆ ತುಪ್ಪ ಹಾಕಿ ಹಲ್ವಾ ಮಾಡಿಟ್ಟುಕೊಳ್ಳಿ "

" ನನ್ನ ಮಗಳಿಗೆ ಬಾಳೆಹಣ್ಣಿನ ಹಲ್ವಾ ಎಂದರೆ ಆಗದು "

ಹೀಗೆ ಮಾಡಿ,
ಬಾಳೆಹಣ್ಣನ್ನು ಸಣ್ಣಗೆ ಹಚ್ಚಿಟ್ಟುಕೊಂಡು ದಪ್ಪ ತಳದ ಪಾತ್ರದಲ್ಲಿ ಹಾಕಿ , ಉರಿಯ ಮೇಲೆ ಇಡಿ. ಒಂದೆರಡು ಚಮಚ ತುಪ್ಪ ಹಾಕಿ ಮಗುಚುತ್ತಾ ಇರಿ. ಬಾಳೆಹಣ್ಣು ಬೆಂದಂತೆ ಘಮ್ ಘಮನೆ ಸುವಾಸನೆ ಬರಲಾರಂಭಿಸುತ್ತದೆ. ಈಗ ಸಿಹಿಗೆ ಬೇಕಾದ ಸಕ್ಕರೆ ಹಾಕಿ, ಸ್ವಲ್ಪ ಬೆಲ್ಲವನ್ನೂ ಸೇರಿಸಿ ( ಬೆಲ್ಲ ಒಳ್ಳೆಯದು ). ಸಕ್ಕರೆ ಬೆಲ್ಲಗಳು ಕರಗಿ ಒಂದೇ ಮಿಶ್ರಣವಾಗುತ್ತಿದ್ದಂತೆ ....

"ಏನು ಮಾಡ್ತೀರಾ "

ಬೇಯುತ್ತಿರುವ ಪಾಕದ ಅಂದಾಜು ನೋಡಿಕೊಂಡು, ಒಂದು ಅಥವಾ ಎರಡು ಕಪ್ ರಾಗೀ ಹುಡಿ ಹಾಕಿ. ಮಗುಚುತ್ತಾ ಇರಿ. ರಾಗಿ ಬಹು ಬೇಗನೆ ಬೇಯುತ್ತದೆ. ಈ ಮಿಶ್ರಣ ಒಂದೇ ಮುದ್ದೆ ಆಯಿತೇ ... ಬೇಕಿದ್ದಲ್ಲಿ ಸ್ವಲ್ಪ ಗಸಗಸೆ, ಗೋಡಂಬಿ, ದ್ರಾಕ್ಷಿ ಹಾಕಿಕೊಳ್ಳಬಹುದು. ಇಲ್ಲದಿದ್ದರೂ ತೊಂದರೆಯಿಲ್ಲ. ಒಂದು ಕಪ್ ತುಪ್ಪ ಬಿಸಿ ಮಾಡಿ ಹಾಕಿಕೊಳ್ಳಿ. ತುಪ್ಪ ಪಾಕದೊಂದಿಗೆ ಸೇರುವಂತೆ ಸೌಟಿನಿಂದ ಕೆದಕುತ್ತಾ ಬನ್ನಿ. ಇನ್ನೊಂದು ತಟ್ಟೆ ತಯಾರು ಮಾಡಿ. ಒಂದೇ ಮುದ್ದೆಯಾದ ಪಾಕವನ್ನು ಅದಕ್ಕೆ ಸುರುವಿಕೊಂಡು ತಟ್ಟೆಯಲ್ಲಿ ಹರಡಿ ತಣಿಯಲು ಬಿಡಿ. ಚೆನ್ನಾಗಿ ತಣಿದ ನಂತರ ಚಾಕುವಿನಲ್ಲಿ ಗೆರೆ ಹಾಕಿಟ್ಟು, ಬೇಕಾದಾಗ ತುಂಡುಗಳನ್ನು ತಿನ್ನುವಿರಂತೆ.

ಬಾಳೆಹಣ್ಣಿನ ಹಲ್ವಾವನ್ನು ರಾಗೀ ಹಲ್ವವಾಗಿ ಬದಲಾಯಿಸಿದ ಕಲೆಗಾರಿಕೆಯನ್ನು ಯಾರಿಗೂ ಹೇಳ್ಬೇಡಿ, ತಿನ್ನುವವರಿಗೆ ತಿಳಿದರೆ ತಾನೇ ! ಮಗಳಿಗೆ " ರಾಗೀ ಹಲ್ವಾ, ತಿನ್ನು ನೋಡೋಣ " ಅನ್ನಿ . ಮರುಮಾತಿಲ್ಲದೆ ತಿನ್ನುವ ವೈಖರಿಗೆ ಕಣ್ ಕಣ್ ಬಿಡುವ ಸರದಿ ನಿಮ್ಮದು. ತಯಾರಿಗೆ ಹೆಚ್ಚು ಶ್ರಮವಿಲ್ಲ, ಅಡುಗೆಮನೆಯ ಇನ್ನಿತರ ಕೆಲಸ ಕಾರ್ಯಗಳೊಂದಿಗೆ ಮಾಡಿಕೊಳ್ಳಬಹುದು.


Posted via DraftCraft app



ಸೋಮವಾರ, ದಿನಾಂಕ 4, ನವಂಬರ್ 2013ರಂದು ಸೇರಿಸಿದ ಹೊಸ ಬರಹ....



ಪಕ್ಕದ ಮನೆಯ ಹುಡುಗ, ನನ್ನ ಮಗನ ಓರಗೆಯವನು ಬಂದ, ಕೈಲೊಂದು ಲ್ಯಾಪ್ ಟಾಪ್.

" ದೀಪಾವಳಿ ಸ್ಪೆಶಲ್ ಸ್ವೀಟು ಮಾಡಿದ್ದೇನೆ, ತಿಂದು ನೋಡು "

" ಹ್ಞುಂ ಚೆನ್ನಾಗಿದೆ, ಇಂತದ್ದೇ ಒಂದು ಮಾಡ್ತಾರಲ್ಲ...." ಆಲೋಚಿಸತೊಡಗಿದ.

" ಸತ್ಯನಾರಾಯಣಪೂಜೆಗೆ ಮಾಡ್ತಾರಲ್ಲ ಸಪಾದಭಕ್ಷ್ಯ , ಅದೂ ಅಂತೀಯಾ?"

" ಹ್ಞಾ, ಕರೆಕ್ಟ್ " ಅಂದ.

" ಅದೂ ಹೀಗೇನೇ, ಆದ್ರೆ ಸಪಾದಭಕ್ಷ್ಯ ಸುಮ್ ಸುಮ್ನೆ ಮಾಡೋ ಹಾಗಿಲ್ಲ...." ಅನ್ನುತ್ತಾ ಕಡಂಬಿಲ ಸರಸ್ವತಿ ಬರೆದ ಪಾಕಶಾಸ್ತ್ರ ಪುಸ್ತಕ ' ಅಡಿಗೆ ' ಎಲ್ಲಿದೇಂತ ಪುಸ್ತಕದ ಶೆಲ್ಫ್ ನಲ್ಲಿ ತಡಕಾಡಿ ತರುವಷ್ಟರಲ್ಲಿ ಅವನು ಹೋಗಿಯಾಗಿತ್ತು.

15 -20 ಕದಳೀ ಬಾಳೆಹಣ್ಣುಗಳು. ಚೆನ್ನಾಗಿ ಹಣ್ಣಾಗಿರಬೇಕು, ಚಿಕ್ಕದಾಗಿ ಕತ್ತರಿಸಿ.
ಒಂದು ಕಪ್ ತುಪ್ಪ.
ಒಂದು ಕಪ್ ಗೋಧಿ ಹುಡಿ.
ಒಂದೊವರೆ ಕಪ್ ಸಕ್ಕರೆ. ಸಿಹಿಯ ಅವಶ್ಯಕತೆಗೆ ತಕ್ಕಂತೆ ಹೆಚ್ಚು ಕಮ್ಮಿ ಮಾಡಿಕೊಳ್ಳಬಹುದು.
ದಪ್ಪ ತಳದ ಬಾಣಲೆಯಲ್ಲಿ ತುಪ್ಪ ಎರೆದು ಬಿಸಿ ಮಾಡಿಕೊಳ್ಳಿ.
ಗೋಧಿ ಹುಡಿ ಹಾಕಿ ಹುರಿಯಿರಿ.
ಕತ್ತರಿಸಿದ ಬಾಳೆಹಣ್ಣುಗಳನ್ನು ಸುರಿಯಿರಿ.
ಆಗಾಗ ಕೈಯಾಡಿಸುತ್ತಾ ಚೆನ್ನಾಗಿ ಬೇಯಿಸಿ.
ಸಕ್ಕರೆ ಸುರಿಯಿರಿ.
ಸಕ್ಕರೆ ಕರಗುತ್ತಾ ಪಾಕದೊಂದಿಗೆ ಸೇರಲು ಸೌಟು ಹಾಕಿ ಕೆದಕುತ್ತಿರಿ.
ಮಿಶ್ರಣ ಮುದ್ದೆಗಟ್ಟಿತೇ, ಕೆಳಗಿಳಿಸಿ ತಟ್ಟೆಗೆ ವರ್ಗಾಯಿಸಿ.
ಆರಿದ ನಂತರ ಬೇಕಾದ ಆಕೃತಿಯಲ್ಲಿ ಕತ್ತರಿಸಿ ತಿನ್ನಿ.
ಬೇಯಿಸಿದ ಬಾಳೆಹಣ್ಣು ಸುವಾಸನಾಯುಕ್ತವಾಗಿರುವುದರಿಂದ ಬೇರೆ ಪರಿಮಳ ದ್ರವ್ಯಗಳನ್ನು ಹಾಕಬೇಕೆಂದೇನೂ ಇಲ್ಲ.




Wednesday 12 September 2012

ಕಥನ ....ಕಾಲಹರಣ

 
ಲೇಖಕರು  ಸಾಮಾನ್ಯವಾಗಿ  ಒಂದು  ಬರಹವನ್ನು  ಸಿದ್ಧಪಡಿಸಿ ,  ನಂತರ  ಅದಕ್ಕೆ  ಸೂಕ್ತವಾದ ಚಿತ್ರಕ್ಕಾಗಿ  ತಡಕಾಡುತ್ತಾರೆ .   ಯಾರಿಂದಲಾದರೂ  ಚಿತ್ರ  ಬರೆಸುತ್ತಾರೆ .   ಇಲ್ಲಿ  ವಿಭಿನ್ನ  ಸ್ಥಿತಿ .   ಚಿತ್ರಗಳಿವೆ ,  ಒಂದೊಂದು  ಚಿತ್ರವೂ  ಒಂದೊಂದು  ವಿಷಯವನ್ನು  ಬಿಡಿಸುತ್ತಾ  ಹೋಗುತ್ತದೆ .   ಅದನ್ನು  ಅಕ್ಷರ  ರೂಪದಲ್ಲಿ ತರುವ  ಪ್ರಯತ್ನ .....

ನಮ್ಮ  ಬಾಲ್ಯವೆಲ್ಲವೂ  ಪುಸ್ತಕಗಳ  ಒಡನಾಟದಲ್ಲೇ ಕಳೆಯಿತು .   ಅಕ್ಷರ  ಕಲಿತ  ಕೂಡಲೇ ,  ಓದಲು  ಪ್ರಾರಂಭಿಸಿದ್ದು  ಮಕ್ಕಳ  ಕಥೆಗಳನ್ನು .   ನಮ್ಮಪ್ಪ  ಪ್ರತೀ  15  ದಿನಕ್ಕೊಮ್ಮೆ ಮಂಗಳೂರಿಗೆ ಹೋಗಿಯೇ ಹೋಗುತ್ತಿದ್ದರು .   ಅಡಿಕೆ ಮಾರುಕಟ್ಟೆ ಧಾರಣೆ  ತಿಳಿಯಲು ,  ಭಂಡಸಾಲೆಯಲ್ಲಿ ಹಾಕಿದ್ದ ಅಡಿಕೆ ಮಾರಾಟವಾಯಿತೇ , ಇತ್ಯಾದಿ ವ್ಯವಹಾರಗಳು .    ಅಡಿಕೆಯೆಂದರೆ  ಆ  ಕಾಲದಲ್ಲೇ ' ಝಣ ಝಣ ಕಾಂಚಾಣ ' ,  ಬರುವಾಗ ಮಕ್ಕಳಿಗೆ ಓದಲು ಕಥೆ  ಪುಸ್ತಕಗಳು .   ಈಗಲೂ  ನೆನೆದರೆ  ' ಹಾಯ್'.....


ಮಂಗಳೂರಿನ   ' ಬಾಲ ಸಾಹಿತ್ಯ ಮಂಡಲ ' ದಿಂದ ಪ್ರಕಟವಾಗುತ್ತಿದ್ದ  ಪಂಜೆ ಮಂಗೇಶ ರಾಯರ  ಶಿಶು ಸಾಹಿತ್ಯ ,  ' ತಟಪಟ ಹನಿಯಪ್ಪ ' ,  ' ಇಲಿಗಳ  ತಕ ಥೈ ' ,  ' ಕಾಗಕ್ಕ  ಗುಬ್ಬಕ್ಕನ  ಕಥೆ '  ಇವುಗಳನ್ನೆಲ್ಲ  ನಾವು  ಓದಿಯೇ  ಆನಂದಿಸಿದ್ದೇವೆ .   ತಿಂಗಳಿಗೊಮ್ಮೆ  ಬರುತ್ತಿದ್ದ  ' ಚಂದಮಾಮ '  ಹಿರಿಕಿರಿಯರೆಲ್ಲರಿಗೂ  ಪ್ರಿಯ  ಸಂಗಾತಿ .   ಅದರಲ್ಲಿ  ಮಕ್ಕಳ  ಕಥೆಗಳಲ್ಲದೆ  ಬಂಗಾಲೀ  ಕಾದಂಬರಿಗಳೂ ಅನುವಾದಿತವಾಗಿ  ಬರುತ್ತಿದ್ದವು .  ' ದುರ್ಗೆಶ ನಂದಿನಿ ' ,   ' ನವಾಬ ನಂದಿನಿ '  ಧಾರಾವಾಹಿ ರೂಪದಲ್ಲಿ  ,   ಮಹಾಭಾರತ  ವರ್ಣ ರಂಜಿತ  ಮುಖಪುಟದಲ್ಲಿ ,  ಬೇತಾಳ ಕಥೆಗಳು ,  ಪರೋಪಕಾರೀ ಪಾಪಣ್ಣ  ,... ಹೇಳಿದಷ್ಟೂ  ಮುಗಿಯದ  ಲಿಸ್ಟು  .

ಹೊಸ ಹೊಸ  ಮಕ್ಕಳ ಸಾಹಿತ್ಯ  ಪ್ರಕಟವಾಗುತ್ತಿದ್ದಂತೆ ,  ತಪ್ಪದೆ ಮನೆಗೆ ಬರುತ್ತಿತ್ತು .   ಅದರಲ್ಲಿ  ಒಂದು  ಭಾರತ ಭಾರತೀ  ಪುಸ್ತಕ ಮಾಲೆ .   ಹತ್ತು  ಪುಸ್ತಕಗಳ ಒಂದು  ಸಂಪುಟ ,  ಒಂದೇ ಬಾರಿಗೆ ಸಿಗುತ್ತಿತ್ತು .   ಮನೆಯ  ಮಕ್ಕಳೆಲ್ಲ  ಎಳೆದಾಡಿ  ಓದುವವರೇ .   ಅದರಲ್ಲಿ  ಒಂದು  ಪುಸ್ತಕ  ಕರ್ನಾಟಕದ  ಚಿತ್ರ ಕಲಾವಿದ  ಬಿ. ವೆಂಕಟಪ್ಪ ಅವರ  ಬಗ್ಗೆ  ಇತ್ತು .   ಬರೆದ  ಲೇಖಕರ  ಹೆಸರು  ನೆನಪಿಲ್ಲ ,  ಆದರೆ ಅದರ  ಮುಖಪುಟದ ಚಿತ್ರ  ಬಿಡಿಸಿದವರು  ಚಂದ್ರನಾಥ್ ಆಚಾರ್ಯ .   ಒಳಪುಟದ  ಬರಹಕ್ಕಿಂತ  ನನ್ನನ್ನು  ಆಕರ್ಷಿಸಿದ್ದು  ಮುಖಪುಟದ  ಚಿತ್ರ  .   ಅದನ್ನು. ಹಾಗೇ  ಪಡಿಮೂಡಿಸಲು  ಆಗ  ಪ್ರಯತ್ನಿಸಿದ್ದು ......



ಓದುವಿಕೆಯ  ವ್ಯಾಪ್ತಿ  ಹಿಗ್ಗಿದಂತೆ  ಮುಂದೆ  ಎನ್.  ನರಸಿಂಹಯ್ಯ ,  ತ್ರಿವೇಣಿ ,  ಅ ನ ಕೃ .  ಕೃಷ್ಣಮೂರ್ತಿ ಪುರಾಣಿಕರೆಲ್ಲ  ಆಪ್ತರಾದರು .   ಅಲ್ಲಿಂದ ಮುಂದೆ  ಶಿವರಾಮ ಕಾರಂತ  ದರ್ಶನ ,   ಹೀಗೇ  ಮುಂದುವರೆದು  ಎಸ್.  ಎಲ್.  ಭೈರಪ್ಪ  ಬಂದರು ,  ಇತ್ತೀಚೆಗಿನ  'ಕವಲು' ವರೆಗೆ .    ಭೈರಪ್ಪ  ಬರೆದ  ಕೃತಿಗಳ  ಹಿಂಭಾಗದ  ರಕ್ಷಕವಚದಲ್ಲಿ  ಒಂದು ಚಿಕ್ಕ ಸೈಜಿನ  ಕಪ್ಪು ಬಿಳುಪಿನ  ಚಿತ್ರ  ಇರುತ್ತಿತ್ತು .    ಆಗ  ಇಂದಿನಂತೆ   ದೃಶ್ಯ ಮಾಧ್ಯಮಗಳಿರಲಿಲ್ಲವಾಗಿ ,  ಆ  ಚಿತ್ರವೇ  ಲೇಖಕರ  ಪ್ರತಿಬಿಂಬವಾಗಿ ......



'ಉದಯವಾಣಿ '  ....ಹೊಸ  ದಿನಪತ್ರಿಕೆ  ಬಂದಿತು .   ಅದರೊಂದಿಗೆ  'ತುಷಾರ '  ಮಾಸ ಪತ್ರಿಕೆಯೂ .   ಅದರಲ್ಲಿ  ಜನಪ್ರಿಯವಾಗಿದ್ದ  ಒಂದು  ಲೇಖನಮಾಲೆ  ' ಸರಸ ' .    ಅದನ್ನು  ಓದಲು  ಅಕ್ಕಪಕ್ಕದ  ಮನೆಯ  ಯುವತಿಯರೆಲ್ಲ  ಓಡಿ  ಬರ್ತಿದ್ರು ,  ನಮ್ಮ  ಮನೆಗೆ . ಅದನ್ನು ಅಚ್ಚುಕಟ್ಟಾಗಿ  ಈಶ್ವರಯ್ಯ  ಬರೆಯುತ್ತಿದ್ದರು .    ಆ  ಅಂಕಣದಲ್ಲಿ  ಒಂದು  ಪುಟ್ಟ  ರೇಖಾ ಚಿತ್ರ ..... ನಾನೂ  ಬಿಡ್ತೇನಾ ,   ನೋಡಿಯೇ  ಬಿಟ್ಟೆ  ಒಂದು  ಕೈ ...



ಸಾಹಿತ್ಯವನ್ನು  ಓದುವಾಗ  ಕೇವಲ  ಕಥೆ ಕಾದಂಬರಿಗಳು  ಮಾತ್ರವಲ್ಲ ,   ಕಾವ್ಯ  ಕವಿತೆಗಳೂ  ಓದುವ  ವ್ಯಾಪ್ತಿಗೆ  ಬಂದೇ  ಬರುತ್ತವೆ .   ಕವಿ  ಮುದ್ದಣನ  ' ಅದ್ಭುತ ರಾಮಾಯಣಂ ',    ನಿಸ್ಸಾರ್  ಅಹಮದ್ ರ   ' ಸಂಜೆ  ಐದರ  ಮಳೆ ' ಯೂ  ಭೋರ್ಗರೆದು  ಸುರಿದೇ  ಬಿಟ್ಟಿತು ....



Posted via DraftCraft app






" ಹೇಳಕ್ಕಾ .... ಗಾಂಧಾರಿ , ನಿನ್ನ ಗುಟ್ಟು ತಿಳಿಸಕ್ಕಾ .... "





ಊಟದ ಹೊತ್ತಾಗಿತ್ತು .  ಹಿಂಬಾಗಿಲಲ್ಲಿ ನಿಂತಿದ್ದೆ ,   ನನ್ನ ಕೆಲಸಗಿತ್ತಿಯನ್ನು ಕಾಯುತ್ತಾ .   ಅವಳೋ ಬಂದಳು .   ಉರಿಬಿಸಿಲಿಗೆ ಬೆವರುನೀರು ಸುರಿಸುತ್ತಾ .   " ಅಕ್ಕಾ ,  ತಣ್ಣಗೆ ಮಜ್ಜಿಗೆನೀರು ಕೊಡಿಯಕ್ಕಾ ..." ಎಂದಳು .   ನನಗೂ ಗೊತ್ತಿತ್ತು  ಅವಳ ಮಾತಿನ ಧಾಟಿ ಹೀಗೇ ಇರುತ್ತೆ ಅಂತ .   ಮಾತಾಡದೆ ಚೆಂಬು ತುಂಬಾ ಮಜ್ಜಿಗೆ ತುಂಬಿಸಿ ಕೊಟ್ಟೆ .   " ಉಪ್ಪು ಹಾಕಿದ್ದೀರಲ್ಲ "  ಅನ್ನುತ್ತ ಕೈ ಬೊಗಸೆಯಲ್ಲಿದ್ದ ಗಾಂಧಾರಿ ಮೆಣಸುಗಳನ್ನು  ತೊಟ್ಟು ಮುರಿದು ,   ಅದನ್ನು  ಮಜ್ಜಿಗೆಗೆ ಹಾಕಿ  ನುರಿದು ನುರಿದು  ಲೋಟಕ್ಕೆ ಎರೆದು  ಎರೆದು ಕುಡಿದಳು .    " ಉಸ್ ,   ಈಗ ಹೊಟ್ಟೆ ತಂಪಾಯಿತು .."    ಅನ್ನುತ್ತ  ಕೈಕತ್ತಿಯನ್ನು  ಜಾಗದಲ್ಲಿ ಭದ್ರವಾಗಿ ಇರಿಸಿದಳು .    

ಸಂಜೆಯ ವೇಳೆ ,   ನನ್ನ  ಕಲ್ಯಾಣಿ   " ಇನ್ನು ನಾಳೆಗೆ "  ಎನ್ನುತ್ತಾ  ಮನೆಗೆ ಹೊರಡುವ  ಆತುರದಲ್ಲಿ ಪುನಃ ತೋಟಕ್ಕೆ ಓಡಿದಳು .   ಕೈಯಲ್ಲಿ  ತುಂಬಾ ಗಾಂಧಾರಿ ಮೆಣಸುಗಳು ,    ಇರುಳು  ಊಟಕ್ಕೆ  ಒಣ ಮೀನಿನ   ಜೊತೆ  ನೆಂಜಿಕೊಳ್ಳಲು  ಅವಳಿಗೆ  ಬೇಕಾಗಿತ್ತು .   ತೋಟದ ಕೆಲಸವಿರಲಿ ,   ಗದ್ದೆ ಬೇಸಾಯದ ನೇಜಿ ,  ಕೊಯ್ಲು  ಸಮಯದಲ್ಲಿ  ಇವಳಂತಹ ಶ್ರಮಜೀವಿಗಳು  ಗಾಂಧಾರಿಯ  ಸವಿರುಚಿಯನ್ನೇ ಬಯಸುತ್ತಾರೆ .   " ಛೆ ,  ನನ್ನ  ಮನೆ ಹಿತ್ತಿಲಲ್ಲಿ ಒಂದು ಗಿಡವೂ ಇಲ್ಲ ..."  ಎಂದು ಪರಿತಪಿಸುತ್ತಾ ,  ತೋಟದಲ್ಲಿ ಉಚಿತವಾಗಿ ಸಿಗುವ  ಮೆಣಸುಗಳನ್ನೂ ,   ಬೇಕಿದ್ದರೆ ಗಿಡವನ್ನೇ ಕಿತ್ತು  ಹೊತ್ತೊಯ್ಯುತ್ತಾರೆ .

ಅಷ್ಟೇ ಏಕೆ ,  ಪರಿಚಿತರು ಮನೆಗೆ ಬಂದರು . ....
" ಬಾಯಾರಿಕೆ ಏನು ತರಲೀ "   
" ನೋಡು ,  ನಿನ್ನ ಕಾಪೀ ಗೀಪೀ ಏನೂ  ಬೇಡಾ ,  ಮಜ್ಜಿಗೆನೀರು  ಸಾಕು ,  ಒಂದು  ಸಣ್ಣ ಗಾಂಧಾರಿ ಹಾಕು ಆಯ್ತಾ ..."
ಹೇಳುತ್ತಿದ್ದಂತೆ  ಗಾಂಧಾರಿ ಪೇಯ ಬಂದಿತು .



ಈ ಸೂಜಿ ಮೆಣಸನ್ನು ಮೊದಲ ಬಾರಿ ಉಪಯೋಗಿಸುವವರು ಸಾಕಷ್ಟು ಮುಂಜಾಗ್ರತೆ ವಹಿಸುವುದು ಅವಶ್ಯ .     ತೊಟ್ಟು  ಮುರಿದು  ಕತ್ತರಿಸಿ ,  ನಂತರ ನಿಮ್ಮ ಕೈಯನ್ನು ನಾಲಿಗೆ ,  ಕಣ್ಣು ,  ಕಿವಿ ,  ಮೂಗುಗಳ  ಹತ್ತಿರ ತರುವಂತಿಲ್ಲ .    ಅಂತಹ  ಪ್ರಖರತೆ  ಇದಕ್ಕಿದೆ .   " ಉರಿ ,  ಉರಿ "   ಎಂದು ಬೊಬ್ಬೆ ಹಾಕುವುದೊಂದೇ  ಗತಿ ಆದೀತು .    ಎಷ್ಟು  ತಂಬಿಗೆ ನೀರು  ಕುಡಿದರೂ  ಶಮನವಾಗದು .   ಜಾಗ್ರತೆ ವಹಿಸಿ ,  ಅಗತ್ಯ ಬಿದ್ದಲ್ಲಿ   1 ಕಪ್  ಮೊಸರು  ಸೇವಿಸಿ . 

ಮೆಣಸು ಅಷ್ಟು ಖಾರವಿದ್ದರೂ  ಎಲೆಗಳನ್ನು  ಇನ್ನಿತರ ಸೊಪ್ಪುಗಳಂತೆ  ಅಡುಗೆಯಲ್ಲಿ  ಬಳಸಬಹುದಾಗಿದೆ .  ಕಟು ರುಚಿಯೂ ಇಲ್ಲ ,   ಪರಿಮಳವೂ ಇಲ್ಲ ,  ಯಾವ ಸೊಪ್ಪನ್ನು  ನಿಮ್ಮ ಖಾದ್ಯಕ್ಕೆ  ಬಳಸಿದ್ದೀರಿ ಎಂದು ಮೂರನೆಯವರಿಗೆ ತಿಳಿಯುವಂತಿಲ್ಲ .   

ತಂಬುಳಿ  ಹೀಗೆ  ಮಾಡಿ  : 

  25  -  30  ಎಲೆಗಳನ್ನು  ಸಣ್ಣಗೆ  ಕತ್ತರಿಸಿ ,  ತುಪ್ಪದಲ್ಲಿ ಚೆನ್ನಾಗಿ ಬಾಡಿಸಿ .    ತೆಂಗಿನತುರಿಯೊಂದಿಗೆ  2  ಬೆಳ್ಳುಳ್ಳಿ ,   1  ನೀರುಳ್ಳಿ ,   1 ಗಾಂಧಾರಿ ಮೆಣಸು ಹಾಕಿ  ನುಣ್ಣಗೆ  ಕಡೆದು  1 ಲೋಟ ದಪ್ಪ ಮಜ್ಜಿಗೆ ಸೇರಿಸಿ  ಒಗ್ಗರಣೆ  ಕೊಟ್ಟು ಬಿಡಿ .   ಮಜ್ಜಿಗೆ  ಹಾಕದಿದ್ದರೆ ಚಟ್ನಿ  ಎಂದು ಹೆಸರು ಕೊಡಿ .   
 
 ಉಪ್ಪು  ಹುಳಿಯೊಂದಿಗೆ  ಮಸಾಲೆ  ಸಾಮಗ್ರಿ  ಅರೆಯುತ್ತೀರಿ ,   ಸ್ವಲ್ಪ ಗಾಂಧಾರಿ ಮೆಣಸು ಸೇರಿಸಿ ಅರೆಯಿರಿ ,  ಖಾದ್ಯಗಳ ರುಚಿ  ನೋಡಿ .   

  ಉಪ್ಪಿನಕಾಯಿಗೆ  ಮಸಾಲೆ ತಯಾರಿಸುವಾಗ ಇದರ ಒಣಮೆಣಸುಗಳನ್ನೂ ಸೇರಿಸಿ .    

ನಿಂಬೆ ಹಣ್ಣಿನ ಉಪ್ಪಿನಕಾಯಿಗೆ ಹಸಿಮೆಣಸು ,   ಶುಂಠಿ  ಹಚ್ಚಿ  ಹಾಕುವ  ಕ್ರಮ  ಇದೆ .   ಹಸಿಮೆಣಸಿನ  ಬದಲಾಗಿ  ಗಾಂಧಾರಿ ಮೆಣಸನ್ನು  ಎರಡಾಗಿ  ಸಿಗಿದು  ಹಾಕಿಕೊಳ್ಳಿ .   ಉಪ್ಪು  ಹುಳಿಗಳ  ಸಮ್ಮಿಶ್ರಣದೊಂದಿಗೆ  ಇದರ  ಖಾರವೂ  ಪರಿಮಳವೂ  ಬೆರೆತು  ಜ್ವರ ,  ಶೀತಪೀಡಿತರಿಗೆ  ಊಟದೊಂದಿಗೆ  ನಂಜಿಕೊಳ್ಳಲು  ಹಾಯೆನಿಸುವುದು .   ಮಿಶ್ರ  ತರಕಾರಿಗಳ  ಉಪ್ಪಿನಕಾಯಿಗೂ  ಇದನ್ನು  ಸೇರಿಸಿಕೊಳಬಹುದು .  


 ಅಡುಗೆಯಲ್ಲಿ ಉಪಯೋಗಿಸುವ ಕಲೆ  ತಿಳಿದಾಯ್ತು .  
 ವೈದ್ಯಕೀಯ ಮಹತ್ವ  ಹೇಗಿದೆ  ಎಂದು ನೋಡೋಣ  ,

ಸಂಧಿವಾತ ,   ಕೀಲುಗಳಲ್ಲಿ ಉರಿಯೂತಗಳಿಗೆ  ರಾಮಬಾಣ ,  ಆಶ್ಚರ್ಯ ಆಗ್ತಿದೆಯಾ ,  ಪ್ರಯೋಗ ಶುರು  ಮಾಡಿ .   ಕಮರು ತೇಗು ,  ಹೊಟ್ಟೆ ಉಬ್ಬರಿಕೆ ,  ಅಜೀರ್ಣ  ಇತ್ಯಾದಿ  ವಾಯು ಪ್ರಕೋಪಗಳಿಗೆ  ಶಾಮಕ ,  ನಿವಾರಕ .

ಇನ್ನೂರಕ್ಕೂ  ಹೆಚ್ಚು  ವೈಜ್ಞಾನಿಕ  ಸಂಶೋಧನೆಗಳು  ಇದರ  ರಸಸಾರದ  ಬಗ್ಗೆ  ನಡೆಯುತ್ತ  ಬಂದಿವೆ .    ಮನುಷ್ಯ ವರ್ಗದ  ಜೀವಿಗಳಲ್ಲಿ ,   ಸಸ್ತನಿಗಳಲ್ಲಿ  ಸ್ಪರ್ಶೆಂದ್ರಿಯಗಳನ್ನು  ಪ್ರಚೋದಿಸುವ ,   ನರನಾಡಿಗಳಲ್ಲಿ  ಉತ್ಸಾಹವನ್ನು  ತುಂಬಿಸುವ ,   ರೋಗನಿರೋಧಕ  ಶಕ್ತಿಯನ್ನು  ಹೆಚ್ಚಿಸುವ ,  ಲೈಂಗಿಕೋತ್ಸಾಹವನ್ನು. ಉತ್ತೇಜಿಸುವ ,  ಬಾಯಿರುಚಿಯನ್ನು  ಹೆಚ್ಚಿಸುವ ,  ವೇದನೆಯನ್ನು  ನಿವಾರಿಸುವ  ಈ  capsaicin  ಎಂಬ ಗಾಂಧಾರಿಯ  ರಸಸಾರವನ್ನು  ಪ್ರತ್ಯೇಕವಾಗಿ ಹಿಡಿದಿರಿಸುವ ಬಗ್ಗೆ  ಸಂಶೋಧನೆಗಳು  ನಡೆಯುತ್ತಲಿವೆ .    ಕೊಲೆಸ್ಟರಾಲ್ ,  ರಕ್ತದೊತ್ತಡ  ನಿಯಂತ್ರಣ ,  ತನ್ಮೂಲಕ ಹೃದಯಕ್ಕೆ  ರಕ್ತ  ಹರಿಯುವಿಕೆಯನ್ನು  ಸರಾಗಗೊಳಿಸುವುದು .   ಪುರುಷರಲ್ಲಿ  ವೀರ್ಯೋತ್ಪತ್ತಿ  ಹೆಚ್ಚಿಸುವುದು .   ಇವೆಲ್ಲ  ಅಧ್ಯಯನಗಳಿಂದ ತಿಳಿದು  ಬಂದ  ವಿಷಯಗಳಾಗಿವೆ . 

" ಏನು  ತಿಂದರೂ  ಗ್ಯಾಸ್  "  ಅನ್ನುವವರಿದ್ದಾರೆ .   ಅವರಿಗೆ  ಉತ್ತರ  ಗಾಂಧಾರಿಯಲ್ಲಿದೆ  ನೋಡಿ .   ಇದರ  ರಸಸಾರವು  ಕ್ಷಾರಯುಕ್ತವಾಗಿದ್ದು ,  ಜಠರ ಹಾಗೂ  ಕರುಳುಗಳ  ಕಾರ್ಯಕ್ಷಮತೆಯನ್ನು  ವೃದ್ಧಿಸಿ ,  ಅಸಿಡಿಟಿ  ಅಥವಾ  ಆಮ್ಲೀಯತೆಯನ್ನು ಹತ್ತಿರ  ಸುಳಿಯಲೂ  ಬಿಡದು .

ಈ  ಚೋಟುದ್ದ  ಮೆಣಸು  ಪೌಷ್ಟಿಕಾಂಶಗಳ  ಆಗರ .   ಕ್ಯಾಲ್ಸಿಯಂ ,  ಫಾಸ್ಪರಸ್ ,  ಕಬ್ಬಿಣ ,  ಮೆಗ್ನೆಶಿಯಂ ,  ವಿಟಾಮಿನ್  ಬಿ ,  ಬಿ 2 ,   ಹಾಗೂ ನಿಯಾಸಿನ್ ಗಳಿಂದ  ಸಮೃದ್ಧವಾಗಿದೆ .   ನಿಯಮಿತ  ಸೇವನೆಯಿಂದ  ಸುಖನಿದ್ರೆಯೂ  ನಿಮ್ಮದಾಗಲಿದೆ .   ಸದಾ ಲವಲವಿಕೆ .   ಖಿನ್ನತೆ ಎಂದೂ  ಬಾರದು .   ತಲೆನೋವು  ಹತ್ತಿರ  ಸುಳಿಯದು .

ಹವಾಮಾನ  ಬದಲಾದಂತೆ  ಶೀತ ,  ನೆಗಡಿ ,  ಫ್ಲೂ  ಬಾಧೆ  ಸಾಮಾನ್ಯ .   ಈ ಮೆಣಸಿನ  ಘರಂ  ಪ್ರತಿರೋಧಕ  ಶಕ್ತಿಯಿಂದಾಗಿ  ಇಂತಹ  ಉಪಟಳಗಳು  ಕಾಣಿಸಲಾರವು .   ಶರೀರದ ಮೆಟಾಬಾಲಿಸಂ  ವೃದ್ಧಿ .


ಕೇರಳೀಯರ ಸಾಂಪ್ರದಾಯಿಕ ಪಾಕವಿಜ್ಞಾನದಲ್ಲಿ  ಈ  kanthari mulagu    ( കാന്താരി  മുലഗ് )     ಸೇರಿ ಕೊಂಡಿದೆ .   ಮುಖ್ಯವಾಗಿ ಸಮುದ್ರೋತ್ಪನ್ನವಾದ ಮೀನು ಇಲ್ಲಿನ ಬಹು ಮುಖ್ಯ ಆಹಾರವಾಗಿರುವುದೇ ಇದಕ್ಕೆ ಕಾರಣ .   ಇಷ್ಟು  ಚಿಕ್ಕ ಗಾತ್ರದ ಮೆಣಸು ,   ಜಗತ್ತಿನಲ್ಲೇ ಅತಿ ಖಾರವೆಂಬ  ಗಿನ್ನೆಸ್  ದಾಖಲೆಯನ್ನೂ ಪಡೆದಿದೆ .    ಆಂಗ್ಲ ಭಾಷಿಕರು  " bird's eye chili "   ಎಂದು ಬಹು ಮುದ್ದಾದ ಹೆಸರಿಟ್ಟಿದ್ದಾರೆ .     ಎಲ್ಲಾ  ವರ್ಗದ ಮೆಣಸುಗಳಿಗೆ  ಮೆಕ್ಸಿಕೋ  ತವರು .   ಸಸ್ಯಶಾಸ್ತ್ರೀಯವಾಗಿ  ಇದು   Capsicum chinense .

ನೈಸರ್ಗಿಕ  ಕೀಟನಾಶಕ ,   ನೀರಿನಲ್ಲಿ  ಇದರ  ದ್ರಾವಣ  ತಯಾರಿಸಿ ,  ಗಿಡಬಳ್ಳಿಗಳನ್ನು  ಕೀಟಬಾಧೆಯಿಂದ ಮುಕ್ತಗೊಳಿಸಿ .   ನಮ್ಮ ಊರಿನ  ಯಾವ  ಪ್ರದೇಶದಲ್ಲಿ  ಬೇಕಾದರೂ  ಬೆಳೆಯಬಹುದು .   ಗೊಬ್ಬರದ ಅವಶ್ಯಕತೆ  ಇಲ್ಲ .   ಆರೈಕೆಯೇನೂ  ಬೇಡ .   ನಮ್ಮ  ಅಡಿಕೆ ತೋಟಗಳಲ್ಲಿ  ಬಹುಮಟ್ಟಿಗೆ  ಒಂದು  ಕಳೆ  ಸಸ್ಯ .   ಹಣ್ಣಾದ ಕಾಯಿಗಳು  ಮಾರನೆ  ದಿನ  ಕಾಣಿಸುವುದೇ  ಇಲ್ಲ .    ಹಕ್ಕಿಗಳು  ತಿಂದು ಹಾಕಿರುತ್ತವೆ .   ಕಡಿದು  ಹಾಕಿದರೂ  ಇನ್ನಷ್ಟು  ಶಕ್ತಿಯುತವಾಗಿ  ಚಿಗುರಿ  ನಳನಳಿಸುತ್ತವೆ .    ನನ್ನ  ಕಲ್ಯಾಣಿಯಂತೂ  ತೋಟದ  ಹುಲ್ಲು  ಕತ್ತರಿಸುವಾಗ   " ಕಡಿದು ಹಾಕೇ  ಅದನ್ನು "  ಎಂದು  ಎಷ್ಟು  ಗೋಗರೆದರೂ  ಕೆಳುವವಳಲ್ಲ .   " ಇರಲಿ  ಬಿಡಿ  ಅಕ್ಕಾ "  ಎನ್ನುತ್ತಾ  ಇನ್ನಷ್ಟು  ಮೆಣಸು  ಕೊಯಿದು  ತನ್ನ  ಬುಟ್ಟಿಗೆ  ಹಾಕಿಕೊಳ್ಳುವವಳು . 

ಕೃಷಿ ಪಂಡಿತರೇ ,   ವಾಣಿಜ್ಯ  ದೃಷ್ಟಿಯಿಂದಲೂ  ಬೆಳೆದು  ಹಣ  ಗಳಿಸಬಹುದು .   ಹಣ್ಣಾದ  ಕೂಡಲೇ  ಕೊಯಿದು  ಒಣಗಿಸಿ .   ಮಾರುಕಟ್ಟೆ  ಇದೆ .   ಅಷ್ಟೇ  ಬೇಡಿಕೆಯೂ ಇದೆ .   ಉತ್ತಮ  ಧಾರಣೆಯೂ ಇದೆ . 

 ಮನೆಯ  ಕೈತೋಟದಲ್ಲಿ  ತರಹೇವಾರಿ ಗಿಡಗಳನ್ನು  ಸಾಕುತ್ತೀರಿ .   ಇದನ್ನೂ  ತಂದಿಟ್ಟುಕೊಳ್ಳಿ .   ಕುಂಡದಲ್ಲಿಯೂ ನೆಡಬಹುದು .   ಹೆಚ್ಚು  ಬಿಸಿಲೇನೂ  ಬೇಕಾಗಿಲ್ಲ .   ಇರುತ್ತದೆ  ಅದರ  ಪಾಡಿಗೆ .   ಹೂವಾಗಿ ,  ಕಾಯಾಗಿ ,  ಹಣ್ಣಾಗುವ  ವಿವಿಧ  ಹಂತಗಳಲ್ಲಿ  ಅಲಂಕಾರಿಕ  ವರ್ಣಮಯ  ಸೊಗಸು .    ಇದರಲ್ಲಿಯೂ ಬೇರೆ ಬೇರೆ  ಪ್ರಬೇಧಗಳಿವೆ .   ಅತಿ  ಚಿಕ್ಕ ಗಾತ್ರದ್ದು  ಹೆಚ್ಚು  ಖಾರ .   ಇನ್ನಿತರ ಮೆಣಸು  ನಾಲ್ಕು  ಹಾಕುವಲ್ಲಿ  ಇದು  ಒಂದು  ಹಾಕಿದರೆ  ಸಾಕು .   ರಸಗೊಬ್ಬರದ  ಅವಶ್ಯಕತೆಯಿಲ್ಲ ,  ಪರಿಸರ ಮಾರಕ  ಕೀಟನಾಶಕಗಳನ್ನು  ಸಿಂಪಡಿಸಬೇಕಾಗಿಲ್ಲ ,  ಪರಿಪೂರ್ಣ ಜೈವಿಕ  ಬೆಳೆ  !   ಖಾರವಿರುವುದೆಲ್ಲ  ಬೀಜಗಳನ್ನು  ಸುತ್ತುವರಿದಿರುವ  ನರಗಳಲ್ಲಿ .   ಹಕ್ಕಿಗಳು  ತಿನ್ನುವುದೇ  ಪ್ರೋಟೀನ್ ಗಳ  ಗಣಿಯಾಗಿರುವ  ಬೀಜಗಳನ್ನು  ಮಾತ್ರ .   ಯಾವುದೋ  ಮೆಕ್ಸಿಕೋ  ದೇಶದಿಂದ ,   ಇನ್ಯಾವುದೋ  ಆಫ್ರಿಕಾ ಖಂಡದಿಂದ  ಹೊತ್ತು  ತಂದಿವೆ  ಪುಟಾಣಿ  ಹಕ್ಕಿಗಳು  !     ನಾವು ,  ವೈದ್ಯರು  ಕೊಡುವ  ಆರೋಗ್ಯದ  ಸಲಹೆಯಂತೆ  ಪ್ರೋಟೀನ್  ಟ್ಯಾಬ್ಲೆಟ್ ಗಳನ್ನು ,   ವಿಟಾಮಿನ್  ಮಾತ್ರೆಗಳನ್ನು  ನುಂಗಿ  ಬದುಕುತ್ತಿದ್ದೇವೆ .   ಬನ್ನಿ  ,   ನಿಸರ್ಗದೊಂದಿಗೆ  ಕೈ  ಜೋಡಿಸೋಣ .   ಪಕ್ಷಿಗಳಂತೆ  ಸ್ವತಂತ್ರ  ಬದುಕು  ನಮ್ಮದಾಗಿಸೋಣ .



Posted via DraftCraft app

Sunday 9 September 2012

ಕೈತೋಟದಲ್ಲಿ ಟೊಮ್ಯಾಟೋ ಆಟ






ಹಾಗೇ ಸುಮ್ಮನೆ ಮನೆ ಹಿತ್ತಿಲಲ್ಲಿ ಅಡ್ದಾಡುತ್ತಿದ್ದೆ . ದೊಡ್ಡ ಮಳೆಗಾಲ ಮುಗಿದಿತ್ತು . ಏನೇನೋ ಗಿಡಗಂಟಿಗಳು ಅತ್ತಿತ್ತ ಓಲಾಡುತ್ತಾ , ಅದೇನನ್ನೋ ಪಿಸುಗುಟ್ಟುತ್ತಿದ್ದಂತೆ ......... ಅರೆ , ......ಇದೇನಿದು , ನೆಲದಲ್ಲಿ ವಿಸ್ತಾರವಾಗಿ ಹರಡಿ ಮಲಗಿಕೊಂಡಿತ್ತು ಟೊಮ್ಯಾಟೋ ಸಸಿ , ಎಷ್ಟಿವೆ ..... ಮೆಲ್ಲಗೆ ಅತ್ತಿತ್ತ ಸರಿಸಿ ನೋಡಿದಾಗ .... ನಾಲ್ಕೋ , ಐದೋ ಇವೆ . ಹೆಚ್ಚು ತಡವಿದರೆ ಗಿಡವೆಲ್ಲಿ ನಲುಗುವುದೋ .......ಆಗಲೇ ಪುಟ್ಟ ಪುಟ್ಟ ಹೀಚುಗಾಯಿಗಳು !

" ಹ್ಞೂಂ , ಇರಲಿ ನೋಡೋಣ , ಬಿಡಬಾರದು ....." ಪ್ರತಿದಿನವೂ ನೀರು ಹಾಕುತ್ತಾ ಬಂದೆ . ಅಡುಗೆಮನೆಯ ವ್ಯರ್ಥ ನೀರು ಅಲ್ಲಿಗೇ ಹರಿದು ಬರುವಂತೆ ಒಂದು ಪೈಪ್ ಸಂಪರ್ಕ ಕೊಟ್ಟು ಸುಮ್ಮನಾದೆ .

ಮತ್ತೊಂದಷ್ಟು ದಿನ ಕಳೆದು ನನ್ನ ಸಂಜೆಯ ತಿರುಗಾಟ ಪುನಃ ಟೊಮ್ಯಾಟೋ ಇದ್ದಲ್ಲಿಗೆ ಬಂದಿತು . ಕೆಂಪು ಕೆಂಪು ಟೊಮ್ಯಾಟೋ ಹಣ್ಣುಗಳು , ನಗುತ್ತಿದ್ದುವು . ಹಣ್ಣಾದವುಗಳನ್ನು ಕಿತ್ತು ಸೀರೆಯ ಸೆರಗಿನಲ್ಲಿ ಕಟ್ಟಿಕೊಂಡು ಮನೆಯ ಕಡೆ ತಿರುಗಿದೆ . " ನಾಳೆಗೊಂದು ಸಾರು ಉಚಿತ ಕೊಡುಗೆ ......." ದೊರೆಯಿತು .

ನಾಲ್ಕು ದಿನಕ್ಕೊಮ್ಮೆ ನೋಡಿ , ಕಿತ್ತು ತರುವುದೂ , ಸಾರು ಮಾಡುವುದೂ , ಸಾರು ಮಾಡುವುದೂ ಮುಂದುವರಿಯಿತು . " ಸಾರು ಮಾಡುತ್ತಾ ಇರು , ಮುಗಿಯಲಾರೆ ....." ಬುಟ್ಟಿಯ ತುಂಬಾ ಕುಳಿತಿದ್ದ ಟೊಮ್ಯಾಟೋ ಹಣ್ಣು ನಕ್ಕು ಬಿಟ್ಟಿತು .

" ಬಿಡ್ತೇನಾ , ನಗುತ್ತಿರು ...."
ದಿನಾ ಸಂಜೆ ಟೊಮ್ಯಾಟೋ ಜ್ಯೂಸ್ .......


Posted via DraftCraft app

<><><> <><><>


ಟಿಪ್ಪಣಿ: ದಿನಾಂಕ 10, ಅಕ್ಟೋಬರ್, 2013ರಂದು ಮುಂದುವರಿಸಿ ಬರೆದದ್ದು.




ಟೊಮ್ಯಾಟೋ ಸಾಸ್:
4 ಟೊಮ್ಯಾಟೋ, ದೊಡ್ಡ ಗಾತ್ರದ್ದು
ಒಂದು ಹಸಿಮೆಣಸು, ಖಾರ ಇಲ್ಲದ್ದು
ರುಚಿಗೆ ಉಪ್ಪು, ಸಕ್ಕರೆ
1-2 ಚಮಚ ತುಪ್ಪ ಅಥವಾ ಎಣ್ಣೆ

ಟೊಮ್ಯಾಟೋ ಹಾಗೂ ಹಸಿಮೆಣಸನ್ನು ಇಡಿಯಾಗಿ ಬೇಯಿಸಿ. ತಣಿದ ಮೇಲೆ ಸಿಪ್ಪೆ ತೆಗೆದು ಅರೆದುಕೊಳ್ಳಿ, ನೀರು ಬೇಡ. ತಣ್ಣೀರಿನಲ್ಲಿ ಹಾಕಿಟ್ಟರೆ ಬೇಗನೆ ಸಿಪ್ಪೆ ತೆಗೆಯಬಹುದು.

ಒಲೆಯ ಮೇಲೆ ಬಾಣಲೆ ಇಟ್ಟು ತುಪ್ಪ ಹಾಕಿಕೊಳ್ಳಿ. ಅರೆದ ಮಿಶ್ರಣವನ್ನು ಎರೆಯಿರಿ. ಕುದಿಯುತ್ತಿದ್ದ ಹಾಗೆ ಉಪ್ಪು, ಸಕ್ಕರೆ ಹಾಕಿ ದಪ್ಪಗಟ್ಟುತ್ತಿದ್ದ ಹಾಗೇ ಸೌಟಿನಲ್ಲಿ ಕೈಯಾಡಿಸಿ, ಕೆಳಗಿಳಿಸಿ.
ಅತಿ ಶೀಘ್ರವಾಗಿ ತಯಾರಿಸಬಹುದು, ಮಕ್ಕಳ ಮೆಚ್ಚುಗೆಗೆ ಪಾತ್ರರಾಗಿ ಬ್ರೆಡ್, ಚಪಾತಿ, ಪೂರಿ, ನಾನ್, ತೆಳ್ಳವು ಜೊತೆ ಸವಿಯಿರಿ. ಒಂದೆರಡು ದಿನ ಇಟ್ಟುಕೊಳ್ಳಬಹುದು.

ಅದೇನೇ ಹೊಸ ರುಚಿ ಓದಲು ಅಥವಾ ಟೀವಿಯಲ್ಲಿ ನೋಡಲು ಹೊರಟಿರೋ, ಟೊಮ್ಯಾಟೋ ಪ್ಯುರೀ ಇಲ್ಲದ ಅಡುಗೆಯೇ ಇಲ್ಲ. ಕೇವಲ ಟೊಮ್ಯಾಟೋ ಮಾತ್ರ ಬೇಯಿಸಿ, ಅರೆದು, ದಪ್ಪಗಟ್ಟುವಷ್ಟು ಕಾಯಿಸಿ ಇಟ್ಟಲ್ಲಿ ಟೊಮ್ಯಾಟೋ ಪ್ಯುರೀ ಆಯ್ತು, ಇದನ್ನು ಟೊಮ್ಯಾಟೋ ಹಾಕಿ ಮಾಡಬಹುದಾದ ಅಡುಗೆಯಲ್ಲಿ ಉಪಯೋಗಿಸಿ. ಸಕ್ಕರೆ, ತುಪ್ಪ ಹಾಕಿ ಜಾಮ್ ಕೂಡಾ ಮಾಡಿಕೊಳ್ಳಬಹುದು.







ಟೊಮ್ಯಾಟೋ ಸೂಪ್:
ಸಾಸ್ ಮಾಡ್ತಿದ್ದ ಹಾಗೇ ಸೂಪ್ ಮಾಡಿಕೊಳ್ಳೋಣ, ಹೇಗೂ ಕುಚ್ಚುಲಕ್ಕಿ ಗಂಜಿ ಬಸಿದಿದ್ದ ತೆಳಿ ( ಗಂಜಿನೀರು ) ಇತ್ತು. ಸೂಪ್ ಕುಡಿಯುವ ಮಂದಿ ನಾವಿಬ್ಬರೇ ಇದ್ದಿದ್ದು, ಎರಡು ಪುಟ್ಟ ಬಟ್ಟಲು ತೆಳಿ ಅಳೆದು ತಪಲೆಗೆರೆದಾಯ್ತು. ಒಂದು ಪುಟ್ಟ ಸೌಟಿನಲ್ಲಿ ಕುದಿಯುತ್ತಿದ್ದ ಟೊಮ್ಯಾಟೋ ಸಾಸ್ ತೆಗೆದು, ತಪಲೆಗೆರೆದು, ನಾಲ್ಕು ಕಾಳುಮೆಣಸು ಜಜ್ಜಿಹಾಕಿ, ರುಚಿ ನೋಡಿ, ಸ್ವಲ್ಪ ಸಕ್ಕರೆ ಹಾಕಿ ಇನ್ನೊಮ್ಮೆ ಕುದಿಸಿ ಒಂದು ಚಮಚಾ ತುಪ್ಪ ಎರೆಯುವಲ್ಲಿಗೆ ಈ ಸರಳವಾದ ಚಳಿ ಬಿಡಿಸುವ ಟೊಮ್ಯಾಟೋ ಸೂಪ್ ರೆಡಿ.







ಟೊಮ್ಯಾಟೋ ಸಾರು:
4 ಟೊಮ್ಯಾಟೋ ಹಣ್ಣು
2 ಹಸಿಮೆಣಸು
ಚಿಕ್ಕ ತುಂಡು ಶುಂಠಿ
ಒಂದು ಹಿಡಿ ತೆಂಗಿನ ತುರಿ
ಉಪ್ಪು, ಬೆಲ್ಲ
ಕರಿಬೇವಿನೆಸಳು/ಕೊತ್ತಂಬರಿ ಸೊಪ್ಪು
ಅರ್ಧ ಕಪ್ ತೊಗರಿಬೇಳೆ
ತೊಗರಿಬೇಳೆ, ಟೊಮ್ಯಾಟೋ, ಹಸಿಮೆಣಸು, ಶುಂಠಿಗಳನ್ನು ಬೇಯಿಸಿ.

ಮಸಾಲೆಗೆ ಬೇಕಾದ ಸಾಮಗ್ರಿ:
2 ಕುಮ್ಟೆ ಮೆಣಸು
2 ಚಮಚ ಕೊತ್ತಂಬರಿ
ಜೀರಿಗೆ, ಮಂತೆ ಸ್ವಲ್ಪ
ಇಂಗು, ಉದ್ದಿನಕಾಳಿನಷ್ಟು

ಹುರಿದುಕೊಳ್ಳಿ, ತೆಂಗಿನ ತುರಿಯೊಂದಿಗೆ ಅರೆಯಿರಿ, ನೀರು ಹಾಕದೇ ಅರೆದರೆ ಉತ್ತಮ.
ಬೇಯಿಸಿಟ್ಟ ಸಾಮಗ್ರಿಗೆ ಈ ಮಸಾಲೆ ಸೇರಿಸಿ. ಅವಶ್ಯವಿದ್ದಷ್ಟು ನೀರು ಎರೆಯಿರಿ. ಉಪ್ಪು, ಬೆಲ್ಲ ಕೂಡಿಸಿ ಕುದಿಸಿ. ಕುದಿಯುವಾಗ ಕೊತ್ತಂಬರಿ ಸೊಪ್ಪು ಕತ್ತರಿಸಿ ಹಾಕಿ. ತುಪ್ಪದಲ್ಲಿ ಕರಿಬೇವಿನ ಒಗ್ಗರಣೆಯನ್ನೂ ಮರೆಯದಿರಿ.
ಟೊಮ್ಯಾಟೋ ಇಲ್ಲದಿದ್ದರೂ ಈ ಸಾರನ್ನು ಮಾಡಿಕೊಳ್ಳಬಹುದು, ಹುಣಸೇಹಣ್ಣು ಹಾಕಿ, ಕೊತ್ತಂಬ್ರಿ ಸಾರು ಅನ್ನಿ.








ಟೊಮ್ಯಾಟೋ ಸಲಾಡ್:
ಟೊಮ್ಯಾಟೋದೊಂದಿಗೆ ಹಸಿಯಾಗಿ ಬಳಸಬಹುದಾದ ಎಲ್ಲಾ ತರಕಾರಿಗಳನ್ನು ಚಿಕ್ಕದಾಗಿ ಕತ್ತರಿಸಿಟ್ಟು, ಊಟದ ಹೊತ್ತಿಗೆ ಉಪ್ಪು ಬೆರೆಸಿದರಾಯಿತು. ಮೊದಲೇ ಉಪ್ಪು ಹಾಕಿದ್ರೆ ಹಸಿ ತರಕಾರಿಗಳು ನೀರು ಬಿಟ್ಟಂತಾಗಿ ತಾಜಾತನ ಇಲ್ಲವಾದೀತು.







ಟೊಮ್ಯಾಟೋ ಗೊಜ್ಜು:
ಸಲಾಡ್ ತಯಾರಿಸುವ ವಿಧಾನವನ್ನೇ ಇಲ್ಲಿ ಮಾಡಿ, ಸಾಕಷ್ಟು ಮೊಸರು ಅಥವಾ ಕಡೆದ ಮಜ್ಜಿಗೆ ಎರೆದು ಒಗ್ಗರಣೆ ಕೊಡಿ.




Saturday 1 September 2012

ನಾಟ್ಯ ~~~ ಲಯ ~~~ ವಿನ್ಯಾಸ






ಮೂವತ್ತು ವರ್ಷ ಹಿಂದಿನ ಕಲೆ
ಪಡೆದಿದೆ ಹೊಸ ನೆಲೆ
ಎಲ್ಲಿದೆ ಈ ಕಲೆಯ  ಮೂಲ ಸೆಲೆ
ಎಂದು ಹಾಡಲೇ ...

ನನ್ನಮ್ಮನ ಸಂಗ್ರಹದ ಚಿತ್ರ
ಅಂದಿನ The  Illustrated Weekly of India   ಪತ್ರಿಕೆ -
ಯ ಚಿತ್ತಾರ ,  ಅಮ್ಮನೇ ಕಲಾ ಶಿಕ್ಷಕಿ






ಬಿಡುವಿನ ವೇಳೆಯ ಚಟ
ಬಣ್ಣ ತುಂಬಿಸಿಯೇ ಬಿಟ್ಟೆ
ಫ್ಯಾಬ್ರಿಕ್ ಪೇಯಿಂಟ್
ಬಂದಿತು ಮರದ ಚೌಕಟ್ಟು
ತೂಗಾಡಿತು ಗೋಡೆಗಳಲ್ಲಿ ಚಿತ್ರ ಸಂಪುಟ ......





ಎಷ್ಟು ಹಳೆಯದಾದರೇನು
ಬಂದಿದ್ದಾಳೆ ನಾಟ್ಯ ಮಯೂರಿ
ಹೊಸ ಹೊಸ ಬಣ್ಣ ತಳೆದು
ಕವಿಕಲ್ಪನೆಗೂ ನಿಲುಕದ
ಹೊಸ ಮೆರಗು ತಂದು

ವಾರೆವ್ಹಾ ,  ಇದೇನು ಕೈ ಚಳಕ
ತಾಂತ್ರಿಕ ಕಲಾಕುಸುರಿಯ ಪುಳಕ  !

Posted via DraftCraft app